ನಾಡಿನ ದಾರ್ಶನಿಕರು, ಸಾಹಿತಿಗಳು, ಮಹಾಪುರುಷರಿಗೆ ಕಿಂಚಿತ್ತು ಅವಮಾನವಾದರೂ ಅದನ್ನು ನಾವು ಖಂಡಿತವಾಗಿ ಸಹಿಸುವುದಿಲ್ಲ, ಅಂತಹ ಪಠ್ಯ ಪುಸ್ತಕ ಜಾರಿಯಾಗಲು ಬಿಡುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ವತಿಯಿಂದ ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಬಳಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಡಿನ ದಾರ್ಶನಿಕರು, ಮಹಾನ್ ಚೇತನಗಳಿಗೆ ಅಪಮಾನ ಮಾಡಿ, ಇತಿಹಾಸ ತಿರುಚಿರುವ ಪಠ್ಯಪುಸ್ತಕ ಪರಿಷ್ಕರಣೆ ರದ್ದುಗೊಳಿಸಿ, ಹಿಂದಿನ ಪಠ್ಯಕ್ರಮ ಮುಂದುವರೆಸುವಂತೆ ಆಗ್ರಹಿಸಿದರು.
“ಪಠ್ಯಪುಸ್ತಕ ಮಕ್ಕಳಲ್ಲಿ ವೈಜ್ಞಾನಿಕತೆ, ವೈಚಾರಿಕತೆಯನ್ನು ಬೆಳೆಸಬೇಕೆ ವಿನಃ ಕೋಮುದ್ವೇಷ ವೈಷಮ್ಯವನ್ನಲ್ಲ. ಮಕ್ಕಳ ಮನಸಲ್ಲಿ ವಿಷಬೀಜ ಬಿತ್ತಲು ಹೊರಟಿರುವ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ” ಎಂದು ತರಾಟೆಗೆ ತೆಗೆದುಕೊಂಡರು.
ಪಠ್ಯ ಪುಸ್ತಕ ರಚಿಸುವವರು ಅಂಬೇಡ್ಕರ್, ಬಸವಣ್ಣ, ಕುಂವೆಂಪುರವರಿಗೆ ಹಾಗೂ ಹಲವು ಸ್ವಾಮಿಗಳಿಗೆ ಅವಮಾನ ಮಾಡಿದ್ದಾರೆ. ರೋಹಿತ್ ಚಕ್ರತೀರ್ಥನ ಸಮಿತಿಯು ಶಾಲಾ ಪಠ್ಯಪುಸ್ತಕಗಳಲ್ಲಿದ್ದ ಸಾಮಾಜಿಕ ನ್ಯಾಯ, ಲಿಂಗ ಸಮಾನತೆ ಹಾಗೂ ಸಮಾಜ ಸುಧಾರಕರು ಮತ ಪ್ರವರ್ತಕರು ಮುಂತಾದ ಲೇಖಕರ ಕೃತಿಗಳನ್ನು ತಿರುಚಿದ್ದು ಮಾತ್ರವಲ್ಲದೆ ಅವರ ಪರಿಚಯವನ್ನು ಯದ್ವತದ್ವ ಮಾಡಿ, ನಾಡಗೀತೆಗೆ ಹಾಗೂ ರಾಷ್ಟ್ರಕವಿ ಕುವೆಂಪುರವರಿಗೆ ಅಪಮಾನ ಮಾಡಿದ ಈ ಸಮಿತಿಯನ್ನು ಈ ಕೂಡಲೆ ವಜಾಗೊಳಿಸುವಂತೆ ಆಗ್ರಹಿಸಿದರು.
ನಿಜವಾದ ಅರ್ಹತೆಯಿರುವ ಶಿಕ್ಷಣತಜ್ಞರ ಸಮಿತಿಯ ಮೂಲಕ ಪಠ್ಯಪುಸ್ತಕ ಪರಿಷ್ಕರಣೆಯ ಅದ್ವಾನಗಳನ್ನು ಸರಿಪಡಿಸಬೇಕು ಹಾಗೂ ನಾಡಿನ ಸಂಸ್ಕೃತಿ, ಪರಂಪರೆ, ಸಂವಿಧಾನದ ಆಶಯಗಳ ಬಗ್ಗೆ ಗೌರವವಿರುವವರನ್ನು ನೇಮಿಸಬೇಕು. ಅಲ್ಲದೆ ಯಡವಟ್ಟುಗಳಿಗೆ ಕಾರಣರಾದ ಶಿಕ್ಷಣ ಸಚಿವ ಬಿ.ಸಿ ನಾಗೇಶ್ರವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ; ಪಠ್ಯವಿವಾದ ಡೈವರ್ಟ್ ಮಾಡಲು ಯತ್ನ: ಬಿಜೆಪಿಗೆ ತಿರುಗುಬಾಣವಾದ ಚಡ್ಡಿ ಕಳಿಸುವ ಅಭಿಯಾನ
ಪಠ್ಯಪುಸ್ತಕ ಪರಿಷ್ಕರಣೆಯಿಂದಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕವು ತಲೆತಗ್ಗಿಸಬೇಕಾದ ಪರಿಸ್ಥಿತಿ ಎದುರಾಗಿದೆ, ಪೂರ್ವಗ್ರಹ ಪೀಡಿತ ವ್ಯಕ್ತಿಯಿಂದ ಪಠ್ತಪುಸ್ತಕ ಪರಿಷ್ಕರಣೆ ಮಾಡಿಸಿರುವುದು ನಾಡು-ನುಡಿ ಸಂಸ್ಕೃತಿಗೆ ಮಾಡಿರುವ ದ್ರೋಹ ಎಂದು ಸಿದ್ದರಾಮಯ್ಯ ಹೇಳಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ಪರಿಷತ್ ವಿಪಕ್ಷ ನಾಯಕರಾದ ಬಿ.ಕೆ ಹರಿಪ್ರಸಾದ್, ಹಿರಿಯ ಕಾಂಗ್ರೆಸ್ ಮುಖಂಡರಾದ ಆರ್.ವಿ ದೇಶಪಾಂಡೆ ಸೇರಿದಂತೆ ಹಲವರು ಭಾಗವಹಿಸಿದ್ದರು.