ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ಮರ್ಯಾದೆಗೇಡು ಹತ್ಯೆಗೊಳಗಾದ ಯುವತಿ, ತನ್ನ ಪೋಷಕರ ವಿರುದ್ಧ ಬೇಸರ ವ್ಯಕ್ತಪಡಿಸಿ ಸಾವಿಗೂ ಮುನ್ನ ಬರೆದಿದ್ದರು ಎನ್ನಲಾದ ಮೂರು ಪುಟದ ಪತ್ರ ಲಭ್ಯವಾಗಿದೆ.
ಪಿರಿಯಾಪಟ್ಟಣದ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಒಕ್ಕಲಿಗ ಸಮುದಾಯಕ್ಕೆ ಸೇರಿದ ಶಾಲಿನಿ (17), ಪಕ್ಕದ ಮೆಳ್ಳಹಳ್ಳಿ ಗ್ರಾಮದ ದಲಿತ ಸಮುದಾಯದ ಮಂಜು ಎಂಬ ಹುಡುಗನನ್ನು ಪ್ರೀತಿಸುತ್ತಿದ್ದರು. ಆದರೆ ಈ ಸಂಬಂಧಕ್ಕೆ ಹುಡುಗಿಯ ಕುಟುಂಬವು ತೀವ್ರವಾಗಿ ವಿರೋಧಿಸಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಯುವತಿಯ ಕೊಲೆ ಮಾಡುವ ಮಟ್ಟಕ್ಕೆ ಪೋಷಕರು ಹೊರಟರು. ಯುವತಿಯನ್ನು ಪ್ರೀತಿಸುತ್ತಿದ್ದ ಯುವಕನಿಂದ ಕೆಲವು ಮಾಹಿತಿಗಳನ್ನು ಪೊಲೀಸರು ಕಲೆಹಾಕಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು ಯುವಕ ನೀಡುತ್ತಿದ್ದು, ಶಾಲಿನಿ ಬರೆದಿದ್ದಳು ಎನ್ನಲಾದ ಪತ್ರ ಹಾಗೂ ಆಕೆಯ ಕಾಲ್ರೆಕಾರ್ಡ್ಗಳನ್ನು ಪೊಲೀಸರಿಗೆ ನೀಡಿದ್ದಾನೆ.
ಪತ್ರದಲ್ಲಿ ಏನಿದೆ?
ಶಾಲಿನಿ ತನ್ನ ಸಾವಿನ ಕುರಿತು ಮೊದಲೇ ಊಹಿಸಿರುವುದು ಈ ಪತ್ರದಿಂದ ತಿಳಿದುಬರುತ್ತದೆ. ತನಗಾಗಿರುವ ಹಿಂಸೆಯ ಈ ಪತ್ರ ಮುಖೇನ ಪೊಲೀಸರಿಗೆ ತಿಳಿಸುವ ಯತ್ನವನ್ನು ಶಾಲಿನಿ ಮಾಡಿದ್ದಾರೆ.
“ನನ್ನ ಜೀವನದಲ್ಲಿ ಜಿಗುಪ್ಸೆ ಬರುವಂತೆ ಕೆಲವು ವ್ಯಕ್ತಿಗಳು ನಡೆದುಕೊಂಡಿದ್ದಾರೆ. ಆದ್ದರಿಂದ ನನ್ನ ಜೀವನವನ್ನು ಇಲ್ಲಿಗೆ ಮುಗಿಸಲು ತೀರ್ಮಾನಿಸಿದ್ದೇನೆ. ನನ್ನ ತಂದೆ ಸುರೇಶ್, ತಾಯಿ ಬೇಬಿ, ಪಕ್ಕದ ಊರಿನ ನಿವಾಸಿಗಳಾದ ಸಂಗೀತ, ಗಣೇಶ್ ದಂಪತಿ, ಅದೇ ಊರಿನ ಮತ್ತೊಬ್ಬ ನಿವಾಸಿ ಪ್ರತಾಪ್ ಮತ್ತು ನನ್ನ ಚಿಕ್ಕಪ್ಪಂದಿರಾದ ಅರುಣಾ, ರವಿ ನನ್ನ ಸಾವಿಗೆ ಕಾರಣರು” ಎಂದು ಪತ್ರದಲ್ಲಿ ಬರೆದಿದ್ದಾರೆ.
“ಕಾನೂನಿನ ಪ್ರಕಾರ ನಮಗೆ ವಯಸ್ಸಾದ ಬಳಿಕ ಮದುವೆಯಾಗಲು ಇಚ್ಚಿಸಿದ್ದೆವು. ಆದರೆ ಮಂಜು (ಪ್ರೀತಿಸಿದ ಹುಡುಗ) ಬೇರೆ ಜಾತಿಯವನೆಂದು ಮನೆಯವರು ಕಿರುಕುಳ ಕೊಟ್ಟಿದ್ದಾರೆ. ಕೆಟ್ಟ ಮಾತುಗಳನ್ನು ನನ್ನ ತಂದೆ ತಾಯಿಗಳು ಆಡಿದ್ದಾರೆ. ಈ ಕೆಟ್ಟ ಪದಗಳನ್ನು ನನ್ನಿಂದ ಅರಗಿಸಿಕೊಳ್ಳಲು ಆಗುತ್ತಿಲ್ಲ. ನನ್ನ ಪೋಷಕರಿಗೆ ಸರಿಯಾಗಿ ತಿಳಿಹೇಳಿ. ನಾನು ಮರಣ ಹೊಂದಿದ ಬಳಿಕ ನನ್ನ ತಂದೆ ತಾಯಿ ನಾನು ಪ್ರೀತಿಸಿದ ಹುಡುಗನಿಗೆ ತೊಂದರೆ ಕೊಟ್ಟರೆ ನನ್ನ ಪೋಷಕರಿಗೆ ಶಿಕ್ಷೆ ಕೊಡಿ. ಮುಂದಿನ ಜನ್ಮ ಇದ್ದರೆ ನಿಮ್ಮಂಥವರ ಮಗಳಾಗಿ ಹುಟ್ಟುತ್ತೇನೆ” ಎಂದು ಶಾಲಿನಿ ಪೊಲೀಸರಿಗೆ ತಿಳಿಸಿದ್ದಾರೆ.
“ಜಾತಿ ಎಂಬ ಕೆಟ್ಟ ಪಿಡುಗು ನನ್ನನ್ನು ಬಲಿ ತೆಗೆದುಕೊಂಡಿದೆ… ಬೇರೆಯವರ ಮಾತು ಕೇಳಿ ಮಕ್ಕಳಿಗೆ ಕೆಟ್ಟ ಪದಗಳಿಂದ ಬೈಯ್ಯುವುದು, ಸಿಕ್ಕಸಿಕ್ಕದರಲ್ಲಿ ಹೊಡೆಯುವುದನ್ನು ನಿಲ್ಲಿಸಲು ಹೇಳಿ” ಎಂದು ಹೇಳುತ್ತಾ ತನ್ನ ಮೇಲಾಗಿರುವ ಹಲ್ಲೆಗಳನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿರಿ: ಪಠ್ಯವಿವಾದ ಡೈವರ್ಟ್ ಮಾಡಲು ಯತ್ನ: ಬಿಜೆಪಿಗೆ ತಿರುಗುಬಾಣವಾದ ಚಡ್ಡಿ ಕಳಿಸುವ ಅಭಿಯಾನ
“ನಾವಿಬ್ಬರೂ ತುಂಬಾ ಪ್ರತಿಸಿದ್ದೆವು. ನನಗೆ 18 ವರ್ಷ ತುಂಬಿದ ನಂತರ ಮದುವೆಯಾಗಿ ಜೀವನದಲ್ಲಿ ಚೆನ್ನಾಗಿರಬೇಕು ಎಂದು ನೂರೆಂದು ಆಸೆ ಕಟ್ಟಿದ್ದೆವು. ಆದರೆ ಅದು ಸಾಧ್ಯವಾಗಲೂ ಯಾರೂ ಬಿಡಲಿಲ್ಲ…” ಎಂದು ಪತ್ರದಲ್ಲಿ ಬರೆದುಕೊಂಡಿದ್ದಾರೆ.
ವೈರಲ್ ಆಗುತ್ತಿರುವ ಪತ್ರದ ಕುರಿತು ಮಾಹಿತಿ ನೀಡಿದ ಪಿರಿಯಾಪಟ್ಟಣ ಪೊಲೀಸ್ ಅಧಿಕಾರಿ ಕುಮಾರ್, “ಇದು ಡೆತ್ ನೋಟ್ ಏನಲ್ಲ. ಇದು ಪತ್ರವಷ್ಟೇ. ಈ ಪತ್ರವನ್ನು ಶಾಲಿನಿ ಬರೆದು ತನಗೆ ತಲುಪಿಸಿರುವುದಾಗಿ ಹುಡುಗ ಹೇಳುತ್ತಿದ್ದಾರೆ. ಆದರೆ ಅದು ಶಾಲಿನಿಯೇ ಬರೆದದ್ದೋ, ಬೇರೆ ಯಾರಾದರೂ ಬರೆದದ್ದೋ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. ಕೊಲೆಯಾಗಿರುವ ಯುವತಿಯ ಕೈಬರಹವನ್ನು ಪರಿಶೀಲಿಸಬೇಕಿದೆ. ತನ್ನೊಂದಿಗೆ ಶಾಲಿಗೆ ಈ ಕುರಿತು ಮಾತನಾಡಿದ್ದಳು ಎಂದು ಸಿಡಿಯೊಂದನ್ನು ಪೊಲೀಸರಿಗೆ ಮಂಜು ನೀಡಿದ್ದಾರೆ. ತನಿಖೆ ಮುಂದುವರಿದಿದೆ” ಎಂದು ತಿಳಿಸಿದರು.