ನಾವು ಮರಳಿ ಅಧಿಕಾರಕ್ಕೆ ಬರುತ್ತೇವೆ, ಸ್ವಲ್ಪ ಕಾಯಿರಿ ಎಂದು ದೇವೇಂದ್ರ ಫಡ್ನವಿಸ್ ವಿರೋಧ ಪಕ್ಷಗಳಿಗೆ ಸವಾಲು ಹಾಕಿದ್ದಾರೆ.
“ಅಕ್ಟೋಬರ್ 21 ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮದು ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿಗೆ ಜನಾದೇಶ ಕೂಡ ಸಿಕ್ಕಿತು. ನಮ್ಮ ಸ್ಟ್ರೈಕ್ರೇಟ್ ಶೇಕಡಾ 70 ರಷ್ಟಿತ್ತು, ಆದರೆ ಅರ್ಹತೆಗಿಂತ ರಾಜಕೀಯ ಅಂಕಗಣಿತವು ಮೇಲುಗೈ ಸಾಧಿಸಿತು. ಚುನಾವಣೆಯಲ್ಲಿ ಸುಮಾರು 40 ಶೇಕಡಾ ಅಂಕಗಳನ್ನು ಪಡೆದವರು ಸರ್ಕಾರ ರಚಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಜೊತೆಗೆ “ನಾವು ಇದನ್ನು ಪ್ರಜಾಪ್ರಭುತ್ವದ ಭಾಗವಾಗಿ ಸ್ವೀಕರಿಸುತ್ತಿದ್ದೇವೆ” ಎಂದು ಅವರು ಹೇಳಿದರು.
ಬಿಜೆಪಿಯ ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್, ಎನ್ಸಿಪಿ ಮತ್ತು ಶಿವಸೇನೆಯು ಫಡ್ನವೀಸ್ ಅವರು ಮುಖ್ಯಮಂತ್ರಿಯಾಗಿ ಹಿಂದಿರುಗಲಿದ್ದಾರೆ ಎಂಬ ಚುನಾವಣಾ ಪೂರ್ವದ ಹೇಳಿಕೆಯನ್ನು ಕೆಣಕಿದಾಗ ಫಡ್ನವೀಸ್ ಮೇಲಿನ ಮಾತು ಹೇಳಿದ್ದಾರೆ.
“ನಾನು ಹಿಂತಿರುಗುತ್ತೇನೆ ಎಂದು ನಾನು ಹೇಳಿದ್ದೆ. ಆದರೆ ಅದರ ವೇಳಾಪಟ್ಟಿಯನ್ನು ನಿಮಗೆ ಕೊಡಲು ಮರೆತಿದ್ದೇನೆ. ಆದರೆ ನಾನು ನಿಮಗೆ ಒಂದು ವಿಷಯವನ್ನು ಭರವಸೆ ನೀಡಬಲ್ಲೆ, ನೀವು ಸ್ವಲ್ಪ ಸಮಯ ಕಾಯಿರಿ, ನಾನು ಯಾವಾಗ ಬೇಕಾದರೂ ಮತ್ತೆ ಬರುತ್ತೇನೆ ಎಂದು ಫಡ್ನವಿಸ್ ಹೇಳಿದ್ದಾರೆ”. ನಾನು ಕಳೆದ ಐದು ವರ್ಷಗಳಲ್ಲಿ ಹಲವಾರು ಯೋಜನೆಗಳನ್ನು ಘೋಷಿಸಿ, ಅವುಗಳ ಕೆಲಸವನ್ನೂ ಪ್ರಾರಂಭಿಸಿದ್ದೇನೆ. ನಿಮಗೆ ಗೊತ್ತಿಲ್ಲ, ನಾನು ಅವುಗಳನ್ನು ಉದ್ಘಾಟಿಸಲು ಹಿಂತಿರುಗಬಹುದು” ಎಂದು ಅವರು ಹೇಳಿದ್ದಾರೆ.