ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೆಲ ನ್ಯೂನತೆಗಳು ಇವೆ. ಹಾಗಾಗಿ NEP ಬದಲು ರಾಜ್ಯ ಶಿಕ್ಷಣ ನೀತಿ ಜಾರಿಗೆ ತರುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, “ಯಾವುದೇ ರೀತಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದ ರೀತಿ ಬದಲಾವಣೆಗೆ ಗಮನಹರಿಸುತ್ತಿದ್ದೇವೆ. ಹಾಗಾಗಿ ಹಂತ ಹಂತವಾಗಿ ರಾಜ್ಯ ಶಿಕ್ಷಣ ನೀತಿ ಜಾರಿಯಾಗಲಿದೆ” ಎಂದರು.
“ಎರಡು ವರ್ಷಗಳ ಹಿಂದೆ ಹಿಂದಿನ ಸರ್ಕಾರ ನಮ್ಮ ರಾಜ್ಯದಲ್ಲಿ ಎನ್ಇಪಿ ಅನುಷ್ಠಾನ ಮಾಡಿದೆ. ಅದಕ್ಕೆ ಬಹಳಷ್ಟು ಪೂರ್ವ ತಯಾರಿ ಆಗಬೇಕಿತ್ತು. ಆದರೆ ಆಗದ ಕಾರಣ ಅದರಲ್ಲಿ ಕೆಲ ನ್ಯೂನತೆಗಳು ಇವೆ. ಬಿಜೆಪಿ ಆಡಳಿತದ ಹಲವು ರಾಜ್ಯಗಳಲ್ಲಿಯೂ ಎನ್ಇಪಿ ಜಾರಿಗೊಳಿಸಿಲ್ಲ. ಈ ಎಲ್ಲವನ್ನೂ ಶಿಕ್ಷಣ ತಜ್ಞರ ಜೊತೆಗೆ ಚರ್ಚಿಸುತ್ತಿದ್ದೇವೆ” ಎಂದರು.
“ರಾಜ್ಯ ಶಿಕ್ಷಣ ನೀತಿ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟವಾದ ರೂಪ ಕೊಟ್ಟು ಬದಲಾವಣೆ ಪ್ರಕ್ರಿಯೆ ಪ್ರಾರಂಭ ಮಾಡುತ್ತೇವೆ. ಯಾವುದೇ ನೀತಿ ಜಾರಿಗೆ ತರಬೇಕಾದರೆ ಮೂಲಭೂತ ಸೌಲಭ್ಯಗಳು ಇರಬೇಕು. ಅದಕ್ಕೆ ಬೇಕಾದ ಬೋಧಕ, ಬೋಧಕೇತರ ಸಿಬ್ಬಂದಿಗಳ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕೆ ಅನುದಾನ ಒದಗಿಸುವ ಬಗ್ಗೆ ತಯಾರಿ ಮಾಡಬೇಕಾಗುತ್ತದೆ” ಎಂದು ಹೇಳಿದರು.
“ಖಾಸಗಿ ಸಂಸ್ಥೆಗಳಲ್ಲಿ ಒಂದು ರೀತಿ, ಆದರೆ ಸರ್ಕಾರಿ ಸಂಸ್ಥೆಗಳಲ್ಲಿ ಮತ್ತೊಂದು ರೀತಿ ಶಿಕ್ಷಣ ನೀಡಲಾಗುತ್ತಿದೆ. ಈ ಎಲ್ಲ ವಿಚಾರಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿ ಹಂತ ಹಂತವಾಗಿ ಒಂದು ನೀತಿಗೆ ಬದಲಾವಣೆ ತರಬೇಕು” ಎಂದರು.
ಇಂದಿನ ಔದ್ಯೋಗಿಕ ಬೇಡಿಕೆಗೆ ತಕ್ಕಂತೆ ನಮ್ಮ ಪಠ್ಯಕ್ರಮ ಬದಲಾಗಬೇಕಿದೆ. ಆ ಕೆಲಸವನ್ನು ಹಂತ ಹಂತವಾಗಿ ಮಾಡುತ್ತೇವೆ. ಪ್ರಾಧ್ಯಾಪಕರ ನೇಮಕಾತಿ ವಿಷಯ ನ್ಯಾಯಾಲಯದಲ್ಲಿ ಬಗೆಹರಿದ ನಂತರ ನೇಮಕಾತಿ ಮಾಡಿಕೊಳ್ಳುತ್ತೇವೆ. ರಾಜ್ಯದಲ್ಲಿ ಖಾಲಿ ಇರುವ 2.5 ಲಕ್ಷ ಹುದ್ದೆಗಳನ್ನು ತುಂಬುತ್ತೇವೆ ಎಂದು ತಿಳಿಸಿದ್ದಾರೆ.
“ಕೇಂದ್ರ ಸರ್ಕಾರ ನಮ್ಮ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವ ಕೆಲಸ ಮಾಡಿದೆ. ಸಿಎಂ ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ಜನರಿಗೆ ನಡೆದುಕೊಂಡಿದ್ದಾರೆ. ಈ ಉದ್ದೇಶದಿಂದ ನೇರವಾಗಿ 5 ಕೆಜಿ ಅಕ್ಕಿ ಬದಲು ಹಣ ಕೊಡುತ್ತೇವೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ, ಬಹುತೇಕರು ಒಪ್ಪಿದ್ದಾರೆ. ಕೇಂದ್ರದ ಮೇಲೆ ಸಂಸದರು ಒತ್ತಡ ಹೇರಬಹುದಿತ್ತು. ಈಗ ಅದೇ ಪ್ರಶ್ನೆಯನ್ನು ಬಿಜೆಪಿಗೆ ನಿರಂತರವಾಗಿ ಕೇಳುತ್ತಿದ್ದೇವೆ” ಎಂದರು.
ಜೂನ್ 6 ರಂದು ಎಂ.ಸಿ ಸುಧಾಕರ್ರವರು ಹಲವು ಶಿಕ್ಷಣ ತಜ್ಞರ ಜೊತೆ ಸಭೆ ನಡೆಸಿ ಎನ್ಇಪಿ ಸಾಧಕ ಬಾಧಕಗಳು ಕುರಿತು ಚರ್ಚಿಸಿದ್ದರು.
ಇದನ್ನೂ ಓದಿ: ಬಿಟ್ಟಿ ಭಾಗ್ಯಗಳಲ್ಲ; ಸರ್ವೋದಯದತ್ತ ತೆರೆದ ದಾರಿದೀಪಗಳು!