ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಕೇಂದ್ರದ ಸುಗ್ರೀವಾಜ್ಞೆಗೆ ಸಂಬಂಧಿಸಿದಂತೆ ದೆಹಲಿಯ ಆಮ್ ಆದ್ಮಿ ಪಕ್ಷದ ನೇತೃತ್ವವು ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಈ ಸುಗ್ರೀವಾಜ್ಞೆಯು ಸಂವಿಧಾನದ 239ಎಎ ಪರಿಚ್ಛೇದವನ್ನು ತಿದ್ದುಪಡಿ ಮಾಡಿಲ್ಲ. ಚುನಾಯಿತ ಸರ್ಕಾರದಿಂದ ನಿಯಂತ್ರಣವನ್ನು ಕಸಿದುಕೊಂಡು ಚುನಾಯಿತರಾಗದ ಲೆಫ್ಟಿನೆಂಟ್ ಗೌರ್ವರ್ ಕೈಗೆ ನೀಡಲು ಮುಂದಾಗಿರುವುದರಿಂದ ಅದು ಅಸಂವಿಧಾನಿಕವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಮೇ 19 ರಂದು ದೆಹಲಿಯಲ್ಲಿ IAS ಮತ್ತು DANICS ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸುಗ್ರೀವಾಜ್ಞೆಯನ್ನು ಕೇಂದ್ರವು ಪ್ರಕಟಿಸಿತ್ತು. ಅರವಿಂದ್ ಕೇಜ್ರಿವಾಲ್ ಸರ್ಕಾರವು ಈ ಕ್ರಮವನ್ನು ಸೇವೆಗಳ ನಿಯಂತ್ರಣದ ಮೇಲಿನ ಸುಪ್ರೀಂ ಕೋರ್ಟ್ ತೀರ್ಪಿನ ವಂಚನೆ ಎಂದು ಕರೆದಿತ್ತು.
ಪೊಲೀಸ್, ಸಾರ್ವಜನಿಕ ಸುವ್ಯವಸ್ಥೆ ಮತ್ತು ಭೂಮಿ ಹೊರತುಪಡಿಸಿ ರಾಜಧಾನಿಯಲ್ಲಿನ ಸೇವೆಗಳ ನಿಯಂತ್ರಣವನ್ನು ಸುಪ್ರೀಂ ಕೋರ್ಟ್ ಚುನಾಯಿತ ದೆಹಲಿ ಸರ್ಕಾರಕ್ಕೆ ಹಸ್ತಾಂತರಿಸಿ ತೀರ್ಪು ನೀಡಿತ್ತು. ಅದಾದ ಒಂದು ವಾರದಲ್ಲಿಯೇ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ಆ ನಿಯಂತ್ರಣವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ.
ಕೇಂದ್ರದ ಈ ನಿರ್ಧಾರವನ್ನು ಸರ್ವಾಧಿಕಾರಿ ವರ್ತನೆ ಎಂದು ಕರೆದಿದ್ದ ಅರವಿಂದ್ ಕೇಜ್ರಿವಾಲ್ ಇದರ ವಿರುದ್ಧ ನಿಲುವು ವ್ಯಕ್ತಪಡಿಸುವಂತೆ ಹಲವಾರು ವಿರೋಧ ಪಕ್ಷಗಳನ್ನು ಸಂಪರ್ಕಿಸಿ ಬೆಂಬಲ ಪಡೆದಿತ್ತು. ಕಾಂಗ್ರೆಸ್ ಈ ಬಗ್ಗೆ ಯೋಚಿಸಿ ಸಂಸತ್ ಅಧಿವೇಶಕ್ಕೂ ಮೊದಲು ತನ್ನ ನಿಲುವು ಪ್ರಕಟಿಸುವುದಾಗಿ ತಿಳಿಸಿದೆ. ಇತರ 11 ವಿರೋಧ ಪಕ್ಷಗಳು ಆಪ್ ಸರ್ಕಾರದ ಪರ ನಿಂತು ಕೇಂದ್ರದ ವರ್ತನೆಯನ್ನು ಖಂಡಿಸಿವೆ.
ಈ ಸುಗ್ರೀವಾಜ್ಞೆಗಳನ್ನು ಜುಲೈ 3 ರಿಂದ ದೆಹಲಿಯಾದ್ಯಂತ ಸುಡುವ ಮೂಲಕ ಪ್ರತಿಭಟನೆ ನಡೆಸುತ್ತೇವೆ ಎಂದು ಆಮ್ ಆದ್ಮಿ ಪಕ್ಷ ಘೋಷಿಸಿದೆ. ಈ ಬೆನ್ನಲ್ಲೆ ಸುಪ್ರೀಂ ಕೋರ್ಟ್ನಲ್ಲಿಯೂ ಕೇಂದ್ರದ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿದೆ.
ಇದನ್ನೂ ಓದಿ: ಬೆಲೆ ಏರಿಕೆ ವಿಚಾರ: ಅಚ್ಚೇ ದಿನ್ ಭರವಸೆ ನೀಡಿ ಜನರನ್ನು ವಂಚಿಸಿದ ಕೇಂದ್ರ; ಪ್ರಧಾನಿ ಮೋದಿಗೆ ಖರ್ಗೆ ತರಾಟೆ