ಜಾದವ್ಪುರ ವಿಶ್ವವಿದ್ಯಾಲಯದ ಕುಲಪತಿಯಾಗಿರುವ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಖರ್ ಅವರ ಕಾರಿಗೆ ಮುತ್ತಿಗೆ ಹಾಕುವ ಮೂಲಕ ವಿದ್ಯಾರ್ಥಿಗಳು ಕಪ್ಪು ಬಾವುಟ ಪ್ರದರ್ಶಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಖರ್ ಅವರು ಈ ಹಿಂದೆ ಸಾರ್ವಜನಿಕವಾಗಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಹೇಳಿಕೆ ನೀಡಿದ್ದರು. ಹಾಗಾಗಿ ವಿಶ್ವವಿದ್ಯಾನಿಲಯದ ವಾರ್ಷಿಕ ಸಮ್ಮೇಳನದಲ್ಲಿ ಅವರ “ಹಸ್ತಕ್ಷೇಪ” ವನ್ನು ವಿರೋಧಿಸಿ ವಿದ್ಯಾರ್ಥಿಗಳು ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ.
ಇಂದು ಬೆಳಿಗ್ಗೆ ಕೋಲ್ಕತ್ತಾದ ಜಾದವ್ಪುರ ವಿಶ್ವವಿದ್ಯಾಲಯದ ವಾರ್ಷಿಕ ಸಮ್ಮೇಳನ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದಾಗ ವಿದ್ಯಾರ್ಥಿಗಳು ಕಪ್ಪುಬಾವುಟ ಪ್ರದರ್ಶಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ವಿಶ್ವವಿದ್ಯಾನಿಲಯವು ಇಂತಹ ಪರಿಸ್ಥಿತಿಯನ್ನು ಹೇಗೆ ಅನುಮತಿಸುತ್ತದೆ ಮತ್ತು ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲದ್ದನ್ನು ನೋಡಿ ನಾನು ಆಶ್ಚರ್ಯ ಮತ್ತು ಆಘಾತಗೊಂಡಿದ್ದೇನೆ. ಇದು ವ್ಯವಸ್ಥೆಯ ಸಂಪೂರ್ಣ ಕುಸಿತವಾಗಿದೆ” ಎಂದು ಧಂಕರ್ ಘಟನೆಯ ಕುರಿತು ಪ್ರತಿಕ್ರಿಯಿಸಿದ್ದಾರೆ.
ಜಾದವ್ಪುರ ವಿಶ್ವವಿದ್ಯಾಲಯದ ಕುಲಪತಿಯಾಗಿರುವ ರಾಜ್ಯಪಾಲರನ್ನು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್ ಪದವಿಗಳನ್ನು ಪ್ರದಾನ ಮಾಡಲು ಆಹ್ವಾನಿಸಲಾಗುತ್ತದೆ. ಆದರೆ ಇಲ್ಲಿ ಅವರಿಗೆ ಮಾತನಾಡಲು ಅವಕಾಶವಿಲ್ಲ ಮತ್ತು ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಉಪಕುಲಪತಿಗಳು ಪದವಿಗಳನ್ನು ನೀಡುವಂತಿಲ್ಲ ಎಂದು ನಿರ್ಧರಿಸಲಾಗಿದೆ. ಏಕೆಂದರೆ ಹಲವು ವಿದ್ಯಾರ್ಥಿಗಳು ಅವರಿಂದ ಪದವಿ ಪ್ರಮಾಣ ಪತ್ರ ಪಡೆಯಲು ನಿರಾಕರಿಸಿದ್ದಾರೆ.
“ಜಾದವಪುರ ವಿಶ್ವವಿದ್ಯಾಲಯದ ಉಪಕುಲಪತಿಗಳು ಉದ್ದೇಶಪೂರ್ವಕವಾಗಿ ತಮ್ಮ ಕಟ್ಟುಪಾಡುಗಳನ್ನು ಮರೆತು ಈ ರೀತಿ ಮಾಡುತ್ತಿರುವುದು ನೋವಿನ ಸಂಗತಿ. ಅವರು ವಿನಾಶಕಾರಿ ವ್ಯವಹಾರಗಳು ಮತ್ತು ಕಾನೂನಿನ ಸಂಪೂರ್ಣ ಕುಸಿತದ ಅಧ್ಯಕ್ಷತೆಯನ್ನು ವಹಿಸುತ್ತಿದ್ದಾರೆ.” ಎಂದು ಧಂಕರ್ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಅವರು ಅಲ್ಲಿಂದ ವಾಪಸ್ ಮನೆಗೆ ತೆರಳಿದ್ದಾರೆ ಎಂದು ಬರೆದುಕೊಂಡಿದ್ದಾರೆ.
A painful scenario that the Jadavpur University Vice Chancellor is oblivious deliberately of his obligations and looking for alibis. He is presiding total collapse of rule of law. Ruinous state of affairs.
— Jagdeep Dhankhar (@jdhankhar1) December 24, 2019
ಸೋಮವಾರವೂ, ವಿಶ್ವವಿದ್ಯಾನಿಲಯದ ಉನ್ನತ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳಲು ಅವರು ಅಲ್ಲಿಗೆ ಬಂದಾಗ ಅವರನ್ನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಪ್ಪು ಧ್ವಜಗಳನ್ನು ತೋರಿಸಿ ತಡೆದಿದ್ದರು. ವಿದ್ಯಾರ್ಥಿಗಳ ಭಾರೀ ವಿರೋಧದ ನಡುವೆ ಸಾಕಷ್ಟು ಹೋರಾಟದ ನಂತರವೇ ಧಂಖರ್ ಕಟ್ಟಡವನ್ನು ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದರು.