Homeಅಂಕಣಗಳುಏನಾದ್ರು ಮಾಡಿ ಮಂತ್ರಿಯಾಗಲೆಬೇಕು ಕಂಡ್ರೀ

ಏನಾದ್ರು ಮಾಡಿ ಮಂತ್ರಿಯಾಗಲೆಬೇಕು ಕಂಡ್ರೀ

- Advertisement -
- Advertisement -

ಅಂತಾರಾಷ್ಟ್ರೀಯ ಮಟ್ಟದ ಅರ್ಥಶಾಸ್ತ್ರಜ್ಞೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಇಡೀ ದೇಶದ ತುಂಬ ಚರ್ಚೆಯಾಗುತ್ತಿರುವ ಸಮಯದಲ್ಲಿ, ಬಡವರ ಪಾಲಿಗೆ ಯಾವ ಬೆನಿಫಿಟ್ಟೂ ಬಜೆಟ್ಟಿನಲ್ಲಿ ಇಲ್ಲವಂತಲ್ಲಾ. ಇದೇನು ಆಶ್ಚರ್ಯಪಡುವ ಸಂಗತಿಯಲ್ಲ. ಬಿಜೆಪಿ ಹುಟ್ಟಿನಲ್ಲೇ ಬಡವರ ವಿರೋಧಿಯಾಗಿದೆ. ಬಡವರು ಬಡವರಾಗಿದ್ದರೆ ಮಾತ್ರ ನಾವು ಮೆರೆಯಬಹುದು; ಗರ್ಭಗುಡಿಯಲ್ಲಿ ಕುಳಿತು ಶಿಖೆ ನೀವುತ್ತಾ, ಬೆವರಿಳಿಯುವಂತೆ ಭೂರಿ ಭೋಜನ ಬಾರಿಸಬಹುದು ಎಂದು ನಂಬಿದವರ ಸರಕಾರದಿಂದ ಬಡವರಿಗೆ ಅನುಕೂಲವಾಗುವುದುಂಟೆ. ಎಂದಿನವರೆಗೆ ಬಡತನ ತಾಂಡವವಾಡುತ್ತಿರುತ್ತದೊ ಅಲ್ಲಿಯವರೆಗೆ ನಾವೂ ನೃತ್ಯ ಮಾಡಬಹುದೆಂದು ನಂಬಿರುವ ಜನ ನಡೆಸುವ ಸರಕಾರದಲ್ಲಿ ಬಡವರಿಗಾಗಿ ನಿರ್ಮಲಾ ಏನಾದರೂ ಕೊಡುವುದರ ಬದಲು ಹಿಂದೆ ಕೊಟ್ಟಿದೆಲ್ಲವನ್ನ ಕಿತ್ತುಕೊಂಡಿದ್ದಾರೆ. ಎಂದಿನಂತೆ ದೇಶದ ಭವಿಷ್ಯದ ದೃಷ್ಟಿಯಿಂದ ಯಾವ ಭರವಸೆಯೂ ಇಲ್ಲದ ಬಜೆಟ್ಟು ದೇಶವ್ಯಾಪ್ತಿ ಚರ್ಚೆಯಾಗದಂತೆ ಮಾಡಲು ಈಗಾಗಲೇ ವೈದಿಕ ಶಿಖಾಮಣಿಗಳು ರಾಮಮಂದಿರವನ್ನು ಉಡಾಯಿಸುವ ಬೆದರಿಕೆ ಕರೆಗಳು ಬರುತ್ತಿವೆಯೆಂದು ಹುಯಿಲೆಬ್ಬಿಸತೊಡಗಿದ್ದಾರೆ. ಇಂತಹ ನಾಟಕಗಳು ಈ ಹಿಂದಿನಿಂದಲೂ ನಡೆದುಬರುತ್ತಿರುವುದರಿಂದ ಸಂಘಿಗಳ ಚೇಷ್ಟೆಗೆ ಯಾರೂ ಗಮನಕೊಡದಿರುವುದನ್ನು ಕಂಡ ಅವುಗಳು ಭಾರತದ ಜನಕ್ಕೆ ಮನದಟ್ಟಾಗುವವರೆಗೂ ಹೇಳಲು ತಯಾರಾಗಿವೆಯಂತಲ್ಲಾ, ಥೂತ್ತೇರಿ.

*****

ರಾಜ್ಯದಲ್ಲಿ ಪಂಚರತ್ನ ಯಾತ್ರೆ, ಸಂಕಲ್ಪಯಾತ್ರೆ, ಬಿಜೆಪಿಗಳ ಪರಿಷೆ ನಡೆಯುತ್ತಿರುವಾಗ ಒಂದು ಜೀವ ಅತೃಪ್ತಿ, ಅಶಾಂತಿ, ಹಿಂಸೆ ಮತ್ತು ಅಸಹನೆಯಿಂದ ಕ್ರೋಧಗೊಂಡಿದೆಯಲ್ಲಾ. ಆ ಆಸಾಮಿಯ ಬಯಕೆ ಈಡೇರಿದ್ದೇ ಆದರೆ ಕರ್ನಾಟಕವನ್ನ ಕಿತ್ತು ತಿನ್ನುತ್ತಿರುವ ಸಮಸ್ಯೆಗಳೆಲ್ಲಾ ಜಾದೂ ಮಾಡಿದಂತೆ ಮಾಯವಾಗಲಿವೆಯಂತಲ್ಲಾ. ಈ ಆಸಾಮಿಯ ಬಯಕೆ ಈಡೇರಿಸುವ ಶಕ್ತಿಯಿರುವುದು ಬಸವರಾಜ ಬೊಮ್ಮಾಯಿಗೆ ಮಾತ್ರ. ಈ ಸಮಸ್ಯೆಗೆ ತುತ್ತಾದ ವ್ಯಕ್ತಿ ಈಶ್ವರಪ್ಪ. ಈ ಬಗ್ಗೆ ಅವರನ್ನೇ ಕೇಳಲೆಂದು ಫೋನ್ ಮಾಡಲಾಗಿ ರಿಂಗಾಯ್ತು. ರಿಂಗ್ ಟೋನ್ “ನಮಸ್ತೆ ಸಧಾ ವತ್ಸಲೇ ಮಾತೃ ಭೂಮಿ”.

“ಹಲೋ ಯಾರ್ರಿ?”

“ನಾನು ಸಾರ್ ಯಾಹೂ.”

“ಎಲ್ರಿ ಕಾಣ್ತನೆಯಿಲ್ಲಾ ನೀವು?”

“ಯಾತ್ರೆ, ಜಾತ್ರೆ, ಪರಿಷೆ ತಿರಗದೆ ಆಗಿದೆ ಸಾರ್ ಪುರಸತ್ತೆಯಿಲ್ಲ.”

“ಪುರಸತ್ತು ಮಾಡಿಕಂಡು ಬರಬೇಕಪ್ಪ, ಪತ್ರಕರ್ತರನ್ನ ನಾವು ಹ್ಯಂಗೆ ನೋಡಿಕಂಡಿದ್ದಿವಿ, ಸೈಟ್ ಕೊಟ್ಟಿದ್ದಿವಿ, ಮನೆಕೊಟ್ಟಿದ್ದಿವಿ, ಕೈಗೆ ದುಡ್ಡನ್ನೂ ಕೊಟ್ಟಿದ್ದಿವಿ. ಬಂಗ್ಲೆಲಿ ಆರಾಮವಾಗಿ ಇದ್ದುಬುಡೊದಲ್ಲ. ಬಂದು ನಮ್ಮ ಕಷ್ಟನೂ ಕೇಳಬೇಕು.”

“ಸಾರಿ ಸರ್, ಪತ್ರಕರ್ತರಿಂದ ಕೃತಜ್ಞತೆ ನಿರೀಕ್ಷೆ ಮಾಡಬೇಡ್ರಿ. ನೀವು ನಿಮ್ಮ ಕೆಲಸ ಮಾಡಿದ್ರೆ, ನಾವು ನಮ್ಮ ಕೆಲಸ ಮಾಡಿದೊ. ಕಾಲ ಹತ್ರ ಬರ್ತಾಯಿದೆ. ಮುಂದೆ ಯಾವ ಸರಕಾರ ಬರುತ್ತೊ ಏನೊ..”

“ಅದ್ಕೆ ಕಂಡ್ರಿ, ಕಡೇ ಅವಧಿಲಾರ ಮಂತ್ರಿಯಾಗನ ಅಂತ ಹೋರಾಡ್ತಯಿದ್ದಿನಿ, ಗೊತ್ತ?”

“ಸಾರ್ ನೀವು ಹೋರಾಡಬೇಕಾಗಿದ್ದುದ್ದು ಮಂತ್ರಿ ಪದವಿಗಲ್ಲ. ಶರಾವತಿ ಸಂತ್ರಸ್ತರ ಬಗ್ಗೆ, ಅಡಕೆ ತೋಟಕ್ಕೆ ಹಳದಿ ರೋಗ ಬಂದು ಅಟಗಾಯಿಸಿಗಂಡಿರದಕ್ಕೆ, ಮತ್ತೆ ವಿ.ಐ.ಎಸ್.ಎಲ್ ಮುಚ್ಚತಾಯಿರಕ್ಕೆ, ಹಿಂಗೆ ಜನರ ಬದುಕು ನಾಶವಾಗ್ತಯಿರದರ ವಿರುದ್ಧ ಹೋರಾಡಬೇಕು ಸಾರ್.”

“ಮಂತ್ರಿಯಾದ ಮೇಲೆ ಚೆನ್ನಾಗೆ ಹೋರಾಡಬಹುದಲ್ರೀ? ಅಧಿಕಾರನೂ ಇರತ್ತೆ, ಜನಗಳೂ ಮಾತ್ ಕೇಳ್ತರೆ.”

“ಯಲಕ್ಷನ್ ಕೆಲವೇ ತಿಂಗಳದೆ ಸಾರ್.”

“ಮೂರೆ ದಿನ ಇರ್ಲಿ ಕಂಡ್ರೀ, ಮತ್ತೆ ಮಂತ್ರಿಯಾದ್ರೆ ಕಳಂಕ ಯಲ್ಲ ಹೋಗಿ ನಾನು ನಿರ್ದೋಷಿ ಅಂತ ಸಾಬೀತಾಯ್ತದೆ.”

“ಯಾವ ವಿಷಯದಲ್ಲೀ?”

“ಗುತ್ತಿಗೆದಾರ ಸಂತೋಷನಿಂದ ನಲವತ್ತು ಪರಸೆಂಟು ಕಮಿಷನ್ ತಂಗಂಡೆ ಅನ್ನೋ ವಿಷಯದಲ್ಲಿ.”

“ನಿರ್ದೋಷಿ ಸರಿ, ಆದರೆ ಸಂತೋಷ ಆತ್ಮಹತ್ಯೆ ಮಾಡಿಕೊಂಡವರೆ ಸಾರ್.”

“ತನಿಖೆಲಿ ನಾನು ನಿರ್ದೋಷಿ ಅಂತ ಆಯ್ತಲ್ರೀ?”

ಇದನ್ನೂ ಓದಿ: ಕೆಲವೇ ದಿನಗಳಲ್ಲಿ ಆಡು ಕುರಿ ಕರ ಕಾಣೆಯಾಗುತ್ತವಲ್ಲಾ!

“ಸಾರ್ ನಿಮ್ಮದೇ ಸರಕಾರ, ನೀವೇ ಮಂತ್ರಿ. ತನಿಖೆ ಮಾಡೋರು ಹ್ಯಂಗೆ ಮಾಡಿರಬಹುದು ಹೇಳಿ? ಹಂಗಂತ ನಿಮ್ಮವರೆ ಮಾತಾಡಿಕೊಳ್ತಾ ಅವುರೆ.”

“ಅವುರ್ಯಾರು ಅಂತ ನನಿಗ್ಗೊತ್ತು. ಅವುರ ಮಾತ ಕೇಳಕ್ಕೋಗಬ್ಯಾಡಿ. ನನ್ನ ಮ್ಯಾಲೆ ದೂರಿತ್ತು, ಅದು ನಿವಾರಣೆ ಆಯ್ತು. ಈಗ ಮಂತ್ರಿಯಾಗಬೇಕು, ಆಗಲಿಲ್ಲ ಕಳಂಕ ಅಂಗೇ ಉಳಿತದೆ”

“ನೀವು ಒಂದು ಕ್ಯಲಸ ಮಾಡಬಹುದು ಸಾರ್.”

“ಅದೇನೇಳ್ರಿ?”

“ಬೊಮ್ಮಾಯಿ ಅಳ್ಳಾಡಸೊ ಅಂತ ಯಾವುದಾದ್ರು ಗುಟ್ಟಿದ್ರೆ ಅದ ಪತ್ತೆ ಮಾಡಿ ಹಿಡಕಳಿ.”

“ಬೊಮ್ಮಾಯಿದೇನಾದ್ರು ಅಕ್ರಮ ಇದ್ರೆ, ಕೊಲೆ ಕೇಸಿದ್ರೆ, ಅಕ್ರಮ ಸಂಬಂಧ ಇದ್ರೆ ಪತ್ತೆ ಹಚ್ಚಿ ಸಾಕ್ಷಿ ಸಮೇತ ಅವರ ಮುಖಕ್ಕೆ ಹಿಡಿರಿ. ಮರುದಿನವೇ ನೀವು ವಿಧಾನಸೌಧದ ಎದುರು ಮಂತ್ರಿಯಾಗಿ ಪ್ರಮಾಣ ವಚನ ತಗೊಳ್ತೀರಿ.”

“ಬೊಮ್ಮಾಯಿ ವಿಷಯದಲ್ಲಿ ಅಂತವ್ಯಾವೂ ಇಲ್ಲ ಕಂಡ್ರಿ.”

“ಹೋಗ್ಲಿ ರೇಣುಕಾಚಾರಿ ಕೇಳಿ, ಏನಾದ್ರೂ ಹೇಳ್ತರೆ.”

“ಅವುನ್ಯಾಕೆ ಕೇಳಲಿ?”

“ಆತ ಎಡೂರಪ್ಪನ ಇದೇತರ ಹೆದರಿಸಿ ಮಂತ್ರಿಯಾದದ್ದು. ನಿಮಗೂ ಗೊತ್ತಲವೇನ್ರಿ?”

“ಹೌದು ಗೊತ್ತು. ಬೊಮ್ಮಾಯಿನ ಅಂಗೆ ಹೆದರಸಕ್ಕಾಗಲ್ಲ. ಆತ ಅಂತಹ ಯಾವ ತಪ್ಪನ್ನು ಮಾಡಿರಲಾರ.”

“ಸಿದ್ದರಾಮಯ್ಯರಿಂದ ಬೊಮ್ಮಾಯಿಗೇಳಸಕ್ಕಾಗಲವ.”

“ಹೇಳಸಬಹುದಿತ್ತು, ಆದ್ರೆ ಈಚೆಗೆ ಸಿದ್ದರಾಮಯ್ಯ ನನ್ನ ಹೆಣಾನೂ ಬಿಜೆಪಿಗೆ ಹೋಗಲ್ಲ ಅಂದಿದ್ಕೆ, ಸಿದ್ದರಾಮಯ್ಯನ ಹೆಣನ ನಾಯಿನೂ ತಿನ್ನಲ್ಲ ಅಂದುಬುಟ್ಟೆ ಕಂಡ್ರಿ.”

“ಓ ಅದಕೆ ಏನು ಸಾರ್? ಅದಕ್ಕೆ ಪ್ರತಿಯಾಗಿ ಅವುರ ಕಡೆಯ ಕೆಲವು ಕಿಡಿಗೇಡಿಗಳು ಹಂದಿನೂ ತಿನ್ನಲ್ಲ ನಿಮಿಗೇ ಹೇಳತಾ ಅವುರೆ.”

“ಹೇಳ್‌ಕಳ್ಳಿ ಬುಡ್ರಿ ಹಂದಿ ಹ್ಯಣ ತಿಂತವ?”

“ಐದು ನಿಮಿಷಕ್ಕೆ ತಿನ್ನಕತ್ತವೆ, ಅದರಲ್ಲೂ ಕಾಡಂದಿ ರಾಜಕಾರಣಿಗಳ ಹ್ಯಣನ ಹುಡಿಕ್ಕಂಡು ತಿರುಗ್ತವೆ.”

“ಹೋಗ್ಲಿ ಬಿಡ್ರಿ, ನಾನು ಮಂತ್ರಿಯಾಗಕ್ಕೆ ಒಂದು ಪ್ಲಾನೇಳಿ.”

“ಎಡೂರಪ್ಪನ ಕಾಲಿಗೆ ಬೀಳಕ್ಕಾಗಲ್ಲವಾ?”

“ಆಗಲ್ಲ.”

“ವಿಧಾನಸೌಧದ ಎದಿರೀಗೆ ಬಿದ್ದಿದ್ರಿ?”

“ಅದಾ? ಕಾಲ. ಈಗ ಬಿದ್ರು ಪ್ರಯೋಜನಯಿಲ್ಲ. ಬೊಮ್ಮಾಯಿ ಕಡೆ ಕೈ ತೋರತಾರೆ.”

“ಕುಮಾರಸ್ವಾಮಿಯಿಂದ ಹೇಳಿಸಿದರಾಗಲ್ಲವೆ?”

“ಹೇಳಸಬಹುದು, ಈಗ್ಯಾಕೆ ಬಿಡಿ ಈಶ್ವರಪ್ಪ, ಮುಂದೆ ನನ್ನದೇ ಸರಕಾರ ಬರುತ್ತೆ, ಆಗ ನನ್ನ ಸಂಪುಟದಲ್ಲೇ ಪಿ.ಡಬ್ಳು.ಡಿ ಮಂತ್ರಿಯಾಗಿ ಅಂದುಬುಡ್ತಾರೆ.”

“ಪಿ.ಡಬ್ಳು.ಡಿ ಖಾತೆಯ ರೇವಣ್ಣನಿಂದ ಕಿತಗಳಕ್ಕೆ ಯಾರಿಂದ್ಲೂ ಆಗಲ್ಲ ಸಾರ್. ನಿಂಬೆ ಹಣ್ಣಲ್ಲೆ ಹ್ವಡಿತರೆ.”

“ಅದೇನೊ, ಅವುರು ಮನೆ, ಅವುರ ಪಾರ್ಟಿ ನಮಗ್ಯಾಕೆ. ನಾನು ಮಂತ್ರಿಯಾಗೊ ಪ್ಲಾನೇಳಿ.”

“ಸಾರ್, ನಿಜಕ್ಕೂ ಅಸಾಧ್ಯವಾದದ್ದು ಯಾವುದೂ ಇಲ್ಲ ಸಾರ್, ಶಿವಮೊಗ್ಗದಲ್ಲಿ 144 ಸೆಕ್ಷನ್ ಹಾಕಿದ್ದಾಗ್ಲೂ ಮೆರವಣಿಗೆ ತಗದು ಎಸ್ಪಿ, ಡಿಸಿ ಮತ್ತೆ ಜಿಲ್ಲಾ ಆಡಳಿತನೆ ಮುಸ್ಲಿಂ ಕೇರಿಗೆ ನುಗ್ಗಿಸಿ ದೊಂಬಿ ಮಾಡಿಸಿದ್ರಿ, ಆಗ ಪಿಎಫ್‌ಐ ಜನ ಪರಾರಿಯಾದ್ರು. ಅಲ್ಲೆ ಇದ್ದ ಸಾಮಾನ್ಯರು ಮೆಗ್ಗಾನ್ ಆಸುಪತ್ರೆಗೆ ಅಡ್ಮಿಟ್ ಆದ್ರು, ಇಡೀ ಶಿವಮೊಗ್ಗನೆ ನಡುಗಿಸಿದ್ರಿ. ಅಂತಹ ಈಶ್ವರಪ್ಪನಿಗೆ ಜುಜುಬಿ ಒಂದು ಮಂತ್ರಿ ಖಾತೆ ಪಡಿಯಕ್ಕಾಗಲ್ಲವ ಸಾರ್. ಈಗ್ಲು ಒಂದು ಅವಾಜ್ ಹಾಕಿ, ಶಿವಮೊಗ್ಗದ ಜನಗಳೆ ಸೇರಿ, ಶಿವಮೊಗ್ಗ ತಣ್ಣಗಿರಬೇಕಾದ್ರೆ ಮೊದ್ಲು ಈಶ್ವರಪ್ಪನ್ನ ಮಂತ್ರಿ ಮಾಡಿಬಿಡಿ ಅಂತಾರೆ. ಆಗ ವಿಧಾನಸೌಧದ ಎದುರು ನೀವೊಬ್ಬರೆ ಮಂತ್ರಿಯಾಗಿ ಪ್ರಮಾಣ ವಚನ ತಗೋಳ್ತಿರಿ. ಲೇಟ್ ಮಾಡಬೇಡಿ”

“ಸರಕಾರ ನಡಸೋರೆ ತಿಳಕಬೇಕು ಕಂಡ್ರಿ. ನಲವತ್ತು ಪರಸೆಂಟ್ ವಿಷಯನ ಇಡೀ ಸರಕಾರ ಹೊರಬೇಕು. ಏನೊ ನಾನೊಬ್ನೆ ಪರಸೆಂಟೇಜ್ ತಗೊಂಡನೆ? ದೂರು ಹೊತ್ತಗಂಡೋನು ನಾನೊಬ್ಬನೆ ಕಂಡ್ರಿ. ಈಗ ಸಮಸ್ಯೆನ ಸರಕಾರವೇ ಪರಿಹಾರ ಮಾಡಬೇಕು.”

“ಥೂತ್ತೇರಿ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...