Homeಮುಖಪುಟಚುನಾವಣೆ ಬಂತೆಂದರೆ ತಾನೊಡನೆ ನುಡಿವರಯ್ಯಾ!

ಚುನಾವಣೆ ಬಂತೆಂದರೆ ತಾನೊಡನೆ ನುಡಿವರಯ್ಯಾ!

- Advertisement -
- Advertisement -

ಭಾವನಾತ್ಮಕವಾಗಿ ಅಸ್ಸಾಂ, ಮೇಘಾಲಯ, ಮಣಿಪುರ, ತ್ರಿಪುರ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಸಿಕ್ಕಿಂ ಈ ಏಳು ರಾಜ್ಯಗಳ್ನು ಈಶಾನ್ಯ ಸೋದರಿಯರೆಂದು ಕರೆಯಲಾಗುತ್ತಿದೆ. ಪುರಾಣ ಪ್ರಸಿದ್ಧ ಬಬ್ರುವಾಹನನ ತಾಯಿ ಚಿತ್ರಾಂಗದೆಯ ತವರು ಭೂಮಿ ಮಣಿಪುರ. ಈ ಗುಡ್ಡಗಾಡು ಪ್ರದೇಶದಲ್ಲಿ ಕುಕಿ, ನಾಗಾ ಮುಂತಾದ ಅಲ್ಪಸಂಖ್ಯಾತ ಕೋಮಿನ (ನಂತರದ ದಿನಗಳಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಅಪ್ಪಿಕೊಂಡಿದ್ದಾರೆ) ಬುಡಕಟ್ಟು ಆದಿವಾಸಿಗಳೂ ಮೈತ್‌ಯಿ ಎಂಬ ಬಹುಸಂಖ್ಯಾತ ಹಿಂದೂ ಧರ್ಮಾವಲಂಬಿಗಳೂ ವಾಸಿಸುತ್ತಿದ್ದಾರೆ. ಆದರೆ ಈಗ ಅವರ ಶತಮಾನಗಳ ಸೌಹಾರ್ದದ ಬದುಕಿಗೆ ಬೆಂಕಿಬಿದ್ದಿದೆ. ಕಳೆದ ಮೇ 3ರಿಂದ ಮಣಿಪುರ ಹತ್ತಿ ಉರಿಯುತ್ತಿದೆ. ಕುಕಿ ಬುಡಕಟ್ಟು ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಬೆತ್ತಲೆ ಮೆರವಣಿಗೆಯ ದೌರ್ಜನ್ಯಗಳು ನಡೆದಿವೆ. ಹೆಚ್ಚಾಗಿ ಮೈತ್‌ಯಿ ಬಂಡುಕೋರರು ಸರ್ಕಾರಿ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿ ಭದ್ರತಾ ಪಡೆಗಳೊಂದಿಗೆ-ಕುಕಿಗಳೊಂದಿಗೆ ಹೋರಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ನೂರಾರು ಜನ ಜೀವ ಕಳೆದುಕೊಂಡಿದ್ದಾರೆ. ಕುಕಿ ಗ್ರಾಮಗಳಲ್ಲಿನ ಜನರನ್ನು ಸ್ಥಳಾಂತರಿಸಿ ನಿರಾಶ್ರಿತರ ಶಿಬಿರಗಳಲ್ಲಿಡಲಾಗಿದೆ. ಬಹುಸಂಖ್ಯಾತ ಮೈತ್‌ಯಿ ಸಮುದಾಯಕ್ಕೆ ಸೇರಿದ ಮುಖ್ಯಮಂತ್ರಿ ಬಿರೇನ್ ಸಿಂಗ್, ’ಇಂಥ ಪ್ರಕರಣಗಳು ದಿನನಿತ್ಯದ ಸಂಕಥನಗಳಾಗಿವೆ; ಇನ್ನಷ್ಟು ಪ್ರಸಾರ, ಪ್ರಚೋದನೆಗೆ ಎಡೆಯಾಗಬಾರದೆಂದು ಸಂಪರ್ಕ ಜಾಲತಾಣಗಳನ್ನು ತುಂಡರಿಸಲಾಗಿದೆ’ ಎಂದು ಹೇಳುವ ಮೂಲಕ ವ್ಯಾಪಕವಾಗಿರುವ ಹಿಂಸೆ-ದೌರ್ಜನ್ಯವನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ರಾಜ್ಯ ಪೊಲೀಸ್ ಅಸಹಾಯಕವಾಗಿದೆ. ಅವರ ವಿರುದ್ಧ ಪಕ್ಷಪಾತದ ಆರೋಪವೂ ಇದೆ. ಸರ್ಕಾರ ಕೈಚೆಲ್ಲಿದೆ. ಕೇಂದ್ರ ಸರ್ಕಾರ ಮೂಕ ಪ್ರೇಕ್ಷಕನಂತಿದೆ. ಗೃಹಮಂತ್ರಿ ಅಮಿತ್ ಶಾ ರಾಜ್ಯಕ್ಕೆ ಭೇಟಿಯಿತ್ತರೂ ಸಂಘರ್ಷ ಶಮನವಾಗಲಿಲ್ಲ. ಹಿಂಸಾಚಾರ ನಿಲುಗಡೆಗೆ ಬಂದಿಲ್ಲ. ವಿರೋಧ ಪಕ್ಷದ ನಿಯೋಗ ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡಿ ರಾಜ್ಯಪಾಲರಿಗೆ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮಣಿಪುರದಲ್ಲಿ ಶಾಂತಿ, ಸುವ್ಯವಸ್ಥೆಗೆ ಕ್ರಮಕೈಗೊಳ್ಳಲು ಆಗ್ರಹಿಸಿ ಮನವಿಮಾಡಿದೆ. ಮಾನವ ಹಕ್ಕು ಹೋರಾಟಗಾರರು ಹೋಗಿ ವಾಸ್ತವ ಚಿತ್ರಣ ನೀಡುತ್ತಿದ್ದಾರೆ. ಭಾರತ ಜೋಡೊ ಖ್ಯಾತಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಸಂತ್ರಸ್ತರ ಶಿಬಿರಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿ ಬಂದಿದ್ದಾರೆ. ಆದರೇನು? ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಕುಸಿದುಬಿದ್ದಿದೆ.

ಇಷ್ಟೆಲ್ಲಾ ಅವಾಂತರಗಳಿಗೆ, ಹಿಂಸಾಚಾರಗಳಿಗೆ, ಸಂಘರ್ಷಗಳಿಗೆ ಮುಖ್ಯ ಕಾರಣ ಕೃಷಿ ಭೂಮಿ. ಕೇವಲ 3.5 ಲಕ್ಷ ಜನಸಂಖ್ಯೆಯಿರುವ ಮಣಿಪುರದಲ್ಲಿ ಅನೇಕ ಸಣ್ಣಪುಟ್ಟ ಜನಾಂಗಗಳಿವೆ. ಮೈತ್‌ಯಿ ಅತಿ ದೊಡ್ಡ ಸಮೂಹವಾಗಿದ್ದು ಶೇ.53 ಭಾಗದಷ್ಟಿದ್ದಾರೆ. ಉಳಿದಂತೆ ಕ್ರಮವಾಗಿ ಕುಕಿಗಳು ಶೇ.23 ಮತ್ತು ಶೇ.21ರಷ್ಟು ನಾಗಾಗಳು ಮತ್ತು ಕೆಲವು ಅತಿ ಸಣ್ಣ ಸಂಖ್ಯೆಯ ಬುಡಕಟ್ಟುಗಳಿವೆ. ಮಣಿಪುರ ಗುಡ್ಡಗಾಡು ಪ್ರದೇಶವಾಗಿದ್ದು ಶೇ.90 ಭಾಗ ಪರ್ವತಗಳು. ಅವುಗಳ ನಡುವೆ ಕೇವಲ ಒಂದನೇ ಹತ್ತು ಭಾಗ ಮಾತ್ರ ಕಣಿವೆ ಪ್ರದೇಶ. ಅಲ್ಲಿ ಕೃಷಿ ಮಾಡಲಾಗುತ್ತದೆ. ಸುಪ್ರೀಂ ಕೋರ್ಟಿನ ಆದೇಶದಂತೆ ಕಾಡಿನ ಉತ್ಪನ್ನಗಳನ್ನು ಗುರುತಿಸಿ, ಜೀವನೋಪಾಯಕ್ಕಾಗಿ ಬುಡಕಟ್ಟು ಜನರಿಗೆ ಜಮೀನು ನೀಡಲಾಯಿತು. ಅವರ ಭೂಮಿ ಪರಭಾರೆ ಆಗದಂತೆ ಕಾನೂನು ರೂಪಿಸಲಾಗಿದೆ. ಆಮೇಲೆ ಈ ಬುಡಕಟ್ಟುಗಳು ಅಫೀಮು ಇತ್ಯಾದಿ ವಾಣಿಜ್ಯ ಬೆಳೆಗಳನ್ನು ಬೆಳೆಸಿ ಜೀವನೋಪಾಯ ಕಂಡುಕೊಂಡರು.

ಮೈತ್‌ಯಿಗಳ ಮತ್ತು ಕುಕಿಗಳ ನಡುವಿನ ಅಸಹನೆಗೆ ದೀರ್ಘ ಇತಿಹಾಸವಿದ್ದು, ಎರಡೂ ಸಮೂಹಗಳ ನಡುವಿನ ಸೌಹಾರ್ದತೆ ಈಗ ಕುಸಿದುಬಿದ್ದಿದೆ. ನಮ್ಮನ್ನೂ ಬುಡಕಟ್ಟು ಎಂದು ಗುರುತಿಸಲು ಮೈತ್‌ಯಿಗಳು ಒತ್ತಾಯಿಸುತ್ತಿದ್ದಾರೆ. ಸದ್ಯಕ್ಕೆ ಕುಕಿಗಳ ನಿಯಂತ್ರಿಸುವ ಜಮೀನು ಕೊಳ್ಳಲು ಅವರಿಗೆ ಅವಕಾಶವಿಲ್ಲ. ಮೈತ್‌ಯಿಗಳಿಗೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡುವ ಬಗ್ಗೆ ಹೈಕೋರ್ಟ್ ಆದೇಶ ಬಿದ್ದನಂತರ, ಅದರಿಂದ ಬೆಟ್ಟಗುಡ್ಡಗಾಡು ಪ್ರದೇಶವನ್ನು ಮೈತ್‌ಯಿಗಳಿಗೆ ಕೊಳ್ಳಲು ಸಾಧ್ಯವಾಗುತ್ತದೆ ಎಂದು ಬಗೆಯಲಾಯಿತು. ಇದು ಸಂಘರ್ಷಕ್ಕೆ ಬೀಜವನ್ನು ಬಿತ್ತಿತು. ಅದನ್ನು ಆರಂಭದಲ್ಲೇ ಮಾತುಕತೆಗಳ ಮೂಲಕ ಬಗೆಹರಿಸಲು ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಲಿಲ್ಲ. ಹೀಗೆ ಕಣಿವೆ ರಾಜ್ಯ ಸದ್ಯ ಕದನದ ಕಣವಾಗಿದೆ. ಇವರ ನಡುವೆ ಸೌಹಾರ್ದತೆಯ ವಾತಾವರಣವನ್ನು ಬಲಪಡಿಸುವ ಬದಲು ಕಿಡಿಗೇಡಿ ಮಧ್ಯವರ್ತಿಗಳು ವಿಭಿನ್ನ ಪಕ್ಷಗಳ ರಾಜಕಾರಣಿಗಳು ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ. ಪರಿಣಾಮವಾಗಿ ಕಳೆದ ಮೂರು ತಿಂಗಳಿನಿಂದ ಹಿಂಸಾಚಾರ ಕೈಮೀರಿ ಹೋಗುತ್ತಿದೆ.

ಆದರೆ ನಮ್ಮ ಪ್ರಧಾನಿ ಮೋದಿ ಮಾತ್ರ ವ್ರತ ಹಿಡಿದ ಜಿನ ಮುನಿಯಂತೆ ತುಟಿ ಬಿಚ್ಚದಂತಿದ್ದಾರೆ. ಒಮ್ಮೆ ಯಾವಾಗಲೋ ಮಾತನಾಡಿದರಷ್ಟೇ! ಇದರ ಹಿಂದಿನ ರಹಸ್ಯವೇನು? ಇವರು ಸಂಸತ್ತಿನಲ್ಲಿ ಹೇಳಿಕೆ ನೀಡಲು ಯಾಕೆ ನಿರಾಕರಿಸುತ್ತಿದ್ದಾರೆ. ’ಮನ್ ಕೀ ಬಾತ್’ನಲ್ಲಿ ಲೋಕ ಸಮಸ್ಯೆಗಳನ್ನೆಲ್ಲಾ ಪ್ರಸ್ತಾಪಿಸುವ ಇವರು ಮಣಿಪುರದ ಬಗ್ಗೆ ಚಕಾರ ಎತ್ತುತ್ತಿಲ್ಲ. ಇದೇ ಚಿದಂಬರ ರಹಸ್ಯ!

ಇದನ್ನೂ ಓದಿ: ಮಣಿಪುರ ಹಿಂಸಾಚಾರ: ಮತ್ತೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ಬಯಲು

ಈ ಹಂತದಲ್ಲಿ ನಾವು ಸ್ವಲ್ಪ ಹಿಂದೆಸರಿದು ಮೋದಿಯವರ ಆಡಳಿತ ವೈಖರಿಯ ಇತಿಹಾಸವನ್ನು ಕೊಂಚ ಸಿಂಹಾವಲೋಕನ ಕ್ರಮದಲ್ಲಿ ಅವಲೋಕಿಸುವುದಾದರೆ; 2002ರಲ್ಲಿ ಇವರು ಗುಜರಾತಿನ ಮುಖ್ಯಮಂತ್ರಿ. ಆಗ ಗೋದ್ರಾ ರೈಲು ಹಿಂಸಾಚಾರಕ್ಕೆ ಪ್ರತಿಕ್ರಿಯೆಯಾಗಿ ಗುಜರಾತ್ 3 ದಿನ ಹತ್ತಿ ಉರಿಯಿತು. ಆಗ ಸುಮಾರು 1000 ಸಂಖ್ಯೆಯಷ್ಟು ಅಲ್ಪಸಂಖ್ಯಾತರ ನರಮೇಧ ನಡೆಯಿತು. ಸಾವಿರಾರು ಜನ ಸಂತ್ರಸ್ತರು ನಿರಾಶ್ರಿತರ ಶಿಬಿರ ಸೇರಿದರು. ಅಂದಿನ ಪ್ರಧಾನಿ ವಾಜಪೇಯಿ ರಾಜಧರ್ಮ ಪಾಲಿಸಿ ಎಂದು ಹೇಳಿದರಷ್ಟೇ ಹೊರತು, ತಮ್ಮ ಪಕ್ಷದ್ದೇ ಸರ್ಕಾರವೆಂದೋ ಏನೋ ಅವರು ಗುಜರಾತ್ ಸರ್ಕಾರವನ್ನು ವಜಾ ಮಾಡಲಿಲ್ಲ. ಬಹುಶಃ ಸದ್ಯ ಮಣಿಪುರದ ಹಿಂಸಾಕಾಂಡಕ್ಕೂ ಇದೇ ತರ್ಕ ಅನ್ವಯವಾಗಿರಬಹುದು.

ಪ್ರಸ್ತುತ ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡಿ ವಾಜಪೇಯಿ ಅವರ ಪರಂಪರೆಯನ್ನಾದರೂ ಮೆರೆಯಲಿಲ್ಲ. ಇಲ್ಲಿ ರಾಜಧರ್ಮದ ಪ್ರಸ್ತಾಪವಾದರೂ ಬಂದಿಲ್ಲ, ಇನ್ನು ಸಾಂವಿಧಾನಿಕ ಆಡಳಿತದ ಬಗ್ಗೆ ನೆನಪಿಸಿಕೊಳ್ಳಲಿ ಇವರಿಗೆ ಪುರುಸೊತ್ತೆಲ್ಲಿ? ಅಧಿಕಾರಕ್ಕೆ ಬಂದಾಗಿನಿಂದಲೂ ಮೇಲಿಂದಮೇಲೆ ಬಣ್ಣಬಣ್ಣದ ಮಾತುಗಳನ್ನು ಆಡಿಕೊಂಡೇ ಬಂದಿದ್ದಾರೆ: 2014ರ ಚುನಾವಣೆಗೆ ಮುನ್ನ ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪು ಹಣವನ್ನು ಬಿಳಿದುಮಾಡಿ ದೇಶವಾಸಿಗಳ ಬ್ಯಾಂಕ್ ಖಾತೆಗಳಿಗೆ ತುಂಬಲಾಗುತ್ತದೆ ಎಂದರು. ಆದರೆ ಅದಾಗಲಿಲ್ಲ; ಎರಡನೆಯದಾಗಿ, ಇದ್ದಕ್ಕಿದ್ದಂತೆ ನೋಟು ಬ್ಯಾನ್ ಮಾಡಿ ಬಡವರನ್ನು ಬ್ಯಾಂಕ್‌ಗಳ ಬಾಗಿಲಲ್ಲಿ ದಿನಗಟ್ಟಲೆ ಕ್ಯೂ ನಿಲ್ಲಿಸಿದರು. ಆದರೆ ಅವರಿಗೇನೂ ಉಪಯೋಗವಾಗಲಿಲ್ಲ. ಸಣ್ಣ ಉದ್ಯಮಿಗಳು ನೆಲಕಚ್ಚಿದರು. ಮೂರನೆಯದಾಗಿ ಸಣ್ಣಪುಟ್ಟ ಅಂಗಡಿಯ ವ್ಯಾಪಾರಿಗಳ ಮೇಲೂ ಜಿಎಸ್ಟಿ ತೆರಿಗೆ ಜಡಿದರು; ಇದರಿಂದ ಬೀದಿ ವ್ಯಾಪಾರಿಗಳು ಬೆಪ್ಪಾದರು; ನಾಲ್ಕನೆಯದಾಗಿ ನಾಗರಿಕ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ತರಲು ಹೋಗಿ ಭಾರತೀಯ ಮುಸಲ್ಮಾನರಲ್ಲಿ ಆತಂಕ ಸೃಷ್ಟಿಸಿದರು; ಐದನೆಯದಾಗಿ ಕೋವಿಡ್ ಪಿಡುಗಿನ ಸಂದರ್ಭದಲ್ಲಿ ಸಂಸತ್ತಿನಲ್ಲಿ ಪ್ರಸ್ತಾಪ ಮಾಡದೆಯೇ ಕೃಷಿ ಕಾಯಿದೆಗೆ ತಿದ್ದುಪಡಿ ತಂದರು. ಪರಿಣಾಮವಾಗಿ ರೈತಸಂಘಟನೆಗಳು ದಿಲ್ಲಿ ಬಾಗಿಲಿನಲ್ಲಿ ಧರಣಿ ಕುಳಿತು ವರ್ಷಾಂತರ ಪ್ರಾಕೃತಿಕ ವಿಕೋಪಗಳ ನಡುವೆಯೂ ಪ್ರತಿಭಟಿಸಿದರು. ಆಗ ಸುಮಾರು 750 ಮಂದಿ ರೈತರು ಸುಖಾಸುಮ್ಮನೆ ಅಸುನೀಗುವಂತಾಯಿತು. ಆದರೂ ನಾವು ರೈತಪರ ಎಂದು ಹೇಳುವ ಪ್ರಧಾನಿ ಸೌಜನ್ಯಕ್ಕಾದರೂ ಪ್ರತಿಭಟನೆ ನಿರತ ರೈತರನ್ನು ಕಂಡು ಮಾತನಾಡಿಸದಾದರು.

ಈಚೆಗೆ, 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಸುಮಾರು 12 ರೋಡ್ ಶೋ ನಡೆಸಿದರೂ ಗೆಲ್ಲದಾದರು. ಆದರೆ ಅವರ ಸರ್ಕಾರದ ಇಲಾಖೆಯೊಂದು ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯಕ್ಕೆ ಅಕ್ಕಿ ಮಂಜೂರು ಮಾಡದೆ ಕರ್ನಾಟಕದಲ್ಲಿ ಬಿಜೆಪಿ ಸೋಲಿಗೆ ಸೇಡು ತೀರಿಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳಿವೆ. ಮೋದಿ ಸಾಧನೆಗಳ ಪಟ್ಟಿಯಲ್ಲಿ ಇವು ಕೆಲವು ಮಾತ್ರ. ರಾಜ್ಯ ವಿರೋಧಪಕ್ಷವಾದ ಬಿಜೆಪಿಯು ನಾಯಕನಿಲ್ಲದ ಕೋಟೆಯಂತೆ ಅರಾಜಕವೆನಿಸಿದೆ. ಇದೆಲ್ಲ ಯಾವ ಸಂದೇಶವನ್ನು ರವಾನಿಸುತ್ತದೆ?

ಇನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕಡೆಗಣಿಸಿ ತಾವೇ ಸಂಸತ್ ಭವನವನ್ನು ಉದ್ಘಾಟಿಸಿ, ಬ್ರಾಹ್ಮಣ ಪುರೋಹಿತರಿಗೆ ದಂಡಾಲು ಅರ್ಪಿಸಿ, ಸೆಂಗೋಲು ಸ್ಥಾಪಿಸಿ, ಸರ್ವಾಧಿಕಾರಿ ರಾಜಪ್ರಭುತ್ವದ ಆಚರಣೆಗಳನ್ನು ಕೈಗೊಂಡು ಸಂವಿಧಾನದ ಜಾತ್ಯತೀತ ಸಂದೇಶವನ್ನೂ ಗಾಳಿಗೆ ತೂರಲಾಗಿದೆ. ಇದರಿಂದ ಅವರ ಮನುವಾದಿ ಧೋರಣೆಗಳು ಬಹಿರಂಗವಾಗಿಯೇ ಪ್ರಕಟಗೊಂಡಂತಾಗಿದೆ. ಆದರೆ ಈ ಬಗ್ಗೆ ಅವರು ಯಾರಿಗೂ ಯಾವುದೇ ವಿವರಣೆ ನೀಡದಾದರು. ಅಥವಾ ಮಾತನಾಡಲು ಹಿಂಜರಿಯುತ್ತಾರೋ? ಅಥವಾ ಬಹುಮತವಿರುವ ಪಕ್ಷದ ನಾಯಕನಾದ ನಾನು ಯಾರಿಗೇನು ಜವಾಬು ನೀಡುವುದು ಎಂಬ ಧೋರಣೆ ತಳೆದಿದ್ದಾರೋ? ಅಥವಾ ಅವರಲ್ಲಿ ಹೇಳುವುದಕ್ಕೆ ಇನ್ನು ಏನೂ ಉಳಿದಿಲ್ಲವೊ?

ಇದೆಲ್ಲಾ ಏನೇ ಇರಲಿ, ಮೊದಲು ಮಣಿಪುರ ರಾಜ್ಯವನ್ನು ರಾಷ್ಟ್ರಪತಿ ಆಡಳಿತಕ್ಕೆ ಒಪ್ಪಿಸಬೇಕು. ಶಾಂತಿ ಸುವ್ಯವಸ್ಥೆ ನೆಲಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರಯತ್ನಿಸಬೇಕು. ಬಂಡುಕೋರರು ತಮ್ಮ ಕೈಯಲ್ಲಿರುವ ಶಸ್ತ್ರಾಸ್ತ್ರಗಳನ್ನು ಕೆಳಗಿಳಿಸಬೇಕು. ಇದಕ್ಕಾಗಿ ವ್ಯಾಪಕವಾದ ಮಾತುಕತೆಗಳನ್ನು ನಡೆಸಬೇಕು. ಸರ್ವಪಕ್ಷ ಸಭೆ ಕರೆದು ಜನರನ್ನು ಮೊದಲು ನಂಬಿಕೆಗೆ ತೆಗೆದುಕೊಳ್ಳಬೇಕು; ಇರುವ ಸಂಪನ್ಮೂಲಗಳನ್ನು ಸಮಸ್ತ ಜನರಿಗೆ ಪಕ್ಷಭೇದ ಧರ್ಮಭೇದವಿಲ್ಲದೆ ಹಂಚಬೇಕು; ಕ್ರಿಶ್ಚಿಯನ್ನರ ಸುಟ್ಟ ಚರ್ಚುಗಳನ್ನು ದುರಸ್ತಿಗೊಳಸಬೇಕು. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಿ ಅವರು ಊರು ಗ್ರಾಮಗಳಲ್ಲಿ ನಿರಾತಂಕ ನೆಲೆಸುವಂತೆ ಅನುವು ಮಾಡಬೇಕು; ಸುಮಾರು 14000 ಶಾಲಾ ಮಕ್ಕಳು ಭಯರಹಿತರಾಗಿ ರಾಜ್ಯದ ಶಾಲೆಗಳಿಗೆ ಮತ್ತೆ ಹಾಜರಾಗುವಂತಾಗಬೇಕು. ಶಿಕ್ಷಣ, ಉದ್ಯೋಗ. ಆರೋಗ್ಯ, ಎಲ್ಲರಿಗೂ ದಕ್ಕಬೇಕು. ಇದೆಲ್ಲಕ್ಕೂ ಮೊದಲು ಪ್ರಧಾನಿ ಮೋದಿ ಮೌನ ಮುರಿದು ಮಾತಾಡಬೇಕು! ಕೇವಲ ’ಚುನಾವಣೆ ಬಂತೆಂದರೆ ತಾನೆ ನುಡಿವರಯ್ಯಾ’ ಎಂಬ ಆಪಾದನೆಗೆ ಅವರು ಗುರಿಯಾಗಬಾರದು. ’ಭಾರತ ಪ್ರಜಾಪ್ರಭುತ್ವದ ತಾಯಿ’ ಎಂಬ ತಮ್ಮ ಸಂದೇಶವನ್ನು ನಿಜಾರ್ಥದಲ್ಲಿ ರವಾನಿಸುವವರಾಗಬೇಕು. ಆಗ ಮಾತ್ರ ಭಾರತ ಗೆಲ್ಲುತ್ತದೆ! ಇಲ್ಲವಾದರೆ ನಗೆಗೀಡಾಗಬೇಕಾಗುತ್ತದೆ! ಆ ನಗೆಪಾಟಲಿನಲ್ಲಿ ಸಂತ್ರಸ್ತರ ನೋವು ಅನುರಣನವಾಗುತ್ತಿರುತ್ತದೆ.

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯ್ಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 & 2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...