ಹಲವಾರು ಹಿಂದುತ್ವ ಗುಂಪುಗಳು ಭಾನುವಾರ ದೆಹಲಿಯ ಜಂತರ್ ಮಂತರ್ನಲ್ಲಿ ಕಾರ್ಯಕ್ರಮಗಳನ್ನು ನಡೆಸಿದ್ದು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಕೊಲ್ಲುವಂತೆ ಕರೆ ನೀಡಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿರುವ ವೀಡಿಯೊವೊಂದರಲ್ಲಿ ಸ್ವಾಮೀಜಿಯೊಬ್ಬರು ಮಾತನಾಡುತ್ತಾ, “ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಕೊಲ್ಲಲು ಶಸ್ತ್ರಾಸ್ತ್ರಗಳನ್ನು ಹಿಂದೂಗಳು ಸಂಗ್ರಹಿಸಿ” ಎಂದು ಕರೆ ನೀಡಿರುವುದು ದಾಖಲಾಗಿದೆ.
ಮತ್ತೊಂದು ವೀಡಿಯೊದಲ್ಲಿ ಭಾರತೀಯ ಜನತಾ ಪಕ್ಷದ ನಾಯಕ ಸೂರಜ್ ಪಾಲ್ ಅಮು ಅವರು, ಸುದರ್ಶನ್ ಟಿವಿ ಸಂಪಾದಕ-ಪ್ರಧಾನ ಸುರೇಶ್ ಚವ್ಹಾಂಕೆ ಅವರ ವಿರುದ್ಧದ ಕ್ರಮಗಳನ್ನು ಖಂಡಿಸಿದ್ದಾರೆ.
ಬಾಗೇಶ್ವರ ಧಾಮದ ಧಾರ್ಮಿಕ ಮುಖಂಡರಾದ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರನ್ನು ಬೆಂಬಲಿಸಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಸರಿ ವಸ್ತ್ರಧಾರಿಯೊಬ್ಬರು ಹೀಗೆ ಹೇಳಿದ್ದಾರೆ: “ಬ್ರಿಟಿಷರು ಒಡೆದು ಆಳಿರಿ ಎಂದು ಹೇಳಿದರು, ಕಾಂಗ್ರೆಸ್ನವರು ಒಡೆದು ಆಳಿರಿ ಎಂದು ಹೇಳಿದರು, ಕ್ರಿಶ್ಚಿಯನ್ನರು ಅದನ್ನೇ ಹೇಳಿದರು. ಮುಸ್ಲಿಮರು ಕೊಲ್ಲಿ ಮತ್ತು ಆಳ್ವಿಕೆ ಮಾಡಿ ಎಂದರು. ನೀವು [ಹಿಂದೂಗಳು] ಯಾವಾಗ ಕೊಲ್ಲುತ್ತೀರಿ? ನೀವೆಲ್ಲರೂ ಸತ್ತ ನಂತರ? ನೀವು ಅವರನ್ನು ಯಾವಾಗ ಕೊಲ್ಲುತ್ತೀರಿ? ನೀವು ಯಾವಾಗ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಕೊಲ್ಲುತ್ತೀರಿ?” ಎಂದು ಪ್ರಶ್ನಿಸಿದ್ದಾರೆ.
ತಮ್ಮ ಮನೆಗಳಲ್ಲಿ ಕತ್ತಿಗಳು ಮತ್ತು ಬಂದೂಕುಗಳನ್ನು ಸಂಗ್ರಹಿಸಿರಿ ಎಂದು ಹಿಂದೂಗಳಿಗೆ ಸಲಹೆ ನೀಡಿದ್ದಾರೆ.
“ಒಂದು ಕೈಯಲ್ಲಿ ಶಸ್ತ್ರಗಳನ್ನು ಮತ್ತು ಇನ್ನೊಂದು ಕೈಯಲ್ಲಿ ಶಾಸ್ತ್ರವನ್ನು [ಧಾರ್ಮಿಕ ಗ್ರಂಥಗಳನ್ನು] ಇಟ್ಟುಕೊಳ್ಳಿ” ಎಂದಿದ್ದಾರೆ. “ನಮ್ಮ ಸಮುದಾಯ, ನಮ್ಮ ಧರ್ಮಗ್ರಂಥಗಳು, ನಮ್ಮ ತಾಯಂದಿರು ಮತ್ತು ಸಹೋದರಿಯರ ಮೇಲೆ ದಾಳಿ ಮಾಡುವವರನ್ನು ದೇಶದ್ರೋಹದ ಅಪರಾಧಿಗಳೆಂದು ನಿರ್ಣಯಿಸಿ ಮತ್ತು ಅವರಿಗೆ ಗಡಿಯಲ್ಲಿ ಗುಂಡು ಹಾರಿಸಿ… ಅವರನ್ನು ರಸ್ತೆಗಳಲ್ಲಿ ಕೊಲ್ಲಲಾಗುತ್ತದೆ” ಎಂದು ಪ್ರಚೋದಿಸಿದ್ದಾರೆ.
ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ತಮ್ಮ ಜನಪ್ರಿಯ ಯೂಟ್ಯೂಬ್ ವೀಡಿಯೊಗಳ ಮೂಲಕ ಮೂಢನಂಬಿಕೆ ಮತ್ತು ದ್ವೇಷವನ್ನು ಬಿತ್ತುವ ಮೂಲಕ ಹೆಸರಾಗಿದ್ದಾರೆ.
ಬಿಜೆಪಿಯ ಹರಿಯಾಣ ಘಟಕದ ಮಾಧ್ಯಮ ಸಂಯೋಜಕ ಮತ್ತು ಜಾತಿವಾದಿ ಗುಂಪಿನ ಕರ್ಣಿ ಸೇನೆಯ ಮುಖ್ಯಸ್ಥ ಅಮು, ಚವ್ಹಾಂಕೆ ಬೆಂಬಲಿಗರು ಭಾಗವಹಿಸಿದ್ದ ಪ್ರತ್ಯೇಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವಾಗ ದ್ವೇಷದ ಮಾತುಗಳು ಹೊರಬಿದ್ದಿವೆ.
ಡಿಸೆಂಬರ್ 19, 2021ರಂದು ದೆಹಲಿಯಲ್ಲಿ ಹಿಂದೂ ಯುವ ವಾಹಿನಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಸುದರ್ಶನ್ ಟಿವಿಯ ಮುಖ್ಯ ಸಂಪಾದಕ ಸುರೇಶ್ ಚವ್ಹಾಂಕೆ ಪ್ರಚೋದನಕಾರಿಯಾಗಿ ಮಾತನಾಡಿದ್ದರು. ಮುಸ್ಲಿಮರನ್ನು ಕೊಲ್ಲವಂತೆ ಪ್ರಚೋದಿಸಿದ್ದರು.
ದ್ವೇಷ ಭಾಷಣದ ಬಗ್ಗೆ ವರದಿ ಮಾಡಿದವರ ವಿರುದ್ಧವೇ ಪೊಲೀಸರ ಕ್ರಮ
ಈ ಕಾರ್ಯಕ್ರಮಗಳಲ್ಲಿ ಮಾಡಿದ ಯಾವುದೇ ಭಾಷಣಕಾರರ ವಿರುದ್ಧ ಪೊಲೀಸರು ಕ್ರಮ ಕೈಗೊಂಡ ಬಗ್ಗೆ ಸೋಮವಾರ ಮಧ್ಯಾಹ್ನದವರೆಗೂ ವರದಿಯಾಗಿಲ್ಲ. ಆದರೆ ಘಟನೆಗಳ ಬಗ್ಗೆ ವರದಿ ಮಾಡಿದ್ದ ಮೊಲಿಟಿಕ್ಸ್ ಎಂಬ ಆನ್ಲೈನ್ ಪೋರ್ಟಲ್ಗೆ ದೆಹಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ!
ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಆಕ್ಷೇಪಾರ್ಹ, ದುರುದ್ದೇಶಪೂರಿತ ಮತ್ತು ಪ್ರಚೋದನಕಾರಿ ಸಂದೇಶಗಳನ್ನು ಪೋಸ್ಟ್ ಮಾಡಲಾಗಿದೆ ಎಂದು ಕ್ರಿಮಿನಲ್ ಪ್ರೊಸೀಜರ್ ಕೋಡ್ನ ಸೆಕ್ಷನ್ 149 ರ ಅಡಿಯಲ್ಲಿ ನೋಟಿಸ್ ನೀಡಲಾಗಿದೆ.
ಆಕ್ಷೇಪಾರ್ಹ, ದುರುದ್ದೇಶಪೂರಿತ ಮತ್ತು ಪ್ರಚೋದನಕಾರಿ ವಿಷಯವನ್ನು ಪೋಸ್ಟ್ ಮಾಡುವುದನ್ನು ನಿಲ್ಲಿಸುವಂತೆ ಪೊಲೀಸರು ಮೊಲಿಟಿಕ್ಸ್ಗೆ ಸೂಚಿಸಿದ್ದಾರೆ. ತಪ್ಪಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ
ಇದಕ್ಕೆ ಪ್ರತಿಕ್ರಿಯೆಯಾಗಿ, ಮೊಲಿಟಿಕ್ಸ್ ಸಂಸ್ಥಾಪಕ ಮತ್ತು ನಿರ್ದೇಶಕ ಅನುದೀಪ್ ಜಗ್ಲಾನ್ ಟ್ವೀಟ್ ಮಾಡಿದ್ದು, “ನಾನು ಇನ್ನೂ ಗೊಂದಲಕ್ಕೊಳಗಾಗಿದ್ದೇನೆ. ನೀವು ಇದನ್ನು ನಮಗೆ ಏಕೆ ಕಳುಹಿಸುತ್ತೀರಿ? ಕೇಸರಿ ಧರಿಸಿದ ಈ ಕ್ರಿಮಿನಲ್ಗಳಿಗೂ ಇಂತಹ ಸೂಚನೆ ಹೋಗಿರಬೇಕು ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.