ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿರುವ ನ್ಯಾಯಾಧೀಶರ ಹೆಸರುಗಳನ್ನು ತಡೆಹಿಡಿಯುವುದು, ಪ್ರಜಾಪ್ರಭುತ್ವಕ್ಕೆ ಅತ್ಯಂತ ಮಾರಕ ಮತ್ತು ವಿರುದ್ಧವಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ಎಫ್. ನಾರಿಮನ್ ಅವರು ಹೇಳಿದ್ದು, “ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸುಪ್ರೀಂಕೋರ್ಟ್ ಸರ್ಕಾರಕ್ಕೆ ಕಟ್ಟುನಿಟ್ಟಾದ ಗಡುವನ್ನು ನಿಗದಿಪಡಿಸಬೇಕು” ಎಂದು ಅವರು ಹೇಳಿದ್ದಾರೆ.
7ನೇ ಎಂಸಿ ಚಾಗ್ಲಾ ಸ್ಮಾರಕ ಉಪನ್ಯಾಸದಲ್ಲಿ ‘‘ಎ ಟೇಲ್ ಆಫ್ ಟು ಕಾಂಸ್ಟಿಟ್ಯೂಷನ್- ಇಂಡಿಯಾ ಆಂಡ್ ದಿ ಯುನೈಟೆಡ್ ಸ್ಟೇಟ್ಸ್” ವಿಚಾರವಾಗಿ ಮಾತನಾಡಿದ ನ್ಯಾಯಮೂರ್ತಿ ನಾರಿಮನ್ ಅವರು,“ನ್ಯಾಯಾಧೀಶರ ನೇಮಕಾತಿಗಾಗಿ ಕಾರ್ಯವಿಧಾನದ ಎಲ್ಲಾ ಸಮಸ್ಯೆಗಳನ್ನು ಸರಿ ಪಡಿಸಲು ಐದು ನ್ಯಾಯಾಧೀಶರ ಸಂವಿಧಾನ ಪೀಠವನ್ನು ರಚಿಸಬೇಕು ಮತ್ತು ಕೊಲಿಜಿಯಂ ನಿರ್ಣಯಗಳಿಗೆ ಪ್ರತಿಕ್ರಿಯಿಸಲು ಸರ್ಕಾರಕ್ಕೆ ಕಟ್ಟುನಿಟ್ಟಾದ ಗಡುವನ್ನು ನಿಗದಿಪಡಿಸಬೇಕು” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಒಂದು ವೇಳೆ ಗಡುವು ಮೀರಿ ಸರ್ಕಾರ ಪ್ರತಿಕ್ರಿಯೆ ನೀಡದಿದ್ದರೆ, ಸರ್ಕಾರಕ್ಕೆ ಹೇಳಲು ಏನೂ ಇಲ್ಲ ಎಂದು ಭಾವಿಸಿ ನೇಮಕಾತಿಗಳನ್ನು ಮಾಡಬೇಕು” ಎಂದು ಅವರು ಹೇಳಿದರು.
ಸ್ವತಂತ್ರ ನ್ಯಾಯಾಂಗದ ಪರವಾಗಿ ಮಾತನಾಡಿದ ಅವರು, “ಅಂತಿಮವಾಗಿ, ನಾನು ನಿಮಗೆ ಮೊದಲೇ ಹೇಳಿದಂತೆ, ಸಂವಿಧಾನವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದರೆ, ನೀವು ಸ್ವತಂತ್ರ ಮತ್ತು ನಿರ್ಭೀತ ನ್ಯಾಯಾಧೀಶರನ್ನು ಹೊಂದಿಲ್ಲದಿದ್ದರೆ, ವಿದಾಯ ಹೇಳಿ. ಅಲ್ಲಿ ಏನೂ ಉಳಿದಿರುವುದಿಲ್ಲ” ಎಂದು ಹೇಳಿದ್ದಾರೆ
ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ ಅವರ ಕಾರ್ಟೂನ್ಗಳಲ್ಲಿನ ‘ಕಾಮನ್ ಮ್ಯಾನ್’ ಅನ್ನು ಉಲ್ಲೇಖಿಸಿದ ಅವರು, “ಈ ಭದ್ರಕೋಟೆ ಬಿದ್ದರೆ ಅಥವಾ ಬೀಳುವ ವೇಳೆ ಲಕ್ಷ್ಮಣ್ ಅವರ ‘ಕಾಮನ್ ಮ್ಯಾನ್’ ಒಂದೇ ಒಂದು ಪ್ರಶ್ನೆಯನ್ನು ಕೇಳುತ್ತದೆ – ಉಪ್ಪು ತನ್ನ ರುಚಿಯನ್ನು ಕಳೆದುಕೊಂಡಿದ್ದರೆ, ಅದಕ್ಕೆ ಎಲ್ಲಿಂದ ಉಪ್ಪು ಹಾಕಬೇಕು?. ನಾವು ಹೊಸ ಕರಾಳ ಯುಗದ ಪ್ರಪಾತವನ್ನು ಪ್ರವೇಶಿಸುತ್ತಿದ್ದೇವೆ” ಎಂದು ಹೇಳಿದರು.
ಕೊಲಿಜಿಯಂ ವ್ಯವಸ್ಥೆಯ ವಿರುದ್ಧ ಒಕ್ಕೂಟ ಸರ್ಕಾರದ ಕಾನೂನು ಸಚಿವ ಕಿರಣ್ ರಿಜಿಜು ಅವರ ‘ಕಟು ವಿಮರ್ಶೆ’ಯನ್ನು ಉಲ್ಲೇಖಿಸಿದ ನ್ಯಾಯಾಧೀಶರು, “ಅವರು ಕೊಲಿಜಿಯಂ ಮೇಲಿನ ಉನ್ನತ ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳಲು ಬದ್ಧರಾಗಿರುತ್ತಾರೆ – ಅದು ಸರಿಯಾಗಿರಲಿ ಅಥವಾ ತಪ್ಪಾಗಿರಲಿ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಲಿಂಗಾಸಕ್ತ ಸೌರಭ್ರನ್ನು ನ್ಯಾಯಾಧೀಶರನ್ನಾಗಿಸುವ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಬೆಂಬಲ