ಉತ್ತರಖಾಂಡ್ ರಾಜ್ಯದ ಬಿಜೆಪಿ, ಆರ್ಎಸ್ಎಸ್ ಮುಖಂಡ ವಿನೋದ್ ಆರ್ಯರವರ ಮಗ ಪುಲ್ಕಿತ್ ಆರ್ಯನನ್ನು 19 ವರ್ಷದ ಯುವತಿಯ ಕೊಲೆ ಆರೋಪದಲ್ಲಿ ಬಂಧಿಸಲಾಗಿದೆ. ಇದಾದ ನಂತರ ಆತನ ಒಡೆತನದ ರೆಸಾರ್ಟ್ ಮೇಲೆ ಪೊಲೀಸರು ಬುಲ್ಡೋಜರ್ ದಾಳಿ ನಡೆಸಲು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ದಾಮಿ ಆದೇಶಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಪುಲ್ಕಿತ್ ಆರ್ಯನ ರೆಸಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿ ಸೆಪ್ಟಂಬರ್ 18ರಂದು ಕಾಣೆಯಾಗಿದ್ದಳು. ಸ್ವತಃ ಪುಲ್ಕಿತ್ ಆರ್ಯನೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದನು. ಯುವತಿ ಕಾಣೆಯಾಗಿದ್ದಾಳೆ ಎಂದು ತಿಳಿಸಿದ್ದನು. ಆದರೆ 5 ದಿನದ ನಂತರ ಪ್ರಕರಣಕ್ಕೆ ತಿರುವು ಸಿಕ್ಕಿತ್ತು.
ಪುಲ್ಕಿತ್ ಆರ್ಯ ತನ್ನ ಇಬ್ಬರು ಸಿಬ್ಬಂದಿಯೊಡನೆ ಸೇರಿ ಯುವತಿಯನ್ನು ಕೊಂದಿದ್ದಾನೆ ಎಂಬ ಅಂಶ ಬೆಳಕಿಗೆ ಬಂದಿದೆ. ಈಗ ರೆಸಾರ್ಟ್ ಮೇಲೆ ಬುಲ್ಡೋಜರ್ ಹತ್ತಿಸಿ ಸಾಕ್ಷಿ ನಾಶಕ್ಕೆ ಸರ್ಕಾರ ಅವಕಾಶ ನೀಡಿದೆ ಎಂಬ ಆರೋಪವನ್ನು ಯುವತಿಯ ಕುಟುಂಬ ಆರೋಪಿಸಿದೆ. ಈ ರೆಸಾರ್ಟ್ನಲ್ಲಿ ಕಾನೂನು ಬಾಹಿರ ಕೃತ್ಯಗಳು ನಡೆದಿರುವ ಅನುಮಾನಗಳು ವ್ಯಕ್ತವಾಗುತ್ತಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕೊಲೆಯಾದ ಯುವತಿಯ ಅಂತ್ಯಸಂಸ್ಕಾರ ಮಾಡಲು ಕುಟುಂಬ ನಿರಾಕರಿಸಿದೆ. ಸ್ಥಳೀಯರು ಹಾಗೂ ಯುವತಿಯ ಸಂಬಂಧಿಕರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಯುವತಿಯು ಕೆಲಸ ಮಾಡುತ್ತಿದ್ದ ರೆಸಾರ್ಟ್ ಅನ್ನು ಕೆಡವಲು ರಾಜ್ಯ ಸರ್ಕಾರ ಮುಂದಾಗಿದೆ. ಇದನ್ನು ಪ್ರಶ್ನಿಸಿರುವ ಯುವತಿಯ ಕುಟುಂಬ, “ಬಿಜೆಪಿಯ ಹಿರಿಯ ನಾಯಕರೊಬ್ಬರ ಪುತ್ರ ಪ್ರಮುಖ ಆರೋಪಿಯಾಗಿರುವ ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಲು ಈ ಕ್ರಮ ಜರುಗಿಸಲಾಗಿದೆ” ಎಂದು ಆತಂಕ ವ್ಯಕ್ತಪಡಿಸಿದೆ.
ಅಂತಿಮ ಮರಣೋತ್ತರ ಪರೀಕ್ಷೆಯ ವರದಿ ಬರುವವರೆಗೆ ಶವವನ್ನು ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದೂ ಕುಟುಂಬ ಹೇಳಿದೆ. ಯುವತಿಯು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಅವರ ದೇಹದ ಮೇಲೆ ಗಾಯದ ಗುರುತುಗಳಿವೆ ಎಂದು ತಾತ್ಕಾಲಿಕ ವರದಿ ಹೇಳಿದೆ. ಪೊಲೀಸರ ಹೇಳಿಕೆಗಳನ್ನು ಕುಟುಂಬ ನಿರಾಕರಿಸಿದೆ. ಯುವತಿಯ ಸಂಬಂಧಿಕರು ಮತ್ತು ಸ್ಥಳೀಯ ನಿವಾಸಿಗಳು ಇಂದು ಶ್ರೀನಗರ-ಕೇದಾರನಾಥ ಹೆದ್ದಾರಿಯನ್ನು ತಡೆದು ಪ್ರತಿಭಟಿಸಿದ್ದಾರೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಆದೇಶದ ಮೇರೆಗೆ ನಡೆದ ಬುಲ್ಡೋಜರ್ ಕಾರ್ಯಚರಣೆ ಕುರಿತು ಪ್ರತಿಪಕ್ಷವೂ ಪ್ರಶ್ನೆಗಳನ್ನು ಎತ್ತಿದೆ. “ಇದೊಂದು ಯೋಜಿತ ಕೊಲೆಯಾಗಿದೆ. ಸಾಕ್ಷ್ಯ ನಾಶಪಡಿಸಲು ರೆಸಾರ್ಟ್ ನೆಲಸಮ ಕಾರ್ಯಾಚರಣೆ ನಡೆಸಲಾಗಿದೆ ಎಂದು ಜನರು ಶಂಕಿಸಿದ್ದಾರೆ” ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಎನ್ಡಿಟಿವಿಗೆ ತಿಳಿಸಿದ್ದಾರೆ.
ಆರೋಪಿಗಳಿಗೆ ಆಡಳಿತ ಪಕ್ಷದೊಂದಿಗೆ ನಂಟು ಇರುವುದರಿಂದ ಪೊಲೀಸರ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದು, ಎಫ್ಐಆರ್ ದಾಖಲು ಮಾಡಿಕೊಳ್ಳಲು ವಿಳಂಬ ನೀತಿ ಅನುಸರಿಸಿದ್ದನ್ನು ಪ್ರಶ್ನಿಸಿವೆ.
“ರೆಸಾರ್ಟ್ ಇರುವ ಪ್ರದೇಶ ಸಾಮಾನ್ಯವಾಗಿ ಪೊಲೀಸರ ವ್ಯಾಪ್ತಿಗೆ ಬರುವುದಿಲ್ಲ” ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ಅಶೋಕ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. “ಭೂಕಂದಾಯ ಅಧಿಕಾರಿಗಳು ಎಫ್ಐಆರ್ ದಾಖಲಿಸುವ ವ್ಯವಸ್ಥೆ ನಮ್ಮಲ್ಲಿದೆ” ಎಂದು ತಮ್ಮ ವಿಳಂಬಕ್ಕೆ ಸಮರ್ಥನೆ ನೀಡಿದ್ದಾರೆ.
ಇದನ್ನೂ ಓದಿರಿ: ಉತ್ತರಖಂಡ: 19 ವರ್ಷದ ಯುವತಿ ಕೊಲೆಗೈದ ಬಿಜೆಪಿ ಮುಖಂಡನ ಮಗನ ಬಂಧನ, ಬುಲ್ಡೋಜರ್ ಪ್ರಯೋಗ
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಕಠಿಣ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ. “ಇದು ಅತ್ಯಂತ ಘೋರ ಅಪರಾಧ, ಅಪರಾಧಿ ಯಾರೇ ಆಗಿದ್ದರೂ ಬಿಡುವುದಿಲ್ಲ” ಎಂದಿದ್ದಾರೆ.
ಆರೋಪಿಯ ತಂದೆ, ಸಚಿವ ದರ್ಜೆಯ ರಾಜ್ಯ ಮಂಡಳಿಯ ಮಾಜಿ ಅಧ್ಯಕ್ಷ ವಿನೋದ್ ಆರ್ಯ ಮತ್ತು ಆತನ ಸಹೋದರ, ಬಿಜೆಪಿ ಪದಾಧಿಕಾರಿ ಅಂಕಿತ್ ಆರ್ಯ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.
ಪುಲ್ಕಿತ್ ಆರ್ಯ ಅಲ್ಲದೆ, ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ವ್ಯವಸ್ಥಾಪಕ ಅಂಕಿತ್ ಗುಪ್ತಾ ಅವರನ್ನು ಬಂಧಿಸಲಾಗಿದೆ. ಸಿಸಿಟಿವಿ ಫೂಟೇಜ್ ವಶಕ್ಕೆ ಪಡೆಯಲಾಗಿದ್ದು, ಯುವತಿಯು ಕೊನೆಯದಾಗಿ ಮೂವರು ವ್ಯಕ್ತಿಗಳೊಂದಿಗೆ ಇರುವುದು ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವೇಶ್ಯಾವಾಟಿಕೆಗೆ ಒತ್ತಾಯ: ಯುವತಿಯ ವಾಟ್ಸಾಪ್ ಚಾಟ್ ಬಹಿರಂಗ
ಆರೆಸ್ಸೆಸ್ ಮತ್ತು ಬಿಜೆಪಿ ನಾಯಕನ ಮಗ ನಡೆಸಿರುವ ಉತ್ತರಖಂಡ ಯುವತಿ ಕೊಲೆ ಪ್ರಕರಣದ ಮತ್ತಷ್ಟು ವಿವರಗಳು ಹೊರಬೀಳುತ್ತಿವೆ. ಆರೋಪಿಗಳು ರೆಸಾರ್ಟ್ನಲ್ಲಿ ಹದಿಹರೆಯದವರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದಾರೆ ಎಂದು ಹತ್ಯೆಗೀಡಾದ ಯುವತಿಯು ತನ್ನ ಸ್ನೇಹಿತೆಗೆ ಮಾಡಿದ್ದ ವಾಟ್ಸಾಪ್ ಸಂದೇಶಗಳ ಕುರಿತು ಎನ್ಡಿಟಿವಿ ವರದಿ ಮಾಡಿದೆ.
“ಅವರು ನನ್ನನ್ನು ವೇಶ್ಯೆಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ” ಎಂದು ಕೊಲೆಗೀಡಾದ ಯುವತಿಯು ತನ್ನ ಸ್ನೇಹಿತರಿಗೆ ಸಂದೇಶ ಕಳುಹಿಸಿದ್ದು ಮತ್ತು ರೆಸಾರ್ಟ್ನಲ್ಲಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡಿದ ಅನುಭವವನ್ನು ವಿವರಿಸುತ್ತಿದ್ದ ಬಗ್ಗೆ ವರದಿಗಳು ಬಹಿರಂಗಗೊಂಡಿವೆ.
ಯುವತಿಯು ಕಳುಹಿಸಿರುವ ಸಂದೇಶಗಳ ಸ್ಕ್ರೀನ್ಶಾಟ್ಗಳು ಹರಿದಾಡುತ್ತಿದೆ. ಅದರಲ್ಲಿ ಅವರು, ರೆಸಾರ್ಟ್ಗೆ ಆಗಮಿಸುತ್ತಿದ್ದ ಗ್ರಾಹಕರಿಗೆ 10 ಸಾವಿರ ರೂ.ಗೆ ‘ವಿಶೇಷ ಸೇವೆಗಳನ್ನು’ ಒದಗಿಸಲು ಹೇಗೆ ಒತ್ತಾಯಿಸಲಾಯಿತು ಎಂಬುದನ್ನು ವಿವರಿಸಿದ್ದಾರೆ. ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಗಳು ಈ ಸಂದೇಶಗಳು ಕೊಲೆಗೀಡಾದ ಯುವತಿಯದ್ದೆ ಎಂದು ಸೂಚಿಸುತ್ತಿವೆ ಎಂದು ಎನ್ಡಿಟಿವಿ, ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.