ನೋಯ್ಡಾದ ಸೊಸೈಟಿಯೊಂದರಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧಿತಕ್ಕೊಳಗಾಗಿದ್ದ ರಾಜಕಾರಣಿ, ಗ್ಯಾಂಗ್ಸ್ಟರ್ ಆರೋಪ ಹೊತ್ತಿರುವ ಶ್ರೀಕಾಂತ್ ತ್ಯಾಗಿ ಜೈಲಿನಿಂದ ಬಿಡುಗಡೆಯಾದ ಬಳಿಕ ಭವ್ಯ ಸ್ವಾಗತ ಪಡೆದಿದ್ದಾನೆ.
ತ್ಯಾಗಿಯ ಬೆಂಬಲಿಗರು “ಶ್ರೀಕಾಂತ್ ಭಯ್ಯಾ ಜಿಂದಾಬಾದ್” ಎಂಬ ಘೋಷಣೆಗಳನ್ನು ಕೂಗಿದ್ದು ತ್ಯಾಗಿಯ ಮೇಲೆ ಹೂ ಮಳೆ ಸುರಿಸಿದ್ದಾರೆ. ಜೊತೆ ಸಿಹಿ ವಿತರಿಸಿ ಸಂಭ್ರಮಾಚರಣೆ ಮಾಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮನೆಗೆ ಹಿಂತಿರುಗಿದ ತ್ಯಾಗಿ ತನ್ನ ವಿರೋಧಿಗಳನ್ನು ಕಟುವಾಗಿ ಟೀಕಿಸಿದ್ದಾನೆ. “ಗ್ಯಾಗ್ಸ್ಟರ್ ಎಂದು ನನ್ನ ವಿರುದ್ಧ ಆರೋಪ ಹೊರಿಸಲಾಗಿದ್ದು, ಅದು ಕಟ್ಟುಕತೆಯಾಗಿದೆ. ನನ್ನ ರಾಜಕೀಯ ಜೀವನವನ್ನು ಮುಗಿಸುವ ಪ್ರಯತ್ನದಲ್ಲಿ ‘ಪ್ರಾಯೋಜಿತ ಪಿತೂರಿ’ ನಡೆಸಲಾಗಿದೆ” ಎಂದಿದ್ದಾನೆ.
“ಈ ಷಡ್ಯಂತ್ರದ ಭಾಗವಾಗಿ ನಮ್ಮ ಸಹೋದರಿಯೊಬ್ಬರನ್ನು ಮುಂದಿಟ್ಟುಕೊಂಡು ನಮ್ಮ ನಡುವೆಯೇ ವಿವಾದ ಸೃಷ್ಟಿಸಿದ್ದಾರೆ. ದೃಶ್ಯವನ್ನು ಚಿತ್ರೀಕರಿಸುವ ಮೂಲಕ ನನ್ನನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ನಡೆದಿದೆ” ಎಂದು ಆರೋಪಿಸಿದ್ದಾನೆ.
ಜೈಲಿನಲ್ಲಿದ್ದಾಗ ನನಗೆ ಹಾಗೂ ನನ್ನ ಕುಟುಂಬಕ್ಕೆ ಬೆಂಬಲ ನೀಡಿದ ತ್ಯಾಗಿ ಸಮುದಾಯಕ್ಕೆ ಧನ್ಯವಾದಗಳು. ತ್ಯಾಗಿ ಸಮುದಾಯದ ಮಾನಹಾನಿ ಮಾಡುವ ಯತ್ನವೂ ನಡೆದಿದ್ದು, ತನಿಖೆ ಏಕಪಕ್ಷೀಯವಾಗಿರುವುದು ಸಹಜ ಎಂದು ದೂರಿದ್ದಾನೆ.
ರಾಜಕೀಯದಲ್ಲಿ ಮುಂದುವರಿಯುತ್ತೀರಾ ಎಂಬ ಪ್ರಶ್ನೆಗೆ, “ಯಾಕೆ ಬೇಡ, ನಾನೊಬ್ಬ ರಾಜಕೀಯ ನಾಯಕ, ಇನ್ನೇನು ಮಾಡಲಿ? ನನ್ನ ಬೆಂಬಲಿಗರನ್ನು ಭೇಟಿಯಾಗಿ ಮಾತುಕತೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ” ಎಂದು ತಿಳಿಸಿದ್ದಾನೆ.
ಮಹಿಳೆಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ, ಬಿಜೆಪಿ ಮುಖಂಡನೆಂದೇ ಬಿಂಬಿತವಾಗಿರುವ ಶ್ರೀಕಾಂತ್ ತ್ಯಾಗಿಯನ್ನು ಉತ್ತರ ಪ್ರದೇಶ ಪೊಲೀಸರು ಮೀರತ್ನಲ್ಲಿ ಬಂಧಿಸಿದ್ದರು.
ನೋಯ್ಡಾದ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಯಲ್ಲಿ ಮಹಿಳೆಯೊಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮತ್ತು ಹಲ್ಲೆ ನಡೆಸಿದ ವಿಡಿಯೋ ವೈರಲ್ ಆದ ನಂತರ ಉತ್ತರ ಪ್ರದೇಶ ಆಡಳಿತ ತ್ಯಾಗಿ ವಿರುದ್ಧ ಕಠಿಣ ಕ್ರಮ ಜರುಗಿಸಿತ್ತು. ಗಿಡಗಳನ್ನು ನೆಡುವುದನ್ನು ತಡೆಯಲು ಶ್ರೀಕಾಂತ್ ತ್ಯಾಗಿ ಪ್ರಯತ್ನಿಸಿದಾಗ ಮಹಿಳೆಯನ್ನು ನಿಂದಿಸುತ್ತಿರುವುದು ವಿವಾದ ಹುಟ್ಟಿಹಾಕಿತು.
ರೆಸಿಡೆನ್ಶಿಯಲ್ ಸೊಸೈಟಿಗೆ ಬುಲ್ಡೋಜರ್ ನುಗ್ಗಿಸಲಾಗಿತ್ತು. ತ್ಯಾಗಿಯ ನಿವಾಸದಲ್ಲಿದ್ದ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಲಾಗಿತ್ತು. ಆತನ ವಿರುದ್ಧ ರಾಜ್ಯದ ಕಠಿಣ ಗೂಂಡಾ ಕಾಯ್ದೆಯಡಿಯೂ ಆರೋಪ ಹೊರಿಸಲಾಗಿದೆ.
ಇದನ್ನೂ ಓದಿರಿ: ಹೇ ಹಿಂದೂ ಎದ್ದೇಳು: ಪೋಸ್ಟ್ ಕಾರ್ಡ್ ಪೋಸ್ಟರ್ಗೆ ನಾನಾ ರೂಪ!
ಅಪಾರ್ಟ್ಮೆಂಟ್ನ ಕಾಮನ್ ಏರಿಯಾ ಜಾಗವನ್ನು ಶ್ರಿಕಾಂತ್ ತ್ಯಾಗಿ ಅತಿಕ್ರಮಣ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದರು. ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದನು. ಯುಪಿ ಪೊಲೀಸರು ತ್ಯಾಗಿಯನ್ನು ಹುಡುಕಲು ಪ್ರಾರಂಭಿಸಿದಾಗ, ಆತ ಸರಣಿ ಅಪರಾಧಗಳನ್ನು ಮಾಡಿರುವುದು ಬೆಳಕಿಗೆ ಬಂದಿತ್ತು. ತ್ಯಾಗಿ ವಿರುದ್ಧ ಕೊಲೆ ಯತ್ನ ಮತ್ತು ಸುಲಿಗೆಯಂತಹ ಗಂಭೀರ ಆರೋಪಗಳ ಅಡಿಯಲ್ಲಿ ಈ ಹಿಂದೆ 9 ಪ್ರಕರಣಗಳು ದಾಖಲಾಗಿವೆ.
ಬಿಜೆಪಿ ಕಿಸಾನ್ ಮೋರ್ಚಾದ ಸದಸ್ಯನೆಂದು ತ್ಯಾಗಿ ಹೇಳಿಕೊಂಡಿದ್ದಾನೆ. ಆತ ಸೋಷಿಯಲ್ ಮೀಡಿಯಾಗಳಲ್ಲಿ ಪೊಸ್ಟ್ ಮಾಡಲಾದ ಹಲವಾರು ಪೋಟೊಗಳಲ್ಲಿ ಬಿಜೆಪಿ ನಾಯಕರೊಂದಿಗೆ ಇರುವುದನ್ನು ಕಾಣಬಹುದು.
ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಸೇರಿದಂತೆ ಬಿಜೆಪಿಯ ಉನ್ನತ ನಾಯಕರೊಂದಿಗೆ ತ್ಯಾಗಿ ಫೋಟೋ ತೆಗೆಸಿಕೊಂಡಿರುವುದು, ಪ್ರತಿಪಕ್ಷಗಳ ಟೀಕೆಗೆ ಕಾರಣವಾಗಿದೆ. ಆದರೆ ತ್ಯಾಗಿ ಬಿಜೆಪಿ ಮುಖಂಡನಲ್ಲ ಎಂದು ಪಕ್ಷದ ನಾಯಕರು ಹೇಳುತ್ತಿದ್ದಾರೆ.
ಈ ಮಹಿಳಾ ವಿರೋಧಿಗಳಿಗೆ ದಿಕ್ಕಾರವಿರಲಿ.