Homeಮುಖಪುಟಮಕ್ಕಳನ್ನು ಶಾಲೆಯಿಂದ ಹೊರದಬ್ಬುವ ಹುನ್ನಾರ: ಸರ್ಕಾರಿ ಶಾಲಾ ಪೋಷಕರಿಂದ ದೇಣಿಗೆ ವಸೂಲಿಗೆ ತೀವ್ರ ವಿರೋಧ

ಮಕ್ಕಳನ್ನು ಶಾಲೆಯಿಂದ ಹೊರದಬ್ಬುವ ಹುನ್ನಾರ: ಸರ್ಕಾರಿ ಶಾಲಾ ಪೋಷಕರಿಂದ ದೇಣಿಗೆ ವಸೂಲಿಗೆ ತೀವ್ರ ವಿರೋಧ

ಈ ಸರಕಾರ ಪತನದ ಹಾದಿಯಲ್ಲಿದೆ. ಮಠಗಳಿಗೆ, ಅನುಮಾನಾಸ್ಪದ ಜಗ್ಗಿ ವಾಸುದೇವ ಮುಂತಾದವರಿಗೆ ಕೋಟಿಗಟ್ಟಲೆ ದುಡ್ಡು ಕೊಡುವ ಸರಕಾರಕ್ಕೆ ಶಾಲೆ ನಡೆಸಲು ರೊಕ್ಕವಿಲ್ಲ ಎಂದರೆ ನಾಚಿಕೆಗೇಡಿನ ಸಂಗತಿ - ಬಿ.ಶ್ರೀಪಾದ್ ಭಟ್

- Advertisement -
- Advertisement -

ಸರ್ಕಾರಿ ಶಾಲೆಗಳ ಮೂಲಭೂತ ಸೌಲಭ್ಯಗಳನ್ನು ನಿರ್ವಹಿಸುವುದಕ್ಕಾಗಿ ಮಕ್ಕಳ ಪೋಷಕರಿಂದ ಮಾಸಿಕ 100 ರೂ ದೇಣಿಗೆ ಸಂಗ್ರಹಿಸಬೇಕೆಂದು ಕರ್ನಾಟಕ ಸರ್ಕಾರ ಸೂಚಿಸಿದೆ.

ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯ್ತುಕ್ತರು ಅಕ್ಟೋಬರ್ 19 ರಂದು ಸುತ್ತೋಲೆಯೊಂದನ್ನು ಹೊರಡಿಸಿದ್ದು, ‘ನಮ್ಮ ಶಾಲೆ – ನನ್ನ ಕೊಡುಗೆ’ ಯೋಜನೆ ಹೆಸರಿನಲ್ಲಿ ಪೋಷಕರು ನೀಡುವ ದೇಣಿಗೆಯನ್ನು ವಿದ್ಯುತ್ ಬಿಲ್, ಶೌಚಾಲಯ ನಿರ್ವಹಣೆಯಂತಹ ಮೂಲಭೂತ ಸೌಲಭ್ಯಗಳಿಗೆ ಬಳಸಬೇಕು. ರಸೀದಿ ನೀಡುವ, ಪ್ರತ್ಯೇಕ ಲೆಕ್ಕಪತ್ರ ಇಡುವ ಹೊಣೆಗಾರಿಕೆ ಎಸ್‌ಡಿಎಂಸಿಯದ್ದಾಗಿರುತ್ತದೆ ಎನ್ನಲಾಗಿದೆ.

ಈ ಯೋಜನೆ ಘೋಷಣೆಯಾಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸುತ್ತಿರುವವರು ಬಡವರು, ದಲಿತರು ಮತ್ತು ಹಿಂದುಳಿದ ಸಮುದಾಯಗಳೆ ಹೆಚ್ಚಿದ್ದಾರೆ. ಈಗಾಗಲೇ ಬೆಲೆ ಏರಿಕೆ, ನಿರುದ್ಯೋಗದಿಂದ ಬಸವಳಿದಿರುವ ಅಂತವರ ಹೊಟ್ಟೆ ಮೇಲೆ ಹೊಡೆಯಲು ಸರ್ಕಾರ ಮುಂದಾಗಿರುವುದು ಸರಿಯಲ್ಲ ಎಂಬ ಮಾತುಗಳು ಕೇಳಿಬಂದಿವೆ.

ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಕೆ.ವಾಸುದೇವರೆಡ್ಡಿಯವರು ನಾನುಗೌರಿ.ಕಾಂ ಜೊತೆ ಮಾತನಾಡಿ, “ಹೊಸ ಶಿಕ್ಷಣ ನೀತಿಯು ಸ್ಥಳೀಯವಾಗಿಯೇ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳಬೇಕು ಎಂದು ಹೇಳುತ್ತದೆಯೆ ಹೊರತು ಸರ್ಕಾರ ನೀಡುವ ಅನುದಾನದ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಆ ನೀತಿಯ ಅನುಷ್ಟಾನದ ಭಾಗವಾಗಿ ಸರ್ಕಾರ ಇಂತಹ ಯೋಜನೆಗಳನ್ನು ಜಾರಿಗೆ ತಂದು ಬಡಮಕ್ಕಳನ್ನು ಶಾಲೆಯಿಂದ ಹೊರದೂಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್ ನಂತರ ಸಾವಿರಾರು ಮಕ್ಕಳು ಶಾಲೆಗಳಿಂದ ಡ್ರಾಪ್‌ಔಟ್ ಆಗಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಅಂತಹ ಮಕ್ಕಳ ಪೋಷಕರಿಂದ ವಸೂಲಿಗೆ ಮುಂದಾಗಿರುವುದು ಸರಿಯಲ್ಲ. ಹಿಂದಿನ ಸರ್ಕಾರ ಶಾಲೆಗೆ ಬರುವ ಮಕ್ಕಳಿಗೆ ದಿನಕ್ಕೆ ಎರಡು ರೂನಂತೆ ಪ್ರೋತ್ಸಾಹ ಧನ ನೀಡುತ್ತಿತ್ತು. ಆಂಧ್ರದ ಸರ್ಕಾರ ಸರ್ಕಾರಿ ಶಾಲೆಗೆ ಬರುವ ಹೆಣ್ಣು ಮಕ್ಕಳ ತಾಯಿಯ ಖಾತೆಗೆ ವಾರ್ಷಿಕ 15 ಸಾವಿರ ಪ್ರೋತ್ಸಾಹ ಧನ ನೀಡುತ್ತಿದೆ. ಆದರೆ ಕರ್ನಾಟಕದ ಬಿಜೆಪಿ ಸರ್ಕಾರ ಮಾತ್ರ ಬಡಮಕ್ಕಳಿಂದಲೇ ದೇಣಿಗೆ ವಸೂಲಿ ಮಾಡುವ ಕೀಳು ಮಟ್ಟಕ್ಕೆ ಇಳಿದಿದೆ ಎಂದು ಕಿಡಿಕಾರಿದರು.

ಶಿಕ್ಷಣ ತಜ್ಞ ಡಾ.ವಿ.ಪಿ ನಿರಂಜನಾರಾಧ್ಯರವರು ಮಾತನಾಡಿ, “ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯು ರಾಜ್ಯಸರ್ಕಾರಗಳು ಎಲ್ಲಾ ಮಕ್ಕಳಿಗೆ ಕನಿಷ್ಟ ಪ್ರಾಥಮಿಕ ಶಿಕ್ಷಣವನ್ನು ಉಚಿತವಾಗಿ ಕೊಡಬೇಕೆಂದು ಹೇಳುತ್ತದೆ. ಸಂವಿಧಾನದ 21ಎ ಪ್ರಕಾರ ಶಿಕ್ಷಣ ಮಕ್ಕಳ ಮೂಲಭೂತ ಹಕ್ಕಾಗಿದೆ. ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಎಂದರೆ ಉಚಿತ ಅಷ್ಟೆ. ಯಾವುದೇ ಸ್ವರೂಪದಲ್ಲಿ ಅದಕ್ಕೆ ನಿರ್ಬಂಧಗಳನ್ನು ಹೇರಬಾರದು. ರಾಜ್ಯ ಸರ್ಕಾರ ಅನುದಾನ ಕೊಡಬೇಕು, ಮೂಲಭೂತ ಸೌಲಭ್ಯಗಳನ್ನು ಸ್ಥಳೀಯ ಸರ್ಕಾರಗಳು ಒದಗಿಸಬೇಕು. ಆದರೆ ನಾಗೇಶ್‌ರವರು ಶಿಕ್ಷಣ ಸಚಿವರಾದ ನಂತರ ಕಾನೂನು ಉಲ್ಲಂಘನೆಗಳು ಮಿತಿ ಮೀರಿವೆ. ಅವರನ್ನು ವಜಾಗೊಳಿಸಬೇಕು” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ಜಗ್ಗಿ ವಾಸುದೇವ್‌ಗೆ 100 ಕೋಟಿ ಹಣ ನೀಡಿದೆ. ಸಂಸ್ಕೃತ ವಿವಿಗೆ 250 ಕೋಟಿ ನೀಡಲು ಮುಂದಾಗಿದೆ. ಚಾಣಕ್ಯ ವಿವಿಗೆ ಭೂಮಿ ಮತ್ತು ಹಣ ಕೊಡುತ್ತಿದೆ. ಉಪಯೋಗಕ್ಕೆ ಬಾರದ ವೇದಗಣಿತ ಕಲಿಕೆಗೆ ಹಣ ನೀಡಲು ಮುಂದಾಗಿತ್ತು. ಈ ಎಲ್ಲದಕ್ಕೂ ಕೊಡಲು ದುಡ್ಡಿರುವಾಗ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯ ನೀಡಲು ದುಡ್ಡಿಲ್ಲವೇ? ಸರ್ಕಾರ ಭಿಕ್ಷೆ ಬೇಡುತ್ತಿದೆಯೇ? ಬಡವರ ಕೂಲಿಯಲ್ಲಿ ಮಾಸಿಕ 100 ರೂ ಕೊಡಬೇಕು ಎನ್ನುವ ನಿಮಗೆ ಮಾನವೀಯತೆ ಇದೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪುಣ್ಯಕೋಟಿ ಹಸು ದತ್ತು ಯೋಜನೆಗಾಗಿ ಸರ್ಕಾರಿ ನೌಕರರು 100 ಕೋಟಿ ದೇಣಿಗೆ ನೀಡುತ್ತೇವೆ -ಸಿ.ಎಸ್ ಷಡಕ್ಷರಿ

ಕೆಲ ಪೋಷಕರು ದೇಣಿಗೆ ಕೊಟ್ಟು, ಕೆಲವರು ಕೊಡದಿದ್ದರೆ ಅದು ಮಕ್ಕಳ ನಡುವಿನ ತಾರತಮ್ಯಕ್ಕೆ ಕಾರಣವಾಗಲಿದೆ. ಇನ್ನು ಪೋಷಕರು, ಎಸ್‌ಡಿಎಂಸಿ ಸದಸ್ಯರು ಮಾಸಿಕ ಸಭೆಗಳಿಗೆ ಹೋಗದಿರಲು ಹಣಕಾಸಿನ ಮುಗ್ಗಟ್ಟು ಸಹ ಪ್ರಧಾನ ಕಾರಣ. ಏಕೆಂದರೆ ಶಾಲಾ ಅಗತ್ಯಗಳಿಗೆ ಶಿಕ್ಷಕರು ಅವರನ್ನು ಒತ್ತಾಯಿಸುವುದು ಸಹಜ. ಇಂತಹ ಸಂದರ್ಭದಲ್ಲಿ ಈ ಸುತ್ತೋಲೆ ಮತ್ತುಷ್ಟು ವಸೂಲಿಗೆ ಅವಕಾಶ ಮಾಡಿಕೊಡುತ್ತಿದ್ದು ಇದರಿಂದ ಪೋಷಕರು ಶಾಲೆಗಳತ್ತ ಸುಳಿಯದಂತೆ ಮಾಡುತ್ತದೆ. ದಲಿತ ಮಕ್ಕಳನ್ನು ಶಾಲೆಯಿಂದ ಹೊರದುಬ್ಬವ ಹುನ್ನಾರವಿದು. ಆನಂತರ ತಿಂಗಳಿಗೆ ನೂರು ರೂ ಕೊಡುವುದಾದರೆ ನಮ್ಮಲ್ಲಿಗೆ ಬನ್ನಿ ಖಾಸಗಿ ಶಿಕ್ಷಣ ಸಂಸ್ಥೆಗಳು ಆಮಿಷವೊಡ್ಡಿ ಎಲ್ಲಾ ಸರ್ಕಾರಿ ಶಾಲೆಗಳನ್ನು ಮುಚ್ಚಿಸಿಬಿಡುತ್ತವೆ. ಈ ಸರ್ಕಾರಕ್ಕೂ ಅದೇ ಬೇಕಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇಷ್ಟು ವರ್ಷ ಸರ್ಕಾರಿ ಶಾಲೆಗಳಿಂದ ಸಂಬಳ ಪಡೆಯುತ್ತಿರುವ ಶಿಕ್ಷಕರು ಬೇಕಾದರೆ ದೇಣಿಗೆ ನೀಡಲಿ. ಗೋವುಗಳನ್ನು ದತ್ತು ಪಡೆಯುವ ಪುಣ್ಯಕೋಟಿ ಯೋಜನೆಗೆ ಸರ್ಕಾರಿ ನೌಕರರು 100 ಕೋಟಿ ರೂಗಳವರೆಗೆ ದೇಣಿಗೆ ಕೊಡುವ ಬದಲು ಅದೇ ಹಣವನ್ನು ಸರ್ಕಾರಿ ಶಾಲೆಗಳಿಗೆ ಕೊಡಬಹುದಲ್ಲವೇ ಎಂದು ಪ್ರಶ್ನಿಸಿದರು.

ಹೋರಾಟಗಾರ, ಶಿಕ್ಷಣ ತಜ್ಞ ಬಿ.ಶ್ರೀಪಾದ್ ಭಟ್ ಸರ್ಕಾರದ ಈ ಕ್ರಮ ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ. “ಈ ಬಿಜೆಪಿ ಸರಕಾರ ದಿನ ದಿನಕ್ಕೂ ನೈತಿಕವಾಗಿ ಪತನಗೊಳ್ಳುತ್ತಿದೆ. 40% ಕಮಿಷನ್ ಪಡೆಯುವ ಸರಕಾರ ಎಂದು ಆರೋಪವಿರುವ ಈ ಸರಕಾರ ಪತನದ ಹಾದಿಯಲ್ಲಿದೆ. ಮಠಗಳಿಗೆ, ಅನುಮಾನಾಸ್ಪದ ಜಗ್ಗಿ ವಾಸುದೇವ ಮುಂತಾದವರಿಗೆ ಕೋಟಿಗಟ್ಟಲೆ ದುಡ್ಡು ಕೊಡುವ ಸರಕಾರಕ್ಕೆ ಶಾಲೆ ನಡೆಸಲು ರೊಕ್ಕವಿಲ್ಲ ಎಂದರೆ ನಾಚಿಕೆಗೇಡಿನ ಸಂಗತಿ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಶಿಕ್ಷಣಕ್ಕಾಗಿ ಸರಕಾರಿ ಶಾಲೆಗಳು ಪೋಷಕರಿಂದ ಹಣ ಸಂಗ್ರಹಿಸುವ ದಂಧೆಗೆ ಮುಂದಾಗಿರುವುದು ಕ್ರೌರ್ಯ ಮಾತ್ರವಲ್ಲ, ‘6-14ನೇ ವಯಸ್ಸಿನ ಮಕ್ಕಳಿಗೆ ಉಚಿತ ಕಡ್ಡಾಯ ಗುಣಮಟ್ಟದ ಶಿಕ್ಷಣ ಕೊಡಬೇಕು’ ಎನ್ನುವ ಪರಿಚ್ಛೇದ 21ಎ ಮತ್ತು ‘0-14ನೇ ವಯಸ್ಸಿನ ಮಕ್ಕಳಿಗೆ ಉಚಿತ ಕಡ್ಡಾಯ ಗುಣಮಟ್ಟದ ಶಿಕ್ಷಣ ಕೊಡಬೇಕು’ ಎನ್ನುವ ಪರಿಚ್ಛೇದ 45ರ ನೇರ ಉಲ್ಲಂಘನೆಯಾಗಿದೆ. ಆರ್ ಟಿಇ ಕಾಯಿದೆ 2009ರ ಅಧ್ಯಾಯ 2ರ ಸೆಕ್ಷನ್ 3 ಮತ್ತು ಅಧ್ಯಾಯ 4ರ ಸೆಕ್ಷನ್ 12, 13ರ ಉಲ್ಲಂಘನೆಯಾಗಿದೆ. ವಿದ್ಯಾರ್ಥಿ ಸಂಘಟನೆಗಳು ತಮ್ಮ ನಿಷ್ಕ್ರಿಯತೆಯಿಂದ ಹೊರಬರಬೇಕಾದ ತುರ್ತು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ; ಕೇರಳ ಸರ್ಕಾರ v/s ರಾಜ್ಯಪಾಲ: ವಿಶ್ವ ವಿದ್ಯಾಲಯದ 15 ಸೆನೆಟ್ ಸದಸ್ಯರನ್ನು ವಜಾ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೆನಡಾದ ಸಾರ್ವತ್ರಿಕ ಚುನಾವಣೆಗೆ ಭಾರತದಿಂದ ‘ಆಯ್ಧ ಅಭ್ಯರ್ಥಿಗಳಿಗೆ’ ರಹಸ್ಯವಾಗಿ ಹಣಕಾಸಿನ ನೆರವು: ವರದಿ

0
2021ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಆಯ್ದ ಅಭ್ಯರ್ಥಿಗಳಿಗೆ ರಹಸ್ಯವಾಗಿ ಹಣಕಾಸಿನ ನೆರವು ನೀಡಲು ಭಾರತ ಸರ್ಕಾರವು ತನ್ನ ಪ್ರಾಕ್ಸಿ ಏಜೆಂಟ್‌ಗಳ ಮೂಲಕ ಪ್ರಯತ್ನಿಸಿರಬಹುದು ಎಂದು ಕೆನಡಾದಲ್ಲಿ ವಿದೇಶಿ ಹಸ್ತಕ್ಷೇಪದ ಕುರಿತು ತನಿಖೆ ನಡೆಸುತ್ತಿರುವ ಕೆನಡಾದ...