Homeಮುಖಪುಟಭಾರತದಲ್ಲಿ ಲಾಕ್‌ಡೌನ್‌ ಯಶಸ್ವಿಯಾಯಿತೇ? ಇಲ್ಲವೇ? - ಡಾ.ಅಕ್ಕಮಹಾದೇವಿ ಹಿಮಾಂಶು

ಭಾರತದಲ್ಲಿ ಲಾಕ್‌ಡೌನ್‌ ಯಶಸ್ವಿಯಾಯಿತೇ? ಇಲ್ಲವೇ? – ಡಾ.ಅಕ್ಕಮಹಾದೇವಿ ಹಿಮಾಂಶು

ವಿಶ್ವದ ಅತಿ ದೊಡ್ಡ ಲಾಕ್‍ಡೌನ್ ವೃತ್ತಾಂತದ ಕುರಿತು, ಲಾಕ್‌ಡೌನ್‌ನ ಮೌಲ್ಯಮಾಪನದ ಬಗ್ಗೆ ಜಾಗತಿಕ ಆರೋಗ್ಯ ಮತ್ತು ಸಾಂಕ್ರಾಮಿಕ ಪಿಡುಗುಗಳ ಬಗ್ಗೆ ಸಂಶೋಧಕರು ಮತ್ತು ವೈದ್ಯರಾದ ಡಾ.ಅಕ್ಕಮಹಾದೇವಿ ಹಿಮಾಂಶುರವರು ಬೆಳಕು ಚೆಲ್ಲಿದ್ದಾರೆ.

- Advertisement -
- Advertisement -

ಕೊರೊನ ಸಾಂಕ್ರಾಮಿಕ ಪಿಡುಗು ವಿಶ್ವದ ಭಾಗಶಃ ಜನಸಂಖ್ಯೆಯನ್ನು ಗೃಹಬಂಧನದಲ್ಲಿ ಇರಿಸಿದೆ – ಇದನ್ನು ಅಧಿಕಾರಶಾಹಿ ಭಾಷೆಯಲ್ಲಿ “ಲಾಕ್‍ಡೌನ್” ಎನ್ನಲಾಗಿದೆ. ಈ ದಿನದ ಹೊತ್ತಿಗೆ ಸುಮಾರು 50 ದೇಶಗಳ ಸುಮಾರು 260 ಕೋಟಿ ಜನ ಕಾನೂನಾತ್ಮಕ ಚಲನವಲನ ನಿರ್ಬಂಧಗಳಿಗೆ ಒಳಪಟ್ಟಿದ್ದಾರೆ. ಇಟಲಿ, ಫ್ರಾನ್ಸ್, ಇಂಗ್ಲೆಂಡ್, ಪೋಲೆಂಡ್, ನ್ಯೂಜಿಲ್ಯಾಂಡ್, ಚೈನಾ ಮತ್ತು ಭಾರತ ದೇಶಗಳು ಸಂಪೂರ್ಣ ಲಾಕ್‍ಡೌನ್ ಘೋಷಿಸಿವೆ. ನೆದಲ್ರ್ಯಾಂಡ್, ಜರ್ಮನಿ ಮತ್ತು ದಕ್ಷಿಣ ಕೊರಿಯಾದಂತಹ ದೇಶಗಳಲ್ಲಿ ಚಲನವಲನ ಮತ್ತು ಗುಂಪು ಸೇರುವುದರ ಮೇಲೆ ಅರೆ ನಿರ್ಬಂಧಗಳನ್ನು ಹಾಕಲಾಗಿದೆ. ಮತ್ತೊಂದು ಯೂರೋಪಿಯನ್ ದೇಶವಾದ ಸ್ವೀಡನ್ ಯಾವುದೇ ಕಾನೂನಾತ್ಮಕ ನಿರ್ಬಂಧ ಹೇರದೆ ಸಾರ್ವಜನಿಕ ಆರೋಗ್ಯ ನಡಾವಳಿಯನ್ನು ರೂಪಿಸಿ ನೀಡಿದೆ.

ಮನುಷ್ಯರ ಸಾಮಾಜಿಕ ಒಡನಾಟದಿಂದ ಹರಡಬಹುದಾದ ವೈರಸ್‍ಗೆ ತಡೆ ಹಾಕಿ, ಆಸ್ಪತ್ರೆಗಳಲ್ಲಿ ಒಂದೇ ಸಮಯಕ್ಕೆ ಅತಿ ಹೆಚ್ಚು ಜನ ಸೇರದಂತೆ ನೋಡಿಕೊಳ್ಳುವುದು ಈಗ ಘೋಷಿಸಿರುವ ಲಾಕ್‍ಡೌನ್‍ನ ಮೂಲ ಉದ್ದೇಶವಾಗಿದೆ. ಆದರೆ ಸಾಮಾಜಿಕ ಒಡನಾಟವನ್ನು ನಿಯಂತ್ರಿಸುವುದು ನಾಗರಿಕ ಸ್ವಾತಂತ್ರ್ಯಗಳಿಗೆ ಅಡ್ಡಿಪಡಿಸುವುದಷ್ಟೇ ಅಲ್ಲದೆ, ಇದು ಮೈಕ್ರೋ ಆರ್ಥಿಕತೆ ಮತ್ತು ಜನರ ದಿನನಿತ್ಯದ ಜೀವನವನ್ನೂ ಬಾಧಿಸುತ್ತದೆ. ಸಾಮಾಜಿಕ-ಆರ್ಥಿಕ ಬೇನೆ ಈಗ ಜಾಗತಿಕವಾಗಿ ಎದ್ದು ಕಾಣಿಸುತ್ತಿದೆ; ಅಮೆರಿಕ ಮತ್ತು ಪಶ್ಚಿಮ ಯೂರೋಪ್‍ನ ಹಲವು ಸಂಪನ್ಮೂಲಭರಿತ ದೇಶಗಳಲ್ಲಿಯೂ ಇದು ತಲೆದೋರಿದೆ. ವಿಶ್ವ ಆರೋಗ್ಯ ಸಂಸ್ಥೆಯಾಗಲೀ ಅಥವಾ ಬೇರೆ ಯಾವುದೇ ಜಾಗತಿಕ ಸಾರ್ವಜನಿಕ ಆರೋಗ್ಯ ಸಂಸ್ಥೆಯಾಗಲೀ ಪಿಡುಗು ನಿಯಂತ್ರಣಕ್ಕೆ ಲಾಕ್‍ಡೌನ್ ಪರಿಣಾಮಕಾರಿ ಕ್ರಮ ಎಂದು ಶಿಫಾರಸ್ಸು ಮಾಡಿಲ್ಲ. ಲಾಕ್‍ಡೌನ್ ಎಷ್ಟು ಪರಿಣಾಮಕಾರಿ ಮತ್ತು ಇದು ಮಾನವೀಯತೆಯ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ತಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರು ಪ್ರಶ್ನೆಗಳನ್ನು ಎತ್ತಿದ್ದಾರೆ. ಚಲನವಲನ ಮತ್ತು ಸಾಮಾಜಿಕ ನಿರ್ಬಂಧಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಪ್ರಜಾಸತ್ತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಹಿರಂಗ ಚರ್ಚೆಯ ಅವಶ್ಯಕತೆ ಇದೆ. ಇಂತಹ ಚರ್ಚೆಗಳಿಗೆ ಹಿನ್ನಲೆ ಒದಗಿಸಲು, ಕೊರೊನ ವೈರಾಣು ಸೋಂಕು ತಡೆಗೆ ಲಾಕ್‍ಡೌನ್‍ನಂತಹ ಕ್ರಮಗಳ ನಿರ್ಧಾರಕ್ಕೆ ಕಾರಣವಾದ ಘಟನೆಗಳ ಅವಲೋಕನವನ್ನು ಈ ಲೇಖನದಲ್ಲಿ ಮಾಡಲಾಗಿದೆ.

ವುಹಾನ್‍ನಲ್ಲಿ ಶ್ವಾಸಕೋಶ ಖಾಯಿಲೆ ಸಂಬಂಧಿ ಸಾಂಕ್ರಾಮಿಕಕ್ಕೆ ಕಾರಣಕರ್ತವಾಗಿದ್ದ ಹೊಸ ಕೊರೊನ ವೈರಾಣುವನ್ನು ಚೈನಾ ಜನವರಿ 7, 2020ರಂದು ಗುರುತಿಸಿ ಪತ್ತೆಹಚ್ಚಿತು. ಕೊರೊನ ವೈರಾಣುವಿನಿಂದ ಬರುವ ಸಾರ್ಸ್ ಸಾಂಕ್ರಾಮಿಕ ಪಿಡುಗನ್ನು ನಿಯಂತ್ರಿಸುವ ಪೂರ್ವಾನುಭವ ಇದ್ದ ಚೈನಾ, ವುಹಾನ್‍ನಲ್ಲಿ ಸಾಮಾನ್ಯ ಚಲನವಲನ ಮತ್ತು ಪ್ರವಾಸದ ಮೇಲೆ ನಿರ್ಬಂಧ ಹೇರಿತು. ಜನವರಿ ಮಧ್ಯಕ್ಕೆ ಶ್ವಾಸಕೋಶ ಸೋಂಕಿನ ಲಕ್ಷಣಗಳಿದ್ದ ಮತ್ತು ನ್ಯುಮೋನಿಯಾಕ್ಕೆ ತಿರುಗಿ ಸಾವಿಗೀಡಾಗುತ್ತಿದ್ದ ರೋಗಿಗಳ ಸಂಖ್ಯೆ ನಾಟಕೀಯವಾಗಿ ಹೆಚ್ಚಾಗಿತ್ತು. ವೈರಾಣುವಿನ ಬಗ್ಗೆ ಮತ್ತು ಸೋಂಕು ಹರಡುವಿಕೆ ಬಗ್ಗೆ ಇದ್ದ ತಿಳುವಳಿಕೆಯ ಕೊರತೆಯಿಂದ ಚೈನಾ ಓಡಾಟ ನಿರ್ಬಂಧವನ್ನು ಇನ್ನಷ್ಟು ಕಠಿಣಗೊಳಿಸುವ ಒತ್ತಡಕ್ಕೆ ಬಿದ್ದು 23 ಜನವರಿ 2020ರವರೆಗೆ ವುಹಾನ್‍ನನ್ನು ಸಂಪೂರ್ಣ ಲಾಕ್ಡೌನ್‍ಗೆ ಒಳಪಡಿಸುವಂತೆ ಆಯಿತು. ನಂತರ ಚೈನಾ ತನ್ನ ಜನರನ್ನ ವ್ಯಾಪಕ ಪರೀಕ್ಷೆಗೆ ಒಳಪಡಿಸುವ ನಿಟ್ಟಿನಲ್ಲಿ ಮುಂದುವರೆದು (ಆಗಿನ್ನೂ ಪರೀಕ್ಷಾಲಯಗಳಲ್ಲಿ ಪರೀಕ್ಷೆ ನಡೆಸುವ ಸೌಕರ್ಯ ಲಭ್ಯವಿರಲಿಲ್ಲವಾದ್ದರಿಂದ, ಕ್ಲಿನಿಕಲ್ ಸಲಕರಣೆಗಳನ್ನು ಬಳಸಿಕೊಂಡು ಮುಂದುವರೆದರು) ಗಂಭೀರ ಸೋಂಕಿನ ಪ್ರಕರಣಗಳನ್ನು ನಿಭಾಯಿಸುವ ಆರೋಗ್ಯ ಸೇವೆಯ ವ್ಯವಸ್ಥೆಯನ್ನು ಸೃಷ್ಟಿಸಿಕೊಂಡಿತು. ಖಚಿತ ಕೊರೊನಾ ವೈರಾಣು ಸೋಂಕು (ಕೋವಿಡ್) ಪ್ರಕರಣಗಳು ಮತ್ತು ಸಾವುಗಳು ಫೆಬ್ರವರಿ ಮಧ್ಯ ಭಾಗದಲ್ಲಿ ತೀವ್ರವಾಗಿ ನಂತರ ತೀಕ್ಷ್ಣವಾಗಿ ತಗ್ಗುತ್ತಾ ಬಂದವು. ಮಾರ್ಚ್ ನಡುವಿಗೆ ಹೊಸ ಪ್ರಕರಣಗಳು ನಾಟಕೀಯವಾಗಿ ಕಡಿಮೆಯಾಗಿದ್ದರಿಂದ ಚೈನಾ, ವುಹಾನ್‍ನಲ್ಲಿ ಲಾಕ್‍ಡೌನ್ ನಿಯಮಗಳನ್ನು ಸಡಿಲಿಸುವ ಚಿಂತನೆ ನಡೆಸಿತ್ತು. ಈ ಸಮಯಕ್ಕಾಗಲೇ ಕೋವಿಡ್ ಸಾಂಕ್ರಾಮಿಕ ಪಿಡುಗಾಗಿ ತಿರುಗಿ, ಹಲವು ದೇಶಗಳು ಈ ಪಿಡುಗಿನ ಕೇಂದ್ರಗಳಾಗಿ ಮಾರ್ಪಾಡಾಗಿದ್ದಾವು. ಪ್ರಪಂಚದಾದ್ಯಂತ ದೇಶಗಳು ಇದರಿಂದ ಭಯಭೀತರಾಗಿ ತ್ವರಿತ ಮಾರ್ಗೋಪಾಯಗಳನ್ನು ಹುಡುಕಿಕೊಳ್ಳುವ ಒತ್ತಡದಲ್ಲಿ ಇದ್ದವು. ವುಹಾನ್‍ನಲ್ಲಿ ಎರಡು ತಿಂಗಳ ಲಾಕ್‍ಡೌನ್ ಮತ್ತು ನಂತರ ಅಲ್ಲಿ ಕೋವಿಡ್ ನಿಯಂತ್ರಣವಾಗಿದ್ದು ಪರಿಹಾರ ಮಾದರಿಯಾಗಿ ಕಾಣಿಸಿಕೊಂಡಿತು.

ಫೆಬ್ರವರಿ ಮೂರನೇ ವಾರದಲ್ಲಿ ದಕ್ಷಿಣ ಕೊರಿಯಾ, ಇರಾನ್ ಮಾತ್ತು ಇಟಲಿಯಲ್ಲಿ ಕೋವಿಡ್ ಸಾಂಕ್ರಾಮಿಕ ಪಿಡುಗಾಗಿ ತಿರುಗಿ ಆ ದೇಶಗಳು ಸಾರ್ವಜನಿಕವಾಗಿ ಗುಂಪುಕಟ್ಟುವುದಕ್ಕೆ (ಶಾಲೆಗಳು ಮತ್ತು ಸಭೆ- ಕಾರ್ಯಕ್ರಮಗಳನ್ನೂ ಸೇರಿಸಿ) ಮತ್ತು ಅಂತರಾಷ್ಟ್ರೀಯ ಪ್ರವಾಸಗಳ ಮೇಲೆ ನಿರ್ಬಂಧ ಹೇರಿತ್ತು. ಬಹಳ ಆಕ್ರಮಣಕಾರಿ ಶೈಲಿಯಲ್ಲಿ ವ್ಯಾಪಕ ಪರೀಕ್ಷೆಗಳನ್ನು ನಡೆಸುವುದು ಮತ್ತು ಸೋಂಕು ದೃಢಪಟ್ಟವರನ್ನು ಪ್ರತ್ಯೇಕಗೊಳಿಸುವ ಪ್ರಕ್ರಿಯೆಗಳ ಮೂಲಕ ದಕ್ಷಿಣ ಕೊರಿಯ ಸಾಂಕ್ರಾಮಿಕವನ್ನು ನಿಭಾಯಿಸಿತ್ತು. ನಂತರ ಈ ನಿಯಂತ್ರಣ ಮಾದರಿಯನ್ನು ಜರ್ಮನಿ ಅಳವಡಿಸಿಕೊಂಡಿತು. ಚೈನಾಗಿಂತ ಇದು ಹೇಗೆ ವಿಭಿನ್ನವಾಗಿತ್ತೆಂದರೆ, ವೈರಾಣು ಬಗ್ಗೆ ಜಗತ್ತಿಗೆ ಹೆಚ್ಚು ತಿಳುವಳಿಕೆ ಬಂದ ಮೇಲೆ ಈ ದೇಶಗಳಿಗೆ ಈ ಸಾಂಕ್ರಾಮಿಕ ಪಿಡುಗು ಬಂದೆರಗಿತ್ತು ಹಾಗೂ ಪರೀಕ್ಷೆಗಳನ್ನು ಮಾಡಲು ಸೌಕರ್ಯವನ್ನು ಕಲ್ಪಿಸಿಕೊಳ್ಳುವ ಸಮಯಾವಕಾಶ ಸಿಕ್ಕಿತ್ತು. ಆದರೆ ಇರಾನ್‍ನಂತಹ ಮುಂದುವರೆಯುತ್ತಿರುವ ಆರ್ಥಿಕತೆಯ ದೇಶಗಳು ಅಗತ್ಯ ಆರೋಗ್ಯ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಳ್ಳಲು ಸಾಧ್ಯವಾಗದೆ ಹೊರಗಿನ ಸಹಾಯಕ್ಕೆ ಮೊರೆ ಹೋಗುವ ಒತ್ತಡ ಸೃಷ್ಟಿಯಾಯಿತು. ವ್ಯಾಪಕವಾಗಿ ಸೋಂಕು ಪತ್ತೆ ಪರೀಕ್ಷೆ ಮಾಡಲು ಸಾಧ್ಯವಾಗದೆ ತನ್ನ ಹಲವು ನಗರಗಳಲ್ಲಿ ಲಾಕ್‍ಡೌನ್ ನಿಯಂತ್ರಣಕ್ಕೆ ಮೊರೆ ಹೋಗಬೇಕಾಯಿತು.

ಮಾರ್ಚ್‍ನ ಮೊದಲ ವಾರದಲ್ಲಿ ಚೈನಾದ ಸಾಂಕ್ರಾಮಿಕ ರೋಗ ತಜ್ಞರು ನಾವೆಲ್ ಕೊರೊನ ವೈರಾಣುವಿನ ಹರಡುವಿಕೆಯ ಮಾದರಿಗಳ ಮಾಹಿತಿಯನ್ನು ಪ್ರಕಟಿಸಿದ್ದರಿಂದ ವಿಶ್ವದ ವಿವಿಧ ಜನಸಮೂಹದಲ್ಲಿ ಸಾಂಕ್ರಾಮಿಕ ಹೇಗೆ ಹರಡಬಹುದು ಎಂಬುದನ್ನು ಊಹೆ ಮಾಡಲು ಗಣಿತ ಮಾದರಿಗಳನ್ನು ಸಿದ್ಧಪಡಿಸಿಕೊಳ್ಳಲು ಸಾಧ್ಯವಾಯಿತು. ಅತಿ ಕಡಿಮೆ ಸಮಯದಲ್ಲಿ ಸಂಕ್ರಾಮಿಕ ಹರಡುವುದನ್ನು ಊಹಿಸಬಲ್ಲ ಗಣಿತ ಸೂತ್ರಗಳು ಮೂಡಿ ಸರ್ಕಾರಗಳ ಮುಂದೆ ಬಳಕೆಗೆ ಸಿದ್ಧವಿದ್ದವು. ಆಸಕ್ತಿದಾಯಕ ಸಂಗತಿ ಎಂದರೆ ಚೈನಾ ಪ್ರಕಟನೆಯ ಕನಿಷ್ಠ ಒಂದು ವಾರಕ್ಕೂ ಮೊದಲೇ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಲಿಯ (ಐಸಿಎಂಆರ್, ಭಾರತ ಸರ್ಕಾರ) ಸಾಂಕ್ರಾಮಿಕ ರೋಗ ತಜ್ಞರು ಭಾರತದಲ್ಲಿ ಕೋವಿಡ್ ಸಂಕ್ರಾಮಿಕ ಪಿಡುಗು ಹರಡಬಲ್ಲ ಮಾದರಿಯನ್ನು ಸಿದ್ಧಪಡಿಸಿಕೊಂಡಿದ್ದರು.

“ಎಕ್ಸ್‌ಪೋನೆನ್ಶಿಯಲ್ ಕರ್ವ್”, “ಸೋಂಕಿನ ತುತ್ತತುದಿ”, “ಕರ್ವ್ ಬಗ್ಗಿಸಬೇಕು” ಎಂಬಂತಹ ಪಾರಿಭಾಷಿಕ ಪದಗಳ ಬಳಕೆಯೊಂದಿಗೆ ಸೋಂಕು ಹರಡಬಲ್ಲ ಮತ್ತು ಸಾವಾಗಬಲ್ಲ ಸಂಖ್ಯೆಯನ್ನು ಇಂತಹ ಸೂತ್ರಗಳು ಊಹೆ ಮಾಡಿ ನಡೆದ ಚರ್ಚೆಗಳು  ಮಾಧ್ಯಮಗಳಲ್ಲಿ ಅತಿ ಹೆಚ್ಚು ಕಾಣಿಸಿಕೊಂಡವು. ಈ ಮಧ್ಯೆ ಮಾರ್ಚ್ ಎರಡನೇ ವಾರದಲ್ಲಿ ಇಟಲಿಯಲ್ಲಿ ಸೋಂಕಿನ ಪ್ರಕರಣಗಳು ವಿಪರೀತವಾಗಿ ಹೆಚ್ಚಳಗೊಂಡು, ಅಲ್ಲಿನ ಆರೋಗ್ಯ ವ್ಯವಸ್ಥೆಯ ಮೇಲೆ ಅತಿ ಹೆಚ್ಚು ಒತ್ತಡ ಹಾಕಿದ್ದಲ್ಲದೆ, ದಿನಕ್ಕೆ 600-900 ಸಾವುಗಳು ದಾಖಲಾದವು. ತುಂಬಿದ ಐಸಿಯುಗಳು, ಶವಗಳ ರಾಶಿ ಮತ್ತು ಶವಸಂಸ್ಕಾರಕ್ಕಾಗಿ ಕಾದು ನಿಂತಿದ್ದ ಶವಪೆಟ್ಟಿಗೆಗಳ ಉದ್ದನೆಯ ಸಾಲಿನ ಕಥೆಗಳು ಮಾತ್ತು ವಿಡಿಯೋಗಳು ವಿಶ್ವದಾದ್ಯಂತ ಹರಿದಾಡಿದವು. ಮುಂದಿನ ವಾರಗಳಲ್ಲಿ ಫ್ರಾನ್ಸ್, ಸ್ಪೇನ್, ಇಂಗ್ಲೆಂಡ್ ಮತ್ತು ಅಮೆರಿಕಾದಲ್ಲಿ ಪ್ರಕರಣಗಳು ತೀಕ್ಷ್ಣವಾಗಿ ಏರಲಿವೆ ಎಂದು ನಿರೀಕ್ಷಿಸಿದ್ದ ಗಣಿತದ ಮಾದರಿಗಳಿಗೆ ಇಟಲಿಯಲ್ಲಿ ತೀಕ್ಷ್ಣವಾಗಿ ಏರಿದ ಕೋವಿಡ್ ಸೋಂಕಿನ ಪ್ರಕರಣಗಳು ಸಾಕ್ಷಿಯಾಗಿ ಕಂಡಿತು. ವಿಶ್ವದಾದ್ಯಂತ ‘ಸುಶಿಕ್ಷಿತ’ ಜನಸಮೂಹದಲ್ಲಿ ಎಷ್ಟು ಆತಂಕ ಮನೆಮಾಡಿತ್ತೆಂದರೆ ಸರ್ಕಾರಗಳು ತೀವ್ರ ಕ್ರಮಕ್ಕೆ ಮುಂದಾಗುವಂತೆ ಸಾರ್ವಜನಿಕ ಪ್ರಭಾವಿ ಸಮುದಾಯಗಳು ಒತ್ತಡ ಹಾಕಿದವು. ಇಟಲಿಯಂತಹ ಸನ್ನಿವೇಶಕ್ಕೆ ಜಾರದಂತೆ ತಡೆಯಲು, ಸಾಮಾಜೀಕರಣದ ಮೇಲೆ ನಿರ್ಬಂಧ ಹೇರುವಂತಹ ತೀವ್ರ ಕ್ರಮಗಳಂತಹ ಸಲಹೆಗಳ ಸುತ್ತಲೇ ಹಲವು ದೇಶಗಳ ಸಾರ್ವಜನಿಕ ಚರ್ಚೆಗಳು ಗಮನ ಹರಿಸಿದ್ದವು. ಯಶಸ್ವಿ ನಿಯಂತ್ರಣದಿಂದ ವುಹಾನ್‍ನಲ್ಲಿ ಚೈನಾ ಲಾಕ್‍ಡೌನ್ ತೆರವುಗಳಿಸಲು ಸಿದ್ಧಗೊಳ್ಳುತ್ತಿರುವಾಗ ಲಾಕ್‍ಡೌನ್ ಯಶಸ್ವಿ ಕ್ರಮ ಎಂಬುದು ಅತಿ ಚರ್ಚಿತ ವಿಷಯವಾಗಿತ್ತು. ಮಾರ್ಚ್ ಮಧ್ಯದಲ್ಲಿ ಇಟಲಿ, ಸ್ಪೇನ್, ಇಂಗ್ಲೆಂಡ್ ಮತ್ತು ಅಮೆರಿಕಾದ ಕೆಲವು ರಾಜ್ಯಗಳು ಲಾಕ್‍ಡೌನ್ ಹೋಲುವ ಚಲನವಲನ ನಿರ್ಬಂಧವನ್ನು ಘೋಷಿಸಿದ್ದವು. ಅದರ ಮುಂದಿನ ವಾರ ಭಾರತದಲ್ಲಿ ಸಂಪೂರ್ಣ ಲಾಕ್‍ಡೌನ್‍ನನ್ನು ಕಾನೂನಾತ್ಮಕವಾಗಿ ಘೋಷಿಸಲಾಯಿತು.

ಫೆಬ್ರವರಿ 27, 2020ರಂದು ಐಸಿಎಂಆರ್‌ನ ವೈದ್ಯಕೀಯ ಜರ್ನಲ್‍ಗೆ ಅವರದ್ದೇ ಸೋಂಕುರೋಗ ತಜ್ಞರ ಸಮೂಹವು ಗಣಿತವನ್ನಾಧರಿಸಿದ ಸೂತ್ರವುಳ್ಳ ಬರಹವನ್ನು ಕಳುಹಿಸಿತು. ನಾಲ್ಕು ಭಾರತೀಯ ನಗರಗಳಲ್ಲಿ ಕೋವಿಡ್ ಸಾಂಕ್ರಾಮಿಕ ಹರಡಬಲ್ಲ ಮತ್ತು ಸಾವುಗಳ ಸಂಖ್ಯೆಯ ವಿವಿಧ ಸನ್ನಿವೇಶಗಳನ್ನು ಈ ಲೇಖನ ಊಹಿಸಿತ್ತು. ಮೇರಿಲ್ಯಾಂಡ್ ಮೂಲದ ‘ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್, ಎಕನಾಮಿಕ್ಸ್ & ಪಾಲಿಸಿʼ ಎಂಬ ಸಂಸ್ಥೆಯ ಸೂತ್ರಗಳ ಮಾದರಿ ಪದೇ ಪದೇ ಚರ್ಚೆಗೆ ಒಳಪಟ್ಟು ಹೆಚ್ಚು ಪ್ರಚಾರ ಪಡೆದಿದ್ದ ರೀತಿಯಲ್ಲಿಯೇ ಉಳಿದ ಸೂತ್ರಗಳು ಸೋಂಕಿನ ಸಂಖ್ಯೆ ಮತ್ತು ಸಾವುಗಳ ಸಂಖ್ಯೆಯನ್ನು ಲೆಕ್ಕ ಹಾಕಿದ್ದವು. ವ್ಯಾಪಕವಾಗಿ ಹರಡಬಲ್ಲದ್ದಾಗಿದ್ದ ಈ ಸಾಂಕ್ರಾಮಿಕ ಪಿಡುಗಿನ ಅತಿ ಕೆಟ್ಟ ಸನ್ನಿವೇಶವನ್ನು ನಿಭಾಯಿಸುವಂತಹ ಹಲವು ಸಾರ್ವಜನಿಕ ಅರೋಗ್ಯ ಕ್ರಮಗಳಿಗೆ ಈ ಲೇಖನ ಸಲಹೆಗಳನ್ನು ನೀಡಿತ್ತು. ಸಮುದಾಯಗಳನ್ನು ತೊಡಗಿಸಿಕೊಳ್ಳುವುದು, ಕಣ್ಗಾವಲು, ಆತಂಕ ಸೃಷ್ಟಿಸದಂತೆ ಕ್ವಾರಂಟೈನ್ ಕ್ರಮಗಳು, ಅಂಕಿ ಅಂಶ ಮತ್ತು ಮಾಹಿತಿಗಳ ನಿಖರ ವರದಿಗಾರಿಕೆ ಆ ಬರಹದ ಲೇಖಕರು ನೀಡಿದ್ದ ಕೆಲವು ಸಲಹೆಗಳು. ಚಲನವಲನ ಮತ್ತು ಸಾಮಾಜಿಕ ಒಡನಾಟದ ಮೇಲೆ ನಿರ್ಬಂಧಗಳು ಅಥವಾ ಲಾಕ್‍ಡೌನ್‍ನಂತಹ ಕ್ರಮಗಳನ್ನು ಈ ಲೇಖನ ಶಿಫಾರಸ್ಸು ಮಾಡಿರಲಿಲ್ಲ. ಕೋವಿಡ್ ನಿಯಂತ್ರಣಕ್ಕೆ ಭಾರತದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ (ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳು) ಈ ಲೇಖನ ಎಷ್ಟು ಪ್ರಭಾವ ಬೀರಿದೆ ಎಂದು ತಿಳಿದಿಲ್ಲ.

ದೊಡ್ಡ ದೇಶಗಳಲ್ಲಿ ನಡೆದ ಲಾಕ್ ಡೌನ್ ನಂತರ ಏಶ್ಯಾದ ಸಣ್ಣ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕ, ಆಫ್ರಿಕಾದ ನೈಜೀರಿಯಾ, ದಕ್ಷಿಣ ಆಫ್ರಿಕಾ, ರುವಾಂಡ, ಲಿಬಿಯ ಹಾಗೂ ಲ್ಯಾಟಿನ ಅಮೆರಿಕ ದೇಶಗಳಲ್ಲೂ ಲಾಕ್‍ಡೌನ್ ಹೇರಿಕೆ ಮುಂದೆ ನಡೆಯಿತು. ಜನರ ಚಲನವಲನದ ಮೇಲೆ ತೀವ್ರ ನಿರ್ಬಂಧಗಳನ್ನು ಹಾಕಿರುವುದನ್ನು ವಿಶ್ವದಾದ್ಯಂತ ಹಲವು ಸಮಾಜ ವಿಜ್ಞಾನಿಗಳು ಮತ್ತು ಕಾರ್ಯಕರ್ತರು ಸಾಕಷ್ಟು ಕಾರಣಗಳನ್ನು ನೀಡಿ ಟೀಕಿಸಿದರು. ಪಶ್ಚಿಮದ ಯುರೋಪಿನ ದೇಶಗಳಲ್ಲಿ ಈ ಲಾಕ್‍ಡೌನ್‍ನನ್ನು ನಾಗರಿಕ ಸ್ವಾತಂತ್ರ್ಯಗಳ ಮತ್ತು ಸಾಮಾಜಿಕರಣದ ಮಾನವ ಹಕ್ಕಿನ ಮೇಲಿನ ಹರಣ ಎಂದೂ ದೂಷಿಸಲಾಯಿತು. ಉದ್ಯೋಗ ಕಳೆದುಕೊಳ್ಳುವ ಮತ್ತು ಮುಂದೆ ಸಾಮಾಜಿಕ ಭದ್ರತೆಯ ವ್ಯವಸ್ಥೆಯ ಮೇಲೆ ಅವಲಂಬಿತರಾಗುವುದರ ಆತಂಕವನ್ನು ದಿನಗೂಲಿ ನೌಕರರು ಎದುರಿಸಿದರು. ಸಾಮಾಜಿಕ ಬೆಂಬಲದ ಕುಸಿತ ಮತ್ತು ಆರೋಗ್ಯ ಸೇವೆಯ ಸೌಲಭ್ಯ ವಂಚಿತರಾದ ನಿರಾಶ್ರಿತರು ಮತ್ತು ವಲಸಿಗರು ಹೆಚ್ಚು ಸಮಸ್ಯೆಗಳನ್ನು ಎದುರಿಸಿದರು. ವಿಶ್ವದ ಇನ್ನು ಹಲವು ಕಡೆ ಈ ಸಮಸ್ಯೆ ತೀವ್ರವಾಗಿ, ಆಹಾರ ಸಮಸ್ಯೆಯೂ ಎದುರಾಗಿ ಜನರು ಜೀವನೋಪಾಯವನ್ನು ಕಳೆದುಕೊಳ್ಳಬೇಕಾಗಿ ಬಂತು. ಅವ್ಯವಸ್ಥೆಯ ಮತ್ತು ಪ್ರಜಾಸತ್ತಾತ್ಮಕವಲ್ಲದ ನಿರ್ಬಂಧಗಳು, ಮುಂದುವರೆಯುತ್ತಿರುವ ದೇಶಗಳಲ್ಲಿ ಮಾನವೀಯತೆಯ ಬಿಕ್ಕಟ್ಟಾಗಿ ಪರಿಣಮಿಸುವುದನ್ನು ಹಲವು ಸಾಮಾಜಿಕ ಕಾರ್ಯಕರ್ತರು ಊಹಿಸಿದ್ದರು. ಸಮುದಾಯಗಳನ್ನು ಪರಿಗಣನೆಗೆ ತೆಗೆದುಕೊಂಡು ಅವರನ್ನು ಒಳಗೊಳ್ಳುವ ಕ್ರಮ ಈ ಅಲ್ಪಕಾಲದ ಯಾತನೆಗೆ ಅವರು ಸಿದ್ಧಗೊಳ್ಳಲು ಅವಕಾಶ ನೀಡಿರುತ್ತಿತ್ತು. ಆಹಾರ ಸರಬರಾಜು ಮತ್ತು ಉದ್ಯೋಗದ ಬಗ್ಗೆ ರಾಜ್ಯವ್ಯವಸ್ಥೆಗಳ ಸಾಮರ್ಥ್ಯವನ್ನು ಅವರು ಸಂದೇಹಿಸಿದರು.

ಭಾರತದಲ್ಲಿ ವಲಸೆ ಕಾರ್ಮಿಕರು ಮತ್ತು ದಿನಗೂಲಿ ಕೆಲಸಗಾರರು ತೀವ್ರ ಯಾತನೆಯನ್ನು ಅನುಭವಿಸಿದರು ಮತ್ತು ಇದು ಅಲ್ಲಲ್ಲಿ ಪ್ರತಿಭಟನೆಗಳಿಗೆ ಕಾರಣವಾಯಿತು. ವಲಸೆ ಸಂಬಂಧಿ ಹಲವು ಸಾವಿನ ಘಟನೆಗಳು ವರದಿಯಾದವು. ಲಾಕ್‍ಡೌನ್ ಸಮಯದಲ್ಲಿ ಕೋವಿಡೇತರ ಖಾಯಿಲೆಗಳನ್ನು ನಿಭಾಯಿಸುವಲ್ಲಿ ಆರೋಗ್ಯ ವ್ಯವಸ್ಥೆ ಕಡಿಮೆ ಪರಿಣಾಮಕಾರಿಯಾಯಿತು. ಕೋವಿಡ್ ಭಯದಿಂದ ಅರೋಗ್ಯ ಸೇವೆ ನಿರಾಕರಿಸಿದ ಮತ್ತು ಓಡಾಟದ ನಿರ್ಬಂಧಗಳಿಂದ ಅರೋಗ್ಯ ಸೇವೆ ಲಭ್ಯವಾಗದ ಹಲವು ವರದಿಗಳಾದವು. ಟ್ಯೂಬರ್ ಕ್ಯುಲೋಸಿಸ್, ಎಚ್‍ಐವಿ, ಮಲೇರಿಯ, ಲೈಂಗಿಕ ಮತ್ತು ಲಿಂಗತಾರತಮ್ಯ ಸಂಬಂಧಿ ಹಿಂಸೆಗಳಿಗೆ ಚಿಕಿತ್ಸೆ ನೀಡುವ ಆರೋಗ್ಯ ವ್ಯವಸ್ಥೆ ಬಾಗಿಲು ಮುಚ್ಚಿತು. ಈ ಎಲ್ಲಾ ನಿರ್ಬಂಧಗಳಿಂದ ಉಂಟಾಗಿರುವ ಮಾನವ ನಷ್ಟ ಇನ್ನೂ ತಿಳಿಯಬೇಕಿದೆ.

ಲಾಕ್‍ಡೌನ್‍ಗಳಿಂದ ಮತ್ತು ಗಡಿಗಳನ್ನು ಮುಚ್ಚಿರುವುದರಿಂದ ಆಫ್ರಿಕಾ ದೇಶಗಳು ಆಹಾರ ಅಭದ್ರತೆಯ ಗಂಭೀರ ಸನ್ನಿವೇಶವನ್ನು ಎದುರಿಸುತ್ತಿವೆ. ಒಂದು ವಾರದ ಲಾಕ್‍ಡೌನ್‍ನಿಂದಾಗಿಯೇ ಸಹರಾದ ಕೆಳಗಿನ ಆಫ್ರಿಕಾದಲ್ಲಿ ಜನ ತೀವ್ರ ಹಸಿವಿನ ಸಮಸ್ಯೆ ಎದುರಿಸುತ್ತಿದ್ದಾರೆ. ಕಾಂಗೋ ಪ್ರಜಾರಾಜ್ಯ ರಿಪಬ್ಲಿಕ್‍ನಲ್ಲಿ ಒಂದು ದಿನದ ನಿರ್ಬಂಧದ ನಂತರ ಜನ ಲಾಕ್‍ಡೌನ್ ನಿಯಮಗಳನ್ನು ಮುರಿದಿದ್ದಾರೆ. ಸದ್ಯಕ್ಕೆ ಅವರ ರಾಜಧಾನಿ ನಗರದಲ್ಲಿ ಗಣ್ಯರು ನೆಲಸುವ ಪ್ರದೇಶದಲ್ಲಿ ಮಾತ್ರ ಲಾಕ್‍ಡೌನ್ ಪಾಲಿಸಲಾಗುತ್ತಿದೆ. ಈ ಹಿಂದೆ ಎಬೊಲ ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಸೇನೆ ಮಧ್ಯಪ್ರವೇಶಿಸಿದ ಹೊರತಾಗಿಯೂ ಲೈಬೀರಿಯಾ ಮತ್ತು ಸಿಯೆರ್ರಾ ಲಿಯೋನ್‍ನಲ್ಲಿ 2014ರ ಲಾಕ್‍ಡೌನ್ ಪರಿಣಾಮಕಾರಿಯಾಗಿರಲಿಲ್ಲ. ಕಾಂಗೋ ಪ್ರಜಾರಾಜ್ಯ ರಿಪಬ್ಲಿಕ್ ಮಾತ್ತು ಸಿಯೆರ್ರಾ ಲಿಯೋನ್ ಸೇರಿದಂತೆ ಬಹಳಷ್ಟು ಆಫ್ರಿಕಾ ಸಮುದಾಯಗಳಲ್ಲಿ ಎಬೊಲ ನಿಯಂತ್ರಣಕ್ಕೆ ಸಮುದಾಯಗಳನ್ನು ಒಳಗೊಳ್ಳುವ ಯೋಜನೆಗಳು ಸಹಾಯ ಮಾಡಿವೆ ಎಂದು ದಾಖಲಾಗಿದೆ. ಆಫ್ರಿಕಾದಲ್ಲಿ ಕೋವಿಡ್ ನಿಯಂತ್ರಣಕ್ಕೆ ಇಂತಹುದೇ ಯೋಜನೆಯನ್ನು ಅಳವಡಿಸಿಕೊಳ್ಳಲು ಸಾರ್ವಜನಿಕ ಅರೋಗ್ಯ ಕಾರ್ಯಕರ್ತರು ಸೂಚಿಸುತ್ತಿದ್ದಾರೆ.

ಆಸ್ಪತ್ರೆಗಳಲ್ಲಿ ಒಂದೇ ಬಾರಿಗೆ ಹೆಚ್ಚು ಜನ ಬರುವಂತಾಗಿ ಸಾವುಗಳು ಉಂಟಾಗುವುದನ್ನು ತಡೆಯುವುದಕ್ಕೆ ಸಾಮಾಜಿಕ ಒಡನಾಟವನ್ನು ನಿಷೇಧಿಸುವುದು ಅಗತ್ಯ ಎಂದು ಲಾಕ್‍ಡೌನ್ ಹೇರಿಕೊಂಡು ಬರುತ್ತಿರುವ ದೇಶಗಳು ವಾದಮಾಡುತ್ತಿವೆ. ಸ್ವೀಡನ್ ಮತ್ತು ನೆದರ್‍ಲ್ಯಾಂಡ್ ಹೊರತುಪಡಿಸಿ, ತೀವ್ರ ಸಮಸ್ಯೆ ಎದುರಿಸುತ್ತಿರುವ ಹಲವು ದೇಶಗಳಲ್ಲಿ, ಸಾಂಕ್ರಾಮಿಕ ತುತ್ತ ತುದಿಗೆ ಹೋಗುವ ಸಂದರ್ಭದಲ್ಲಿ ಉಂಟಾಗಬಹುದಾದ ತೀವ್ರ ಅನಾರೋಗ್ಯದ ಪ್ರಕರಣಗಳಿಗೆ ಬೇಕಾಗುವ ಹಾಸಿಗೆಗಳ ಸೌಲಭ್ಯಗಳಿಗಿಂತ ಬಹಳ ಕಡಿಮೆ ಸಂಖ್ಯೆಯ ಹಾಸಿಗೆಗಳನ್ನು ಅಲ್ಲಿನ ಆರೋಗ್ಯ ವ್ಯವಸ್ಥೆ ಹೊಂದಿದೆ. ಮುಂದಿನ ದಿನಗಳಲ್ಲಿ ಮಾಡಲಾಗುವ ಸಮಗ್ರ ಅವಲೋಕನ (ಇನ್ನು ಹೆಚ್ಚಿನ ಮಾಹಿತಿ ಲಭ್ಯವಾದಾಗ) ಇಂತಹ ಲಾಕ್‍ಡೌನ್‍ನ ಉಪಯೋಗವನ್ನು ಅಳೆಯಬಲ್ಲವು. ಅಮೆರಿಕಾದ ಮೂಲದ ಕೆಲವು ಸಂಶೋಧಕರು ಈಗಾಗಲೇ ಅವಲೋಕಿಸಿರುವ ಮಾಹಿತಿಯ ಪ್ರಕಾರ ಪೋಲೀಸಿಂಗ್‍ನಿಂದ ಲಾಕ್‍ಡೌನ್ ಹೇರಿದ ದೇಶಗಳು, ಕಡಿಮೆ ನಿರ್ಬಂಧಗಳನ್ನು ಹಾಕಿದ್ದ (ಸಾಮಾಜಿಕ ಅಂತರ ಮತ್ತು ಗುಂಪುಗಳ ನಿಷೇಧ) ದೇಶಗಳಿಗಿಂತ ಹೆಚ್ಚಿನ ಜೀವಗಳನ್ನೇನು ಉಳಿಸಿಲ್ಲ ಎಂದು ಸೂಚಿಸಿದೆ. ಯಾವುದೇ ನಿರ್ಬಂಧಗಳು ಇಲ್ಲದ ಸ್ವೀಡನ್‍ನಲ್ಲಿ ಸೋಂಕು ಹರಡುವ ವೇಗ ಬಹಳವಾಗಿ ಏನೂ ಹೆಚ್ಚಲಿಲ್ಲ. ಬದಲಾಗಿ ಕೆಲವು ನಿರ್ಬಂಧಗಳು ಮಾತ್ರ ಇದ್ದ ನೆದಲ್ರ್ಯಾಂಡ್ ಮತ್ತು ಲಾಕ್‍ಡೌನ್ ಇದ್ದ ಫ್ರಾನ್ಸ್, ಇಟಲಿ, ಇಂಗ್ಲೆಂಡ್‍ನಂತಹ ದೇಶಗಳಂತೆ ಅಲ್ಲಿಯೂ ಸೋಂಕಿನ ವೇಗ ತಗ್ಗಿದೆ. ಹಾಗೆಯೇ ಈ ದೇಶಗಳಲ್ಲಿ ನಿರ್ಬಂಧಗಳು ಮತ್ತು ಲಾಕ್‍ಡೌನ್‍ಗಳ ಹೊರತಾಗಿಯೂ ಸಾವಿನ ಸಂಖ್ಯೆ ಗಣಿತದ ಸೂತ್ರಗಳು ನಿರೀಕ್ಷಿಸಿದ್ದ ಸಂಖ್ಯೆಗೆ ಹತ್ತಿರವಾಗಿತ್ತು.

Thomas Meunier and colleagues, Pre-publication manuscript, pending peer review; 1st May 2020

ಪಶ್ಚಿಮ ಯುರೋಪಿಯನ್ ದೇಶಗಳ ಪ್ರಾಥಮಿಕ ಮಾಹಿತಿಗಳು ಮತ್ತು ಎಬೊಲ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ಇದ್ದ ಅನುಭವಗಳು, ಕೋವಿಡ್ ಸಾಂಕ್ರಾಮಿಕವನ್ನು ತಡೆಯಲು ಕಡಿಮೆ ದಮನಕಾರಿಯಾಗಿದ್ದ ಬದಲಿ ತಂತ್ರಗಳಿಗೆ ಅವಕಾಶವಿತ್ತು ಎಂದು ಸೂಚಿಸುತ್ತವೆ. ಮಾರ್ಚ್ 24 2020ರಂದು ಭಾರತದಲ್ಲಿ 74 ಹೊಸ ಕೋವಿಡ್ ಪ್ರಕರಣಗಳು ಮತ್ತು ಒಂದು ಸಾವು ದಾಖಲಾಯಿತು. ಲಾಕ್‍ಡೌನ್ ಹಾಕಿದ 42 ದಿನಗಳ ತರುವಾಯ ಮೇ 6 2020ರಂದು ಭಾರತ 3583 ಕೋವಿಡ್ ಪ್ರಕರಣಗಳು ಮತ್ತು 91 ಸಾವುಗಳನ್ನು ಕಂಡಿತು. ಆದುದರಿಂದ ಹೆಚ್ಚುವರಿ ಕೋವಿಡ್ ಸಂಬಂಧಿ ಸಾವುಗಳನ್ನು ತಡೆಯಲು ಭಾರತೀಯ ಲಾಕ್‍ಡೌನ್ ಎಷ್ಟು ಪರಿಣಾಮಕಾರಿಯಾಗಿದೆ ಎಂದು ಲೆಕ್ಕ ಹಾಕುವುದು ಮುಖ್ಯ. ಭಾರತದ ನಗರ ಭಾಗಗಳಲ್ಲಿ ಜನದಟ್ಟಣೆ ತೀವ್ರವಾಗಿರುವುದರಿಂದ ಲಾಕ್‍ಡೌನ್, ಕೊರೊನ ವೈರಸ್ ಹರಡುವಿಕೆಯನ್ನು ದೊಡ್ಡಮಟ್ಟದಲ್ಲಿ ತಗ್ಗಿಸಿರಬಹುದು. ಲಾಕ್ ಡೌನ್ ಇಷ್ಟು ಮಾನವೀಯ ನೋವು ತಂದೊಡ್ಡಿದ ಸಂದರ್ಭದಲ್ಲಿ, ಮೇಲಿನ ಗಳಿಕೆ ಸಾವುಗಳನ್ನು ಕಡಿಮೆ ಮಾಡಲು ಸಹಕರಿಸಿತೇ ಎಂಬುದನ್ನು ಅವಲೋಕನ ಮಾಡುವುದು ಅಗತ್ಯವಾಗಿದೆ. ದೀರ್ಘಕಾಲಕ್ಕೆ ಲಾಕ್‍ಡೌನ್‍ಗಳು ಸುಸ್ಥಿರವಲ್ಲದ ಸಂದರ್ಭದಲ್ಲಿ ಬಡಜನರ ಜೀವನೋಪಾಯಗಳಿಗೆ ಧಕ್ಕೆ ತರದಂತೆ ಕೋವಿಡ್ ಹರಡುವುದನ್ನು ನಿಯಂತ್ರಿಸುವ ಬದಲಿ ಪ್ರಜಾಸತ್ತಾತ್ಮಕ ತಂತ್ರಗಳ ಬಗ್ಗೆ ಚರ್ಚೆ ಮಾಡುವ ಸಮಯ ಬಂದಿದೆ.

  • ಡಾ.ಅಕ್ಕಮಹಾದೇವಿ ಹಿಮಾಂಶು, ಜಾಗತಿಕ ಆರೋಗ್ಯ ಮತ್ತು ಸಾಂಕ್ರಾಮಿಕ ಪಿಡುಗುಗಳ ಬಗ್ಗೆ ಸಂಶೋಧಕರು ಮತ್ತು ವೈದ್ಯರು.
  • ಅನುವಾದ: ಗುರು ಆಕೃತಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ’: ಪ್ರಿಯಾಂಕ್ ಖರ್ಗೆ

ಬೆಂಗಳೂರು: ‘ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ನಿಯಮಗಳಿಗೆ ಅತೀತರಲ್ಲ’ ಎಂದು ಆರ್.ಎಸ್.ಎಸ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಮತ್ತೆ ಗುಡುಗಿದ್ದಾರೆ.  ರಾಜ್ಯದ ಗಮನ‌ ಸೆಳೆದಿದ್ದ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ...

“ಮಾಸ್ಕ್ ಧರಿಸಿದರೂ ಪ್ರಯೋಜನವಿಲ್ಲ”: ದೆಹಲಿ ವಾಯುಮಾಲಿನ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್

ದೆಹಲಿಯ ವಾಯುಮಾಲಿನ್ಯ 'ಗಂಭೀರ ಮಟ್ಟ' ತಲುಪಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಮಾಸ್ಕ್‌ ಧರಿಸಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ವಕೀಲರು ವರ್ಚುವಲ್ ಮೂಲಕ ನ್ಯಾಯಾಲಯಕ್ಕೆ ಹಾಜರಾದರೆ ಸಾಕು ಎಂದು ಹೇಳಿದೆ. ವಿವಿಧ ಪ್ರಕರಣಗಳಲ್ಲಿ...

ಛತ್ತೀಸ್‌ಗಢ| ಇಬ್ಬರು ಉನ್ನತ ಕಮಾಂಡರ್‌ಗಳು ಸೇರಿದಂತೆ ಆರು ಜನ ಮಾವೋವಾದಿಗಳ ಎನ್‌ಕೌಂಟರ್‌

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನವೆಂಬರ್ 11 ರಂದು ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಆರು ಮಾವೋವಾದಿಗಳಲ್ಲಿ ಮಾವೋವಾದಿ ನಾಯಕಿ, ಹಿರಿಯ ಕಾರ್ಯಕರ್ತ ಪಾಪಾ ರಾವ್ ಅವರ ಪತ್ನಿ ಊರ್ಮಿಳಾ ಮತ್ತು ಬುಚಣ್ಣ...

ಗ್ರೆನೇಡ್ ದಾಳಿಗೆ ಸಂಚು ರೂಪಿಸಿದ್ದ, ಪಾಕ್ ಐಎಸ್ಐ ಬೆಂಬಲಿತ ಗುಂಪು: ವಿದೇಶಿ ಮೂಲದ 10 ಹ್ಯಾಂಡ್ಲರ್‌ಗಳ ಬಂಧನ

ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿರುವ ಲುಧಿಯಾನ ಕಮಿಷನರೇಟ್ ಪೊಲೀಸರು, ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಬೆಂಬಲಿತ ಗ್ರೆನೇಡ್ ದಾಳಿ ಘಟಕದ 10 ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಅವರಿಂದ ಸ್ಪೋಟಕಗಳನ್ನು ವಶಕ್ಕೆ ಪಡೆದಿದ್ದಾರೆ.  ನವೆಂಬರ್...

ಗಾಜಾದಲ್ಲಿ ಮುಂದುವರೆದ ಪ್ಯಾಲೆಸ್ತೀನಿಯನ್ ಮಕ್ಕಳ ಕಾಣೆ ಪ್ರಕರಣ: ಮಕ್ಕಳ ಹಕ್ಕುಗಳ ಗುಂಪು

ಬುಧವಾರ ಪ್ಯಾಲೆಸ್ತೀನಿಯನ್ ಹಕ್ಕುಗಳ ಗುಂಪಿನ ವರದಿಯ ಪ್ರಕಾರ, ಇತ್ತೀಚಿನ ತಿಂಗಳುಗಳಲ್ಲಿ ಗಾಜಾದಿಂದ ಕನಿಷ್ಠ ಆರು ಮಕ್ಕಳು ಕಣ್ಮರೆಯಾಗಿದ್ದಾರೆ ಎಂದು 'ಮಕ್ತೂಬ್‌ ಮೀಡಿಯಾ' ವರದಿ ಮಾಡಿದೆ. ಕಾಣೆಯಾದ ಮಕ್ಕಳ ಕುಟುಂಬಗಳು ಈ ಪ್ರದೇಶದಲ್ಲಿನ ತನ್ನ ಮಿಲಿಟರಿ...

ರೂ. 15 ಲಕ್ಷ ಲಂಚ ಪಡೆದ ಪ್ರಕರಣ : ನ್ಯಾಯಾಧೀಶನ ಮೇಲೆ ಕೇಸ್, ಕೋರ್ಟ್ ಗುಮಾಸ್ತ ಅರೆಸ್ಟ್

ವಾಣಿಜ್ಯ ಮೊಕದ್ದಮೆಯೊಂದರಲ್ಲಿ ಅನುಕೂಲಕರ ಆದೇಶವನ್ನು ಪಡೆಯಲು 15 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮತ್ತು ಸ್ವೀಕರಿಸಿದ ಆರೋಪದ ಮೇಲೆ ಮುಂಬೈ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮಜಗಾಂವ್ ಸಿವಿಲ್ ಮತ್ತು ಸೆಷನ್ಸ್...

ಅಲಿಘರ್| ಶಾಲೆಯಲ್ಲಿ ‘ವಂದೇ ಮಾತರಂ’ ಹಾಡುವುದಕ್ಕೆ ಆಕ್ಷೇಪಿಸಿದ ಶಿಕ್ಷಕನ ಅಮಾನತು

ಉತ್ತರ ಪ್ರದೇಶದ ಶಾಹಪುರ್ ಕುತುಬ್‌ನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 'ವಂದೇ ಮಾತರಂ' ಹಾಡುವುದನ್ನು ಆಕ್ಷೇಪಿಸಿದ ಆರೋಪದ ಮೇಲೆ ಸರ್ಕಾರಿ ಶಾಲಾ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ರಾಷ್ಟ್ರಗೀತೆಯ ನಂತರ ವಂದೇಮಾತರಂ...

ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ ನೀಡಿದ ಹೈಕೋರ್ಟ್

ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನಕ್ಕೆ ಕರ್ನಾಟಕ ಹೈಕೋರ್ಟ್ ನ ಕಲಬುರಗಿ ಪೀಠ ಷರತ್ತುಬದ್ಧ ಅನುಮತಿ ನೀಡಿದೆ. ಇದರಿಂದ ತೀವ್ರ ಪ್ರತಿಷ್ಠೆಯ ವಿಷಯವಾಗಿದ್ದ ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನಕ್ಕೆ ದಿನಾಂಕ ನಿಗದಿಯಾಗಿದೆ. ನವೆಂಬರ್ 16ರ‌ ಭಾನುವಾರ...

ಯಡಿಯೂರಪ್ಪ ವಿರುದ್ದದ ಪೋಕ್ಸೋ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಈ ಮೂಲಕ ನ್ಯಾಯಮೂರ್ತಿ ಎಂ.ಐ ಅರುಣ್ ಅವರು, ವಿಚಾರಣಾ ನ್ಯಾಯಾಲಯ ಸಂಜ್ಞೇ (cognisance)ಪರಿಗಣಿಸಿ ಯಡಿಯೂರಪ್ಪ ಅವರಿಗೆ ಸಮನ್ಸ್ ಜಾರಿ...

ಗುಜರಾತ್| ಗೋಹತ್ಯೆ ಮಾಡಿದ್ದಕ್ಕಾಗಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ; ರೂ.18 ಲಕ್ಷ ದಂಡ

ಗುಜರಾತ್‌ನ ಅಮ್ರೇಲಿಯಲ್ಲಿರುವ ಸೆಷನ್ಸ್ ನ್ಯಾಯಾಲಯವು, ಗುಜರಾತ್ ಪ್ರಾಣಿ ಸಂರಕ್ಷಣಾ ಕಾಯ್ದೆಯಡಿ ಗೋಹತ್ಯೆ ಮಾಡಿದ್ದಕ್ಕಾಗಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಗೋ ಕುಟುಂಬಕ್ಕೆ ಸೇರಿದ ಪ್ರಾಣಿಗಳ ಹತ್ಯೆಯನ್ನು ಕಾನೂನು...