ವಿನೇಶ್ ಫೋಗಟ್, ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಪ್ರತಿಭಟನಾ ನಿರತ ಕುಸ್ತಿಪಟುಗಳ ಮೇಲೆ ದಾಖಲಾಗಿರುವ ಆರೋಪಗಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ‘ಆಕ್ಷನ್ ಟೇಕನ್ ರಿಪೋರ್ಟ್’ ಸಲ್ಲಿಸಿದ್ದಾರೆ.
ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ನನ್ನು ಬಂಧಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ನೂತನ ಸಂಸತ್ ಭವನ ಉದ್ಘಾಟನೆ ದಿನ ಹಲವು ಬೆಳವಣಿಗೆಗಳಿಗೆ ಸಾಕ್ಷಿಯಾಗಿತ್ತು. ನೂತನ ಸಂಸತ್ ಭವನದತ್ತ ತೆರಳಿದ್ದ ಕುಸ್ತಿಪಟುಗಳನ್ನು ತಡೆದು ಬಂಧಿಸಲಾಗಿತ್ತು. ಅಲ್ಲದೆ ಕುಸ್ತಿಪಟುಗಳು ಪ್ರಧಾನಿ ಮೋದಿಯವರಿಗೆ ಬೆದರಿಕೆ ಹಾಕಿದ್ದಾರೆಂದು ವ್ಯಕ್ತಿಯೊಬ್ಬರು ದೂರು ಸಲ್ಲಿಸಿದ್ದರು.
“ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುವ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕುಸ್ತಿಪಟುಗಳು ಘೋಷಣೆಗಳನ್ನು ಕೂಗಿದ್ದಾರೆ” ಎಂದು ದೂರುದಾರರು ಆರೋಪಿಸಿದ್ದಾರೆ. “ಇದು ದ್ವೇಷ ಭಾಷಣದ ವರ್ಗಕ್ಕೆ ಸೇರಿದೆ” ಎಂದು ದೂರುದಾರರು ವಾದಿಸಿದ್ದಾರೆ.
“ಗೌರವಾನ್ವಿತ ಭಾರತದ ಪ್ರಧಾನ ಮಂತ್ರಿಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬುದು ಸ್ಪಷ್ಟವಾಗಿದೆ” ಎಂದು ದೂರುದಾರರು ಆರೋಪಿಸಿದ್ದರು.
ಇದಕ್ಕೆ ಸ್ಪಷ್ಟನೆ ನೀಡಿ ವರದಿ ನೀಡಿರುವ ದೆಹಲಿ ಪೊಲೀಸರು, “ದೂರುದಾರರು ವಿಡಿಯೊ ಒದಗಿಸಿದ್ದಾರೆ. ಆದರೆ ಆ ವಿಡಿಯೊದಲ್ಲಿ ಕುಸ್ತಿಪಟುಗಳು ಘೋಷಣೆ ಕೂಗಿದ್ದು ಕಂಡುಬಂದಿಲ್ಲ. ಯಾವುದೇ ದ್ವೇಷದ ಭಾಷಣವನ್ನೂ ಮಾಡಿಲ್ಲ” ಎಂದಿದ್ದಾರೆ.
ಇದನ್ನೂ ಓದಿರಿ: ‘ಫೋಟೋ ತೆಗೆಸಿಕೊಳ್ಳುವಾಗ ಬ್ರಿಜ್ಭೂಷಣ್ ನಿತಂಬ ಸ್ಪರ್ಶಿಸಿದ್ದ’: ಕುಸ್ತಿಪಟುವಿನ ಆರೋಪ ದೃಢೀಕರಿಸಿದ ಅಂತಾರಾಷ್ಟ್ರೀಯ ರೆಫರಿ
“ದೂರುದಾರರು ಒದಗಿಸಿದ ದೂರಿನ ವಿಷಯದಲ್ಲಾಗಲೀ, ವೀಡಿಯೊ ಕ್ಲಿಪ್ನಲ್ಲಾಗಲೀ ದ್ವೇಷದ ಭಾಷಣದ ಯಾವುದೇ ಅಪರಾಧ ಕಂಡುಬಂದಿಲ್ಲ. ಪ್ರತಿಭಟನಾಕಾರ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ, ವಿನೇಶ್ ಫೋಗಟ್ ಮತ್ತು ಇತರ ಕುಸ್ತಿಪಟುಗಳು ಅಂತಹ ಯಾವುದೇ ಘೋಷಣೆಯನ್ನು ಕೂಗಿಲ್ಲ” ಎಂದು ಪೊಲೀಸರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
ಅರ್ಜಿಯನ್ನು ವಜಾಗೊಳಿಸುವಂತೆ ಪೊಲೀಸರು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ. ‘ಅಟಲ್ ಜನ್ ಪಾರ್ಟಿ’ಯ ರಾಷ್ಟ್ರೀಯ ಮುಖ್ಯಸ್ಥ ಎಂದು ಹೇಳಿಕೊಳ್ಳುವ ಬಮ್ಬಮ್ ಮಹಾರಾಜ್ ನೌಹತಿಯಾ ಅವರ ಪರವಾಗಿ ದೂರು ಸಲ್ಲಿಕೆಯಾಗಿತ್ತು. ನ್ಯಾಯಾಲಯವು ಪ್ರಕರಣವನ್ನು ಜುಲೈ 7ಕ್ಕೆ ಮುಂದೂಡಿದ್ದು, ಹೆಚ್ಚಿನ ವಿಚಾರಣೆ ನಡೆಸಲಿದೆ.
ಬ್ರಿಜ್ ಭೂಷಣ್ ಬಂಧನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಕುಸ್ತಿಪಟುಗಳ ನಡುವೆ ಬಿಕ್ಕಟ್ಟು ಏರ್ಪಟ್ಟಿದೆ. ಒಂದಿಷ್ಟು ಮಾತುಕತೆಗಳು ಜರುಗಿದ್ದು ಜೂನ್ 15ರವರೆಗೆ ಹೋರಾಟವನ್ನು ಕುಸ್ತಿಪಟುಗಳು ಹಿಂಪಡೆದಿದ್ದಾರೆ. ಜೂನ್ 15ರಂದು ಪ್ರಕರಣದ ತನಿಖೆಯನ್ನು ಪೊಲೀಸರು ಪೂರ್ಣಗೊಳಿಸಲಿದ್ದಾರೆ ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.