ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರನ್ನು ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕರೆದೊಯ್ದಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಅವರನ್ನು ದಕ್ಷಿಣ ಮುಂಬೈನ ಬಲ್ಲಾರ್ಡ್ ಪಿಯರ್ ಕಚೇರಿಗೆ ಕರೆದೊಯ್ಯಲಾಗಿದೆ.
ಬ್ಯಾಂಕ್ ಮತ್ತು ಅದರ ಠೇವಣಿದಾರರನ್ನು ಬಿಕ್ಕಟ್ಟಿಗೆ ಸಿಲುಕಿಸಿರುವ ಕೆಟ್ಟ ಸಾಲಗಳಿಗೆ ಸಂಬಂಧಿಸಿದಂತೆ ಶುಕ್ರವಾರ ಅವರ ನಿವಾಸವನ್ನು ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ಜಾರಿ ನಿರ್ದೇಶನಾಲಯ ಕಪೂರ್ ನಿವಾಸದ ಮೇಲೆ ದಾಳಿ ನಡೆಸಿ ಒಂದು ದಿನದ ನಂತರ ರಿಸರ್ವ್ ಬ್ಯಾಂಕ್ ಯೆಸ್ ಬ್ಯಾಂಕ್ ಅನ್ನು ನಿಷೇಧಕ್ಕೆ ಒಳಪಡಿಸಿತ್ತು. ಆರ್ಬಿಐ ಯೆಸ್ ಬ್ಯಾಂಕ್ ಠೇವಣಿದಾರರಿಗೆ ಹಣ ಹಿಂತೆಗೆದುಕೊಳ್ಳುವಿಕೆಯನ್ನು ಎಪ್ರಿಲ್ 3 ರ ವರಗೆ 50,000 ರೂ.ಗೆ ನಿಗದಿಪಡಿಸಿದೆ.
ಅಧಿಕಾರಿಯೊಬ್ಬರ ಪ್ರಕಾರ, ಜಾರಿ ನಿರ್ದೇಶನಾಲಯ ಅವರ ನಿವಾಸ ಮತ್ತು ಕಚೇರಿ ಆವರಣದಿಂದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಸಾಲ ಮಂಜೂರು ಮಾಡುವ ಬಗ್ಗೆ ರಾಣಾ ಅವರ ಆಪ್ತ ಸಂಬಂಧಿಗೆ ದೊರೆತ ಕಿಕ್ಬ್ಯಾಕ್ಗಳನ್ನು ತನಿಖೆ ನಡೆಸುತ್ತಿದೆ ಎಂದು “ಹಿಂದುಸ್ತಾನ್ ಟೈಂಮ್ಸ್” ವರದಿ ಮಾಡಿದೆ.
ಆರ್ಬಿಐ ಯೆಸ್ ಬ್ಯಾಂಕ್ನ ಮಂಡಳಿಯನ್ನು ಬದಿಗಿಟ್ಟು ಮುಂದಿನ 30 ದಿನಗಳವರೆಗೆ ತನ್ನ ವ್ಯವಹಾರಗಳನ್ನು ನಡೆಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಪ್ರಶಾಂತ್ ಕುಮಾರ್ ಅವರನ್ನು ನೇಮಕ ಮಾಡಿದೆ.
ಶನಿವಾರದ ಮತ್ತೊಂದು ಬೆಳವಣಿಗೆಯಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸರ್ಕಾರದ ಯೋಜನೆಯಂತೆ ಯೆಸ್ ಬ್ಯಾಂಕಿನ ಶೇ 49 ರಷ್ಟು ಪಾಲನ್ನು ತೆಗೆದುಕೊಳ್ಳುತ್ತಿದೆ.