ಡೆಲಿವರಿ ಬಾಯ್ ಹಿಂದೂವಲ್ಲದ ಕಾರಣಕ್ಕೆ ಜೊಮ್ಯಾಟೊ ಆರ್ಡರ್ ರದ್ದು ಮಾಡಿದ ಮಧ್ಯಪ್ರದೇಶದ ಜಬಲ್ ಪುರದ ನಿವಾಸಿ ಯುವಕನಿಗೆ ನೋಟಿಸ್ ಕಳಿಸಲು ಪೊಲೀಸ್ ಇಲಾಖೆ ತಯಾರಿ ನಡೆಸಿದೆ. ಜಬಲ್ ಪುರದ ಎಸ್.ಪಿ ಯಾದ ಅಮಿತ್ ಸಿಂಗ್ ರವರು ಸ್ವಯಂಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಮುಂದಾಗಿದ್ದಾರೆ. ಈ ಘಟನೆಯು ನಿಜವಾಗಿದ್ದರೆ ಅದು ಇನ್ನೊಂದು ಧರ್ಮದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೃತ್ಯವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಆಹಾರಕ್ಕೆ ಧರ್ಮವಿಲ್ಲ, ಆಹಾರವೇ ಧರ್ಮ ಎಂದು ಟ್ವೀಟ್ ಮಾಡುವ ಮೂಲಕ ಸಾವಿರಾರು ಜನರ ಮನಗೆದ್ದಿದ್ದ ಜೊಮ್ಯಾಟೋ ಕುರಿತ ಪರ-ವಿರುದ್ಧದ ಚರ್ಚೆ ಇಂದೂ ಮುಂದುವರೆದಿದೆ. ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿ ಜೊಮ್ಯಾಟೋ 60 ಸಾವಿರದಷ್ಟು ಟ್ರೆಂಡ್ ಆದರೆ ಬಾಯ್ಕಟ್ ಜೊಮ್ಯಾಟೋ ಕೂಡ 51 ಸಾವಿರದಷ್ಟು ಟ್ರೆಂಡ್ ಆಗಿದೆ.
ಹಿಂದೂ ಅಲ್ಲದ ಮುಸ್ಲಿಂ ರೈಡರ್ ಆಹಾರ ತರುವುದನ್ನು ಬದಲಿಸಿಲು ಸೂಚಿಸಿದ್ದ ಅಮಿತ್ ಶುಕ್ಲಾ ಎಂಬ ಗ್ರಾಹಕನ ಕೋರಿಕೆಯನ್ನು ಜೊಮ್ಯಾಟೋ ತಿರಸ್ಕರಿಸಿತ್ತು ಮಾತ್ರವಲ್ಲ ಈ ಕಾರಣಕ್ಕಾಗಿ ಕ್ಯಾನ್ಸಲ್ ಮಾಡಿದರೆ ಹಣ ಮರುಪಾವತಿಸುವುದಿಲ್ಲ ಎಂದು ಹೇಳಿತ್ತು. ಇದನ್ನು ಅವರು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು.
ಅದಕ್ಕೆ ಜೊಮ್ಯಾಟೋ ಮತ್ತು ಅದರ ಸ್ಥಾಪಕ “ಭಾರತದ ವೈವಿಧ್ಯತೆ, ನಮ್ಮ ಗ್ರಾಹಕರು ಮತ್ತು ಪಾಲುದಾರರ ಅಮೂಲ್ಯ ಘನತೆಯ ಬಗ್ಗೆ ನಮಗೆ ಹೆಮ್ಮೆಯಿದೆ. ಈ ನಮ್ಮ ಮೌಲ್ಯಗಳಿಗೆ ಅಡ್ಡಿಬರುವ/ತೊಡಕಾಗುವ ಯಾವುದೇ ವ್ಯವಹಾರವನ್ನು ಕಳೆದುಕೊಳ್ಳಲು ನಮಗೆ ಬೇಸರವಿಲ್ಲ” ಎಂದು ಟ್ವೀಟ್ ಮಾಡಿದ್ದರು.
ಜೊಮ್ಯಾಟೊ ನಡೆಯನ್ನು ಮೆಚ್ಚಿ ಹಲವರು ಇಂದಿನಿಂದ ಜ್ಯೊಮ್ಯಾಟೊದಲ್ಲಿಯೇ ಆರ್ಡರ್ ಮಾಡುತ್ತೇವೆ ಎಂದು ಬರೆದುಕೊಂಡಿದ್ದರು. ಯುವ ಚಿಂತಕ ಧೃವ್ ರಾಠೀ, ಆಕಾಶ್ ಬ್ಯಾನರ್ಜಿ, ಬಾಲಿವುಡ್ ನಟಿ ಸ್ವರ ಭಾಸ್ಕರ್, ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್, ಕಾಶ್ಮೀರದ ಓಮರ್ ಅಬ್ದುಲ್ಲಾ ಇನ್ನು ಹಲವಾರು ಜನ ಜ್ಯೊಮ್ಯಾಟೊ ನಿಲುವನ್ನು ಬೆಂಬಲಿಸಿದ್ದರು. ಒಂದಾದರು ಜ್ಯೊಮ್ಯಾಟೊಗೆ ಆರ್ಡರ್ ಮಾಡಿ ಎಂದು ಕರೆ ಸಹ ನೀಡಿದ್ದರು.
ಅದು ಟ್ಟಿಟ್ಟರ್ ನಲ್ಲಿ ಟ್ರೆಂಡ್ ಆಗುತ್ತಲೇ ಹಿಂದುತ್ವ ಪ್ರತಿಪಾದಕರು ಟ್ವಿಟ್ಟರ್ ಗೆ ಲಗ್ಗೆ ಇಟ್ಟಿದ್ದಾರೆ. ಬಾಯ್ಕಟ್ ಜೊಮ್ಯಾಟೋ ಎಂದು ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡಲು ಮುಂದಾಗಿದ್ದಾರೆ. ಮುಸ್ಲಿಂಮರೇಕೆ ಹಲಾಲ್ ಕಟ್ ಆದ ಆಹಾರವನ್ನೇ ಬಳಸಬೇಕು ಎಂದೆಲ್ಲಾ ಚೇಡಿಸಿದ್ದಲ್ಲದೇ ತಮ್ಮ ಮೊಬೈಲ್ ನಲ್ಲಿನ ಜ್ಯೊಮ್ಯಾಟೊ ಆಪ್ ಅನ್ನು ಅನ್ ಇನ್ಸ್ಟಾಲ್ ಮಾಡುವ ಫೋಟೋಗಳನ್ನು ಹಾಕಿದ್ದಾರೆ. ಜೊತೆಗೆ ಉಬರ್ ಈಟ್ಸ್ ಆಪ್ ಹಾಕಿಕೊಂಡಿರುವುದಾಗಿ ತಿಳಿಸಿದ್ದಾರೆ.