ಜೂನಿಯರ್ ಅಥ್ಲೆಟಿಕ್ಸ್ ಕೋಚ್ ನೀಡಿದ ದೂರಿನ ಆಧಾರದ ಮೇಲೆ ಚಂಡೀಗಢ ಪೊಲೀಸರು ಹರಿಯಾಣದ ಕ್ರೀಡಾ ಸಚಿವರಾದ ಸಂದೀಪ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ.
ವಿರೋಧ ಪಕ್ಷವಾದ ಇಂಡಿಯನ್ ನ್ಯಾಷನಲ್ ಲೋಕ ದಳ (ಐಎನ್ಎಲ್ಡಿ) ಕಚೇರಿಯಲ್ಲಿ ಮಹಿಳೆ ಪತ್ರಿಕಾಗೋಷ್ಠಿ ನಡೆಸಿ, “ಮನೋಹರ್ ಲಾಲ್ ಖಟ್ಟರ್ ಸರ್ಕಾರವು ಸಂದೀಪ್ ಸಿಂಗ್ ಅವರನ್ನು ತಕ್ಷಣವೇ ವಜಾಗೊಳಿಸಬೇಕು ಮತ್ತು ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಒಲಿಂಪಿಯನ್ ಹಾಗೂ ಭಾರತ ಹಾಕಿ ತಂಡದ ಮಾಜಿ ನಾಯಕ ಸಂದೀಪ್ ಸಿಂಗ್ ವಿರುದ್ಧ ಸೆಕ್ಟರ್ 26 ಪೊಲೀಸ್ ಠಾಣೆಯಲ್ಲಿ ಶನಿವಾರ ರಾತ್ರಿ ಎಫ್ಐಆರ್ ದಾಖಲಾಗಿದೆ. ಆರೋಪಗಳನ್ನು ತಳ್ಳಿಹಾಕಿರುವ ಸಚಿವರು, ಆಧಾರ ರಹಿತ ಎಂದು ಹೇಳಿದ್ದಾರೆ.
ದೂರು ನೀಡಿರುವ ಮಹಿಳೆಯು, ತನಗೆ ಭದ್ರತೆ ಒದಗಿಸಬೇಕು ಎಂದು ಕೋರಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಕೂಡ ಈ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ್ದಾರೆ.
ಮಹಿಳಾ ಕೋಚ್ ಶುಕ್ರವಾರ ಚಂಡೀಗಢ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸಚಿವರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಸಂತ್ರಸ್ತ ಮಹಿಳೆಯು ಪೊಲೀಸ್ ವರಿಷ್ಠಾಧಿಕಾರಿ (ನಗರ) ಶ್ರುತಿ ಅರೋರಾ ಅವರಿಗೆ ದೂರು ಸಲ್ಲಿಸಿದ್ದಾರೆ. ನಂತರ ದೂರುದಾರ ಮಹಿಳೆಯು ಎಸ್ಪಿ ಅರೋರಾ ಅವರೊಂದಿಗೆ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಯುಟಿ) ಮನೀಶಾ ಚೌಧರಿ ಅವರನ್ನು ಭೇಟಿಯಾದರು. ಮಹಿಳೆ ಇಬ್ಬರು ಅಧಿಕಾರಿಗಳೊಂದಿಗೆ ಕನಿಷ್ಠ ಒಂದು ಗಂಟೆ ಕಾಲ ಸಂವಾದ ನಡೆಸಿದರು ಎಂದು ವರದಿಯಾಗಿದೆ.
ದೂರು ದಾಖಲಿಸಿದ ನಂತರ ಮಹಿಳಾ ಕೋಚ್, “ನನಗೆ ನಿಷ್ಪಕ್ಷಪಾತ ತನಿಖೆಯ ಭರವಸೆ ನೀಡಲಾಗಿದೆ. ನನ್ನ ಭದ್ರತೆಯ ವಿಚಾರವನ್ನೂ ಪ್ರಸ್ತಾಪಿಸಿದ್ದೇನೆ. ನನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ನನಗೆ ಬೆದರಿಕೆ ಸಂದೇಶಗಳು ಬರುತ್ತಿವೆ. ಭಯದಿಂದ, ನಾನು ಫೋನ್ ಕರೆಗಳನ್ನು ಸ್ವೀಕರಿಸುತ್ತಿಲ್ಲ” ಎಂದು ತಿಳಿಸಿದ್ದಾರೆ.
“ಸಚಿವರು ಫೆಬ್ರವರಿ ಮತ್ತು ನವೆಂಬರ್ ನಡುವೆ ತಮ್ಮ ಕಚೇರಿ ಮತ್ತು ಇತರ ಸ್ಥಳಗಳಲ್ಲಿ ನನಗೆ ಕಿರುಕುಳ ನೀಡಿದ್ದಾರೆ. ಒಮ್ಮೆ, ಅವರು ಸೆಕ್ಟರ್ 7ರಲ್ಲಿ ಭೇಟಿಯಾಗುವಂತೆ ನನಗೆ ತಿಳಿಸಿದ್ದರು. ಅವರು ಹೆಚ್ಚಾಗಿ ನನ್ನೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಸಂವಹನ ನಡೆಸಿದರು. ಚಂಡೀಗಢದಲ್ಲಿರುವ ಅವರ ಮನೆಯಲ್ಲಿ ನನ್ನನ್ನು ಅನುಚಿತವಾಗಿ ಸ್ಪರ್ಶಿಸಿದರು. ನಾನು ಚಂಡೀಗಢ ಪೊಲೀಸರಿಗೆ ಎಲ್ಲ ಘಟನೆಗಳನ್ನು ವಿವರಿಸಿದ್ದೇನೆ” ಎಂದಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ ಅಥ್ಲೀಟ್ ಆಗಿರುವ ಸಂತ್ರಸ್ತ ಮಹಿಳೆಯು, “ಮುಂಬರುವ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕಗಳನ್ನು ಗಳಿಸುವ ಭರವಸೆ ನೀಡುವಂತೆ ನನಗೆ ಒತ್ತಾಯಿಸಲಾಯಿತು. ಫೇಲ್ ಆದರೆ ಕ್ರೀಡಾ ಇಲಾಖೆ ವರ್ಗಾವಣೆ ಮಾಡಲಿದೆ ಎಂದು ತಿಳಿಸಿದ್ದರು. ಟ್ರ್ಯಾಕ್ ಇಲ್ಲದ ನನ್ನ ತವರು ಜಿಲ್ಲೆಗೆ ನಾನು ಇತ್ತೀಚೆಗೆ ವರ್ಗಾವಣೆಗೊಂಡಿದ್ದೇನೆ. ಕಿರುಕುಳ ಎದುರಿಸುತ್ತಿರುವುದು ನಾನಷ್ಟೇ ಅಲ್ಲ. ರಾಜ್ಯ ಕ್ರೀಡಾ ಇಲಾಖೆಯಲ್ಲಿ ಇನ್ನೂ ಅನೇಕರು ಇಂತಹ ಕಿರುಕುಳ ಎದುರಿಸುತ್ತಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.
ಚಂಡೀಗಢ ಪೊಲೀಸ್ ವಕ್ತಾರರು, “ಹರಿಯಾಣ ಕ್ರೀಡಾ ಸಚಿವರ ವಿರುದ್ಧ ಹರಿಯಾಣದ ಮಹಿಳಾ ಕೋಚ್ ನೀಡಿದ ದೂರಿನ ಅನ್ವಯ ಐಪಿಸಿಯ ಸೆಕ್ಷನ್ 354, 354 ಎ, 354 ಬಿ, 342, 506 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ” ಎಂದು ತಿಳಿಸಿದ್ದಾರೆ.
“ಸಂದೀಪ್ ಸಿಂಗ್ ನನ್ನನ್ನು ಮೊದಲ ಬಾರಿಗೆ ಜಿಮ್ನಲ್ಲಿ ನೋಡಿದ್ದರು. ನಂತರ ಇನ್ಸ್ಸ್ಟಾಗ್ರಾಮ್ ಮೂಲಕ ಸಂಪರ್ಕಿಸಿದ್ದರು” ಎಂದು ದೂರುದಾರರು ಹೇಳಿದ್ದಾರೆ.
“ಭೇಟಿಯಾಗುವಂತೆ ಸಚಿವರು ಒತ್ತಾಯಿಸುತ್ತಿದ್ದರು. ಅವರು ನನಗೆ ಇನ್ಸ್ಟಾಗ್ರಾಮ್ನಲ್ಲಿ ಸಂದೇಶ ಕಳುಹಿಸಿದ್ದಾರೆ. ನನಗೆ ಸಿಗಬೇಕಾದ ನ್ಯಾಷನಲ್ ಗೇಮ್ಸ್ ಪ್ರಮಾಣಪತ್ರವು ಬಾಕಿ ಉಳಿದಿತ್ತು. ಈ ನಿಟ್ಟಿನಲ್ಲಿ ಭೇಟಿಯಾಗಲು ಬಯಸಿದ್ದೆನು” ಎಂದಿದ್ದಾರೆ.
“ದುರದೃಷ್ಟವಶಾತ್, ನನ್ನ ಫೆಡರೇಶನ್ನಿಂದ ನನ್ನ ಪ್ರಮಾಣಪತ್ರವನ್ನು ತಪ್ಪಾಗಿ ಇರಿಸಲಾಗಿದೆ ಮತ್ತು ನಾನು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಅವುಗಳನ್ನು ತೆಗೆದುಕೊಳ್ಳುತ್ತಿದ್ದೇನೆ” ಎಂದಿದ್ದಾರೆ.
ಕೊನೆಗೆ ತನ್ನ ಬಳಿಯಿದ್ದ ಇತರ ಕೆಲವು ದಾಖಲೆಗಳೊಂದಿಗೆ ಸಚಿವರ ಗೃಹ ಕಚೇರಿಯಲ್ಲಿ ಭೇಟಿಯಾಗಲು ಒಪ್ಪಿಕೊಂಡೆ ಎಂದು ಮಹಿಳೆ ಹೇಳಿದ್ದಾರೆ. “ನಾನು ಅಲ್ಲಿಗೆ ಹೋದಾಗ ಸಚಿವರು ಲೈಂಗಿಕ ದುರ್ವರ್ತನೆ ತೋರಿದ್ದಾರೆ” ಎಂದು ಆರೋಪಿಸಿದ್ದಾರೆ.
ಸಂದೀಪ್ ಸಿಂಗ್ ಸಚಿವರಷ್ಟೇ ಅಲ್ಲ, ರಾಷ್ಟ್ರೀಯ ಹಾಕಿ ತಂಡದ ಮಾಜಿ ನಾಯಕ
ಕುರುಕ್ಷೇತ್ರದ ಪೆಹೋವಾದಿಂದ ಹಾಲಿ ಬಿಜೆಪಿ ಶಾಸಕರಾಗಿರುವ ಸಂದೀಪ್ ಸಿಂಗ್ ಅವರು ವೃತ್ತಿಪರ ಫೀಲ್ಡ್ ಹಾಕಿ ಆಟಗಾರರಾಗಿದ್ದಾರೆ. ಭಾರತೀಯ ರಾಷ್ಟ್ರೀಯ ಹಾಕಿ ತಂಡದ ನಾಯಕರಾಗಿದ್ದರು.
2018ರಲ್ಲಿ ಸಂದೀಪ್ ಸಿಂಗ್ ಅವರ ಜೀವನ ಕಥೆ ಆಧಾರಿಸಿ ‘ಸೂರ್ಮಾ’ ಎಂಬ ಬಯೋಪಿಕ್ ಬಿಡುಗಡೆಯಾಗಿತ್ತು. ಜನಪ್ರಿಯ ಪಂಜಾಬಿ ಗಾಯಕ ಮತ್ತು ನಟ ದಿಲ್ಜಿತ್ ದೋಸಾಂಜ್ ಅವರು ಸಂದೀಪ್ ಅವರ ಪಾತ್ರದಲ್ಲಿ ಅಭಿನಯಿಸಿದ್ದರು. ಸಂದೀಪ್ ಅವರು ಎಂಟಿವಿ ರೋಡೀಸ್ ಎಂಬ ರಿಯಾಲಿಟಿ ಟಿವಿ ಶೋನಲ್ಲಿ ತೀರ್ಪುಗಾರರಾಗಿದ್ದರು.
ಸಂದೀಪ್ ಅವರು 20 ವರ್ಷದವರಾಗಿದ್ದಾಗ ಆಕಸ್ಮಿಕವಾಗಿ ಬಂದೂಕಿನ ಗುಂಡಿಗೆ ಸಿಲುಕಿ ಗಾಯಗೊಂಡಿದ್ದರು. ನಂತರ ಅದ್ಭುತವಾಗಿ ಚೇತರಿಸಿಕೊಂಡು ಖ್ಯಾತರಾಗಿ ಬೆಳೆದರು. 2007ರ ಹಾಕಿ ವರ್ಲ್ಡ್ ಕಪ್ಗೆ ಕೇವಲ ಎರಡು ದಿನಗಳು ಇರುವಾಗ ರೈಲ್ವೆ ಪೋಲೀಸ್ ಫೋರ್ಸ್ನ ಸಹಾಯಕ ಸಬ್-ಇನ್ಸ್ಪೆಕ್ಟರ್ನಿಂದ ಆಕಸ್ಮಿಕವಾಗಿ ಗುಂಡಿನೇಟು ತಿದ್ದಿದ್ದರು.