ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಭದ್ರತಾ ಬೆಂಗಾವಲು ಪಡೆ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ 13 ಜನರನ್ನು ಬಂಧಿಸಲಾಗಿದೆ ಎಂದು ಬಿಹಾರ ಪೊಲೀಸರು ಭಾನುವಾರ ತಿಳಿಸಿದ್ದಾರೆ. ನಿತೀಶ್ ಕುಮಾರ್ ಅವರು ಆ ವೇಳೆ ಕಾರಿನಲ್ಲಿ ಉಪಸ್ಥಿತರಿರಲಿಲ್ಲ ಎಂದು ವರದಿಯಾಗಿದೆ.
ಆಗಸ್ಟ್ 22 ರಂದು ನಿತೀಶ್ ಕುಮಾರ್ ಅವರ ಭೇಟಿಗೆ ಮುನ್ನ ಭದ್ರತಾ ವ್ಯವಸ್ಥೆಗಳನ್ನು ಗಮನಿಸಲು ಬೆಂಗಾವಲು ಪಡೆ ಗಯಾ ನಗರಕ್ಕೆ ತೆರಳುತ್ತಿದ್ದಾಗ ಶನಿವಾರ ಈ ಘಟನೆ ನಡೆದಿದೆ.
Angry mob pelted stones on CM Nitish Kumar carcade in #Patna, Nitish Kumar was not in the convoy. pic.twitter.com/BTMrr4mfdz
— Nikhil Choudhary (@NikhilCh_) August 21, 2022
ಕಾಣೆಯಾದ ಬಾಲಕನ ಶವ ಚರಂಡಿಯಲ್ಲಿ ಪತ್ತೆಯಾದ ಬಳಿಕ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ತಡೆ ನಡೆಸಿದ ಸ್ಥಳೀಯರು ಸೊಹ್ಗಿ ಗ್ರಾಮದಲ್ಲಿ ಕಲ್ಲು ತೂರಾಟ ಮಾಡಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಗ್ರಾಮಸ್ಥರು ಕಲ್ಲು ತೂರಾಟ ನಡೆಸಿ ವಾಹನಗಳಿಗೆ ಮರದ ದೊಣ್ಣೆಗಳಿಂದ ಹೊಡೆದಿದ್ದಾರೆ ಎಂದು ವರದಿಯಾಗಿದೆ.
ಆಗಸ್ಟ್ 7ರಂದು ನಾಪತ್ತೆಯಾಗಿದ್ದ ಬಾಲಕನನ್ನು ಸುನ್ನಿ ಕುಮಾರ್ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಕೃಷ್ಣ ಕುಮಾರ್ ತಿಳಿಸಿದ್ದಾರೆ.
“ಬಾಲಕನ ಶವವು ಬೇರ್ ಪೊಲೀಸ್ ಠಾಣೆ ವ್ಯಾಪ್ತಿಯ ಚರಂಡಿಯಲ್ಲಿ ಪತ್ತೆಯಾಗಿದೆ ಎಂದು ಗ್ರಾಮಸ್ಥರು ತಿಳಿದರು. ಆ ಸಮಯದಲ್ಲಿ ಹಾದುಹೋದ ಭದ್ರತಾ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ಜನರು ಪ್ರತಿಭಟನೆಯನ್ನು ಪ್ರಾರಂಭಿಸಿದರು…” ಎಂದು ಕೃಷ್ಣಕುಮಾರ್ ಹೇಳಿರುವುದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಬೆಂಗಾವಲು ಪಡೆಯಲ್ಲಿದ್ದ ಕೆಲವು ಭದ್ರತಾ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮೂರು ವಾಹನಗಳಿಗೆ ಹಾನಿಯಾಗಿದೆ. ಅರ್ಧ ಗಂಟೆ ತಡವಾಗಿ ಬೆಂಗಾವಲು ಪಡೆ ಗಯಾಕ್ಕೆ ತೆರಳಿತು.