ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಕೃಷಿ ಕಾನೂನುಗಳ ವಿರುದ್ಧ ಸತತ ಒಂದು ವರ್ಷಕ್ಕೂ ಹೆಚ್ಚು ಕಾಲ ದಿಟ್ಟ ಹೋರಾಟ ನಡೆಸಿ ಜಯ ಕಂಡಿರುವ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದ ರೈತ ಸಂಘಟನೆಗಳು ಇಂದು ಮತ್ತೊಮ್ಮೆ ದೆಹಲಿಯಲ್ಲಿ ಬೃಹತ್ ಪ್ರತಿಭಟನೆಗೆ ಸಜ್ಜಾಗಿವೆ. ಹೆಚ್ಚುತ್ತಿರುವ ನಿರುದ್ಯೋಗದ ವಿರುದ್ಧ ದನಿಯೆತ್ತಲು ಸಜ್ಜಾಗಿರುವ ರೈತರು ದೆಹಲಿಯ ಜಂತರ್ ಮಂತರ್ನಲ್ಲಿ ಇಂದು ಸೇರಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಕಳೆದ ವರ್ಷದ ರೈತ ಹೋರಾಟದ ಕೇಂದ್ರಬಿಂದುಗಳಾಗಿದ್ದ ಸಿಂಘು, ಗಾಜಿಪುರ್ ಗಡಿಗಳಲ್ಲಿಯೂ ಪೊಲೀಸರು ರಕ್ಷಣೆ ಹೆಚ್ಚು ಮಾಡಿದ್ದಾರೆ. ಗಾಜಿಪುರ್ ಮತ್ತು ಗಾಜಿಯಾಬಾದ್ ಗಡಿ ನಡುವಿನ ಜಿಲ್ಲೆಗಳಲ್ಲಿ ರೈತರ ಮೆರವಣಿಗೆ ಹಾದು ಹೋಗಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ಜುಲೈನಲ್ಲಿ6.8% ಇದ್ದ ನಿರುದ್ಯೋಗ ದರವು ಆಗಸ್ಟ್ನಲ್ಲಿ 7.7% ತಲುಪಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ(CMIE) ವರದಿ ತಿಳಿಸಿದೆ. ಆದರೆ ವಿರೋಧ ಪಕ್ಷಗಳ ಸತತ ಮನವಿಗಳ ಹೊರತಾಗಿಯೂ ಧೀರ್ಘ ಕಾಲ ನಡೆದ ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ನಿರುದ್ಯೋಗದ ಕುರಿತು ಸರ್ಕಾರ ಚರ್ಚೆ ನಡೆಸಿಲ್ಲ.
ಆಗಸ್ಟ್ 18 ರಿಂದ 25ರವರೆಗೆ ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ರೈತರು ಸತತ 5 ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು. ರೈತರ ಮೇಲಿನ ಪ್ರಕರಣಗಳನ್ನು ಕೈಬಿಡಬೇಕು ಮತ್ತು 8 ಜನರ ಸಾವಿಗೆ ಕಾರಣವಾಗಿರುವ ಆಶಿಶ್ ಮಿಶ್ರಾನ ತಂದೆ ಅಜಯ್ ಮಿಶ್ರಾ ತೆನಿಯನ್ನು ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಲಾಗಿತ್ತು.
ರೈತರ ಧೀರ್ಘ ಹೋರಾಟದ ನಂತರ ಕಳೆದ ವರ್ಷ ನವೆಂಬರ್ 29ರಂದು ಸಂಸತ್ತಿನಲ್ಲಿ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಲಾಗಿದೆ. ಆದರೆ ರೈತರ ಇತರ ಹಕ್ಕೊತ್ತಾಯಗಳಾದ ಎಂಎಸ್ಪಿ ಕಾನೂನು ಜಾರಿ ಸೇರಿದಂತೆ ಇತರ ಹಕ್ಕೊತ್ತಾಯಗಳ ಈಡೇರಿಕೆಗಾಗಿ ರೈತರು ಹೋರಾಟ ಮುಂದುವರೆಸುವುದಾಗಿ ತಿಳಿಸಿದ್ದಾರೆ.
ನಿನ್ನೆ ದೆಹಲಿಯಲ್ಲಿ ನಡೆದ ರೈತ ‘ಮಹಾಪಂಚಾಯತ್’ ನಲ್ಲಿ ಪಾಲ್ಗೊಳ್ಳಲು ಬಂದ ರೈತ ನಾಯಕ ರಾಕೇಶ್ ಟಿಕಾಯತ್ ಅವರನ್ನು ಗಾಜಿಪುರ ಗಡಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಅವರು “ನನ್ನ ಕೊನೆಯ ಉಸಿರು ಇರುವವರೆಗೂ ಈ ಹೋರಾಟ ಮುಂದುವರಿಯುತ್ತದೆ. ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ, ದಣಿಯುವುದಿಲ್ಲ, ತಲೆಬಾಗುವುದಿಲ್ಲ” ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಸೆಪ್ಟಂಬರ್ 06 ರಂದು ಸಂಯುಕ್ತ ಕಿಸಾನ್ ಮೋರ್ಚಾದ ಸಭೆ ನಡೆಯಲಿದ್ದು, ಅಂದಿನ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಲಾಗುವುದು ಎಂದು ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.
ಇದನ್ನೂ ಓದಿ: ಯುಪಿ: ಮಹಿಳೆಯ ಮೇಲೆ ಹಲ್ಲೆ ಮಾಡಿದ್ದ ಬಿಜೆಪಿ ನಾಯಕನ ಪರ ಬೃಹತ್ ಪ್ರತಿಭಟನೆ