‘ಶಾಸಕರು (ಮುಂಬೈನಲ್ಲಿರುವವರು) ರಾಜೀನಾಮೆ ನೀಡುವುದನ್ನು ಅಂಗೀಕರಿಸದಿರುವುದು ಅವರ ಬದುಕುವ ಹಕ್ಕನ್ನು ಕಿತ್ತುಕೊಂಡಂತೆ. ಅವರು ರಾಜೀನಾಮೆ ನೀಡಿ ಬೇರೆ ವೃತ್ತಿಗೆ ಹೋಗಬಹುದು….’
ಅರೆ ಇವ್ನಾ, ಅಂದರೆ ಈಗ ರಿಯಲ್ (ಎ)ಸ್ಟೇಟ್ಗಾಗಿ ಫೈಟ್ ಮಾಡ್ತಿರೋ ಎಸ್ಬಿಎಂ (ಸೋಮಶೇಖರ್, ಬೈರತಿ ಬಸವರಾಜು, ಮುನಿರತ್ನ), ಎಂಟಿಬಿ ನಾಗರಾಜ್, ವರ್ಷದಿಂದ ಕುಮಟಳ್ಳಿ ಎಳಕೊಂಡು ಜಾರುತ್ತಲೇ ಇದ್ದರೂ ಡೆಸ್ಟಿನೇಷನ್ ತಲುಪಲು ತಿಣುಕಾಡ್ತಿರೋ ಜಾರಕಿಹೊಳಿ, ಗಣಿಧೂಳು ಕಾಣದಂತೆ ಪೌಡರ್ ಮೆತ್ತಿಕೊಂಡಿರೋ ಆನಂದಸಿಂಗ್, ಫೇಸ್ಬುಕ್ನಲ್ಲೇ ಕ್ಷೇತ್ರದ ಜನರ ಸೇವೆ ಮಾಡ್ತೀರೋ ಶಿವರಾಮ್ ಹೆಬ್ಬಾರ್, ಮುಂಬೈ ದಂಧೆ ಮೂಲಕವೇ ಇಲ್ಲಿ ಶಾಸಕರಾಗಿ ಮತ್ತೆ ಮುಂಬೈ ತಲುಪಿರೋ ನಾರಾಯಣಗೌಡ, ನಾಯಕರಿಗೆ ‘ಸಕಲ’ ವ್ಯವಸ್ಥೆ ಮಾಡಬಲ್ಲ ಚತುರ ಸುಧಾಕರ್, ಸಚಿವಗಿರಿ ಸಿಕ್ಕರೂ ಓಡಿ ಹೋಗಿರುವ ಶಂಕರ್, ನಾಗೇಶ್…….ಅಬ್ಬಬ್ಬಾ, ರಾಜೀನಾಮೆ ಸ್ವೀಕರಿಸದೇ ಇದ್ದರೆ ಇವರ ಬದುಕುವ ಹಕ್ಕಿನ ಉಲ್ಲಂಘನೆ ಆಗುತ್ತಾ?
ಅಯ್ಯೋ ಶಿವನೇ, ಇವರೆಲ್ಲ ರಾಜೀನಾಮೆ ನೀಡಿ ಬೇರೆ ವೃತ್ತಿಗೆ ಹೋಗಬಹುದಂತೆ! ‘ಬೇರೆ’ ಅಂದರೆ ಏನರ್ಥ? ಈಗಿರುವ ಶಾಸಕ ‘ವೃತ್ತಿ’ಯಿಂದ ಇನ್ನೊಂದು ದಂಧೆಗೆ ಅಲ್ಲವೇ? ಹಂಗಂದ್ರ, ಶಾಸಕನಾಗಿರುವುದೂ ಒಂದು ವೃತ್ತಿ ಅಂತೀರಾ ರೋಹ್ಟಗಿ ಸಾಹೇಬರೇ? ಇವರ್ಯಾರು ಈಗ ಬೇರೆ ವ್ಯವಹಾರವನ್ನೇ ಮಾಡ್ತಿಲ್ಲವೇ? ಈ ಪುಣ್ಯಾತ್ಮರು ಕ್ಷೇತ್ರವನ್ನೇ ಮರೆತು ಎಲ್ಲೋ ಓಡಿ ಹೋಗಿದ್ದಾರಲ್ಲ, ಅದು ನಮ್ಮ ಅಂದರೆ ಮತದಾರರ ಹಕ್ಕಿನ ಉಲ್ಲಂಘನೆ ಅಲ್ಲವೇ? ನಮಗಂತೂ ಗೊತ್ತಾಗ್ತಿಲ್ಲ. ಬಿಡ್ರಿ, ಅಲ್ಲಿ ಕುಳಿತ ಮೂರ್ಮಂದಿನೇ ತಲೆ ಕೆರೆದುಕೊಂಡು ನಾಳೆವರೆಗೆ ಏನ್ ಹೇಳಕ್ಕಾಗಲ್ಲ ಅಂದವ್ರೆ, ನಮ್ಮಂಥವರಿಗೇನು ಗೊತ್ತಾಗುತ್ತೆ…..
‘ಮೊಟ್ಟೆ ಮೊದಲೋ, ಕೋಳಿ ಮೊದಲೋ ಅನ್ನೋ ಥರ ಆಗಿದೆ. ರಾಜೀನಾಮೆ ಮೊದಲೋ, ಅನರ್ಹತೆ ಮೊದಲೋ ಅನ್ನಂಗಿಲ್ಲ.. ಎರಡೂ ಒಟ್ಟಿಗೆ ಸಂಬಂಧ ಹೊಂದಿವೆ…’
ಕರೆಕ್ಟು ವಕೀಲರೇ, ಫೆಬ್ರುವರಿ 11ಕ್ಕೆ ಮೊಟ್ಟೆಯೇ (ಜಾರಕಿ, ಕುಮಟಳ್ಳಿ ಅನರ್ಹತೆ) ಕೈಗೇ ಸಿಕ್ಕಿತ್ತಲ್ಲ್ಲ? ಇಲ್ಲಿವರೆಗೆ ಅದನ್ನ ಕೋಳಿ ಮಾಡೋಕೆ ಹೊರಟಿದ್ದರಾ? ಹುಂಜಗಳ ಸಹವಾಸದಲ್ಲಿ ಮೈಮರೆತು ಬಿಟ್ಟರಾ ನಿಮ್ಮ ಸಾಹೇಬರು…?
‘ಜುಲೈ 5ರಿಂದ 11ರವರೆಗೆ ಸ್ಪೀಕರ್ ಏನ್ ಮಾಡ್ತಿದ್ದರು? ರಾಜೀನಾಮೆ ಅಂಗೀಕಾರ ಮಾಡೋಕೆ ಅಷಟೊಂದು ಟೈಮ್ ಬೇಕಿತ್ತಾ?’
ಪಟ್ಟಂತ ಡಿಸೈಡ್ ಮಾಡಬಹುದಿತ್ತು. ಆದರೆ ಸ್ಟಡಿ ಮಾಡಬೇಕು, ವಿಚಾರಣೆ ಮಾಡಬೇಕು ಅಲ್ಲವಾ? ಹಂಗೆಲ್ಲ ಏಕಾಏಕಿ ನಿರ್ಧಾರ ತಗೊಳ್ಳಕ್ಕೆ ಸಾಧ್ಯವಾ? ಈಗ ನೋಡಿ ಮುಂಬೈವಾಲಾಗಳು ದೆಹಲಿಗೆ ಅರ್ಜಿ ಸಲ್ಲಿಸಿ ಎಷ್ಟು ದಿನಾ ಆಯ್ತು? ನಿರ್ಧಾರ ತಗೊಳ್ಳಕ್ಕೆ ಆಯ್ತಾ? ತಲೆಕೆಟ್ಟು ಕೆರ ಹಿಡಿದು, ನೀವೇ ಒಂದ್ ಸಲ ಮುಂದಕ್ಕೆ ಹಾಕಿದ್ರಿ. ಇವತ್ ನೋಡಿದ್ರೆ 4 ತಾಸು ವಿಚಾರಣೆ ನಡೆಸಿದರೂ ಮೂರ್ಮಂದಿಗೆ ನಿರ್ಣಯ ತಗಳಕ್ಕೆ ಆಗ್ಲಿಲ್ಲ. ಅಂಥದ್ದರಲ್ಲಿ ಒಬ್ಬರೇ ಸ್ಪೀಕರ್ ಪಟ್ಟಂತ ನಿರ್ಣಯ ಕೈಗೊಳಬೇಕಿತ್ತು ಅನ್ನಾದು ನ್ಯಾಯವೇ ಸ್ವಾಮಿ?