Homeಕರ್ನಾಟಕನ್ಯಾಯಾಂಗ ವ್ಯವಸ್ಥೆ ಇಂದು ನ್ಯಾಯ ಕೊಡುವಲ್ಲಿ ವಿಫಲವಾಗಿದೆ: ಜಸ್ಟಿಸ್ ಗೋಪಾಲಗೌಡ

ನ್ಯಾಯಾಂಗ ವ್ಯವಸ್ಥೆ ಇಂದು ನ್ಯಾಯ ಕೊಡುವಲ್ಲಿ ವಿಫಲವಾಗಿದೆ: ಜಸ್ಟಿಸ್ ಗೋಪಾಲಗೌಡ

ಶತಾಯುಶಿ ದೊರೆಸ್ವಾಮಿಯವರಿಗೆ 103 ವರ್ಷಗಳ ಹಿನ್ನೆಲೆಯಲ್ಲಿ ’103 ಕಡೆಗಳಲ್ಲಿ ಇಂದು ಮಹಾನ್ ತಾತ ಸಾಕ್ಷ್ಯಚಿತ್ರ ಪ್ರದರ್ಶನವಾಗಲಿದೆ.

- Advertisement -
- Advertisement -

ಹಿರಿಯ ಸ್ವಾತಂತ್ರ್ಯ ಸೇನಾನಿ, ಶತಾಯುಷಿ, ನಾಡಿನ ಸಾಕ್ಷಿಪ್ರಜ್ಞೆ ಎಚ್.ಎಸ್ ದೊರೆಸ್ವಾಮಿಯವರ ಜೀವನ ಮತ್ತು ಹೋರಾಟದ ಕುರಿತು ಸಾಕ್ಷ್ಯಚಿತ್ರ ‘ಮಹಾನ್ ತಾತ / The Great Grand Father’ ಇಂದು ಗಾಂಧಿ ಜಯಂತಿ ಅಂಗವಾಗಿ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಇದರೊಂದಿಗೆ ಅವರ ’ಗೋಡ್ಸೆವಾದಿಗಳಿಗೆ ಗಾಂಧಿವಾದದ ಉತ್ತರ’ ಎಂಬ ಪುಸ್ತಕ ಕೂಡ ಬಿಡುಗಡೆಯಾಗಿದೆ.

ಬೆಂಗಳೂರಿನ ಅರಮನೆ ರಸ್ತೆಯ ಕರ್ನಾಟಕ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ಪ್ರತಿಭಾನ್ವಿತ ನಿರ್ದೇಶಕ ದೀಪುರವರು ನಿರ್ದೇಶನದ ಪೆಡೆಸ್ಟ್ರಿಯನ್ ಪಿಕ್ಚರ್ಸ್ ಮಾಧ್ಯಮ ಸಂಸ್ಥೆ ತಯಾರಿಸಿರುವ ಈ ಸಾಕ್ಷ್ಯಚಿತ್ರವನ್ನು  ಜಸ್ಟಿಸ್ ಗೋಪಾಲಗೌಡರವರು ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡರು, ಈ ಬೇಜವಾಬ್ದಾರಿ ಜನಪ್ರತಿನಿಧಿಗಳು ಗಾಂಧೀಜಿಯವರ ಜೊತೆಯಲ್ಲಿ ಸ್ವತಂತ್ರ ಹೋರಾಟದಲ್ಲಿ ಭಾಗಿಯಾದ ದೊರೆಸ್ವಾಮಿಯವರ ಬಗ್ಗೆ ಮಾತನಾಡುವ ನೈತಿಕರೆ ಉಳಿಸಿಕೊಂಡಿಲ್ಲ. 103ನೇ ವಯಸ್ಸಿನಲ್ಲಿಯೂ ದಮನಿತರ ಪ್ರತಿಭಟನೆಗಳಿಗೆ ಸಾಥ್ ನೀಡುತ್ತಿರುವ ದೊರೆಸ್ವಾಮಿಯವರ ಬಗ್ಗೆ ಕೆಟ್ಟದಾಗಿ ಮಾತನಾಡುವವರು ನಾಯಕರು ಅಲ್ಲ, ಜನಪ್ರತಿನಿಧಿಗಳು ಅಲ್ಲ, ಮನುಷ್ಯರೇ ಅಲ್ಲ ಎಂದು ಕಿಡಿಕಾರಿದರು.

ಸಾರ್ವಭೌಮ ಎನ್ನುವ ಮೂಲಸ್ವರೂಪವನ್ನು ದೇಶಕ್ಕೆ ತಂದುಕೊಟ್ಟ ಕೀರ್ತಿಸ್ವತಂತ್ರ ಹೋರಾಟಗಾರರಿಗಿದೆ. ಇಂತಹವರ ಬಗ್ಗೆ ಅರ್ಥವಿಲ್ಲದ ಮಾತನಾಡುವವರಿಗೆ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂಬ ನಂಬಿಕೆಯಿದೆ. ಭ್ರಷ್ಟಾಚಾರದಿಂದ ಜನರಿಗೆ ಹಣ, ಹೆಂಡ ಕೊಟ್ಟು ಮತಗಳನ್ನು ಪಡೆಯುವವರು ರಾಜ್ಯಕ್ಕೆ, ದೇಶಕ್ಕೆ ಏನು ಕೊಡುಗೆ ನೀಡಬಹುದು ಎಂದು ಪ್ರಶ್ನಿಸಿದರು.

ನಾನು ನಿವೃತ್ತಿಯಾಗಿ ನಾಲ್ಕು ವರ್ಷಗಳಾಗುತ್ತಾ ಬಂದಿದೆ. ಇಷ್ಟು ವರ್ಷಗಳಲ್ಲಿ ದೇಶದಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಹೇಗೆ ಕೆಲಸ ಮಾಡುತ್ತಿವೆ ಎಂದು ಗಮನಿಸುತ್ತಿದ್ದೇನೆ. ಸ್ವತಂತ್ರ ಭಾರತದ 72 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ  ಶಾಸನಬದ್ಧ ಆಳ್ವಿಯಿಲ್ಲ. ಸಂವಿಧಾನದ ಅಡಿಯಲ್ಲಿ ಆಡಳಿತವಿಲ್ಲ ಇಂತಹ ದುಸ್ಥಿತಿಯಲ್ಲಿ ದೇಶದ ಜನರಿದ್ದಾರೆ. ಅತ್ಯಾಚಾರಗಳು, ಕೊಲೆಗಳು, ಅನಾಚಾರಗಳು ಜನರನ್ನು ಹಿಂಸೆ ಮಾಡುತ್ತಿವೆ. ನ್ಯಾಯಾಂಗ ವ್ಯವಸ್ಥೆಯು ಇಂದು ನ್ಯಾಯ ಕೊಡುವಲ್ಲಿ ವಿಫಲವಾಗಿದೆ. ಇಂತಹ ಕಾಲಘಟ್ಟದಲ್ಲಿ ನಾವಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸ್ವತಂತ್ರ ಸೇನಾನಿ ದೇಶದ ಕೃಷಿ ಕಾರ್ಮಿಕರಿಗೆ, ಜನರ ಬಗ್ಗೆ, ದೇಶದ ಬಗ್ಗೆ ಗಾಂಧಿವಾದ ಬಗ್ಗೆ ಹೇಳಬೇಕು. ಸಕ್ರಿಯವಾಗಿ ಚಳವಳಿಗಳಲ್ಲಿ ಭಾಗವಹಿಸಬೇಕು ಎಂದರು.

ಸಾಕ್ಷ್ಯಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಹೋರಾಟಗಾರ ಸಿರಿಮನೆ ನಾಗರಾಜುರವು ’103 ಕಡೆಗಳಲ್ಲಿ ಇಂದು ಸಾಕ್ಷ್ಯಚಿತ್ರ ಪ್ರದರ್ಶನವಾಗಲಿದೆ. ಬರಿ ಬೆಂಗಳೂರಿನಲ್ಲಿ ಮಾತ್ರವಲ್ಲ ಹಲವು ಜಿಲ್ಲೆಗಳಲ್ಲೂ ಚಿತ್ರಪ್ರದರ್ಶವಾಗಲಿದೆ. ಕೂಲಿ ಕಾರ್ಮಿಕರು ತಮ್ಮ ಗುಡಿಸಲಿನಲ್ಲೇ ಚಿತ್ರ ನೋಡಲು ಕಾಯುತ್ತಿದ್ದಾರೆ. ಅವರಿಗಾಗಿ ಚಿತ್ರವನ್ನು ಕಳುಹಿಸಲಾಗಿದೆ. ಬೆಂಗಳೂರಿನಲ್ಲೂ ಸಾಕ್ಷ್ಯಚಿತ್ರ ನೋಡಲು ತುಂಬಾ ಜನ ಕಾಯುತ್ತಿದ್ದಾರೆ. ನಮಗೂ ಚಿತ್ರ ಕಳುಹಿಸಿಕೊಡಿ ಎಂದು ಕೇಳುತ್ತಿದ್ದಾರೆ. ನಾವು ಎಲ್ಲಾ ಕಡೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ’ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವತಂತ್ರ ಸೇನಾನಿ ಎಚ್.ಎಸ್.ದೊರೆಸ್ವಾಮಿ, “ಗಾಂಧೀಜಿಯವರ ಜೊತೆಯಲ್ಲಿ ಕೆಲಸ ಮಾಡಿದವರ ಜೊತೆ ಹೋಲಿಕೆ ಮಾಡಿಕೊಂಡರೇ ನನ್ನ ಪಾತ್ರ ನಿಜಕ್ಕೂ ಏನೂ ಅಲ್ಲ. ಅಂತಹ ನನ್ನನ್ನು ದೀಪು ಈ ಸಾಕ್ಷ್ಯಚಿತ್ರದ ಮೂಲಕ ದೊಡ್ಡ ಮನುಷ್ಯ ಮಾಡಿಬಿಟ್ಟರು. ನಾನು ಕೊಟ್ಟ ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು ದೀಪು ತನ್ನ ಹಣ, ಸಮಯ, ಶ್ರಮವನ್ನು ವ್ಯಯಿಸಿ ಇಂಥ ಒಂದು ಸಾಹಸ ಮಾಡಿದ್ದಾರೆ” ಎಂದರು.

ಇನ್ನು ತಮ್ಮ ಬಗ್ಗೆ ಬಂದ ಟೀಕೆಗಳಿಗೆ ಉತ್ತರಿಸುತ್ತಾ, “ಟೀಕೆಗಳು ಬೇಸರ ಉಂಟುಮಾಡಲಿಲ್ಲ. ಆದರೆ ನನ್ನ ಜೊತೆ ಆತ್ಮೀಯವಾಗಿದ್ದ ಒಬ್ಬರು ಒಂದು ಪ್ರತಿರೋಧ ಕೂಡ ತೋರಿಸಲಿಲ್ಲ ಅದು ಬೇಸರವುಂಟುಮಾಡಿತು. ಆದರೆ ತುಂಬಾ ಜನ ನನ್ನ ಪರವಾಗಿ ನಿಂತರು, ಗೋಪಾಲಗೌಡರು ಕೂಡ ನನಗೆ ಬೆಂಬಲ ನೀಡಿದರು. ಅವರ ಟೀಕೆಗಳಿಗೆ ಉತ್ತರ ನೀಡಲೇಬೇಕು ಎಂದು ಈ ಪುಸ್ತಕ ಹೊರತರುತ್ತಿದ್ದೇವೆ. ಆದರೂ ಯಾರ ಮೇಲೂ ಕೆಟ್ಟ ಮಾತುಗಳನ್ನಾಡಿಲ್ಲ. ಜನರಿಗೆ, ಟೀಕಾಕಾರರಿಗೆ ಮನವರಿಕೆ ಮಾಡುವ ಕೆಲಸ ಮಾಡಿದ್ದೇವೆ. ಅವರಿಗೆ ಜ್ಞಾನೋದಯವಾಗಬೇಕು, ಪಶ್ಚಾತಾಪವಾಗಬೇಕು ಅಷ್ಟೆ” ಎಂದರು.

ವೀರ ಸಾರ್ವಕರ್‌ ಅವರನ್ನು ನಾನು ತುಚ್ಛವಾಗಿ ಕಾಣಲಿಲ್ಲ. ಪರಾಕ್ರಮಿಯಾಗಿ ಕೆಲಸ ಮಾಡಿದ ಒಬ್ಬ ವೀರ ಪುರುಷ, ನಾನು ಮಾಡಿದ್ದು ತಪ್ಪಾಯಿತು, ನೀವು ಹೇಳಿದಂತೆ ಕೇಳುತ್ತೇನೆ ಎಂದು ಬ್ರೀಟಿಷರ ಕರಾರುಗಳಿಗೆ ಒಪ್ಪಿದ್ದು ಯಾಕೆ ಎಂದು ಪ್ರಶ್ನಿಸಿದೆ. ಕ್ಷಮಾಪಣ ಪತ್ರ ಬರೆದುದ್ದಕ್ಕೆ ನಾನು ಹೇಡಿ ಎಂದೆ. ಹೋರಾಟಕ್ಕೆ ಅಷ್ಟೊಂದು ಕೆಲಸ ಮಾಡಿದಾತ ಬ್ರೀಟಿಷರಿಗೆ ಶರಣಾದಾಗ, ಮತ್ತೆ ಹೋರಾಟ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟರೆ ಹೇಡಿ ಅನ್ನದೇ ಮತ್ತೇನು ಅನ್ನಬೇಕು? ಎಂದು ದೊರೆಸ್ವಾಮಿ ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಚಿಂತಕ ಜಿ.ರಾಮಕೃಷ್ಣ, ಗುರುಪ್ರಸಾದ್ ಆಕೃತಿ, ಮಹಾನ್ ತಾತ ಸಾಕ್ಷ್ಯಚಿತ್ರದ ನಿರ್ದೇಶಕ ದೀಪು ಭಾಗಿಯಾಗಿದ್ದರು.

ಮಹಾನ್ ತಾತ ಸಾಕ್ಷ್ಯಚಿತ್ರದ ಬಗ್ಗೆ

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರ ಜೀವನವನ್ನು ಇಂದಿನ ಪೀಳಿಗೆಯ ಮುಂದೆ ತೆರೆದಿಡುವ ಕೆಲಸವನ್ನು 39 ನಿಮಿಷದ ಈ ಸಾಕ್ಷ್ಯಚಿತ್ರ ಮಾಡುತ್ತದೆ. 103 ವರ್ಷಗಳ ತುಂಬು ಜೀವನದ ಕ್ಷಣಗಳನ್ನು ಈ ಚಿತ್ರದಲ್ಲಿ ಸೆರೆಹಿಡಿಯಲಾಗಿದೆ. ದೊರೆಸ್ವಾಮಿಯವರು ಪಾಲ್ಗೊಂಡ ಹೋರಾಟದ ಫಲಾನುಭವಿಗಳು, ಬಡಜನರು ದೊರೆಸ್ವಾಮಿಯವರ ಬಗ್ಗೆ ಮಾತನಾಡಿರುವುದು ಸಾಕ್ಷ್ಯಚಿತ್ರದಲ್ಲಿ ದಾಖಲಾಗಿದೆ.

ಪೆಡೆಸ್ಟ್ರಿಯನ್ ಪಿಕ್ಚರ್ಸ್ ಮತ್ತು ದೀಪು

ದೀಪು ಎಂದೇ ಚಿರಪರಿಚಿತರಾದ ಕೆ.ಪಿ ಪ್ರದೀಪ್‌ರವರು ಪೆಡೆಸ್ಟ್ರಿಯನ್ ಪಿಕ್ಚರ್ಸ್ ಎಂಬ ಜನಪರ ಮಾಧ್ಯಮ ಸಂಸ್ಥೆಯ ಸ್ಥಾಪಕ ಸದಸ್ಯರಲ್ಲೊಬ್ಬರು. ಮೂಲತಃ ಕೇರಳದ ತಿರುವೂರು ಜಿಲ್ಲೆಯ ಮಲಪ್ಪುರಂರವರಾದ ಇವರು ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಸಾಮಾಜಿಕ-ರಾಜಕೀಯ ವಾಸ್ತವಗಳ ಬಗ್ಗೆ ತಿಳುವಳಿಕೆಯನ್ನು ಮೂಡಿಸಲು ಸಿನಿಮಾ-ಸಾಕ್ಷ್ಯಚಿತ್ರವನ್ನು ಪರಿಣಾಮಕಾರಿಯಾಗಿ ಬಳಸಬೇಕೆನ್ನುವುದು ಅವರ ಅಭಿಲಾಷೆ.

ದೊರೆಸ್ವಾಮಿಯವರ ಬಗ್ಗೆ

ಹಲವರು ಹುಟ್ಟುತ್ತಲೇ ಮುದುಕರು ಆದರೆ ಕೆಲವರು ಸಾಯುವವರೆಗೂ ಚಿರಯುವಕರು ಎಂಬ ನಾಣ್ಣುಡಿಯಂತೆ’ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ, ನಾಡಿನ ಸಾಕ್ಷಿಪ್ರಜ್ಞೆ ಎಚ್‌.ಎಸ್‌ ದೊರೆಸ್ವಾಮಿಯವರು ಇಂದಿಗೂ ಜನಪರರ ಪಾಲಿಗೆ ರಾಕ್‌ಸ್ಟಾರ್‌ ಆಗಿಯೇ ಲವಲವಿಕೆಯಿಂದ ದೃಢವಾಗಿದ್ದಾರೆ. ಬಡಜನರ ಪರ ಸದಾ ಹೋರಾಟನಿರತ ಸ್ವಾತಂತ್ರ್ಯ ಸೇನಾನಿಗೆ ಈಗ 103 ವರ್ಷ. ಇವರ ಜೀವನಾಧಾರಿತ ಚಿತ್ರವೇ ಮಹಾನ್ ತಾತ.

ಇದನ್ನೂ ಓದಿ: ಅಂಬೇಡ್ಕರ್‌ರವರ ಆರ್ಥಿಕ ಚಿಂತನೆಗಳು ದಾರಿಯಾಗಲಿ – ಎಚ್. ಎಸ್ ದೊರೆಸ್ವಾಮಿ

 

 


ಇದನ್ನೂ ಓದಿ: ಹೊಸ ತಲೆಮಾರು ಅಂಬೇಡ್ಕರ್–ಗಾಂಧಿ ಸಮನ್ವಯದ ಬಗ್ಗೆ ಚಿಂತಿಸಲಿ: ದೊರೆಸ್ವಾಮಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...