ಪ್ರಗತಿಪರ ಚಿಂತಕ ದಿವಂಗತ ಮಹೇಂದ್ರ ಕುಮಾರ್ ಅವರು ಪ್ರಾರಂಭಿಸಿದ್ದ ’ನಮ್ಮ ಧ್ವನಿ’ ತಂಡವು ಗಾಂಧಿ ಜಯಂತಿಯನ್ನು ’ನಮ್ಮ ನಡೆ ಗಾಂಧಿ ಕಡೆ’ ಎಂಬ ಧ್ಯೇಯದೊಂದಿಗೆ ಎಂಬ ವಿನೂತನ ರೀತಿಯಲ್ಲಿ ಆಚರಿಸಿತು.
ಬೆಂಗಳೂರಿನ ಟೌನ್ಹಾಲ್ನಿಂದ ಕಾಲ್ನಡಿಗೆಯಲ್ಲಿ ಹೊರಟ ತಂಡವು ಮೆಜೆಸ್ಟಿಕ್ ಮೂಲಕ ಹಾದು ಮೌರ್ಯ ಸರ್ಕಲ್ನ ಗಾಂಧಿ ಪ್ರತಿಮೆಯವರೆಗೂ ಮೆರವಣಿಗೆ ನಡೆಸಿತು. ಗಾಂಧಿಯ ಆಶಯಗಳ ಪೋಸ್ಟರ್ ಪ್ರದರ್ಶನ, ಗಾಂಧಿ ಜಯಂತಿಯ ಶುಭಾಶಯ ಪತ್ರ ಹಾಗೂ ಶಾಂತಿಯ ಸಂಕೇತವಾಗಿ ಬಿಳಿ ಗುಲಾಬಿಯನ್ನು ಹಂಚುತ್ತಾ ಗಮನ ಸೆಳೆಯಿತು.
ಇದನ್ನೂ ಓದಿ: ಮಹೇಂದ್ರ ಕುಮಾರ್ ಎಂಬ ‘ನಮ್ಮ ಧ್ವನಿ’ಯ ನೆನಪು: ಮುನೀರ್ ಕಾಟಿಪಳ್ಳ
ಜಾಥಾದಲ್ಲಿ ಚಿಂತಕ, ನಟ ಚೇತನ್, ಹಾಗೂ ಸಾಹಿತಿ ಯೋಗೇಶ್ ಮೇಷ್ಟ್ರ ಕೂಡಾ ಭಾಗವಹಿಸಿದ್ದರು. ಕನ್ನಡ ಸಂಘಟನೆಯ ಕಾರ್ಯಕರ್ತರು, ಹಾಗೂ ವಿದ್ಯಾರ್ಥಿಗಳು ಹಾಗೂ ಹಲವಾರು ಪಾದಚಾರಿಗಳು ಮೆರವಣಿಗೆಯಲ್ಲಿ ಹೆಜ್ಜೆಯಾಕಿದರು.
“ಜಗತ್ತಿನಲ್ಲಿ ಶಾಂತಿ ಬೇಕು ಎಂದರೆ ಅದನ್ನು ನಿಮ್ಮ ಮಕ್ಕಳಿಂದಲೇ ಆರಂಭಿಸಿ. ಸತ್ಯ, ಪ್ರೀತಿ, ಅಹಿಂಸೆ ಎಲ್ಲಿ ನೆಲೆಸಿರುತ್ತದೆಯೋ ಅಲ್ಲಿ ಶಾಂತಿ ತೃಪ್ತಿ ನೆಲೆಸುತ್ತದೆ. ಸಹನೆ ಕಳೆದುಕೊಳ್ಳುವುದೆಂದರೆ ಯುದ್ಧವನ್ನು ಸೋತಂತೆ. ಅಹಿಂಸೋ ಪರಮೋ ಧರ್ಮ” ಎಂಬ ಬರಹಗಳಿದ್ದ ಪ್ಲಕಾರ್ಡುಗಳನ್ನು ಹಿಡಿದು, ಗಾಂಧೀಜಿ ಅಮರರಾಗಲಿ, ಮಹೇಂದ್ರ ಕುಮಾರ್ ಅಮರರಾಗಲಿ ಎಂಬ ಘೋಷಣೆಗಳೊಂದಿಗೆ ಮೆರವಣಗೆ ನಡೆಯಿತು.
ಜಾಥಾದಲ್ಲಿ ಸಾಹಿತಿ ಯೋಗೇಶ್ ಮೇಷ್ಟ್ರು ಭಾಗವಹಿಸಿದರು.
ಯುವ ಮುಖಂಡ, ಚಿಂತಕ ರಾ ಚಿಂತನ್ ಮಾತನಾಡಿ, “ನಮ್ಮ ಧ್ವನಿ ಮಹೇಂದ್ರ ಕುಮಾರ್ ಮತ್ತು ನಮ್ಮೆಲ್ಲರ ಕನಸು. ಈ ದೇಶದ ಶಾಂತಿ ಸೌಹಾರ್ದತೆಯನ್ನು ಕದಡುವ ಕೆಲಸಗಳು ನಡೆಯುತ್ತಿರುವಾಗ ಅದನ್ನು ಶಾಶ್ವತವಾಗಿ ನಿಲ್ಲಿಸಲು ನಮ್ಮ ಧ್ವನಿ ಆರಂಭವಾಯಿತು. ಈ ನಡುವೆ ನಾವು ಮಹೇಂದ್ರ ಕುಮಾರ್ರವರನ್ನು ಕಳೆದುಕೊಂಡು ಅಕ್ಷರಶಃ ತಬ್ಬಲಿಗಳಾಗಿದ್ದೆವು. ನಮ್ಮಧ್ವನಿಯನ್ನು ಮುಂದುವರೆಸಲು ಗಾಂಧಿ ಜಯಂತಿಯ ದಿನ ಪ್ರಸಸ್ತವಾದ ದಿನ. ಹಾಗಾಗಿ ನಾವು ಮೊಟ್ಟ ಮೊದಲ ಬಾರಿಗೆ ಬೀದಿಗಿಳಿದು ಗಾಂಧಿ ತಾತನ ಶಾಂತಿಯ ಸಂದೇಶಗಳನ್ನು ಜನರಿಗೆ ತಲುಪಿಸಲು ಈ ಜಾಥವನ್ನು ಹಮ್ಮಿಕೊಂಡಿದ್ದೇವೆ” ಎಂದರು.
ನಾನುಗೌರಿ.ಕಾಂ ಜೊತೆ ಮಾತನಾಡಿದ ’ನಮ್ಮ ಧ್ವನಿ’ ಬಳಗದ ಸಂಸ್ಥಾಪಕ ಸದಸ್ಯರಾದ ರುದ್ರು ಪುನೀತ್ ಆರ್.ಸಿ, “ಮಹೇಂದ್ರ ಕುಮಾರ್ ಅವರ ಆಶಯಗಳನ್ನು ಮುಂದುವರೆಸಲು ’ನಮ್ಮ ಧ್ವನಿ’ ತಂಡ ಬದ್ದವಾಗಿದೆ. ಮಹೇಂದ್ರರವರ ಆಶಯದಂತೆ ಅನ್ಯಾಯದ ವಿರುದ್ದ ’ನಮ್ಮ ಧ್ವನಿ’ ತಂಡವು ಯಾವತ್ತಿಗೂ ನಿಲ್ಲುತ್ತದೆ. ಕೊರೊನಾ ಕಾರಣದಿಂದ ತಂಡದ ಚಟುವಟಿಕೆ ತುಸು ನಿಧಾನವಾಗಿತ್ತಾದರೂ, ಇದೀಗ ತಂಡದ ಚಟುವಟಿಕೆಯನ್ನು ಮತ್ತೇ ಉತ್ಸಾಹದಿಂದ ಪ್ರಾರಂಭಿಸಿದ್ದೇವೆ” ಎಂದರು.
ಇದನ್ನೂ ಓದಿ: ಮಹೇಂದ್ರ ಕುಮಾರ್ ನಿಧನದ ಸಂಧಿಕಾಲ ಮತ್ತು ಫಿಡೆಲ್ ಕ್ಯಾಸ್ಟ್ರೊ!
“ನಮ್ಮ ಧ್ವನಿ” ಎಂಬ ಉತ್ಸಾಹಿ ತಂಡವನ್ನು ಪ್ರಗತಿಪರ ಚಿಂತಕರಾದ ದಿವಂಗತ ಮಹೇಂದ್ರ ಕುಮಾರ್ರವರು ಕಟ್ಟಿದ್ದರು. ಸಮಾಜದಲ್ಲಿ ನಡೆಯುವ ಹಾಗುಹೋಗುಗಳ ಬಗ್ಗೆ ವಿಮರ್ಶಿಸುತ್ತಾ, ವಿಶ್ಲೇಷಿಸುತ್ತಾ ಅವರು ಯುವಕರಲ್ಲಿ ಜಾಗೃತಿ ಮೂಡಿಸುತ್ತಿದ್ದರು.
ಯುವಕರನ್ನು ತಲುಪಲು ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿದ್ದ ಮಹೇಂದ್ರ ಕುಮಾರ್, ಪ್ರತಿನಿತ್ಯ ತಮ್ಮ ಹರಿತ ಬರಹ ಮತ್ತು ವಿಡಿಯೋಗಳ ಮೂಲಕ ಲಕ್ಷಾಂತರ ಜನರನ್ನು ತಲುಪುತ್ತಿದ್ದರು. ನಮ್ಮ ಧ್ವನಿ ಯೂಟ್ಯೂಬ್ ಚಾನೆಲ್ನಲ್ಲಿ ಚಿಂತನಾರ್ಹ ಮತ್ತು ಸಕಾಲಿಕ ಸರಣಿ ವಿಡಿಯೋಗಳಲ್ಲಿ ನಿರಂತರ ಜಾಗೃತಿ ಮೂಡಿಸುತ್ತಿದ್ದರು.
ಇದನ್ನೂ ಓದಿ: ಪ್ರಗತಿಪರ ಚಿಂತಕ, ನಮ್ಮಧ್ವನಿ ಬಳಗದ ಮಹೇಂದ್ರ ಕುಮಾರ್