Homeಮುಖಪುಟಮಹೇಂದ್ರ ಕುಮಾರ್ ನಿಧನದ ಸಂಧಿಕಾಲ ಮತ್ತು ಫಿಡೆಲ್ ಕ್ಯಾಸ್ಟ್ರೊ!

ಮಹೇಂದ್ರ ಕುಮಾರ್ ನಿಧನದ ಸಂಧಿಕಾಲ ಮತ್ತು ಫಿಡೆಲ್ ಕ್ಯಾಸ್ಟ್ರೊ!

ತದ್ವಿರುದ್ಧ ಅನಿಸುವ ವಿಚಾರಗಳ ನಡುವೆಯೂ ನಿಜವಾದ ಪ್ರಾಮಾಣಿಕತೆ ಇದ್ದರೆ ಪರಸ್ಪರ ಗೌರವ ಸಾಧ್ಯ ಮತ್ತು ಅನ್ಯಾಯ, ದಮನಗಳ ವಿರುದ್ಧದ ಹೋರಾಟದಲ್ಲಿ ಸಮನ್ವಯ ಸಾಧ್ಯ.

- Advertisement -
- Advertisement -

ಚಿಂತಕ, ಸಂಘಟಕ ಮಹೇಂದ್ರ ಕುಮಾರ್ ಅವರು ಅಕಾಲಿಕವಾಗಿ ನಿಧನರಾದ ಸುದ್ದಿಯನ್ನು ಇಂದು ಬೆಳಿಗ್ಗೆ ಕೇಳಿದಾಗ ಆಘಾವಾಯಿತು. ಹಿಂದೆ ಅವರ ಮಾತುಗಳನ್ನು ಕೇಳಿದ್ದೆ. ನಿನ್ನೆ ತೀರಾ ತಡರಾತ್ರಿ ಯಾರೋ ಶೇರ್ ಮಾಡಿದ್ದ ಪೋಸ್ಟನ್ನು ಫೇಸ್‌ಬುಕ್ ಗ್ರೂಪೊಂದರಲ್ಲಿ ಅಪ್ರೂವ್ ಮಾಡಿದ್ದೆ. ಇವತ್ತು ಬೆಳಿಗ್ಗೆ ಕೂಡಾ ಅವರ ಸಂದರ್ಶನ ಕೇಳಿದ್ದೆ. ನಂತರ ಸಮಾಜಿಕ ಜಾಲತಾಣಗಳಲ್ಲಿ ಅವರದ್ದೇ ನಿಧನದ ಸುದ್ದಿ ಮತ್ತು ಸಂತಾಪಗಳು. ಕೆಲವು ತುಂಬಾ ಭಾವನಾತ್ಮಕವಾದವುಗಳು ಕೂಡಾ. ಅದು ಅವರ ಜನಪ್ರಿಯತೆಯನ್ನು ತೋರಿಸುತ್ತದೆ. ನನಗ್ಯಾಕೋ ಇದನ್ನು ಬರೆಯಬೇಕು ಅನಿಸಿತು.

ಅವರು ಭಜರಂಗದಳದ ಸಂಸ್ಥಾಪಕರು ಮತ್ತು ಸಂಚಾಲಕರಾಗಿದ್ದ ಕಾರಣದಿಂದಲೋ ಏನೋ ನಾನು ಮೊದಮೊದಲಿಗೆ ಅವರನ್ನು ಸಂಶಯದಿಂದಲೇ ನೋಡುತ್ತಿದ್ದೆ ಮತ್ತು ಸಂಘಪರಿವಾರ ತಂತ್ರಗಳನ್ನು ಹತ್ತಿರದಿಂದ ಬಲ್ಲವರಿಗೆ ಅದು ಸಹಜವೂ ಆಗಿತ್ತು. ಅಲ್ಲದೇ ಚರ್ಚ್ ದಾಳಿ ಪ್ರಕರಣದಲ್ಲಿ ಅವರು ಆರೋಪಿಯಾಗಿದ್ದುದೂ ಒಂದು ಕಾರಣ. ನಂತರದಲ್ಲಿ ಅವರ ಅನೇಕ ಅಭಿಪ್ರಾಯಗಳು ನನಗೆ ಒಪ್ಪಿಗೆಯಾದವು ಮತ್ತು ಕೆಲವು ಮೆಚ್ಚಿಗೆಯೂ ಆದವು. ಅವರು ಅನೇಕ ವಿಷಯಗಳ ಬಗ್ಗೆ ಸ್ಪಷ್ಟ ಮತ್ತು ಖಚಿತ ಅಭಿಪ್ರಾಯ ಹೊಂದಿರುವುದು ಮನವರಿಕೆಯಾಯಿತು. ವಿಚಾರ ಏನೇ ಇರಲಿ, ಅದರಲ್ಲಿ ಪ್ರಾಮಾಣಿಕತೆ ಇದ್ದಾಗ ಅದು ಗೌರವಕ್ಕೆ ಪಾತ್ರವಾಗುತ್ತದೆ. ಅವರ ಮಾತುಗಳಲ್ಲಿ ಅಂತಹ ಪ್ರಾಮಾಣಿಕತೆ ಕಾಣುತ್ತಿತ್ತು.

ಬಲಪಂಥೀಯರು ಎನಿಸಿಕೊಂಡಿದ್ದ ಮಹೇಂದ್ರ ಕುಮಾರ್ ಅವರು ನಿಧಾನವಾಗಿ ಎಡಪಂಥದ ಕಡೆಗೆ ನಡಿಗೆ ಆರಂಭಿಸಿದುದರಲ್ಲಿ ನನಗೆ ಅಚ್ಚರಿಯೇನೂ ಕಾಣಿಸಿರುವುದಿಲ್ಲ. ಇಂದು ಚಿಂತಕರಾಗಿ ಹೆಸರಾಗಿರುವ ಒಂದು ತಲೆಮಾರಿನ ಬಾಲಕರನೇಕರು ಆರೆಸ್ಸೆಸ್ ವಿಷಪಾಠ ನುಂಗಿ, ನಂತರ ನಿಜ ತಿಳಿದು ಅದನ್ನು ಉಗುಳಿ ಬಂದವರು ಮತ್ತು ಇಂದು ಅದು ಪ್ರತಿಪಾದಿಸುವ ಮೇಲ್ಜಾತಿಯ ಸರ್ವಾಧಿಪತ್ಯ, ಮೇಲ್ಜಾತಿ- ವರ್ಗಗಳ ಗುಲಾಮಿ, ಅಲ್ಪಸಂಖ್ಯಾತರ ವಿರುದ್ಧ ದ್ವೇಷ, ಕುತಂತ್ರ, ಇಬ್ಬಗೆ ನೀತಿ ಇತ್ಯಾದಿ ಎಲ್ಲವನ್ನೂ ಸಕ್ರಿಯವಾಗಿ ವಿರೋಧಿಸುತ್ತಿರುವವರು. ಇದಕ್ಕೆ ಕಾರಣವೆಂದರೆ ಸಂಘದ ಶಾಖೆಗಳಲ್ಲಿ ಆಕರ್ಷಕ ಮತ್ತು ಪ್ರಿಯವಾದ ದೇಶಪ್ರೇಮದ ಹೆಸರಿನಲ್ಲಿ ಅಮಾಯಕ ಬಾಲಕರನ್ನು ಸಂಘಟನೆಗೆ ಸೇರಿಸಿಕೊಳ್ಳಲಾಗುತ್ತದೆ ಮತ್ತು ಚೆನ್ನಾಗಿ ಯೋಜಿಸಲಾದ ಆಟಗಳು ಮತ್ತು ತಿರುಚಿದ ಕಟ್ಟುಕತೆಗಳಿಂದ ಮುಗ್ಧ ಮನಸ್ಸುಗಳನ್ನು ತೊಳೆದು ದ್ವೇಷದ ವಿಷ ಮತ್ತು ಗುಲಾಮಿಯ ಕೊಳಕನ್ನು ತುಂಬಿಸಿ, ಸ್ವತಂತ್ರ ಚಿಂತನೆಯನ್ನು ಕೊಂದುಬಿಡಲಾಗುತ್ತದೆ.

ನಿಜವಾಗಿಯೂ ದೇಶವನ್ನು- ಅಂದರೆ, ಅದರಲ್ಲಿರುವ ಎಲ್ಲಾ ಜನರನ್ನು ಪ್ರೀತಿಸುವವರು, ಅವರ ಈ ಸಂಘಟನೆಯ ನಿಜ ಉದ್ದೇಶವನ್ನು ಬೇಗನೇ ತಿಳಿದುಕೊಂಡು ಅದರ ಕಟ್ಟಾ ವಿರೋಧಿಗಳಾಗುತ್ತಾರೆ. ಅಂತವರು ಎಡಪಂಥೀಯ ವಿಚಾರಗಳತ್ತ ಸರಿಯುತ್ತಾರೆ. (ವೈಯಕ್ತಿಕವಾಗಿ ನಾನೂ ಹೈಸ್ಕೂಲು ಬಾಲಕನಾಗಿದ್ದಾಗ ಕಲ್ಲಡ್ಕ ಪ್ರಭಾವಕ್ಕೆ ಬಿದ್ದು ಅವರ ಅಚ್ಚು ಮೆಚ್ಚಾಗಿದ್ದೆ. ಆದರೆ, ಅವರ ಬೇಗಡೆ ದೇಶಪ್ರೇಮ ಮತ್ತು ಕ್ರೂರ ದ್ವೇಷ ಮನೋಭಾವ, ಅಪ್ರಾಮಾಣಿಕ ಠಕ್ಕುತನಗಳನ್ನು ಬೇಗನೇ ತಿಳಿದು ಹೊರಬಂದು ಎಡಪಂಥೀಯನಾದೆ.)

ಮಹೇಂದ್ರ ಕುಮಾರ್ ಅವರ ಮಾತುಗಳನ್ನು ಕೇಳಿದಾಗ, ಅವುಗಳಲ್ಲಿ ಕಾಣುವುದು ಜನಪ್ರೀತಿ. ಭಾರತದ ಬಹುತೇಕ ಜನರು ಬೇರೆಬೇರೆ ಪ್ರಮಾಣಗಳಲ್ಲಿ ಧರ್ಮ ಮತ್ತು ದೈವನಿಷ್ಟರು. ಈ ನಂಬಿಕೆಗಳನ್ನು ಬಳಸಿಕೊಂಡು ಜನರನ್ನು ವಂಚಿಸಲೂ ಸಾಧ್ಯ ಮತ್ತು ಅವರ ಕರ್ತೃತ್ವ ಶಕ್ತಿಯನ್ನು ಬಡಿದೆಬ್ಬಿಸಲೂ ಸಾಧ್ಯ. ಈ ಎರಡನೆಯ ಸಾಧ್ಯತೆ ಮಹೇಂದ್ರ ಕುಮಾರ್ ಅವರಿಗೆ ಚೆನ್ನಾಗಿ ತಿಳಿದಿತ್ತು. ಸಾರಸಗಟಾಗಿ ಧರ್ಮ ದೇವರುಗಳನ್ನು ತಿರಸ್ಕರಿಸಿ, ನಿಂದಿಸಿದರೆ, ಜನರು ದೂರವಾಗುತ್ತಾರೆ ಎಂಬುದು ಸತ್ಯ.

ಮಹೇಂದ್ರ ಕುಮಾರ್ ಅವರು ತಮ್ಮ ನಿಧನದ ಹೊತ್ತಿನಲ್ಲಿ ಇಂತಹಾ ಸಮನ್ವಯರ ಸಂಧಿಕಾಲದಲ್ಲಿದ್ದರೆ?. ನನಗೆ ಅವರ ನೇರ ಪರಿಚಯ ಇರಲಿಲ್ಲವಾದರೂ, ಅವರ ನಿಧನದ ಸುದ್ದಿ ಕೇಳಿ, ಅವರ ವ್ಯಕ್ತಿತ್ವದ ಚಿತ್ರ ನನ್ನ ಕಣ್ಣಮುಂದೆ ಸುಳಿದಾಗ ನನಗೆ ತಕ್ಷಣ ನೆನಪಾದುದು ಫ್ರೀಯ್ ಬ್ರಿಟ್ಟೋ ಎಂಬ ಡೊಮಿನಿಕನ್ ಪಾದ್ರಿ ನಡೆಸಿದ ಕ್ಯೂಬಾದ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೊ ಅವರ ದೀರ್ಘ ಸಂದರ್ಶನದ ಪುಸ್ತಕ- “ಫಿಡೆಲ್ ಎಂಡ್ ರಿಲೀಜನ್”.  ನಾನಿದನ್ನು ಮೂರು ದಶಕಗಳ ಹಿಂದೆ ಓದಿದ್ದು, ನನ್ನ ಮೇಲೆ ಭಾರೀ ಪ್ರಭಾವ ಬೀರಿತ್ತು. ಇದು ನಿಜವಾದ ಧಾರ್ಮಿಕ ಪ್ರಜ್ಞೆ ಮತ್ತು ಸಮಾಜವಾದಿ ಮಾನವೀಯ ಪ್ರಜ್ಞೆಯ ಮುಖಾಮುಖಿಯಾಗಿತ್ತು. ಮಹೇಂದ್ರ ಕುಮಾರ್ ಅವರಿಗೂ ಫಿಡೆಲ್‌ಗೆ ಸಂಬಂಧಿಸಿದ ವಿಚಾರಗಳಿಗೂ ಏನು ಸಂಬಂಧ ಎಂದು ನಿಮಗೆ ಅಚ್ಚರಿಯಾಗಬಹಃದು. ನೀವೇ ಇದನ್ನಿಲ್ಲಿ ನೋಡಬಹುದು.

ಕೆಲವರಿಗೆ ಆಶ್ಚರ್ಯ ಆಗಬಹುದು- ಚರ್ಚ್ ಮತ್ತು ನಾಸ್ತಿಕ ಕ್ರಾಂತಿಕಾರಿಗಳು ಸಶಸ್ತ್ರ ಹೋರಾಟ ನಡೆಸಿದ ದೊಡ್ಡ ಪರಂಪರೆಯೇ ಲ್ಯಾಟಿನ್ ಅಮೇರಿಕಾದಲ್ಲಿದೆ. ಫ್ರೀಯ್ ಬ್ರಿಟ್ಟೋ ಧಾರ್ಮಿಕ ವ್ಯಕ್ತಿ; ನಾಸ್ತಿಕನಲ್ಲ. ಕ್ಯಾಸ್ಟ್ರೊ ಘೋಷಿತ ನಾಸ್ತಿಕ. ಆದರೆ, ಇಬ್ಬರೂ ಕರ್ಮಠರಲ್ಲ. ಇಬ್ಬರೂ ಸಮಾಜವಾದಿ ವಿಚಾರಗಳ ಎಡಪಂಥೀಯರು.

ಈ ಪುಸ್ತಕದಲ್ಲಿ ಒಂದು ಕಡೆ ಕ್ರಿಸ್ತನ ಪವಾಡಗಳ ಬಗ್ಗೆ ಫಿಡೆಲ್ ಅವರು ಮಾತನಾಡುತ್ತಾರೆ. ನನಗೆ ನೆನಪಿರುವಂತೆ ಅವರು ಹೇಳಿದ್ದು ಹೀಗೆ- “ಏಸು ಕ್ರಿಸ್ತ ಪವಾಡಗಳನ್ನು ಮಾಡಿದ. ಬ್ರೆಡ್ ಮತ್ತು ವೈನನ್ನು ದ್ವಿಗುಣಗೊಳಿಸಿದ, ಹೆಚ್ಚಿಸಿದ! -ಹಸಿದವರಿಗಾಗಿ. ನಾವು ಕಮ್ಯುನಿಸ್ಟರು ಕ್ರಾಂತಿಯಿಂದ ಏನು ಮಾಡುತ್ತಿದ್ದೇವೆ? ಹಸಿದವರಿಗೆ ಅಹಾರೋತ್ಪನ್ನ ಹೆಚ್ಚಿಸುವುದು, ಆಸ್ಪತ್ರೆಗಳನ್ನು ಹೆಚ್ಚಿಸುವುದು,

ಮಕ್ಕಳಿಗೆ ಶಾಲೆಗಳನ್ನು ಹೆಚ್ಚಿಸುವುದು, ದುಡಿಯುವ ಕೈಗಳಿಗೆ ಉದ್ಯೋಗ ಹೆಚ್ಚಿಸುವುದು… ಜನರ ಜೀವನ ಮಟ್ಟ ಹೆಚ್ಚಿಸುವುದು!.. ಕ್ರಿಸ್ತ ಮಾಡಿದ್ದಕ್ಕೂ, ನಾವು ಮಾಡುತ್ತಿರುವುದಕ್ಕೂ ಏನು ವ್ಯತ್ಯಾಸವಿದೆ?”

ಅಮೇರಿಕಾದ ಫ್ರುಟ್ ಇಂಡಸ್ಟ್ರಿಯ ಅಡಿಯಾಳಾಗಿದ್ದ ಬ್ಯಾಟಿಸ್ಟಾ ಎಂಬ ಸರ್ವಾಧಿಕಾರಿಯ ಹುಟ್ಟಡಗಿಸಿದ್ದ ಫಿಡೆಲ್, ಚೆ, ರೌಲ್, ಕ್ಯಾಮಿಲಿಯೊರಂತಹ ಬೆರಳೆಣಿಕೆಯ ಮತ್ತು ಆ ಕಾಲದಲ್ಲಿ ಅರೆಬೆಂದಿದ್ದ ಯುವ ಕಮ್ಯುನಿಸ್ಟರು,  ಸೈದ್ಧಾಂತಿಕತೆಯನ್ನೇ ಮುಂದುಮಾಡಿಕೊಂಡು ನಿಷ್ಕ್ರಿಯವಾಗಿದ್ದ ಕ್ಯೂಬನ್  ಕಮ್ಯುನಿಸ್ಟ್ ಪಾರ್ಟಿಯ ಕಣ್ಣೆದುರೇ ಕ್ರಾಂತಿ ಮಾಡಿದರಲ್ಲ. ಎಲ್ಲಾ ಟೀಕೆ, ವಿರೋಧಗಳ ನಡುವೆ ದೇಶ ಕಟ್ಟಿದರಲ್ಲ! ಅದು ಹೇಗೆ ಸಾಧ್ಯವಾಯಿತು? ಇಂತಹಾ ವಿಷಯಗಳಲ್ಲೇ ಮಹೇಂದ್ರ ಕುಮಾರ್ ಅಂತವರ ಸಂಘಟನಾ ಶಕ್ತಿಯ ಮಹತ್ವವಿರುವುದು.

ಅಜ್ಞಾನ, ಬಡತನ, ನಮ್ಮ ಹಿಂದೂತ್ವವಾದದಂತೆ ಇದ್ದ ಸ್ಪಾನಿಷ್ ಬ್ರಾಂಡಿನ- “ಕ್ರಿಸ್ತನನ್ನು ಮರೆತ ಕ್ರೂರ ಗುಲಾಮಿ ಕ್ರಿಶ್ಚಿಯಾನಿಟಿ”ಯ ಅಡಿಯಾಳುಗಳಾಗಿದ್ದ ಬಡಜನರಿಗೆ ನೀವು ಮೂರ್ಖರು, ಏಸುವಿನ ಪವಾಡ ಸುಳ್ಳು ಇತ್ಯಾದಿ ನಾಸ್ತಿಕ ಪ್ರವಚನ ಉದುರಿಸುತ್ತಿದ್ದರೆ, ಆ ಜನರು ಈ ಕ್ರಾಂತಿಕಾರಿಗಳನ್ನು- ಅವರ ಉದ್ದೇಶ ಎಷ್ಟೇ ಚೆನ್ನಾಗಿರಲಿ ಒದ್ದೋಡಿಸುತ್ತಿದ್ದರು. ಗ್ರ್ಯಾನ್ಮಾ ಎಂಬ ತಗಡು ಹಡಗಿನಲ್ಲಿ ಸ್ವಾತಂತ್ರ್ಯದ ಕನಸು ಹೊತ್ತು ಬಂದ ನೂರು ಚಿಲ್ಲರೆ ಯುವಕರಲ್ಲಿ ಮೊದಲ ದಾಳಿಯಲ್ಲಿ ಬದುಕುಳಿದ ಒಂದು ಡಜನ್ ಜನರು, ಒಂದು ವರ್ಷದೊಳಗೆ ಜನಸಾಗರವಾಗಿ, ಅಧಿಕಾರ ಹಿಡಿಯುತ್ತಿರಲಿಲ್ಲ.

ಜನರೇನಿದ್ದಾರೋ, ಅದೇ ಆಗಿದ್ದಾರೆ! ನಿಮ್ಮ ತತ್ತ್ವಕ್ಕಾಗಿ ಜನರಿಲ್ಲ. ಜನರಿಗಾಗಿ ನಿಮ್ಮ ತತ್ತ್ವವಿದೆ. ಸೈದ್ಧಾಂತಿಕ ಶುದ್ಧತೆ ಇರಲಿ ಬಿಡಿ, ಅಹಿಂದರು ಕೇಳುತ್ತಿರುವ ಸಮಾನತೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲವೇ ಯುವಕರು ಅವರ ದಾರಿ ಹಿಡಿಯುತ್ತಾರೆ. ಬಹುಶಃ ಮಹೇಂದ್ರ ಕುಮಾರ್ ಇಂತದ್ದೇ ಚಿಂತನೆ ಹೊಂದಿದ್ದರು.

ನನಗೆ ಅವರ ಸಂದರ್ಭದಲ್ಲಿ ಇದೇ ವಿಷಯ ನೆನಪಿಗೆ ಬರಲು ಕಾರಣವೆಂದರೆ, ಕೆಲವು ದಿನಗಳ ಕಾಲ ನಡೆದ ಈ ದೀರ್ಘ ಸಂದರ್ಶನದ ಬಳಿಕ ನಂತರದ ದಿನಗಳಲ್ಲಿ ಬ್ರಿಟ್ಟೋ ಮತ್ತು ಕ್ಯಾಸ್ಟ್ರೊ ಹೇಳಿದ ಮಾತುಗಳು.

“ಒಂದು ದಿನ ಯಾರಾದರೂ ನನ್ನನ್ನು ನಾಸ್ತಿಕ ಕಮ್ಯುನಿಸ್ಟ್ ಆಗಿ ಮಾಡಲು ಸಾಧ್ಯವಿದ್ದರೆ, ಅದು ಫಿಡೆಲ್ ಕ್ಯಾಸ್ಟ್ರೊರಿಂದ ಮಾತ್ರ ಸಾಧ್ಯ” ಎಂದು ಫ್ರೀಯ್ ಬ್ರಿಟ್ಟೋ ಹೇಳಿದರೆ, ಫಿಡೆಲ್ ಕ್ಯಾಸ್ಟ್ರೊ ಹೇಳಿದ್ದು ಹೀಗೆ: “ಯಾರಾದರೂ ಒಂದು ದಿನ ನನ್ನನ್ನು ಆಸ್ತಿಕನಾಗಿ ಪರಿವರ್ತಿಸಿದರೆ, ಅದು ಆ ಪಾದ್ರಿ ಫ್ರೀಯ್ ಬ್ರಿಟ್ಟೋ”.

ತದ್ವಿರುದ್ಧ ಅನಿಸುವ ವಿಚಾರಗಳ ನಡುವೆಯೂ ನಿಜವಾದ ಪ್ರಾಮಾಣಿಕತೆ ಇದ್ದರೆ ಪರಸ್ಪರ ಗೌರವ ಸಾಧ್ಯ ಮತ್ತು ಅನ್ಯಾಯ, ದಮನಗಳ ವಿರುದ್ಧದ ಹೋರಾಟದಲ್ಲಿ ಸಮನ್ವಯ ಸಾಧ್ಯ. ತೀರಾ ಅನಿರೀಕ್ಷಿತ ಮತ್ತು ಅಕಾಲಿಕ ಅಗಲುವಿಕೆಯ ಈ ಸಂದರ್ಭದಲ್ಲಿ ಮಹೇಂದ್ರ ಕುಮಾರ್ ಇಂತಹಾ ಚಿಂತನೆಯ ಸಂಧಿಕಾಲದಲ್ಲಿದ್ದರು ಎಂದು ನನಗನಿಸುತ್ತದೆ.


ಇದನ್ನೂ ಓದಿ: ಪ್ರಗತಿಪರ ಚಿಂತಕ, ನಮ್ಮಧ್ವನಿ ಬಳಗದ ಮಹೇಂದ್ರ ಕುಮಾರ್‌ ಇನ್ನಿಲ್ಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...