ನೀಲಗಾರ |
ಕೆಲವು ವರ್ಷಗಳ ಕೆಳಗೆ ಪಾಕಿಸ್ತಾನದ ಕವಿಯೊಬ್ಬರು ನಮ್ಮ ದೇಶದಂತೆ ನೀವಾಗಬೇಡಿ ಎಂದು ಭಾರತವನ್ನು ಉದ್ದೇಶಿಸಿ ಬಹಳ ನೋವಿನಿಂದ ಕೂಡಿದ ಕವಿತೆಯೊಂದನ್ನು ಬರೆದಿದ್ದರು.
ನಮ್ಮದೇ ಸೋದರಿ ದೇಶ, ಇಂದಲ್ಲಾ ನಾಳೆ ಒಂದೇ ಆಗಬೇಕಿರುವ ನೆರೆಯ ದೇಶವು ಅತ್ಯಂತ ಅರಾಜಕವಾದ ಪರಿಸ್ಥಿತಿಯಲ್ಲಿರುವುದು ನಮಗೆಲ್ಲರಿಗೂ ಗೊತ್ತು. ಸೈನ್ಯ, ಇಂಟೆಲಿಜೆನ್ಸ್ ಸಂಸ್ಥೆ, ಮತೀಯವಾದಿಗಳು, ಅಮೆರಿಕಾ ಮತ್ತು ಭ್ರಷ್ಟ ರಾಜಕಾರಣಿಗಳು ಇವೆಲ್ಲದರ ಮಧ್ಯೆ ನಲುಗುತ್ತಿರುವ ಜನಸಾಮಾನ್ಯರು ಇದೇ ಪಾಕಿಸ್ತಾನ. ಹಾಗಾಗಿಯೇ ಭಯೋತ್ಪಾದಕರನ್ನೂ ಮಟ್ಟ ಹಾಕಲಾಗದ ದುಸ್ಥಿತಿ. ಬಹುಶಃ ಇದೇ ಆ ಕವಿಯ ಮನದಾಳದಲ್ಲಿದ್ದದ್ದು.
ಆದರೆ, ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳು ದುಃಖಕರವಾಗಿದೆ. ನಮ್ಮ ದೇಶದ ಸಿಆರ್ಪಿಎಫ್ ಮೇಲೆ ಭಯೋತ್ಪಾದಕ ದಾಳಿ ನಡೆದು ಸುಮಾರು 40ಕ್ಕೂ ಹೆಚ್ಚು ಯೋಧರು ಸಾವಿಗೀಡಾಗುತ್ತಾರೆ. ಆ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಸರ್ವಪಕ್ಷ ಸಭೆ ಕರೆಯುತ್ತದೆ – ಪ್ರಧಾನಮಂತ್ರಿಯೇ ಅದರಲ್ಲಿ ಪಾಲ್ಗೊಳ್ಳದೇ ಪಕ್ಷದ ಪರ ಪ್ರಚಾರ ಮಾಡಲು ಹೋಗುತ್ತಾರೆ.
ಆ ನಂತರ ಭಾರತದ ವಾಯುಪಡೆಯು ಪಾಕಿಸ್ತಾನದ ಮೇಲೆ ದಾಳಿ ನಡೆಸುತ್ತದೆ. ಉದ್ವಿಗ್ನ ವಾತಾವರಣ ಹೆಚ್ಚಾಗುತ್ತಾ ಹೋಗುತ್ತದೆ. ಇನ್ನೊಂದು ಸರ್ವಪಕ್ಷ ಸಭೆ ನಡೆಯುತ್ತದೆ. ಆಗಲೂ ಪ್ರಧಾನಿ ಗೈರುಹಾಜರು. ಅವರು ಪ್ರತಿನಿತ್ಯ ಚುನಾವಣೆಯ ಸಿದ್ಧತೆಯಲ್ಲೇ ಹೆಚ್ಚು ತೊಡಗಿರುವುದು ಕಂಡು ಬರುತ್ತದೆ.
ಇದೇ ಅವಧಿಯಲ್ಲಿ ಪಾಕಿಸ್ತಾನದ ಇಮ್ರಾನ್ಖಾನ್ ಅವರು ಮಾಡಿದ ಭಾಷಣವೊಂದು ಎಲ್ಲೆಡೆ ಚರ್ಚೆಯಲ್ಲಿದೆ. ಆ ಭಾಷಣ ಮಾಡಿದ್ದು ಎಲ್ಲಿ ಗೊತ್ತೇ? ಸಂಸತ್ತಿನಲ್ಲಿ. ಅದೂ ಸಹಾ, ಈ ಸನ್ನಿವೇಶದಲ್ಲಿ ದೇಶದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲೆಂದೇ ಕರೆದ ವಿಶೇಷ ಅಧಿವೇಶನ. ಅಲ್ಲಿಯೇ ಭಾರತದ ಜೊತೆಗೆ ಶಾಂತಿ ಹಸ್ತವನ್ನು ಚಾಚುವ ಉದ್ದೇಶದಿಂದ ನಾವು ಪೈಲಟ್ ಅಭಿನಂದನ್ರನ್ನು ಬಿಡುಗಡೆ ಮಾಡುತ್ತೇವೆ ಎಂದು ಇಮ್ರಾನ್ಖಾನ್ ಹೇಳಿದಾಗ, ಇಡೀ ಸಂಸತ್ತು ಮೇಜುತಟ್ಟಿ ಅದನ್ನು ಅನುಮೋದಿಸುತ್ತದೆ.
ಅಭಿನಂದನ್ರ ಬಿಡುಗಡೆಯ ಸಂದೇಶ ಹೊರಬಂದ ಕೆಲ ಹೊತ್ತಿನಲ್ಲಿ ಪಂಜಾಬಿನ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪ್ರಧಾನಿ ಮೋದಿಯವರಲ್ಲಿ ಒಂದು ಕೋರಿಕೆ ಮುಂದಿಡುತ್ತಾರೆ. ಅಭಿನಂದನ್ ದೇಶದೊಳಕ್ಕೆ ಬರುವುದು ವಾಘಾ ಗಡಿಯಿಂದ. ವಾಘಾ ಆ ಕಡೆಯ ಪಂಜಾಬ್ನಲ್ಲಿದ್ದರೆ, ಈ ಕಡೆಗೆ ಭಾರತದ ಪಂಜಾಬಿನ ಅಟ್ಟಾರಿ ಇದೆ. ಅಮೃತಸರ ಮತ್ತು ಲಾಹೋರ್ ನಡುವಿನ ದೂರ ಕೇವಲ 58 ಕಿ.ಮೀ. ತಾನು ಖುದ್ದಾಗಿ ಹೋಗಿ ಅಭಿನಂದನ್ರನ್ನು ಕರೆತರುತ್ತೇನೆ ಎಂದು ಅಮರಿಂದರ್ ಕೋರಿಕೆ.
ಇದಕ್ಕೆ ಕಾರಣವಿದೆ. ಅವರು ಕ್ಯಾಪ್ಟನ್ ಅಮರಿಂದರ್. ಸ್ವತಃ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದವರು. ಜೊತೆಗೆ ಈ ಸದ್ಯ ವಾಘಾ-ಅಟ್ಟಾರಿ ಬಾರ್ಡರ್ ಬರುವ ಪಂಜಾಬಿನ ಮುಖ್ಯಮಂತ್ರಿ. ಅಭಿನಂದನ್ ಮತ್ತು ಅವರ ತಂದೆಯು ಶಿಕ್ಷಣ ಹಾಗೂ ತರಬೇತಿ ಪಡೆದುಕೊಂಡ ನ್ಯಾಷನಲ್ ಡಿಫೆನ್ಸ್ ಅಕ್ಯಾಡೆಮಿಯಲ್ಲೇ ಅಮರಿಂದರ್ ಸಿಂಗ್ ಸಹಾ ತರಬೇತಿ ಪಡೆದುಕೊಂಡಿದ್ದರು. ಜೊತೆಗೆ ಈ ಮನವಿ ಮಾಡಿಕೊಳ್ಳುವ ಹೊತ್ತಿನಲ್ಲಿ ಅಮರಿಂದರ್ ಸಿಂಗ್ ಅದೇ ಪ್ರದೇಶದಲ್ಲಿದ್ದರು. ಒಂದು ವೇಳೆ ಕ್ಯಾಪ್ಟನ್ ಅಮರಿಂದರ್ ಅವರು ವ್ಯಕ್ತಿಗತ ಇಮೇಜ್ ಹೆಚ್ಚಿಸಿಕೊಳ್ಳಲೆಂದೇ ಈ ಪ್ರಸ್ತಾಪ ಮುಂದಿಟ್ಟಿದ್ದಾರೆಂದುಕೊಳ್ಳಿ.
ಆದರೂ, ದೇಶದ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ದೇಶದ ಪ್ರಧಾನಿಗೆ ಇದೊಂದು ಅವಕಾಶವಾಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮಾಜಿ ಸೈನಿಕರಾದ ಅಮರಿಂದರ್ರನ್ನು ಅದಕ್ಕೆ ಕಳಿಸುವುದಕ್ಕಿಂತ ಒಳ್ಳೆಯ ನಡೆ ಇನ್ನೇನಾಗಿರಲು ಸಾಧ್ಯವಿತ್ತು?
ಆದರೆ ಮೋದಿಯವರು ಅಂಥಾ ಪ್ರಬುದ್ಧ ನಡೆಯನ್ನು ತೋರಲೇ ಇಲ್ಲ. ನಮ್ಮದೇ ದೇಶದ ಪ್ರಧಾನಿ ಹುದ್ದೆಯನ್ನು ಹೀಗಳೆಯುವುದು ಯಾರಿಗೂ ಇಷ್ಟವಿಲ್ಲದ ಸಂಗತಿ, ಆದರೆ ಪುಲ್ವಾಮಾ ಘಟನೆಯ ತರುವಾಯ ಪಾಕಿಸ್ತಾನದ ಪ್ರಧಾನಿ ವ್ಯವಹರಿಸಿದ ರೀತಿಗೂ ನಮ್ಮ ಭಾರತದ ಪ್ರಧಾನಿಯಾಗಿ ಮೋದಿಯವರು ತೋರಿದ ರಾಜಕೀಯ ಪ್ರೇರಿತ ನಡವಳಿಕೆಗಳಿಗೂ ಹೋಲಿಕೆ ಮಾಡಿದರೆ ನಿಜಕ್ಕೂ ಭಾರತೀಯರು ವಿಷಾದಗೊಳ್ಳಬೇಕಾಗಿ ಬಂದಿದೆ.
ಫೆಬ್ರವರಿ 28ರಂದು ಗುಜರಾತಿನಲ್ಲಿ ಕಾಂಗ್ರೆಸ್ ಪಕ್ಷವು `ಕಾಂಗ್ರೆಸ್ ಕಾರ್ಯಕಾರಿ ಸಮಿತಿ’ (ಸಿಡ್ಬ್ಲುಸಿ) ಯ ಸಭೆ ಆಯೋಜಿಸಿತ್ತು. ಕಳೆದ ಆರು ದಶಕಗಳ (60 ವರ್ಷಗಳ) ನಂತರ ಈ ಅತಿದೊಡ್ಡ ಸಭೆ ನಡೆಸಲು ಕಾಂಗ್ರೆಸ್ ಯೋಜಿಸಿಕೊಂಡಿತ್ತು. ಜೊತೆಗೆ ಚುನಾವಣಾ ಪ್ರಚಾರಕ್ಕಾಗಿ `ಜನಸಂಕಲ್ಪ ಯಾತ್ರೆ’ಗೆ ಚಾಲನೆ ನೀಡುವುದೂ ಅದರ ಭಾಗವಾಗಿತ್ತು. ಆದರೆ ಭಾರತ ಮತ್ತು ಪಾಕಿಸ್ತಾನ ನಡುವೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾದ್ದರಿಂದ ದೇಶದ ಭದ್ರತೆಗೆ ಒತ್ತು ಕೊಟ್ಟು ಕಾಂಗ್ರೆಸ್ ಆ ಸಭೆಗಳನ್ನು ಮುಂದಕ್ಕೂಡಿತು.
ಆದರೆ ಪ್ರಧಾನಿಯಾಗಿ ಮೋದಿಯವರು ಪುಲ್ವಾಮಾ ಘಟನೆಯ ತರುವಾಯ ನಿರಂತರವಾಗಿ ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಆ ಭಯೋತ್ಪಾದಕ ದಾಳಿ ನಡೆದ ಸುದ್ದಿ ನಡೆದ ಮೇಲೂ ಮೋದಿಯವರು ಜಿಮ್ ಕಾರ್ಬೆಟ್ ನ್ಯಾಶನಲ್ ಪಾರ್ಕಿನಲ್ಲಿ ಜಾಹಿರಾತೊಂದರ ಶೂಟಿಂಗ್ ಮುಂದುವರೆಸಿದರು ಎಂಬ ಆಪಾದನೆ ಸುಳ್ಳೋ ನಿಜವೋ ಎಂದು ಇತ್ಯರ್ಥಗೊಳ್ಳುವ ಮೊದಲೇ ಅವರು ಝಾಂಸಿಯೂ ಒಳಗೊಂಡಂತೆ ಬೇರೆಬೇರೆ ಕಡೆ ಪಕ್ಷದ ಪರವಾಗಿ ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸಿ ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರವನ್ನು ರಾಜಕೀಯ ವೇದಿಕೆಯಲ್ಲಿ ಸರಕಾಗಿಸಿಕೊಂಡು ಮಾತನಾಡಿದರು. ಯಾವ ಆತಂಕವೂ ಇಲ್ಲದಂತೆ `ಖೇಲೊ ಇಂಡಿಯಾ’ ಆಪ್ ಬಿಡುಗಡೆ ಮಾಡಿದರು.
Addressing a rally in Kanyakumari, Tamil Nadu. Watch. https://t.co/6jfPvu41u4
— Narendra Modi (@narendramodi) March 1, 2019
ಫೆಬ್ರವರಿ 28ರಂದು ವಿಶ್ವದ ಅತಿದೊಡ್ಡ ವೀಡಿಯೋ ಕಾನ್ಫರೆನ್ಸ್ ಮೂಲಕ `ಮೇರಾ ಬೂತ್ ಸಬ್ ಸೇ ಮಜಬೂತ್’ ಎಂಬ ಕಾರ್ಯಕ್ರಮದಲ್ಲಿ ಭಾಗಿಯಾಗಿ ಚುನಾವಣಾ ಪ್ರಚಾರ ಮಾಡಿದರು. ದೇಶದ ರಾಜಕಾರಣಿಗಳಲ್ಲೆ ಅತಿಹೆಚ್ಚು ಸೋಶಿಯಲ್ ಮೀಡಿಯಾ ಬಳಸುವ, ಫಾಲೋವರ್ ಗಳನ್ನು ಹೊಂದಿರುವ ರಾಜಕಾರಣಿ ಅಂದ್ರೆ ಮೋದಿಯವರು. ಟ್ವೀಟ್ಟರ್ ನಲ್ಲಿ ನಾಲ್ಕೂವರೆ ಕೋಟಿಗೂ ಹೆಚ್ಚು ಫಾಲೋವರ್.ಗಳನ್ನು ಹೊಂದಿದ್ದಾರೆ. ಆದರೆ ಪುಲ್ವಾಮಾ ಘಟನೆಯ ನಂತರ ಟ್ವಿಟ್ಟರ್ ನಲ್ಲೂ ಅವರು ಬಿಜೆಪಿ ರಾಜಕೀಯ ಪ್ರಚಾರಗಳನ್ನು ಹೆಚ್ಚಾಗಿ ಟ್ವೀಟ್ ಮಾಡಿದ್ದಾರೆಯೇ ವಿನಾಃ ಆತಂಕದ ಸ್ಥಿತಿಯಲ್ಲಿ ದೇಶಕ್ಕೆ ಅಗತ್ಯವಿರುವ ನಾಯಕತ್ವದ ಮಾತುಗಳು ಅವರಿಂದ ಟ್ಟೀಟುಗೊಂಡಿಲ್ಲ.
May the lamp of progress and prosperity shine brighter and brighter in every home.
Join crores of beneficiaries of people-centric schemes of the NDA Government and hardworking @BJP4India Karyakartas in the ongoing #BJPKamalJyoti Sankalp Abhiyan.
Come, let us spread brightness. pic.twitter.com/Pdr9a1OyVQ
— Narendra Modi (@narendramodi) February 26, 2019
ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುವುದಕ್ಕೆಂದೇ ವಿಶೇಷ ಅಧಿವೇಶನ ಕರೆದು ವಿರೋಧ ಪಕ್ಷಗಳನ್ನೂ ಸಹಮತಕ್ಕೆ ತೆಗೆದುಕೊಂಡು ಸಮತೂಕದ ಮಾತುಗಳನ್ನಾಡುವ ಇಮ್ರಾನ್ ಖಾನ್ ಜಿನೆವಾ ಒಪ್ಪಂದವನ್ನು ಗೌರವಿಸಿ ತನ್ನ ವಶದಲ್ಲಿದ್ದ ಭಾರತದ ಕಮಾಂಡರ್ ಅಬಿನಂದನ್ ಬಿಡುಗಡೆಯನ್ನು ಸಂಸತ್ತಿನಲ್ಲೇ ಘೋಷಿಸುವಾಗ ಒಂದು ಆಶಯವಂತೂ ಭಾರತದ ಶಾಂತಿಪ್ರಿಯತೆ ಮತ್ತು ಸೌಹಾರ್ದತೆಯನ್ನು ಗೌರವಿಸುವ ನಿಜವಾದ ದೇಶಪ್ರೇಮಿಗಳಲ್ಲ ಮನಸಿನಲ್ಲಿ ಪುಟಿದೇಳುತ್ತಿರುತ್ತದೆ. ಅದು, ಮೋದಿಯವರ ಕಾಲದಲ್ಲಿ ಭಾರತ ಪಾಕಿಸ್ತಾನದಂತಾಗದಿರಲಿ, ದೇಶದ ಪ್ರಜಾಪ್ರಭುತ್ವ ಗಟ್ಟಿಗೊಳ್ಳಲಿ ಎಂಬುದು.