ಬಿಹಾರದ ಕೈಮೂರ್ ಪ್ರಸ್ಥಭೂಮಿಯ 108 ಹಳ್ಳಿಗಳ ನಿವಾಸಿಗಳು ಮುಂಬರುವ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ. ಬುಡಕಟ್ಟು ಜನಾಂಗದವರು ಪ್ರತಿಭಟನೆ ನಡೆಸುತ್ತಿದ್ದಾಗ ಅವರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.
ಪ್ರತಿಭಟನೆಗೆ ಕೈಮೂರ್ ಮುಕ್ತಿ ಮೋರ್ಚಾ (ಕೆಎಂಎಂ) ನೇತೃತ್ವ ವಹಿಸಿದ್ದು, ಈ ಬುಡಕಟ್ಟು ಪ್ರದೇಶದ 25 ಕಾರ್ಯಕರ್ತರನ್ನು ಸುಳ್ಳು ಆರೋಪದಡಿ ಬಂಧಿಸಲಾಗಿದೆ ಎಂದು ಆರೋಪಿಸಲಾಗಿದೆ. ತೆರವುಗೊಳಿಸುವಿಕೆಯನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದ್ದರೂ, ಅರಣ್ಯ ಇಲಾಖೆಯು ಬಲವಂತವಾಗಿ ಹೊರಹಾಕುವಿಕೆ ಮತ್ತು ಬೆಳೆಗಳನ್ನು ಬುಲ್ಡೊಜಿಂಗ್ ಮಾಡುವುದರ ಮೂಲಕ ನಾಶಪಡಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಕೈಮೂರ್ ಅನ್ನು ನಿಗದಿತ ಪ್ರದೇಶವೆಂದು ಸರ್ಕಾರ ಘೋಷಿಸಬೇಕು ಎಂದು ಕೆಎಂಎಂ ಒತ್ತಾಯಿಸಿದೆ. ಗ್ರಾಮ ಸಭೆಗಳ ಒಪ್ಪಿಗೆ ಮತ್ತು ಬುಡಕಟ್ಟು ಜನಸಂಖ್ಯೆಯ ಅನುಮೋದನೆಯ ನಂತರವೇ ಈ ಪ್ರದೇಶದಲ್ಲಿ ಹುಲಿ ಮೀಸಲು ರಚನೆ ಮಾಡಬೇಕು ಎಂದು ಅದು ಹೇಳಿದೆ.
ಇದನ್ನೂ ಓದಿ: ನ.9ರಂದು ಲಾಲೂ ಜೈಲಿನಿಂದ ಹೊರಗೆ; ಮರುದಿನ ನಿತೀಶ್ಗೆ ಬೀಳ್ಕೊಡುಗೆ: ತೇಜಸ್ವಿ ಯಾದವ್
ದೆಹಲಿಯ ನಾಲ್ಕು ಸದಸ್ಯರ ಸಮಿತಿಯು ಈ ಕುರಿತು ವರದಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ವರದಿಯನ್ನು ಬಿಡುಗಡೆ ಮಾಡಿದ ಸಿಪಿಐ(ಎಂ) ಪೊಲೈಟ್ಬ್ಯೂರೋದ ಬೃಂದಾ ಕರತ್, “ಈ ಸಂದರ್ಭದಲ್ಲಿ, ಬಿಹಾರ ಸರ್ಕಾರವು ಅರಣ್ಯ ಹಕ್ಕುಗಳ ಕಾಯ್ದೆಯನ್ನು ಜಾರಿಗೆ ತರದೇ ಕ್ರಿಮಿನಲ್ ನೆಗ್ಲಿಜೆನ್ಸಿಯನ್ನು ತೋರಿದೆ” ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
ಸೆಪ್ಟೆಂಬರ್ 10 ರಂದು 108 ಗ್ರಾಮಗಳಿಂದ ಸಾವಿರಾರು ಆದಿವಾಸಿಗಳು ಅಧೌರಾದ ಅರಣ್ಯ ಇಲಾಖೆ ಕಚೇರಿಯ ಮುಂದೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ನಂತರ ಪೊಲೀಸರು ಅವರ ಮೇಲೆ ಹಿಂಸಾಚಾರ ನಡೆಸಿದರು. ಇದರಲ್ಲಿ ಏಳು ಕಾರ್ಯಕರ್ತರ ಮೇಲೆ ಗುಂಡು ಹಾರಿಸಿ, ಲಾಠಿ ಚಾರ್ಜ್ ಮಾಡಿ ಬಂಧಿಸಲಾಯಿತು. ನಂತರ ಅಕ್ಟೋಬರ್ 16 ರಂದು ಈ ಎಲ್ಲಾ ಏಳು ಮಂದಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಆದಿವಾಸಿಯಾದ ಪ್ರಭು ಎಂಬಾತನನ್ನು ಪೋಲಿಸರು ಗುಂಡುಹಾರಿಸಿ ಕೊಂದರು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಚುನಾವಣೆ ಬಂದರೆ ಒಂದಷ್ಟು ನಾಯಕರು ಕಾಣಿಸುತ್ತಾರೆ; ಪ್ರತೀ ಚುನಾವಣೆಯಲ್ಲೂ ಇದು ಸಾಮಾನ್ಯ: ಮೋದಿ
A,bold n truth news I abide with u.