ಸೆಪ್ಟಂಬರ್ ಮೊದಲಾರ್ಧದಲ್ಲಿ ನಡೆಸಲು ಉದ್ದೇಶಿಸಿರುವ ರಾಷ್ಟ್ರವ್ಯಾಪಿ NEET, JEE ಪರೀಕ್ಷೆಗಳನ್ನು ಮುಂದೂಡುವಂತೆ ನಟ ಸೋನು ಸೂದ್ ಆಗ್ರಹಿಸಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಸಾವಿರಾರು ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತಲುಪಲು ಸಹಾಯ ಮಾಡಿ ವ್ಯಾಪಕ ಮೆಚ್ಚುಗೆ ಗಳಿಸಿದ್ದ ನಟ ಸೂದ್ ಸಾಂಕ್ರಾಮಿಕ ಕಾಲದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತೆ ಒತ್ತಾಯಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
26 ಲಕ್ಷ ವಿದ್ಯಾರ್ಥಿಗಳು NEET ವೈದ್ಯಕೀಯ ಅರ್ಹತಾ ಪರೀಕ್ಷೆ ಮತ್ತು JEE ಐಐಟಿ ಅರ್ಹತ ಪರೀಕ್ಷೆ ಬರೆಯಲು ತಯಾರಿ ನಡೆಸಿದ್ದು, ಕೊರೊನಾ ಮತ್ತು ಪ್ರವಾಹ ಪರಿಸ್ಥಿತಿಯಿಂದಾಗಿ ಪರೀಕ್ಷೆ ಮುಂದೂಡುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಪರೀಕ್ಷೆ ನಡೆಸಿಯೇ ಸಿದ್ದ ಎಂದು ಘೋಷಿಸಿದೆ. ಈ ಕುರಿತು ದಾಖಲಾದ ಪಿಐಎಲ್ ಅನ್ನು ಕೂಡ ಸುಪ್ರೀಂ ವಜಾಗೊಳಿಸಿದೆ.
ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕದಲ್ಲಿದ್ದಾರೆ. ಹಾಗಾಗಿ ಅವರಿಗೆ ನೆರವಾಗಲು ಕನಿಷ್ಠ ಮೂರು ತಿಂಗಳ ಕಾಲ ಈ ಪರೀಕ್ಷೆಗಳನ್ನು ಮುಂದೂಡಬೇಕೆಂದು ಸೋನು ಸೂದ್ ಹೇಳಿದ್ದಾಗಿ ಎನ್ಡಿಟಿವಿ ವರದಿ ಮಾಡಿದೆ.
It's my request to government of India, to postpone the #Neet/#JEE exams in the current situation of the country! In the given #COVID19 situation, we should care utmost & not risk the lives of students! #PostponeJEE_NEETinCOVID@EduMinOfIndia @PMOIndia
— sonu sood (@SonuSood) August 25, 2020
ಈ ಬಾರಿ ಬಿಹಾರದ ಅತಿ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ದತೆ ನಡೆಸಿದ್ದಾರೆ. ಆದರೆ ಅಲ್ಲಿ ಸಂಭವಿಸಿದ ಭಾರೀ ಪ್ರವಾಹದಿಂದಾಗಿ 13-14 ಜಿಲ್ಲೆಗಳು ತೀವ್ರ ಸಂಕಷ್ಟದಲ್ಲಿವೆ. ಅವರಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲ. ನಗರಗಳಲ್ಲಿ ಉಳಿಯಲು ಆರ್ಥಿಕ ಸಹಾಯವಿಲ್ಲ. ಹೀಗಿರುವಾಗ ಆ ವಿದ್ಯಾರ್ಥಿಗಳನ್ನು ಮನೆಯಿಂದ ಹೊರಬಂದು ಪರೀಕ್ಷೆ ಬರೆಯಿರಿ ಎಂದು ಹೇಗೆ ಹೇಳಲು ಸಾಧ್ಯ ಎಂದು ಸೂದ್ ಪ್ರಶ್ನಿಸಿದ್ದಾರೆ.
ನಾನು ಒಬ್ಬ ಇಂಜಿನಿಯರ್. ವಿದ್ಯಾರ್ಥಿಗಳ ಆಸೆ ಆಕಾಂಕ್ಷೆ ನನಗೆ ಗೊತ್ತಿದೆ. ಈ ದೇಶದ ಹಲವು ವಿಭಾಗಗಳಿಗೆ ಆಯ್ಕೆಯಾಗುವ ವಿದ್ಯಾರ್ಥಿಗಳು ನಿರಾಳವಾಗಿ ಪರೀಕ್ಷೆ ಬರೆಯುವಂತ ವಾತವರಣ ನಿರ್ಮಿಸಬೇಕೆಂದು ಸೂದ್ ಅಭಿಪ್ರಾಯಪಟ್ಟಿದ್ದಾರೆ.
ಆದರೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವ ರಮೇಶ್ ನಿಶಾಂಕ್ ಪೋಖ್ರಿಯಾಲ್ ಪರೀಕ್ಷೆ ನಡೆಸುವ ಕೇಂದ್ರದ ತೀರ್ಮಾವನ್ನು ಸಮರ್ಥಿಸಿಕೊಂಡಿದ್ದಾರೆ. ಇದು ಪೋಷಕರು ಮತ್ತು ವಿದ್ಯಾರ್ಥಿಗಳ ಒತ್ತಾಯವಾಗಿದ್ದು ಈಗಾಗಲೇ ಶೆ.80 ರಷ್ಟು ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ. ಅವರೆಲ್ಲರೂ ಪರೀಕ್ಷೆ ಬರೆಯುತ್ತಾರೆ ಎಂದು ದೂರದರ್ಶನದೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
ಬಹಳಷ್ಟು ವಿದ್ಯಾರ್ಥಿಗಳು ಮತ್ತು ಪೋಷಕರು ಪರೀಕ್ಷೆ ಬರೆಯಲು ನಾವು ಇನ್ನು ಎಷ್ಟು ಕಾಲ ಕಾಯಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಹಾಗಾಗಿ ಪರೀಕ್ಷೆ ಮುಂದೂಡುವುದಿಲ್ಲ. ಸಾಮಾಜಿಕ ಅಂತರದ ಸುರಕ್ಷಾ ನಿಯಮಗಳನ್ನು ಕಾಯ್ದುಕೊಂಡು ಪರೀಕ್ಷೆ ನಡೆಸುತ್ತೇವೆ ಎಂದಿದ್ದಾರೆ.
ಖ್ಯಾತ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್ ಸೇರಿದಂತೆ ಹಲವುರು ಪರೀಕ್ಷೆ ಮುಂದೂಡಲು ಆಗ್ರಹಿಸಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಬಟ್ ಸರ್ ಕಾಮಿಕ್ಸ್ ಹೆಸರಿನಲ್ಲಿ ವ್ಯಂಗ್ಯ ಮಾಡುವ ಡೂಡಲ್ಗಾರ ಅರವಿಂದ್ ತೆಗ್ಗಿನಮಠರವರು ಸರ್ಕಾರಕ್ಕೆ ಪರೀಕ್ಷೆ ಮುಂದೂಡುವ ಆಕಾಂಕ್ಷೆಯಿದೆ. ಆದರೆ ಅದನ್ನು ಯಾವಾಗ ಘೋಷಿಸಿದರೆ ಹೆಚ್ಚಿನ ರಾಜಕೀಯ ಲಾಭ ದೊರಕುತ್ತದೆ ಎಂದು ಪ್ರಧಾನಿಗಳು ಯೋಚಿಸುತ್ತಿದ್ದಾರೆ ಎಂದು ರಚಿಸಿರುವ ಡೂಡಲ್ ಟ್ವಿಟ್ಟರ್ನಲ್ಲಿ ಗಮನ ಸೆಳೆದಿದೆ.
When should I announce?
–
Like what I do ?https://t.co/JHrv3WTVeC pic.twitter.com/a78wadnrAB— ButtSir Comics (@ButtsirComics) August 26, 2020
ಇನ್ನು ಪರೀಕ್ಷೆ ನಡೆಸುವ ಸರ್ಕಾರದ ಕ್ರಮವನ್ನು ವಿರೋಧಿಸಿ ವಿರೋಧ ಪಕ್ಷಗಳು ಇಂದು ಸಭೆ ಸೇರುತ್ತಿವೆ. ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಜೆಇಇ-ನೀಟ್ ಪರೀಕ್ಷೆ ಮುಂದೂಡಿ: ಗ್ರೇಟಾ ಥನ್ಬರ್ಗ್ ಸೇರಿ ಹಲವರ ಒತ್ತಾಯ