ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆಗಳನ್ನು ಆರಂಭಿಸಿದ್ದು, 2 ದಿನಗಳ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೇಲೆ ತೃಣಮೂಲ ಕಾಂಗ್ರೆಸ್ ಹರಿಹಾಯ್ದಿದೆ. ಬುಡಕಟ್ಟು ನಾಯಕನ ವಿಚಾರದಲ್ಲಿ ಅಮಿತ್ ಶಾ ಮಾಡಿದ ಎಡವಟ್ಟು ಇದಕ್ಕೆ ಕಾರಣವಾಗಿದೆ.
ನವೆಂಬರ್ 5 ರ ಗುರುವಾರ ಬಂಕುರಾಕ್ಕೆ ಭೇಟಿ ನೀಡಿದ್ದ, ಬಿಜೆಪಿಯ ಅಮಿತ್ ಶಾ ಬುಡಕಟ್ಟು ಸಮುದಾಯದ ಜೊತೆಗಿನ ಕಾರ್ಯಕ್ರಮದ ಸಂದರ್ಭದಲ್ಲಿ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದರು. ಅದು ಈಗ ಆಡಳಿತರೂಢ ಟಿಎಂಸಿಯ ಕೆಂಗಣ್ಣಿಗೆ ಗುರಿಯಾಗಿದೆ.
ನಡೆದಿದ್ದು ಏನೆಂದರೆ, ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರ ಪ್ರತಿಮೆ ಎಂದುಕೊಂಡ ಕೇಂದ್ರ ಗೃಹ ಸಚಿವರು ಅನಾಮಧೇಯ ಬುಡಕಟ್ಟು ಬೇಟೆಗಾರನ ಪ್ರತಿಮೆಗೆ ಹೂಮಾಲೆ ಹಾಕಿ ಬಿರ್ಸಾ ಮುಂಡಾ ಎಂದಿದ್ದಾರೆ. ಬಿರ್ಸಾ ಮುಂಡಾ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ 25 ನೇ ವಯಸ್ಸಿನಲ್ಲಿ ವೀರಮರಣ ಹೊಂದಿದ ಬುಡಕಟ್ಟು ನಾಯಕರಾಗಿದ್ದಾರೆ.
ಬಂಕುರಾದ ಬುಡಕಟ್ಟು ಮುಖಂಡರು ಬಿಜೆಪಿ ನಾಯಕರು ಹಾರ ಹಾಕಿದ ಪ್ರತಿಮೆ ಅವರ ನಾಯಕ ಬಿರ್ಸಾ ಮುಂಡಾದದ್ದಲ್ಲ, ಮತ್ತೊಬ್ಬ ಬುಡಕಟ್ಟು ಬೇಟೆಗಾರರದ್ದು ಎಂದು ಹೇಳಿದ್ದಾರೆ.
Paid floral tributes to legendary tribal leader Bhagwan Birsa Munda ji in Bankura, West Bengal today.
Birsa Munda ji’s life was dedicated towards the rights and upliftment of our tribal sisters & brothers. His courage, struggles and sacrifices continue to inspire all of us. pic.twitter.com/1PYgKiyDuY
— Amit Shah (@AmitShah) November 5, 2020
ಬಂಕುರಾ ಭೇಟಿಯ ನಂತರ, ಅಮಿತ್ ಶಾ ತಮ್ಮ ಟ್ವಿಟರ್ನಲ್ಲಿ ಕಾರ್ಯಕ್ರಮದ ಬಗ್ಗೆ ಪೋಸ್ಟ್ ಮಾಡಿದ್ದು, “ಪಶ್ಚಿಮ ಬಂಗಾಳದ ಬಂಕುರಾದಲ್ಲಿ ಬುಡಕಟ್ಟು ಮುಖಂಡ ಭಗವಾನ್ ಬಿರ್ಸಾ ಮುಂಡಾ ಜಿ ಅವರಿಗೆ ಇಂದು ಹೂವಿನ ಗೌರವ ಸಲ್ಲಿಸಲಾಗಿದೆ. ನಮ್ಮ ಬುಡಕಟ್ಟು ಸಹೋದರಿ ಮತ್ತು ಸಹೋದರರ ಹಕ್ಕುಗಳು ಮತ್ತು ಉನ್ನತಿಗಾಗಿ ಬಿರ್ಸಾ ಮುಂಡಾ ತಮ್ಮ ಜೀವನವನ್ನು ಸಮರ್ಪಿಸಿದರು. ಅವರ ಧೈರ್ಯ, ಹೋರಾಟಗಳು ಮತ್ತು ತ್ಯಾಗಗಳು ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತಿವೆ” ಎಂದಿದ್ದಾರೆ.
ಘಟನೆ ನಡೆದ ಕೂಡಲೇ ಟಿಎಂಸಿ ನಾಯಕರು ಅಮಿತ್ ಶಾ ಮತ್ತ ಅವರ ಬೆಂಬಲಿಗರ ಮೇಲೆ ವಾಗ್ದಾಳಿ ನಡೆಸಿದ್ದಾರೆ.
'Bohiragato' are at it again!
Union Home Minister @AmitShah is so ignorant of Bengal's culture that he insulted Bhagwan Birsa Munda by garlanding a wrong idol & placed his photo at someone else's foot. Will he ever respect Bengal?#BengalAsksAmitShahhttps://t.co/045lw50TV2
— All India Trinamool Congress (@AITCofficial) November 6, 2020
“ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂಗಾಳದ ಸಂಸ್ಕೃತಿಯನ್ನು ಅರಿಯದ ಕಾರಣ ಭಗವಾನ್ ಬಿರ್ಸಾ ಮುಂಡಾ ಎಂದು ಬೇರೆಯೆ ವಿಗ್ರಹವನ್ನು ಆರಿಸಿ ಅವಮಾನಿಸಿದ್ದಾರೆ. ಅಲ್ಲದೆ ಅವರ ಫೋಟೋವನ್ನು ಬೇರೊಬ್ಬರ ಪಾದದ ಮೇಲೆ ಇಟ್ಟಿದ್ದಾರೆ. ಅವರು ಎಂದಾದರೂ ಬಂಗಾಳವನ್ನು ಗೌರವಿಸುತ್ತಾರೆಯೇ? ” ಎಂದು ತೃಣಮೂಲ ಕಾಂಗ್ರೆಸ್ ಅಧಿಕೃತ ಖಾತೆ ಟ್ವೀಟ್ ಮಾಡಿದೆ.