ಅಸ್ಸಾಂ, ಬಿಹಾರ, ಉತ್ತರಾಖಂಡ, ಮತ್ತು ಉತ್ತರ ಪ್ರದೇಶದ ಪ್ರವಾಹ ಪರಿಸ್ಥಿತಿ ಗುರುವಾರ (ಜುಲೈ 23) ಹದಗೆಟ್ಟಿದ್ದು, ಅಸ್ಸಾಂ ಮತ್ತು ಬಿಹಾರದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ.
ಒಟ್ಟು 16 ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್ಎಫ್) ತಂಡಗಳನ್ನು ಅಸ್ಸಾಂ ಮತ್ತು 20 ಬಿಹಾರದಲ್ಲಿ ನಿಯೋಜಿಸಲಾಗಿದೆ ಎಂದು ಎನ್ಡಿಆರ್ಎಫ್ ಮಹಾನಿರ್ದೇಶಕ ಎಸ್. ಎನ್. ಪ್ರಧಾನ್ ತಿಳಿಸಿದ್ದಾರೆ.
ಅಸ್ಸಾಂನ 26 ಜಿಲ್ಲೆಗಳಲ್ಲಿನ 26 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಪ್ರವಾಹದಲ್ಲಿ 89 ಜನರು ಹಾಗೂ ಭೂಕುಸಿತದಲ್ಲಿ 26 ಸಾವುಗಳು ಸೇರಿದಂತೆ ಈ ವರ್ಷದ ಪ್ರವಾಹ ಮತ್ತು ಭೂಕುಸಿತದಲ್ಲಿ ರಾಜ್ಯದಾದ್ಯಂತ ಪ್ರಾಣ ಕಳೆದುಕೊಂಡ ಒಟ್ಟು ಜನರ ಸಂಖ್ಯೆ 115 ಕ್ಕೆ ಏರಿದೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ASDMA) ನೀಡಿರುವ ಬುಧವಾರದ ವರದಿಯ ಪ್ರಕಾರ, ಮೊರಿಗಾಂವ್ ಜಿಲ್ಲೆಯ ಬಾರ್ಪೆಟಾದ ಬಾಗ್ಬೋರ್ ಮತ್ತು ಮೊರಿಗಾಂವ್ ವಲಯದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
ಗೋಲ್ಪಾರವು 4.68 ಲಕ್ಷಕ್ಕೂ ಹೆಚ್ಚು ಪ್ರವಾಹ ಪೀಡಿತ ಜನರಿರುವ ಜಿಲ್ಲೆಯಾಗಿದ್ದು, ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಬಾರ್ಪೆಟಾದಲ್ಲಿ 3.82 ಲಕ್ಷ ಜನರು ಮತ್ತು ಮೊರಿಗಾಂವ್ ನಲ್ಲಿ 3.08 ಲಕ್ಷ ಜನರು ಭಾಧಿತರಾಗಿದ್ದಾರೆ. ಗೋವಾ ಮೌಜಾದ ಮೇಘಾಲಯದಿಂದ ಹರಿಯುವ ನದಿಯ ನೀರಿನ ಮಟ್ಟ ಹಠಾತ್ ಹೆಚ್ಚಳವಾಗಿದ್ದರಿಂದ ರಾತ್ರಿಯಿಡೀ ನೂರಾರು ಜನರು ನಿರಾಶ್ರಿತರಾದರು.
“ಇದು ಹಠಾತ್ತನೆ ಬಂದೆರಗಿದ ಪ್ರವಾಹವಾಗಿದ್ದು. ನಾವು ಸಧ್ಯಕ್ಕೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಪ್ರಸ್ತುತ ಇಲ್ಲಿ ನೀರು ಕಡಿಮೆಯಾಗಿದೆ ಆದರೆ ಇನ್ನೊಂದು ತುದಿಯಲ್ಲಿ ಹೆಚ್ಚುತ್ತಿದೆ” ಎಂದು ಪ್ರವಾಹದಿಂದ ಬದುಕುಳಿದ ರಂಜಿತ್ ಬೈಶ್ನಾಬ್ ಹೇಳಿದ್ದಾರೆಂದು ಎನ್ಡಿಟಿವಿ ವರದಿ ಮಾಡಿದೆ.
ವೃದ್ಧರು, ಮಕ್ಕಳೂ ಸೇರಿದಂತೆ ಸ್ಥಳಾಂತರಿಸಲ್ಪಟ್ಟವರೆಲ್ಲರೂ ಪರಿಹಾರ ಶಿಬಿರಗಳಲ್ಲಿದ್ದಾರೆ ಎಂದು ವರದಿಯಾಗಿದೆ.
ಮೊರಿಗಾಂವ್ ಜಿಲ್ಲೆಯ 300 ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹ ಪೀಡಿತವಾಗಿವೆ. ಮೊರಿಗಾಂವ್ನ ಮಾಯೊಂಗ್ ವೃತ್ತವು ಹೆಚ್ಚು ಪೀಡಿತ ಗ್ರಾಮಗಳಲ್ಲಿ ಒಂದಾಗಿದೆ.
ಬುಧವಾರ ರಾತ್ರಿಯ ಹೊತ್ತಿಗೆ, ಅಸ್ಸಾಂನಾದ್ಯಂತ 2,525 ಹಳ್ಳಿಗಳು ನೀರಿನಲ್ಲಿ ಮುಳುಗಿದ್ದು, 1.15 ಲಕ್ಷಕ್ಕೂ ಹೆಚ್ಚಿನ ಹೆಕ್ಟೇರ್ ಬೆಳೆ ನಾಶವಾಗಿದೆ ಎಂದು ASDMA ತಿಳಿಸಿದೆ.
ಪ್ರವಾಹವು ಇಲ್ಲಿಯವರೆಗೆ 120 ಪ್ರಾಣಿಗಳನ್ನು ಬಲಿ ತೆಗೆದುಕೊಂಡಿದೆ. ರಾಜ್ಯದಾದ್ಯಂತ 23,89,401 ಸಾಕು ಪ್ರಾಣಿಗಳು ಮತ್ತು ಕೋಳಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ವರದಿಯಾಗಿದೆ.
ಅಸ್ಸಾಂನಲ್ಲಿನ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಆರಂಭಿಕ ಅನುದಾನವಾಗಿ ಕೇಂದ್ರವು ಶೀಘ್ರದಲ್ಲೇ 346 ಕೋಟಿ ಬಿಡುಗಡೆ ಮಾಡಲಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಪ್ರವಾಹ ಪರಿಸ್ಥಿತಿ ಕುರಿತು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರೊಂದಿಗೆ ವಿವರವಾದ ಚರ್ಚೆ ನಡೆಸಿದ್ದು, ಈ ಸಂದರ್ಭದಲ್ಲಿ ಅವರು ಈ ನಿರ್ಧಾರವನ್ನು ತಿಳಿಸಿದ್ದಾರೆ ಎಂದು ಅದು ಹೇಳಿದೆ.
ಆದರೆ ಈ ದೀರ್ಘಕಾಲಿಕ ಸಮಸ್ಯೆಯನ್ನು ನಿಭಾಯಿಸಲು ಹಿಂದೆ ಘೋಷಿಸಿದ ಹಣವನ್ನೇ ಬಿಡುಗಡೆ ಮಾಡದಿರುವ ಮೂಲಕ ರಾಜ್ಯದ ಪ್ರವಾಹ ಪರಿಸ್ಥಿತಿಯನ್ನು ನಿರ್ಲಕ್ಷಿಸಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಎಐಯುಡಿಎಫ್ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರ ನಡುವೆ, ಬಿಹಾರದ 10 ಜಿಲ್ಲೆಗಳಲ್ಲಿ 4.6 ಲಕ್ಷ ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ. 13,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದೆ ಎಂದು ರಾಜ್ಯ ಸರ್ಕಾರ ವರದಿ ಬಿಡುಗಡೆ ಮಾಡಿದೆ. ಬುಧವಾರದವರೆಗೆ ರಾಜ್ಯದಲ್ಲಿ ಪ್ರವಾಹದಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ಕೋಸಿ, ಬುಧಿ ಗಂಡಕ್, ಕಮಲಾ ಬಾಲನ್, ಮತ್ತು ಲಾಲ್ ಬಕೇಯ ಮುಂತಾದ ನದಿಗಳು ಅನೇಕ ಸ್ಥಳಗಳಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಇದನ್ನೂ ಓದಿ: ಬಿಹಾರ: ರಾಜ್ಯದ 8 ಜಿಲ್ಲೆಗಳ 3 ಲಕ್ಷ ಜನರು ಪ್ರವಾಹ ಪೀಡಿತರು..