ಸಂಘಪರಿವಾರವು ಬಡವರ ಮನೆಯ ಮಕ್ಕಳನ್ನು ಮಾತ್ರ ತಮ್ಮ ಹೋರಾಟಗಳಿಗೆ ಬಳಸಿಕೊಳ್ಳುತ್ತದೆ ಎಂದು ಸಂಘಪರಿವಾರದ ಮಾಜಿ ನಾಯಕ ಎಂಜಿ ಹೆಗಡೆ ಶುಕ್ರವಾರ ಹೇಳಿದ್ದಾರೆ. ಅವರು “ನಮ್ಮ ಧ್ವನಿ” ಕ್ಲಬ್ಹೌಸ್ ಗುಂಪು ನಡೆಸಿಕೊಟ್ಟ “ಹಿಂದುತ್ವದಿಂದ ಬಂಧುತ್ವದ ಕಡೆಗೆ” ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಬಜರಂಗದಳದ ರಾಜ್ಯ ಸಂಚಾಲಕರಾಗಿದ್ದ ದಿವಂಗತ ಮಹೇಂದ್ರ ಕುಮಾರ್ ಅವರು ಸಂಘಪರಿವಾರದದಿಂದ ಹೊರಬಂದ ನಂತರ “ನಮ್ಮ ಧ್ವನಿ” ತಂಡವನ್ನು ಕಟ್ಟಿಕೊಂಡಿದ್ದರು. ಈ ತಂಡವನ್ನು ಅವರ ನಿಧನದ ನಂತರ ಅವರ ಆಪ್ತರು ಮುನ್ನಡೆಸುತ್ತಿದ್ದಾರೆ.
“ನಮ್ಮಧ್ವನಿ” ತಂಡವು ಹೊಸ ಮಾದರಿಯ ಸಾಮಾಜಿಕ ಜಾಲತಾಣವಾದ ಕ್ಲಬ್ಹೌಸ್ನಲ್ಲಿ ಕೂಡಾ ಕಾರ್ಯಕ್ರಮವನ್ನು ನಡೆಸುತ್ತಾ ಬರುತ್ತಿದೆ. ಶುಕ್ರವಾರ ನಡೆಸಿಕೊಟ್ಟ “ಹಿಂದುತ್ವದಿಂದ ಬಂಧುತ್ವದ ಕಡೆಗೆ” ಕಾರ್ಯಕ್ರಮದಲ್ಲಿ ಎಂಜಿ ಹೆಗಡೆ ಮಾತ್ರವಲ್ಲದೆ, ಬಜರಂಗದಳದಿಂದ ಇತ್ತೀಚೆಗಷ್ಟೇ ಹೊರ ಬಂದ ಮಾಜಿ ನಾಯಕ ಪ್ರವೀಣ ವಾಲ್ಕೆ, ಸುನಿಲ್ ಬಜಿಲ್ಕೇರಿ ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ. ಸಂವಾದದಲ್ಲಿ ತಾವೇಕೆ ಅಲ್ಲಿಂದ ಹೊರಬಂದೆವು ಎಂಬುವುದಕ್ಕೆ ಹಲವಾರು ನಿದರ್ಶನಗಳನ್ನು ನೀಡಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರದ 4 ವರ್ಷ; ಸಂಘ ಪರಿವಾರ ಮಾದರಿ ಆಳ್ವಿಕೆಯ ಸತ್ವ ಪರೀಕ್ಷೆ
ಸಂವಾದದಲ್ಲಿ ಮಾತನಾಡಿದ ಎಂಜಿ ಹೆಗಡೆ, “ಸಂಘ ವೈರುಧ್ಯಗಳಿಂದ ಕೂಡಿದ್ದು, ಒಂದು ಕಡೆಯಲ್ಲಿ ಗಾಂಧೀಜಿಯವರನ್ನು ಅವರ ನಾಯಕರು ಎಂದು ಹೊಗಳುತ್ತಾರೆ ಹಾಗೂ ಅವರ ಬಗ್ಗೆ ಸಂಘದ ಸಾಹಿತ್ಯ ವಿಭಾಗ ಪುಸ್ತಕ ಬಿಡುಗಡೆ ಮಾಡುತ್ತದೆ. ಆದರೆ ಅದರ ಕಾರ್ಯಕರ್ತರು ಗಾಂಧೀಜಿಯನ್ನು ನಿಂದಿಸುತ್ತಾರೆ. ಅಖಂಡ ಭಾರತ ಅನ್ನುತ್ತಲೇ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನವನ್ನು ದ್ವೇಷಿಸುತ್ತಾರೆ” ಎಂದು ತಿಳಿಸಿದ್ದಾರೆ.
“ಹಿಂದೂ ಧಾರ್ಮಿಕ ಮೂಲ ಗ್ರಂಥಗಳಾದ ವೇದ-ಉಪನಿಷತ್ ಬಗ್ಗೆ ಸಂಘ ಪ್ರಚಾರ ಮಾಡುವುದೇ ಇಲ್ಲ. ಆದರೆ ತಮ್ಮದು ಹಿಂದೂ ಧರ್ಮ ಉಳಿವಿಗೆ ಎನ್ನುತ್ತಾರೆ. ಬಡವರ ಮನೆಯ ಮಕ್ಕಳನ್ನು ಮಾತ್ರ ತಮ್ಮ ಹೋರಾಟಗಳಿಗೆ ಅವರು ಬಳಸುತ್ತಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರವೀಣ ವಾಲ್ಕೆ ಮಾತನಾಡಿ, “ನೈಜ ಹಿಂದು ಧರ್ಮದ ಯಾವುದೆ ತತ್ವ ಇಲ್ಲದೇ, ಕೇವಲ ಅಧಿಕಾರ ಮತ್ತು ಹಣ ಗಳಿಕೆಯತ್ತ ಸಂಘ ಪರಿವಾರ ಸಾಗುತ್ತಿದೆ. ಅದಕ್ಕಾಗಿ ಬೀದಿಗಳಲ್ಲಿ ಬಡಿದಾಡಿ ಬಡ ಕಾರ್ಯಕರ್ತರು ಬಲಿಪಶುಗಳಾಗುತ್ತಿದ್ದಾರೆ. ಅವರಿಗೆ ಯಾವ ರಕ್ಷಣೆಯೂ ಇಲ್ಲ, ಬೆಂಬಲವೂ ಇಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆರ್ಎಸ್ಎಸ್ ಅನ್ನು ‘ಸಂಘ ಪರಿವಾರ’ ಎಂದು ಕರೆಯುವುದು ಸರಿಯಲ್ಲ- ರಾಹುಲ್ ಗಾಂಧಿ
“ತಮ್ಮ ವಿರುದ್ದ ಮಾತನಾಡಿದವರನ್ನು ಸಂಘ ಪರಿವಾರದ ಹಾಗೆ ಬಿಟ್ಟಿಲ್ಲ, ನಮ್ಮನ್ನೂ ಬಿಡಲ್ಲ ಎಂದು ನನಗೆ ಗೊತ್ತಿದೆ. ಆದರೆ ಹಿಂದೆ ಮಾಡಿದ ಪಾಪದ ಕೆಲಸಕ್ಕೆ ಪ್ರಾಯಶ್ಚಿತವಾಗಿ ನಾವೀಗ ಧ್ವನಿ ಎತ್ತಲೆ ಬೇಕಾಗಿದೆ. ಅಮಾಯಕ ಯುವಜನರು ಅದರ ಪಾಶದಿಂದ ಬಿಡುಗಡೆಯಾಗಬೇಕು” ಎಂದು ಪ್ರವೀಣ ಅವರು ಹೇಳಿದ್ದಾರೆ.
ಸುನಿಲ್ ಬಜಿಲಕೇರಿ ಮಾತನಾಡಿ, “ಬಿಜೆಪಿ ಭ್ರಷ್ಟಾಚಾರ ವಿರುಧ್ಧ ಮಾತನಾಡಿದ್ದಕ್ಕೆ ತಮ್ಮ ಮೇಲೇ ಕೇಸ್ ಹಾಕುತ್ತಾರೆ. ಮುಗ್ಧ ಹಿಂದುಳಿದ ಯುವಕರನ್ನು ಮಾತ್ರ ಹೋರಾಟಕ್ಕೆ ಭಾವನಾತ್ಮಕವಾಗಿ ಉಪಯೋಗಿಸುತ್ತಾರೆ. ಬಿಜೆಪಿ ಶಾಸಕರ ತಪ್ಪುಗಳು ಮತ್ತು ಆಡಳಿತದ ದೋಷಗಳನ್ನು ಹೇಳುವಂತೆಯೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ” ಎಂದು ಹೇಳಿದ್ದಾರೆ.
ಪ್ರವೀಣ ವಾಲ್ಕೆ ಮತ್ತು ಸುನಿಲ್ ಬಜಿಲಕೇರಿ ಅವರ ಆಪ್ತರಾಗಿರುವ ಸುಳ್ಯ ತಾಲೂಕಿನ ಪಂಜದ ಯುವಕರೊಬ್ಬರು ಮಾತನಾಡಿ, “ನನಗೂ ಸಂಘಪರಿವಾರ ಏನೆಂದು ತಿಳಿದು ಬಂದಿದೆ. ಆದ್ದರಿಂದ ಅದರಿಂದ ಹೊರ ಬರುತ್ತಿದ್ದೇನೆ” ಎಂದು ಹೇಳಿದ್ದಾರೆ.
ಕಾರ್ಯಕ್ರಮವನ್ನು “ನಮ್ಮ ಧ್ವನಿ” ತಂಡದ ರಾ ಚಿಂತನ್, ಲೋಹಿತ್ ನಾಯಕ ಮತ್ತು ದೀಪು ಗೌಡ ನಡೆಸಿಕೊಟ್ಟರು.
ಇದನ್ನೂ ಓದಿ: ಮಧ್ಯ ಪ್ರದೇಶ: ಮಸೀದಿ ಮೇಲೆ ಕೇಸರಿ ಧ್ವಜ ನೆಟ್ಟು ಹಿಂಸಾಚಾರ ನಡೆಸಿದ ಸಂಘ ಪರಿವಾರದ ಬೆಂಬಲಿಗರು
ಇದನ್ನೂ ಓದಿ: ಇತಿಹಾಸ ಪುರುಷರ ಬಗ್ಗೆ ಸಂಘ ಪರಿವಾರ ಮಾಡಿದ ಚಾರಿತ್ಯವಧೆಯ ಇತಿಹಾಸ