ಭೀಕರ ಅತ್ಯಾಚಾರಕ್ಕೆ ಒಳಗಾಗಿ ಅಸುನೀಗಿದ ಉತ್ತರ ಪ್ರದೇಶದ ಹತ್ರಾಸ್ ಸಂತ್ರಸ್ತೆಗೆ ನ್ಯಾಯ ಬೇಕು ಎಂದು ದೇಶವೇ ಪ್ರತಿಭಟನೆಗೆ ಇಳಿದಿದ್ದರೆ, ಇಲ್ಲೊಂದು ಸಂಘಟನೆ ಆಕೆಯ ಮೇಲೆ ಅತ್ಯಾಚಾರ, ಹಲ್ಲೆ ನಡೆದಿಲ್ಲ ಎಂದು ಆರೋಪಿಗಳ ಪರ ನಿಂತಿದೆ.
ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಹೆಸರಿಗಷ್ಟೇ ಇರುವ ಸ್ವತಂತ್ರ, ರಕ್ಷಣೆಗಳ ಕರಾಳ ಮುಖ ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಇದಕ್ಕೆ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ಮತ್ತಷ್ಟು ಸಾಕ್ಷಿಗಳನ್ನು ಒದಗಿಸುತ್ತಲೇ ಇವೆ.
ಅಮಾನುಷವಾಗಿ ಅತ್ಯಾಚಾರ, ಹಲ್ಲೆಗೆ ಒಳಗಾಗಿದ್ದ ಹತ್ರಾಸ್ನ 19 ವರ್ಷದ ಯುವತಿ ನಿನ್ನೆ ದೆಹಲಿಯ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ದೇಶಾದ್ಯಂತ ಮಾನವೀಯ ಮನಸ್ಸುಗಳು ಯುವತಿಯ ಪರ ನ್ಯಾಯಕ್ಕಾಗಿ ಪ್ರತಿಭಟನೆಗಿಳಿದಿವೆ. ಆದರೆ ಉತ್ತರ ಪ್ರದೇಶದ ಸವರ್ಣ ಪರಿಷತ್ ಮಾತ್ರ ಆರೋಪಿಗಳು ಅಮಾಯಕರು ಎಂದು ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿದೆ.
ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಯುಪಿ ದಲಿತ ಯುವತಿ ಆಸ್ಪತ್ರೆಯಲ್ಲಿ ಸಾವು
ರಾಷ್ಟ್ರೀಯ ಸವರ್ಣ ಪರಿಷತ್ನ ರಾಷ್ಟ್ರೀಯ ಪ್ರಚಾರಕ ಪಂಕಜ್ ಧವರಾಯ ನೇತೃತ್ವದಲ್ಲಿ ಹಲವು ಮಂದಿ ಸದಸ್ಯರು ಆರೋಪಿಗಳನ್ನು ರಕ್ಷಿಸಲು ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿದ್ದರು. ತಮ್ಮ ರಾಜಕೀಯ ಬೇಳೆ ಬೇಯಿಸಲು ಆರೋಪಿಗಳ ಪರ, ಅವರ ರಕ್ಷಣೆಗೆ ಈ ಸಂಘಟನೆ ಸದಸ್ಯರು ನಿಂತರು ಎಂದು ವರದಿಯಾಗಿರುವ ಪತ್ರಿಕೆ ತುಣುಕು ವೈರಲ್ ಆಗಿದೆ.
ಸವರ್ಣ ಪರಿಷತ್ ಸದಸ್ಯರ ಪ್ರಕಾರ ಯುವತಿಯ ಮೇಲೆ ಅತ್ಯಾಚಾರ ನಡೆದಿಲ್ಲ ಮತ್ತು ಆರೋಪಿಗಳನ್ನು ಸುಮ್ಮನೆ ಪ್ರಕರಣದಲ್ಲಿ ಸಿಕ್ಕಿಹಾಕಿಸಲಾಗುತ್ತಿದೆ ಎಂದಿದ್ದಾರೆ. ಆದರೆ ಯುವತಿಯ ವೈದ್ಯಕೀಯ ವರದಿಯಲ್ಲಿ ಎಲ್ಲವೂ ಬೆಳಕಿಗೆ ಬಂದಿದೆ. ಇದರಲರ್ಲಿ ಗಮನಿಸಬೇಕಾದ ವಿಷಯವೆಂದರೆ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿರುವ ಈ ನಾಲ್ವರು ಆರೋಪಿಗಳು ಮೇಲ್ಜಾತಿಗೆ ಸೇರಿದ ಸಮಾಜದಿಂದ ಬಂದವರಾಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ಪತ್ರಿಕೆಯ ತುಣುಕು ನೋಡಿದ ನಂತರ, ಜನರ ಪ್ರತಿಕ್ರಿಯೆಗಳು ಮತ್ತಷ್ಟು ತೀವ್ರಗೊಂಡಿವೆ. ರಾಜ್ಯದಲ್ಲಿ ಜಾತಿಯಾಧಾರದಲ್ಲಿ ಪೊಲೀಸರು ಅಪರಾಧ ಮತ್ತು ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮತ್ತೊಂದು ಘಟನೆ; 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ!
Savarna Parishad, an Upper caste organisation coming up to defend the Thakur Rapists in #Hathras rape case. Just because the Rapists belong to upper caste. pic.twitter.com/576owhKQul
— YB (@Kirkat_Line) September 30, 2020
Savarna Parishad comes out in support of brutal Hathras rapists pic.twitter.com/brSlvZ460C
— Hindutva Watch (@Hindutva__watch) September 29, 2020
Not surprising when Upper Caste Hindutva Mob will organise a "Tiranga Yatra" or "Megha Rally" in a support of Thakur Culprits. #JusticeForManishaValmiki pic.twitter.com/qNcaHSD1eZ
— The Dalit Voice (@ambedkariteIND) September 29, 2020
ಜಾತಿಯ ಆಧಾರದ ಮೇಲೆ ಅತ್ಯಾಚಾರದಂತಹ ಗಂಭೀರ ಆರೋಪಗಳಲ್ಲಿ ತಪ್ಪಿತಸ್ಥರನ್ನು ಉಳಿಸಲು ಆರೋಪಿಗಳ ಪರ ಒಂದು ಸಂಸ್ಥೆ ಮುಂದಾಗಿರುವುದು ನಾಚಿಕೆಗೇಡು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಈ ಘಟನೆಯ ನಂತರ, ಸವರ್ಣ ಪರಿಷತ್ ಪ್ರಚಾರಕರನ್ನು ಸಂಪರ್ಕಿಸಲು ಕೆಲ ಮಾಧ್ಯಮಗಳು ಪ್ರಯತ್ನಿಸಿದ್ದರು ಸಂಪರ್ಕಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಹತ್ರಾಸ್ನ ದಲಿತ ಯುವತಿಯ ಮೇಲೆ ಸೆ.14 ಸಾಮೂಹಿಕ ಅತ್ಯಾಚಾರ ನಡೆದರು ಪೊಲೀಸರು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಿದ್ದರು, ನಂತರ ಪ್ರಕರಣದ ಕಾವು ಹೆಚ್ಚಾದಾಗ ಮತ್ತು ಯುವತಿಯ ಸ್ಥಿತಿ ಗಂಭೀರವಾದ ಹಿನ್ನೆಲೆ, ಸ್ಥಳೀಯ ನಾಯಕರ ಒತ್ತಡಕ್ಕೆ ಮಣಿದು, ಸೆ. 21 ರಂದು 376 ಮತ್ತು 376ಡಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವತಿ ನಿನ್ನೆ ಸಾವನ್ನಪ್ಪಿದ ನಂತರ ಅವರ ಅಂತ್ಯ ಸಂಸ್ಕಾರಕ್ಕೆ ಕುಟುಂಬದವರನ್ನೇ ದೂರವಿಟ್ಟ ಪೊಲೀಸರ ಕ್ರಮ ಮತ್ತಷ್ಟು ಅನುಮಾನಗಳಿಗೆ ಎಡೆ ಮಾಡಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ 2019 ರಲ್ಲಿ ಪ್ರತಿದಿನ ಸರಾಸರಿ 87 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದು, ಭಾರತದಲ್ಲಿ ಒಟ್ಟು 4,05,861 ಪ್ರಕರಣಗಳು ದಾಖಲಾಗಿವೆ. ಇದು, ಹಿಂದಿನ ವರ್ಷಕ್ಕಿಂತ (2018) ಶೇ. 7ರಷ್ಟು ಹೆಚ್ಚಾಗಿದೆ.