ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕಿ ಉಮಾಭಾರತಿ ತಿಳಿಸಿದ್ದಾರೆ. ಕೊರೊನಾ ವೈರಸ್ ಭೀತಿ ಇರುವುದರಿಂದ ಅಯೋಧ್ಯೆಗೆ ಪ್ರಯಾಣಿಸುತ್ತೇನೆ ಆದರೆ ಭೂಮಿ ಪೂಜೆ ಮುಗಿದ ನಂತರ ಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಗೃಹ ಸಚಿವ ಅಮಿತ್ ಷಾಗೆ ಸೋಂಕು ತಗುಲಿದ ನಂತರ ಇಂದು ಬೆಳಿಗ್ಗೆ ಸರಣಿ ಟ್ವೀಟ್ಗಳನ್ನು ಮಾಡಿರುವ ಉಮಾ ಭಾರತಿ, “ನಾನು ಇಂದು ರಾತ್ರಿ ಅಯೋಧ್ಯೆಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೇನೆ. ಪ್ರಯಾಣದ ಸಮಯದಲ್ಲಿ ಸೋಂಕು ತಗುಲುವ ಅಪಾಯವಿರುವುದರಿಂದ ಪ್ರಧಾನಿ ಮೋದಿ ಮತ್ತು ಸಾವಿರಾರು ಜನರಿಗೆ ಸೋಂಕು ಹರಡಬಾರದೆಂಬ ಮುನ್ನೆಚ್ಚರಿಕೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಆ ಸಮಯದಲ್ಲಿ ಸರಾಯು ನದಿ ತಟದಲ್ಲಿರುತ್ತೇನೆ. ಕಾರ್ಯಕ್ರಮದ ವಿದಿ ವಿಧಾನಗಳು ಮುಗಿದ ನಂತರ, ಎಲ್ಲರೂ ಅಲ್ಲಿಂದ ತೆರಳಿದ ನಂತರ ರಾಮಮಂದಿರ ಸ್ಥಳಕ್ಕೆ ಭೇಟಿ ನೀಡುತ್ತೇನೆ” ಎಂದಿದ್ದಾರೆ.
“ಗೃಹ ಸಚಿವ ಅಮಿತ್ ಷಾರವರಗೆ ಸೋಂಕು ದೃಢಪಟ್ಟ ನಂತರ ನಾನು ಎಲ್ಲರ ಆರೋಗ್ಯದ ಬಗ್ಗೆ ಚಿಂತಿತಳಾಗಿದ್ದೇನೆ. ಮುಖ್ಯವಾಗಿ ನರೇಂದ್ರ ಮೋದಿಯವರ ಆರೋಗ್ಯದ ಬಗ್ಗೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇನ್ನು ರಾಮಮಂದಿರ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಲ್.ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿಯವರಿಗೆ ಫೋನ್ ಮೂಲಕ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು, ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಕೊರೊನಾ ಪಾಸಿಟಿವ್: ಆಸ್ಪತ್ರೆಗೆ ದಾಖಲಾದ ಗೃಹಸಚಿವ ಅಮಿತ್ ಷಾ