ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ತನ್ನ ಮೇಲೆ ಜೈಲಿನಲ್ಲಿ “ಹಲ್ಲೆ ಮಾಡಲಾಗಿದೆ” ಮತ್ತು ತನ್ನ ಕುಟುಂಬವನ್ನು ಭೇಟಿಯಾಗಲು ಅನುಮತಿಸುತ್ತಿಲ್ಲ ಎಂದು ಆರೋಪಿಸಿದ ನಂತರ, ಮಹಾರಾಷ್ಟ್ರ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಸರ್ಕಾರಕ್ಕೆ ತಮ್ಮ ಕಳವಳ ತಿಳಿಸಿದ್ದಾರೆ.
ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ, ಇಂದು ಬೆಳಿಗ್ಗೆ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ ಅವರೊಂದಿಗೆ ಮಾತನಾಡುತ್ತಾ ಜೈಲಿನಲ್ಲಿರುವ ಅರ್ನಾಬ್ ಗೋಸ್ವಾಮಿ ಅವರ ಭದ್ರತೆ ಮತ್ತು ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅರ್ನಾಬ್ ಗೋಸ್ವಾಮಿ ಕುಟುಂಬಸ್ಥರು ಅವರನ್ನು ಭೇಟಿಯಾಗಲು ಅವಕಾಶ ನೀಡುವಂತೆ ರಾಜ್ಯಪಾಲರು ಗೃಹ ಸಚಿವರನ್ನು ಕೇಳಿದ್ದಾರೆ.
ನಿನ್ನೆ ಬಂಧಿತ ಅರ್ನಾಬ್ ಮೊಬೈಲ್ ಫೋನ್ ಬಳಸಿ ಸಾಮಾಜಿಕ ಜಾಲತಾಣಗಳನ್ನು ಬಳಸಿರುವುದು ಪತ್ತೆಯಾಗಿದೆ ಎಂದು ಆರೋಪಿಸಿ ಅಲಿಬಾಗ್ ಕೋವಿಡ್ ಕ್ವಾರಂಟೈನ್ ಕೇಂದ್ರದಿಂದ ತಲೋಜಾ ಜೈಲಿಗೆ ಸ್ಥಳಾಂತರಿಸಲಾಯಿತು. ಕಳೆದ ವಾರ ಅರ್ನಾಬ್ ಬಂಧನಕ್ಕೊಳಗಾದಾಗ ಅವರ ಫೋನ್ ವಶಪಡಿಸಿಕೊಂಡಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲು ಇನ್ನೊಬ್ಬರ ಮೊಬೈಲ್ ಫೋನ್ ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಆತ್ಮಹತ್ಯೆ ಪ್ರಚೋದನೆ ಪ್ರಕರಣ: ಅರ್ನಬ್ ಜೈಲುವಾಸ ಮುಂದುವರಿಕೆ!
ನಿನ್ನೆ ತಲೋಜಾ ಜೈಲಿಗೆ ಕರೆದೊಯ್ಯುವಾಗ, ಅರ್ನಾಬ್ ಗೋಸ್ವಾಮಿ ಪೊಲೀಸ್ ವ್ಯಾನ್ನಿಂದಲೇ ಮಾಧ್ಯಮಗಳ ಗಮನ ಸೆಳೆಯಲು ಪ್ರಯತ್ನಿಸಿದ್ದರು. ’ಶನಿವಾರ(ನ.7) ಸಂಜೆ ಅಲಿಬಾಗ್ ಜೈಲು ಅಧಿಕಾರಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ, ನನ್ನ ಪ್ರಾಣಕ್ಕೆ ಅಪಾಯವಿದೆ ಮತ್ತು ನನ್ನ ವಕೀಲರೊಂದಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ’ ಎಂದು ಆರೋಪಿಸಿದರು.
ಅರ್ನಾಬ್ ಗೋಸ್ವಾಮಿ ಪತ್ನಿ ಸಂಬ್ರಾತಾ ರೇ ಗೋಸ್ವಾಮಿ ಕೂಡ ಪೊಲೀಸರ ಮೇಲೆ ಆರೋಪ ಮಾಡಿದ್ದಾರೆ. ’ನ್ಯಾಯಾಂಗ ಬಂಧನದಲ್ಲಿದ್ದ ನನ್ನ ಗಂಡನನ್ನು ಪೊಲೀಸ್ ವ್ಯಾನ್ನಲ್ಲಿ ಮಹಾರಾಷ್ಟ್ರ ಪೊಲೀಸರು ಎಳೆದೊಯ್ಯದಿದ್ದಾರೆ. ನನ್ನ ಜೀವಕ್ಕೆ ಅಪಾಯವಿದೆ ಎಂದು ಅವರು ಪದೇ ಪದೇ ಹೇಳುತ್ತಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ. ತನ್ನ ವಕೀಲರ ಜೊತೆಗೆ ಮಾತನಾಡಲು ಬಯಸಿದ್ದಕ್ಕೆ ಅವರ ಮೇಲೆ ಜೈಲರ್ ಹಲ್ಲೆ ನಡೆಸಿದ್ದಾರೆ ಎಂದು ಅವರು ಪದೇ ಪದೇ ಹೇಳಿದ್ದಾರೆ’ ಎಂದು ಆರೋಪಿಸಿದ್ದಾರೆ.
“ನ್ಯಾಯಾಂಗ ಬಂಧನದಲ್ಲಿ ತನ್ನ ಮೇಲೆ ಹಲ್ಲೆ ಮಾಡಲಾಗಿದೆಯೆಂದು ಅವರು ವಿವರಿಸಿದರು. ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲು ಮತ್ತು ಜಾಮೀನುಗಾಗಿ ಸುಪ್ರೀಂ ಕೋರ್ಟ್ಗೆ ಕೈ ಮುಗಿದು ಮನವಿ ಮಾಡಿದ್ದಾರೆ” ಎಂದರು.
ರಿಪಬ್ಲಿಕ್ ಟಿವಿಯ ಸೆಟ್ಗಳಲ್ಲಿ ಅವರು ಮಾಡಿದ ಕೆಲಸಕ್ಕೆ ಬಾಕಿ ಪಾವತಿಸದ ಆರೋಪದ ಮೇಲೆ 2018 ರಲ್ಲಿ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ಅವರ ತಾಯಿ ಕುಮುದ್ ನಾಯಕ್ ಅಸಹಜ ಸಾವಿಗೆ ಸಂಬಂಧಿಸಿದಂತೆ ಅರ್ನಾಬ್ ಮತ್ತು ಇತರ ಇಬ್ಬರನ್ನು ಮಹಾರಾಷ್ಟ್ರ ಸಿಐಡಿ ಪೊಲೀಸರು ನವೆಂಬರ್ 4 ರಂದು ಬಂಧಿಸಿದ್ದರು. ಮೂವರನ್ನು ನವೆಂಬರ್ 18 ರವರೆಗೆ ನ್ಯಾಯಾಂಗ ಬಂಧನಕ್ಕೆ ಸೂಚಿಸಲಾಗಿದೆ.
ಇನ್ನು ಈ ಕುರಿತು ಇಂದು ಅರ್ನಾಬ್ ಗೋಸ್ವಾಮಿಗೆ ಬಾಂಬೆ ಹೈಕೋರ್ಟ್ ಮಧ್ಯಂತರ ಜಾಮೀನು ನಿರಾಕರಿಸಿದೆ. ಮಧ್ಯಂತರ ಜಾಮೀನಿನ ಕುರಿತು ತೀರ್ಪು ನೀಡಿದ ಬಾಂಬೆ ಹೈಕೋರ್ಟ್ “ಆರೋಪಿಯು ಸೆಷನ್ಸ್ ನ್ಯಾಯಾಲಯವನ್ನು ಸಂಪರ್ಕಿಸಬಹುದು. ಸಂಬಂಧಿತ ನ್ಯಾಯಾಲಯವು ಅರ್ಜಿಯನ್ನು ನಿರ್ದಿಷ್ಟಪಡಿಸಿದ ಸಮಯ ಮಿತಿಯಲ್ಲಿ ((4 ದಿನಗಳು)) ನಿರ್ಧರಿಸುತ್ತದೆ ಎಂದಿದೆ.