ರೈತರ ಪ್ರತಿಭಟನೆಗೆ ಸಂಬಂಧಿಸಿದ ಟೂಲ್ಕಿಟ್ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ಬೆಂಗಳೂರು ಮೂಲದ ದಿಶಾ ರವಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಪತ್ರಕರ್ತೆ ಪ್ರಿಯಾ ರಮಣಿ, “ತಮ್ಮದಲ್ಲದ ತಪ್ಪಿಗೆ ಜೈಲಿನಲ್ಲಿರುವ ದಿಶಾ ರವಿ ಮತ್ತು ಇತರ ಮಹಿಳೆಯರ ಪರವಾಗಿ ನಮ್ಮ ಚಿಂತನೆಗಳಿರುತ್ತವೆ” ಎಂದು ಹೇಳಿದ್ದಾರೆ.
ಈ ಕುರಿತು ಪ್ರಿಯಾ ರಮಣಿಯವರ ಹೇಳಿಕೆಯನ್ನು ಎನ್ಡಿಟಿವಿ ವರದಿ ಮಾಡಿದೆ. ದಿಶಾ ರವಿಯವರ ಬಂಧನವನ್ನು ಖಂಡಿಸಿ ಜಗತ್ತಿನಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ದಿಶಾ ರವಿಯನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ.
#NDTVExclusive | #PriyaRamani, Journalist, expresses solidarity with Climate Activist Disha Ravi #MeToo pic.twitter.com/sY1x1bmKVU
— NDTV (@ndtv) February 17, 2021
ಇದನ್ನೂ ಓದಿ: ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ
ಪ್ರಿಯಾ ರಮಣಿ ಯಾರು?
ಮಾಜಿ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ದಾಖಲಾದ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧದ ಮಾನಹಾನಿ ಪ್ರಕರಣವನ್ನು ದೆಹಲಿ ನ್ಯಾಯಾಲಯ ವಜಾಗೊಳಿಸಿದೆ. ಪ್ರಿಯಾ ರಮಣಿ ಮೇಲಿನ ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿರುವ ಕೋರ್ಟ್ “ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಕ್ಕಾಗಿ ಮಹಿಳೆಯರಿಗೆ ಶಿಕ್ಷಿಸಲು ಸಾಧ್ಯವಿಲ್ಲ” ಎಂದು ಹೇಳಿತ್ತು.
2018 ರಲ್ಲಿ ಭಾರಿ ಸದ್ದು ಮಾಡಿದ್ದ #MeToo ವಿವಾದದ ಸಮಯದಲ್ಲಿ, ಮಾಜಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ವಿರುದ್ದ ಪತ್ರಕರ್ತೆ ಪ್ರಿಯಾ ರಮಣಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಆದರೆ ಪತ್ರಕರ್ತೆಯ ವಿರುದ್ಧ ಅಕ್ಬರ್ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದ ಕುರಿತು ದೆಹಲಿ ಕೋರ್ಟ್ ವಿಚಾರಣೆ ನಡೆಸಿ ನಿನ್ನೆ ತೀರ್ಪು ಪ್ರಕಟಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದಲ್ಲಿ ಸಚಿವರಾಗಿದ್ದ ಅಕ್ಬರ್ ಅವರು ರಮಣಿಯವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆದಾದ ಎರಡು ದಿನಗಳ ನಂತರ, ಅಕ್ಟೋಬರ್ 17, 2018 ರಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ: ರೈತ ಹೋರಾಟದ ಆಕ್ರೋಶ: ಪಂಜಾಬ್ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟ
“ಭಾರತೀಯ ಸಂವಿಧಾನವು ಮಹಿಳೆಯರಿಗೆ ತನ್ನ ಕುಂದುಕೊರತೆಗಳನ್ನು ಯಾವುದೇ ವೇದಿಕೆಯ ಮುಂದೆ ಮತ್ತು ಯಾವುದೇ ಸಮಯದಲ್ಲಿ ಮಂಡಿಸಲು ಅನುವು ಮಾಡಿಕೊಡುತ್ತದೆ “ಎಂದು ನ್ಯಾಯಾಧೀಶರು ತೀರ್ಪಿನ ವೇಳೆ ತಿಳಿಸಿದ್ದಾರೆ.
ಪತ್ರಕರ್ತೆ ಪ್ರಿಯಾ ರಮಣಿ ತಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದಾರೆಂದು 2018 ರ ಅಕ್ಟೋಬರ್ 15 ರಂದು ಅಕ್ಬರ್ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು. 2021 ರ ಫೆಬ್ರವರಿ 1 ರಂದು ಎರಡು ಕಡೆಯ ವಾದಗಳನ್ನು ಆಲಿಸಿದ್ದ ಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಮುಚ್ಚಿದ ಬಾಗಿಲುಗಳ ಹಿಂದೆ ಹೆಚ್ಚಿನ ಬಾರಿ ಲೈಂಗಿಕ ಕಿರುಕುಳ ನಡೆಯುತ್ತಿರುವುದನ್ನು ನಿರ್ಲಕ್ಷಿಸಲಾಗುವುದಿಲ್ಲ … ದುರುಪಯೋಗಕ್ಕೆ ಒಳಗಾಗುವ ಹೆಚ್ಚಿನ ಮಹಿಳೆಯರು ತಮ್ಮ ಮೇಲಿನ ಕಳಂಕ ಮತ್ತು ದಾಳಿಯಿಂದಾಗಿ ಹೆಚ್ಚಾಗಿ ಮಾತನಾಡಲು ಸಾಧ್ಯವಿಲ್ಲ” ಎಂದು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಪಾಂಡೆ ಹೇಳಿದ್ದಾರೆ.
ಲೈಂಗಿಕ ದಾಳಿ ಮತ್ತು ಕಿರುಕುಳಕ್ಕೆ ಒಳಗಾದ ಸಂತ್ರಸ್ಥೆಯ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ಸಮಾಜ ಅರ್ಥಮಾಡಿಕೊಳ್ಳಬೇಕಿದೆ. ಇದು 20 ವರ್ಷದ ಹಿಂದಿನ ಪ್ರಕರಣವಾಗಿರಬಹುದು. ಮಹಿಳೆಯು ತನಗಾದ ಅನ್ಯಾಯದ ವಿರುದ್ಧ ದಶಕಗಳ ನಂತರವೂ ದನಿಯೆತ್ತುವ ಹಕ್ಕು ಹೊಂದಿದ್ದಾಳೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಎಂ.ಜೆ. ಅಕ್ಬರ್ ಏಷ್ಯನ್ ಏಜ್ ಮುಖ್ಯಸ್ಥರಾಗಿದ್ದಾಗ, ಸುಮಾರು 20 ವರ್ಷಗಳ ಹಿಂದೆ ಈ ಲೈಂಗಿಕ ದುಷ್ಕೃತ್ಯ ನಡೆದಿದೆ ಎಂದು ಪತ್ರಿಕೆಯ ಲೇಖನವೊಂದರಲ್ಲಿ ಪ್ರಿಯಾ ರಮಣಿ ಬರೆದಿದ್ದರು. ಉದ್ಯೋಗ ಸಂದರ್ಶನಕ್ಕಾಗಿ ನನ್ನನ್ನು ತಮ್ಮ ಹೋಟೆಲ್ ಮಲಗುವ ಕೋಣೆಗೆ ಕರೆದು ಅಕ್ಬರ್ ಅನುಚಿತವಾಗಿ ವರ್ತಿಸಿದ್ದರು ಎಂದು ರಮಣಿ ಆರೋಪಿಸಿದ್ದರು. ಅವರ ಲೇಖನದ ಪರಿಣಾಮವಾಗಿ, ಸುಮಾರು ಒಂದು ಡಜನ್ ಮಹಿಳೆಯರು ಮಾಜಿ ಸಂಪಾದಕ ಅಕ್ಬರ್ ವಿರುದ್ಧ ಇದೇ ರೀತಿಯ ಆರೋಪಗಳನ್ನು ಹೊರಿಸಿದ್ದರು.
ಇದನ್ನೂ ಓದಿ: ಪೆಟ್ರೋಲ್ ಬೆಲೆ ಏರಿಕೆಗೆ ಹಿಂದಿನ ಸರ್ಕಾರಗಳೇ ಕಾರಣ: ಪ್ರಧಾನಿ ಮೋದಿ