ಆಡಳಿತಾರೂಢ AIADMK ಪಕ್ಷ ಗುರುವಾರ ತನ್ನ ಮಿತ್ರಪಕ್ಷ ಬಿಜೆಪಿಗೆ, “ಕೊರೊನಾ ಸೋಂಕಿನ ಎರಡನೇ ಮತ್ತು ಮೂರನೇ ಅಲೆ ಆರಂಭವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದು, ಜನರ ಹಿತದೃಷ್ಟಿಯಿಂದ ವೆಟ್ರಿವೇಲ್ ಯಾತ್ರೆಯನ್ನು ತ್ಯಜಿಸುವಂತೆ” ಸಲಹೆ ನೀಡಿದೆ.
ತಮಿಳುನಾಡಿನಲ್ಲಿ ಕೊರೊನಾ ಸೋಂಕಿನ ಎರಡನೇ ಮತ್ತು ಮೂರನೇ ಅಲೆಗಳ ಬಗ್ಗೆ ಇರುವ ಆತಂಕದ ಹಿನ್ನೆಲೆಯಲ್ಲಿ ವೆಟ್ರಿವೇಲ್ ಯಾತ್ರೆಯನ್ನು ಅನುಮತಿಸಲಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಮುಂದೆ ರಾಜ್ಯ ಸರ್ಕಾರದ ಅಫಿಡವಿಟ್ ಸಲ್ಲಿಸಿದ ಸಚಿವ ಡಿ ಜಯಕುಮಾರ್, “ಈಗಾಗಲೇ ಸರ್ಕಾರದ ಸಂಘಟಿತ ಪ್ರಯತ್ನದಿಂದಾಗಿ ಸೋಂಕಿನ ಪ್ರಮಾಣವು ರಾಜ್ಯಾದ್ಯಂತ ಕಡಿಮೆಯಾಗಿದೆ. ಆದರೆ ಈ ಸೋಂಕಿನ ಎರಡನೆಯ ಮತ್ತು ಮೂರನೆಯ ಅಲೆಗಳ ಬಗ್ಗೆ ಇನ್ನೂ ಎಚ್ಚರಿಕೆಗಳಿವೆ. ಆದ್ದರಿಂದ ಜನರನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯವಲ್ಲವೇ? ಈ ಸಮಯದಲ್ಲಿ ಈ ಯಾತ್ರೆ ಸೂಕ್ತವಲ್ಲ ಎಂಬುದನ್ನು ಬಿಜೆಪಿ ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದರು.
ಇದನ್ನೂ ಓದಿ: ಕೋಮು ದ್ವೇಷ ಹರಡಿದ ಆರೋಪ: ನಟಿ ಕಂಗನಾ ಮತ್ತು ಸಹೋದರಿಗೆ ಮತ್ತೆ ನೋಟಿಸ್
ವೆಟ್ರಿವೇಲ್ ಯಾತ್ರೆಯನ್ನು ನಡೆಸಲು ಬಿಜೆಪಿ ಮುಂದಾದರೆ ರಾಜ್ಯ ಸರ್ಕಾರದ ಕ್ರಮ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಎಲ್ಲರೂ ಕಾನೂನಿಗೆ ಬದ್ಧರಾಗಿರಬೇಕು. ಯಾರಾದರೂ ಕಾನೂನನ್ನು ಉಲ್ಲಂಘಿಸಿದರೆ ಅದು ತನ್ನ ಕರ್ತವ್ಯವನ್ನು ಮಾಡುತ್ತದೆ. ನಾನು ಇದನ್ನು ಬಿಜೆಪಿಗೆ ಮಾತ್ರವಲ್ಲದೇ ಎಲ್ಲಾ ಪಕ್ಷಗಳಿಗೂ ಹೇಳುತ್ತಿದ್ದೇನೆ” ಎಂದು ಹೇಳಿದರು.
ತಮಿಳುನಾಡಿನಲ್ಲಿ ನಡೆಯುವ ವೆಟ್ರಿವೇಲ್ ಯಾತ್ರೆಯನ್ನು ನಡೆಸಲು ಅನುಮತಿ ಕೋರಿ ರಾಜ್ಯ ಬಿಜೆಪಿ ಘಟಕವು ಮನವಿ ಸಲ್ಲಿಸಿತ್ತು. ಆದರೆ ಇದನ್ನು ತಿರಸ್ಕರಿಸಿದ ರಾಜ್ಯ ಸರ್ಕಾರ ಕೊರೊನಾ ಕಾರಣವನ್ನು ನೀಡಿದೆ.
ದೇವರು ಮತ್ತು ಧರ್ಮದ ಮೇಲೆ ರಾಜಕೀಯ ಮಾಡುತ್ತಿರುವ ಬಿಜೆಪಿ, ಇದೀಗ ತಮಿಳುನಾಡಿನಲ್ಲೂ ತನ್ನ ವರಸೆಯನ್ನು ತೋರಿಸಲು ಆರಂಭಿಸಿದೆ. ಇತ್ತೀಚೆಗೆ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿಗೆ ಸೇರ್ಪಡೆಯಾಗಿದ್ದು, ಮತ್ತು ನಟಿ ಖುಷ್ಬೂ ಕೂಡ ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ. ಇದು ರಾಜ್ಯದಲ್ಲಿ ಬಿಜೆಪಿಯ ಪರ್ವವನ್ನು ಆರಂಭಿಸಬಹುದು ಎಂದು ಹಲವರು ನಂಬಿದ್ದಾರೆ.
ಇದನ್ನೂ ಓದಿ: ಕೋಮು ದ್ವೇಷ ಹರಡುವ ಸುದ್ದಿ ಪ್ರಸಾರ: ಅರ್ನಾಬ್ ಗೋಸ್ವಾಮಿಗೆ ಶೋಕಾಸ್ ನೋಟಿಸ್!