ಸೆಪ್ಟೆಂಬರ್ 30 ರಂದು ನಡೆದ ರಾಜಕೀಯ ರ್ಯಾಲಿಯಲ್ಲಿ ಮಾಸ್ಕ್ ಧರಿಸದೇ ಇದ್ದ ತಪ್ಪಿಗಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯಗೆ 250 ರೂ.ಗಳ ದಂಡ ವಿಧಿಸಲಾಗಿದೆ ಮತ್ತು ದಂಡ ವಸೂಲಿ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್ಗೆ ತಿಳಿಸಿದೆ.
ಮಾಸ್ಕ್ ಧರಿಸದೆ, ದೈಹಿಕ ಅಂತರ ಪಾಲಿಸದೆ ಕೊರೊನಾ ನಿಯಮಗಳನ್ನು ಉಲ್ಲಂಘಿಸುವ ಸಾಮಾನ್ಯ ಜನರಿಗೆ ಮಾತ್ರ ದಂಡ ವಿಧಿಸುತ್ತೀರಿ. ಅದೇ ನಿಯಮಗಳು ರಾಜಕೀಯ ರ್ಯಾಲಿಗಳಲ್ಲಿ ಭಾಗವಹಿಸುವ ರಾಜಕೀಯ ನಾಯಕರಿಗ್ಯಾಕಿಲ್ಲ? ಮಾಸ್ಕ್ ಧರಿಸದೇ ಇರುವುದಕ್ಕೆ ಸಂಸತ್ ಸದಸ್ಯ ತೇಜಸ್ವಿ ಸೂರ್ಯ ಹಾಗೂ ಇತರ ರಾಜಕೀಯ ಮುಖಂಡರಿಂದ ನೀವು ದಂಡ ಸಂಗ್ರಹಿಸಿದ್ದೀರಾ? ರಾಜಕಾರಣಿಗಳ ವಿರುದ್ಧ ಏಕೆ ಎಫ್ಐಆರ್ ದಾಖಲಿಸಿಲ್ಲ? ಕಠಿಣ ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿರುವ ಸರ್ಕಾರವು ಸಮಾಜಕ್ಕೆ ಯಾವ ಸಂದೇಶ ರವಾನಿಸುತ್ತಿದೆ ಎಂದು ನವೆಂಬರ್ 6 ರಂದು ಹೈಕೋರ್ಟ್ ರಾಜ್ಯ ಸರ್ಕಾರವನ್ನು ಕಟುವಾಗಿ ಪ್ರಶ್ನಿಸಿತ್ತು.
ಈ ಕುರಿತು ನ್ಯಾಯಾಲಯಕ್ಕೆ ಇಂದು ಮಾಹಿತಿ ನೀಡಿರುವ ರಾಜ್ಯ ಸರ್ಕಾರ ಸಂಸದ ತೇಜಸ್ವಿ ಸೂರ್ಯ ಮಾಸ್ಕ್ ಧರಿಸದೇ ಇದ್ದ ತಪ್ಪಿಗಾಗಿ ನವೆಂಬರ್ 7 ರಂದು 250 ರೂ ದಂಡ ಪಾವತಿಸಿದ್ದಾರೆ ಎಂದು ತಿಳಿಸಿದೆ.
Karnataka High Court is informed by state government that fine amount of Rs 250 was imposed and recovered from @Tejasvi_Surya for not wearing face masks while attending political rally held on September 30.
The fine was paid on November 7. #facemasks— Live Law (@LiveLawIndia) November 9, 2020
ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಲೆಟ್ಜ್ ಕಿಟ್ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ನವೆಂಬರ್ 06 ರಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ಪೀಠ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
ಸೆ.30 ರಂದು ಸಂಸದ ತೇಜಸ್ವಿ ಸೂರ್ಯರನ್ನು ವಿಮಾನ ನಿಲ್ದಾಣದಿಂದ ಪಕ್ಷದ ಕಚೇರಿಗೆ ಸ್ವಾಗತಿಸುವ ವೇಳೆ ನಡೆದ ರ್ಯಾಲಿಯಲ್ಲಿ ತೇಜಸ್ವಿ ಮಾಸ್ಕ್ ಧರಿಸಿರಲಿಲ್ಲ. ಅಲ್ಲಿದ್ದ ಕಾರ್ಯಕರ್ತರು ಮಾಸ್ಕ್ ಧರಿಸದೇ ಇರುವುದು ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳದೇ ಇರುವುದು ಕಂಡುಬಂದಿದೆ ಎಂದು ವಕೀಲ ಜಿ.ಆರ್. ಮೋಹನ್ ಪೋಟೊಗಳ ಸಹಿತ ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ಉತ್ತರಿಸಿರುವ ಸರ್ಕಾರದ ಪರ ವಕೀಲರು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ನಡೆಸಿದ ರ್ಯಾಲಿಯಲ್ಲಿ ಭಾಗವಹಿಸಿದ್ದವರ ವಿರುದ್ಧ ಹಾಗೂ ಆರ್.ಆರ್.ನಗರ ಚುನಾವಣಾ ಪ್ರಚಾರದಲ್ಲಿ ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದರು.
ಇದನ್ನೂ ಓದಿ: ಮಾಸ್ಕ್ ಇಲ್ಲದ ಸಂಸದ ತೇಜಸ್ವಿ ಸೂರ್ಯ ವಿರುದ್ಧ FIR ಏಕಿಲ್ಲ? ಹೈಕೋರ್ಟ್ ಪ್ರಶ್ನೆ