ಮೇ 28 ವಿ.ಡಿ.ಸಾವರ್ಕರ್ ಜನ್ಮದಿನ. ಅದಕ್ಕೂ ಮೊದಲು ಮೇ 27ರಂದು ಕರ್ನಾಟಕ ಸರ್ಕಾರವು ಬೆಂಗಳೂರಿನ ಯಲಹಂಕದ ಮೇಲ್ಸೇತುವೆ ಸಾವರ್ಕರ್ ಹೆಸರಿಡಲು ತೀರ್ಮಾನಿಸಿತು. ಈ ಕುರಿತು ಸಾಕಷ್ಟು ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಆ ಮೇಲ್ಸೇತುವೆ ಉದ್ಘಾಟನಾ ಕಾರ್ಯಕ್ರಮವನ್ನೇ ಮುಂದೂಡಿತು.
ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಹಲವು ಪ್ರಗತಿಪರ ಮತ್ತು ಕನ್ನಡಪರ ಸಂಘಟನೆಗಳು ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವುದಕ್ಕೆ ವ್ಯಾಪಕ ಆಕ್ಷೇಪ ವ್ಯಕ್ತಪಡಿಸಿದ್ದರು. ಬಿಜೆಪಿ ಪಕ್ಷ, ಸಚಿವ ಸಿ.ಟಿ.ರವಿ, ಸುರೇಶ್ ಕುಮಾರ್ ಸೇರಿದಂತೆ ಮುಂತಾದವರು ಸಾವರ್ಕರ್ ಹೆಸರಿಡುವುದನ್ನು ಸ್ವಾಗತಿಸಿ ವಾದ ಮಂಡಿಸಿದ್ದರು.
ಇಂತಹ ಸಂದರ್ಭದಲ್ಲಿ ಪೋಸ್ಟ್ ಕಾರ್ಡ್ ಕನ್ನಡ ಎನ್ನುವ ಬಲಪಂಥೀಯ ವಿಚಾರವುಳ್ಳ ಫೇಸ್ಬುಕ್ ಪುಟದಲ್ಲಿ ಸಾವರ್ಕರ್ ದಲಿತಪ್ರೇಮಿ ಎನ್ನುವ ಪೋಸ್ಟ್ ಒಂದನ್ನು ಹಾಕಲಾಯಿತು.
Posted by Postcard ಕನ್ನಡ on Wednesday, May 27, 2020
“ಅದರಲ್ಲಿ ವೀರ ಸಾವರ್ಕರ್ ದಲಿತರನ್ನೂ ಒಳಗೊಂಡಂತೆ ಸಮಾಜದ ಎಲ್ಲ ವರ್ಗ, ಪಂಥ, ಜಾತಿಯವರಿಗೂ ಮುಕ್ತವಾಗಿರುವ ಪತಿತಪಾವನ ದೇವಸ್ಥಾನ ಕಟ್ಟಿದರು. ಅಸ್ಪೃಶ್ಯರನ್ನು ಒಳಗೊಂಡು ಸಾರ್ವಜನಿಕ ಗಣೇಶೋತ್ಸವ ಪ್ರಾರಂಭಿಸಿದರು. ಸಂಪೂರ್ಣವಾಗಿ ದಲಿತರಿಂದಲೇ ನಡೆಯುವ ಹೊಟೇಲನ್ನು ಮೊಟ್ಟಮೊದಲ ಬಾರಿಗೆ ತೆರೆದರು. ಆದರು ಕಾಂಗ್ರೆಸ್ ಸಾವರ್ಕರ್ರನ್ನು ವಿರೋಧಿಸುತ್ತದೆ ಎಂದರೆ, ಕಾಂಗ್ರೆಸ್ ದಲಿತರ ಪರವೋ ವಿರುದ್ಧವೋ ನೀವೇ ನಿರ್ಧರಿಸಿ” ಎಂದು ಬರೆಯಲಾಗಿತ್ತು.
ಈ ಕುರಿತು ನಾನುಗೌರಿ.ಕಾಂ ವತಿಯಿಂದ ಫ್ಯಾಕ್ಟ್ಚೆಕ್ ನಡೆಸಲಾಯಿತು.
ಸಾರ್ವಜನಿಕ ಗಣೇಶೋತ್ಸವ
1905ರಲ್ಲಿ ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಪ್ರಾರಂಭ ಮಾಡಿದ್ದು ಬಾಲ ಗಂಗಾಧರ ತಿಲಕರು. ಅದರಲ್ಲಿ ದಲಿತರು ಭಾಗವಹಿಸಬಹುದಾಗಿತ್ತೇ? ಅದೇ ಮಹಾರಾಷ್ಟ್ರದ ನಾಸಿಕ್ನ ಕಾಳಾರಾಮ್ ದೇವಸ್ಥಾನದ ಪ್ರವೇಶಕ್ಕಾಗಿ 1930ರಲ್ಲಿ ಅಂಬೇಡ್ಕರ್ ಸತ್ಯಾಗ್ರಹ ನಡೆಸಿದಾಗ ಏನಾಯಿತೆಂಬುದು ಗೊತ್ತಿರುವ ವಿಷಯವೇ ಅಲ್ಲವೇ? ಅಂಬೇಡ್ಕರ್ ಸೇರಿದಂತೆ ಬಹಳಷ್ಟು ದಲಿತರ ಮೇಲೆ ಸವರ್ಣಿಯರು ದಾಳಿ ಮಾಡಿದ್ದರು. ಹೀಗಿರುವಾಗ ಗಣೇಶೋತ್ಸವಗಳಲ್ಲಿ ದಲಿತರು ಭಾಗವಹಿಸುತ್ತಿದ್ದರೆಂಬುದು ಹಸಿಸುಳ್ಳು….
ಪತಿತಪಾವನ ದೇವಾಲಯ
ಪೋಸ್ಟ್ ಕಾರ್ಡ್ ಈ ದೇವಾಲಯವನ್ನು ಯಾವ ಊರಿನಲ್ಲಿ, ಯಾವಾಗ ಕಟ್ಟಿಸಿದರು ಎಂಬುದನ್ನು ಉಲ್ಲೇಖಸಿಲ್ಲ. ಈ ಹಿಂದೂ ದೇವಾಲಯವನ್ನು ಶ್ರೀಮನ್ ಭಗೋಜಿಶೆತ್ ಕೀರ್ ಎಂಬುವವರು 1931ರಲ್ಲಿ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಕಟ್ಟಿಸಿದರೆಂದು ವಿಕಿಪಿಡೀಯ ಸೇರಿದಂತೆ ಎಲ್ಲಾ ಕಡೆ ಹೇಳಲಾಗುತ್ತದೆ.
ಈ ಕುರಿತು www.patitpavanmandir.org ನಲ್ಲಿ ಒಂದು ಲೇಖನ ಮಾತ್ರ ಲಭ್ಯವಿದೆ. ಅದರಲ್ಲಿ ಅಂಬೇಡ್ಕರ್ರವರ ದೇವಸ್ಥಾನ ಪ್ರವೇಶ ಹೋರಾಟಗಳಿಗೆ ಸಾವರ್ಕರ್ ಬೆಂಬಲ ನೀಡಿದ್ದರು ಎಂದೆಲ್ಲಾ ಸುಳ್ಳುಗಳನ್ನು ಬರೆಯಲಾಗಿದೆ. ಈ ಮೊದಲೇ ಹೇಳುವಂತೆ ದಲಿತರಿಗಾಗಿಯೇ ದೇವಸ್ಥಾನ ಕಟ್ಟಿಸುವ ಕಾಲವಿದ್ದರೆ ಕಾಳಾರಾಮ್ ದೇವಸ್ಥಾನದ ಪ್ರವೇಶಕ್ಕಾಗಿ ಅಂಬೇಡ್ಕರ್ ಮತ್ತು ದಲಿತರ ಮೇಲೆ ಹಲ್ಲೆ ನಡೆಸಿದ್ದು ಏಕೆ?
ದಲಿತರಿಂದಲೇ ನಡೆಯುವ ಹೋಟೆಲ್
ಅಂಬೇಡ್ಕರ್, ತಿಲಕ್ ಮತ್ತು ಸಾವರ್ಕರ್ – ಈ ಮೂರೂ ಜನರ ಜೀವನ ಚರಿತ್ರೆ ಯನ್ನು ಬರೆದದ್ದು ಧನಂಜಯ್ ಕೀರ್. ಆ ಮೂವರ ಬದುಕಿನ ಮಾಹಿತಿಗಳ ಬಗ್ಗೆ ಕೀರ್ ಬರಹವನ್ನೇ ಮೂಲ ಆಕರವನ್ನಾಗಿ ಎಲ್ಲೆಡೆ ಬಳಸಿಕೊಳ್ಳಲಾಗುತ್ತದೆ. ಅದರಲ್ಲೆಲ್ಲೂ ಸಾವರ್ಕರರು ’ಸಂಪೂರ್ಣವಾಗಿ ದಲಿತರೇ ನಡೆಸುವ ಹೋಟೆಲ್ ಇರಲಿ, ಬ್ರಾಹ್ಮಣರ ಹೋಟೆಲ್ ಪ್ರಾರಂಭಿಸಿದ” ಪ್ರಸಂಗವಿಲ್ಲ… ವಾಸ್ತವವಾಗಿ ಇಂಥಾ ರಚನಾತ್ಮಕ ಕೆಲಸಗಳನ್ನು ಸಂಘಟನಾತ್ಮಕವಾಗಿಯೋ, ವೈಯಕ್ತಿಕವಾಗಿಯೋ ಹಿಂದೂ ಮಹಾ ಸಭಾ ಕೈಗೆತ್ತಿಕೊಂಡು ಸಮಯ ಹಾಳುಮಾಡುವುದನ್ನು ಅವರು ವಿರೋಧಿಸುತ್ತಿದ್ದರು..
ಈ ಕುರಿತು ಸಾವರ್ಕರ್ರವರ ಬದುಕು ಬರಹಗಳ ಬಗ್ಗೆ ಅಧ್ಯಯನ ಮಾಡಿರುವ ಕನ್ನಡದ ಚಿಂತಕರಾದ ಶಿವಸುಂದರ್ರವರು “ಒಂದೂ ಬಲವಾದ ಹಿಂದೂ ಸಮಾಜ ಕಟ್ಟಲೋಸುಗ ದಲಿತರನ್ನು ಒಳಗೊಳ್ಳಬೇಕೆಂದು ಸಾವರ್ಕರ್ ಪ್ರತಿಪಾದಿಸುತ್ತಿದ್ದರು…. ಅದಕ್ಕಾಗಿ ಜಾತಿ ವ್ಯವಸ್ಥೆಯನ್ನೂ ಆಗಾಗ ಟೀಕಿಸುತ್ತಿದ್ದರು… ಆದರೆ ಹಿಂದೂ ಮಹಾ ಸಭಾದ ಒಳಗಡೆ ಎಂದಿಗೂ ಒಬ್ಬ ದಲಿತನನ್ನು ಒಳಗೊಳ್ಳಲಿಲ್ಲ. ಒಂದು ಅಂತರ್ಜಾತಿ ಮದುವೆಗೂ ಪ್ರೋತ್ಸಾಹ ಕೊಡಲಿಲ್ಲ” ಎಂದು ಹೇಳುತ್ತಾರೆ.
ಒಟ್ಟಾರೆಯಾಗಿ ಕಾಂಗ್ರೆಸ್ ಅನ್ನು ಟೀಕಿಸುವ ಭರದಲ್ಲಿ ಪೋಸ್ಟ್ ಕಾರ್ಡ್ ದಲಿತರ ಕುರಿತಾಗಿ ಮೂರು ಸುಳ್ಳುಗಳನ್ನು ಹರಡಿದೆ. ಅವು ಯಾವುವು ವಾಸ್ತವವಲ್ಲ ಎಂಬುದು ಈ ಮೇಲಿನ ನಿದರ್ಶನಗಳಿಂದ ಸಾಬೀತಾಗುತ್ತದೆ.
ಇದನ್ನೂ ಓದಿ: ಸಾವರ್ಕರ್ರನ್ನು ’ಮಾಜಿ ವೀರ ಸಾವರ್ಕರ್’ ಎಂದು ಕರೆಯಬಹುದು ಅಷ್ಟೇ: ದೊರೆಸ್ವಾಮಿ
Also Read : Karnataka government drops naming of flyover after “Veer” Savarkar