ರಿಪಬ್ಲಿಕ್ ಟಿವಿಯ ವೀಕ್ಷಕರ ಸಂಖ್ಯೆ ಹೆಚ್ಚಿಸಲು ಬೇಕಾಗಿ ಆಯ್ದ ಕುಟುಂಬಗಳಿಗೆ ಪ್ರತಿ ತಿಂಗಳು 15 ಲಕ್ಷ ರೂ. ಪಾವತಿಸಲಾಗುತ್ತಿತ್ತು ಎಂದು ಥಾಣೆ ಮೂಲದ ಕೇಬಲ್ ವಿತರಕ ಸಂಸ್ಥೆಯಾದ ಕ್ರಿಸ್ಟಲ್ ಬ್ರಾಡ್ಕಾಸ್ಟ್ ಮಾಲಕ ಆಶಿಶ್ ಚೌಧರಿ ಒಪ್ಪಿಕೊಂಡಿದ್ದಾಗಿ ಟಿಆರ್ಪಿ ಹಗರಣದ ಬಗ್ಗೆ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್ ಇಲಾಖೆಯ ಅಪರಾಧ ವಿಭಾಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ತಿಳಿಸಿದೆ.
ಆರೋಪಿಯು ತಾನು ಹವಾಲಾ ಆಪರೇಟರ್ಗಳಿಂದ ಹಣ ಸ್ವೀಕರಿಸಿದ್ದಾಗಿ ಮತ್ತು ಈ ಬಗ್ಗೆ ತಪ್ಪೊಪ್ಪಿಗೆ ಸಾಕ್ಷಿಯಾಗಲು ಒಪ್ಪಿಕೊಂಡಿದ್ದಾಗಿಯೂ ಪೊಲೀಸರು ತಿಳಿಸಿದ್ದಾರೆ. ಮ್ಯಾಕ್ಸ್ಮೀಡಿಯಾ ಎಂಬ ಮಾರಾಟ ಸಂಸ್ಥೆಯ ಅಭಿಷೇಕ್ ಕೊಲವಾಡೆ ಮತ್ತು ಆಶಿಶ್ ಚೌಧರಿಯ ಪೊಲೀಸ್ ಕಸ್ಟಡಿ ಅವಧಿಯನ್ನು ವಿಸ್ತರಿಸುವಂತೆ ಕೋರಿ ಅಪರಾಧ ವಿಭಾಗ ಸಲ್ಲಿಸಿದ ಅರ್ಜಿಯಲ್ಲಿ ಈ ವಿಚಾರವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ರಿಪಬ್ಲಿಕ್ ಟಿವಿಯಲ್ಲಿ TRP ಹಗರಣದ ಸುದ್ದಿ ಪ್ರಸಾರವನ್ನು ತಡೆಯುವಂತೆ ಕೋರ್ಟ್ಗೆ ಅರ್ಜಿ
ಟಿಆರ್ಪಿ ಹಗರಣದಲ್ಲಿ ಅಭಿಷೇಕ್ ಕೊಲವಾಡೆಯನ್ನು ವಿಚಾರಣೆಗೆ ಒಳಪಡಿಸಿದಾಗ ಸಿಕ್ಕಿದ ಮಾಹಿತಿಯ ಆಧಾರದಲ್ಲಿ ಅಕ್ಟೋಬರ್ 28 ರಂದು ಆಶಿಶ್ ಚೌಧರಿಯನ್ನು ಬಂಧಿಸಲಾಗಿತ್ತು.
ಅಭಿಷೇಕ್ ಕೊಲವಾಡೆ ಪ್ರತಿ ತಿಂಗಳು ಆಶಿಶ್ ಚೌಧರಿಯಿಂದ 15 ಲಕ್ಷ ರೂಪಾಯಿ ಪಡೆಯುತ್ತಿದ್ದರು ಎಂದು ಪೊಲೀಸರು ಅರ್ಜಿಯಲ್ಲಿ ಹೇಳಿದ್ದಾರಾದರೂ, ಹವಾಲಾ ಪಾವತಿ ಬಗ್ಗೆ ತನಿಖೆ ಮುಂದುವರಿದಿರುವುದರಿಂದ ಈ ಬಗ್ಗೆ ಈಗಲೇ ಯಾವ ವಿವರವನ್ನೂ ಬಹಿರಂಗಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಭಿಷೇಕ್ ಕೊಲವಾಡೆ ಈ ಹಣವನ್ನು ರಾಮ್ಜಿ ವರ್ಮಾ, ದಿನೇಶ್ ವಿಶ್ವಕರ್ಮ ಮತ್ತು ಉಮೇಶ್ ಮಿಶ್ರಾ ನಡುವೆ ವಿತರಿಸಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. 2017 ಮತ್ತು ಜುಲೈ 2020 ರ ನಡುವೆ ವಾವ್ ಮ್ಯೂಸಿಕ್ ಚಾನೆಲ್ ಮತ್ತು ರಿಪಬ್ಲಿಕ್ ಭಾರತ್ ಹಿಂದಿ ಸುದ್ದಿ ವಾಹಿನಿಯ ಅಧಿಕಾರಿಗಳಿಂದ ಅಭಿಷೇಕ್ ಕೋಲಾವಾಡೆ ಹಣ ಸ್ವೀಕರಿಸಿದ್ದಾರೆ ಎಂದು ಪೊಲೀಸರು ಬಹಿರಂಗ ಪಡಿಸಿದ್ದಾರೆ.
ಇದನ್ನೂ ಓದಿ: Explainer: ಏನಿದು ಟಿಆರ್ಪಿ? ಹೇಗೆ ತಿರುಚಲಾಗುತ್ತದೆ? ರಿಪಬ್ಲಿಕ್ ಟಿವಿ ಸಿಕ್ಕಿಬಿದ್ದಿದ್ದು ಹೇಗೆ?