ಉತ್ತರ ಪ್ರದೇಶದ ಲಖನೌದಿಂದ 300 ಕಿ.ಮೀ ದೂರದಲ್ಲಿರುವ ಮೌ ಜಿಲ್ಲೆಯ 15 ವರ್ಷದ ಬಾಲಕಿಯೊಬ್ಬಳ ಮೇಲೆ ಆಕೆಯ ನೆರೆಹೊರೆಯ ಮೂರು ಜನ ಸೇರಿ ಆಕೆಗೆ ಕಿರುಕುಳ ನೀಡಿ, ಹಲ್ಲೆ ನಡೆಸಿ, ಕಟ್ಟಡದ ಟೆರೇಸ್ನಿಂದ ದೂಡಿರುವ ದಾರುಣ ಘಟನೆ ನಡೆದಿದೆ.
ಬಾಲಕಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಅಝಮ್ಘರ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಂತ್ರಸ್ತೆಯ ಸ್ಥಿತಿ ಗಂಭೀರವಾಗಿದೆ. ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
15 ವರ್ಷದ ಬಾಲಕಿ ಮೇಲೆ ಆಕೆ ಮನೆಗೆ ಹಿಂತಿರುಗಿದ ಸಂದರ್ಭದಲ್ಲಿ ಅಕ್ಕ-ಪಕ್ಕದ ಮೂವರು ಮಂದಿ ದಾಳಿ ನಡೆಸಿದ್ದಾರೆ. ಈ ಘಟನೆಯ ಕುರಿತು ಅಕ್ಟೋಬರ್ 23 ರಂದು ಪೊಲೀಸರಿಗೆ ದೂರು ನೀಡಲಾಗಿದೆ.
ಬಾಲಕಿಯ ಕುಟುಂಬ ಸಲ್ಲಿಸಿದ ದೂರಿನ ಪ್ರಕಾರ, ಮೂವರು ಆರೋಪಿಗಳು ಆಕೆಯನ್ನು ಕಟ್ಟಡದ ಟೆರೇಸ್ಗೆ ಎಳೆದೊಯ್ದಿದ್ದಾರೆ. ಆರೋಪಿಗಳು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲಿ ಜಗಳ ನಡೆದ ನಂತರ ಆಕೆಯನ್ನು ಮೇಲ್ಛಾವಣಿಯಿಂದ ಎಸೆದಿದ್ದಾರೆ. ಬಾಲಕಿ ಕೂಡ ಆರೋಪಿಗಳು ಹಲ್ಲೆ ನಡೆಸಿರುವುದನ್ನು ಹೇಳಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸುಶೀಲ್ ಧುಲೆ ಹೇಳಿದ್ದಾರೆ.
ಇದನ್ನೂ ಓದಿ: ಬಿಹಾರ ಚುನಾವಣೆ ಬಾಯ್ಕಾಟ್ ಎಂದ 108 ಆದಿವಾಸಿ ಗ್ರಾಮಗಳು: ಯಾಕೆ? ಇಲ್ಲಿದೆ ವಿವರ
ಬಾಲಕಿಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು, ಹಲ್ಲೆ ಮತ್ತು ಕಿರುಕುಳ ಪ್ರಕರಣವನ್ನು ದಾಖಲಿಸಿದ್ದಾರೆ. “ಬಾಲಕಿ ಮೂವರನ್ನು ಆರೋಪಿಗಳನ್ನು ಗುರುತಿಸಿದ್ದಾರೆ. ಬಾಲಕಿಯ ಕುಟುಂಬದ ದೂರಿನ ಆಧಾರದಲ್ಲಿ ನಾವು ಪ್ರಕರಣ ದಾಖಲಿಸಿದ್ದೇವೆ. ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ” ಎಂದು ಸುಶೀಲ್ ಧುಲೆ ಹೇಳಿದ್ದಾರೆ.
ಬಾಲಕಿಯ ವೈದ್ಯಕೀಯ ವರದಿಯ ಆಧಾರದ ಮೇಲೆ ಆರೋಪಿಗಳ ಮೇಲೆ ಹೆಚ್ಚಿನ ಪ್ರಕರಣಗಳನ್ನು ಸೇರಿಸಬಹುದು ಎಂದು ಪೊಲೀಸರು ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಮಹಿಳೆಯರಿಗೆ ಸುರಕ್ಷತೆ ನೀಡುವಲ್ಲಿ ವಿಫಲವಾಗಿದೆ ಎಂದು ಪ್ರತಿಪಕ್ಷಗಳು ಆರೋಪ ಮಾಡಿವೆ. ದೇಶವ್ಯಾಪಿ ಪ್ರತಿಭಟನೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ.
ಹತ್ರಾಸ್ ಜಿಲ್ಲೆಯಲ್ಲಿ 19 ವರ್ಷದ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಹಿನ್ನೆಲೆ ರಾಜ್ಯ ಸರ್ಕಾರ ವ್ಯಾಪಕವಾದ ಟೀಕೆ ಎದುರಿಸಬೇಕಾಗಿದೆ. ಈ ಪ್ರಕರಣವು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಕರಣದ ತನಿಖೆಯನ್ನು ಪ್ರಸ್ತುತ ಸಿಬಿಐ ನಡೆಸುತ್ತಿದೆ.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತ್ವರಿತ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸಬೇಕು ಮತ್ತು ಅಪ್ರಾಪ್ತ ವಯಸ್ಕರ ವಿರುದ್ಧದ ಅಪರಾಧಗಳನ್ನು ಫೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ವಿಚಾರಣೆಗೆ ಒಳಪಡಿಸಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.