ಹಿಂದಿ ಹೇರಿಕೆ ಬಗ್ಗೆ ಹಿಂದಿ ಮಾತಾಡದ ದಕ್ಷಿಣ ಭಾರತದ ರಾಜ್ಯಗಳಲ್ಲಿ ತೀವ್ರ ಪ್ರತಿರೋಧಗಳು ಕಂಡು ಬಂದಿದ್ದವು. ಸೆ.14 ರ ಹಿಂದಿ ದಿವಸ್ ಆಚರಣೆ ದಿನ ವಿವಿಧ ಸ್ವರೂಪಗಳಲ್ಲಿ ಪ್ರತಿಭಟನೆ ನಡೆಸಲಾಯಿತು. ಕನ್ನಡ ಸಿನಿಮಾ ನಿರ್ದೇಶಕ ಪವನ್ ಕುಮಾರ್ ಹಿಂದಿ ಹೇರಿಕೆ ಕುರಿತು ಹೊಸ ರೀತಿಯ ಪ್ರತಿರೋಧಕ್ಕೆ ಮುಂದಾಗಿದ್ದರು. ಅದರ ಫಲವೇ ಇಂದು ಬಿಡುಗಡೆಯಾಗಿರುವ “ಏನ್ ಮಾಡೋದು..?” ಎನ್ನುವ ಕನ್ನಡ ಕಿರುಚಿತ್ರ.
ಹೌದು, ಕಳೆದ ಸೆಪ್ಟಂಬರ್ನಲ್ಲಿ ಜೊತೆಗೆ ಕನ್ನಡದ ನಟರು, ನಿರ್ದೇಶಕರಿಗೆ ಹೊಸದೊಂದು ಚಾಲೆಂಜ್ ನೀಡುವ ಮೂಲಕ ಹಿಂದಿ ಹೇರಿಕೆ ವಿರೋಧಿಸಲು ಹೊಸ ಯೋಜನೆ ರೂಪಿಸಿರುವುದಾಗಿ ನಿರ್ದೇಶಕ ಪವನ್ ಕುಮಾರ್ ತಿಳಿಸಿದ್ದರು.
“ಹಿಂದಿ ಹೇರಿಕೆಯನ್ನು ವಿರೋಧಿಸುವ ನಿರ್ದೇಶಕರುಗಳು ಪ್ರತಿಯೊಬ್ಬರು ಹಿಂದಿ ಹೇರಿಕೆ ವಿಚಾರವನ್ನು ಮುಖ್ಯವಾಗಿರಿಸಿ 10 ನಿಮಿಷ, 15 ನಿಮಿಷದ ತಲಾ ಒಂದೊಂದು ಚಿತ್ರಗಳನ್ನು ಮಾಡಿ, ಅವುಗಳಿಗೆ ಸೆನ್ಸಾರ್ ಬೋರ್ಡ್ ಸರ್ಟಿಫಿಕೆಟ್ ಕನ್ನಡದಲ್ಲಿ ಕೇಳುವುದು. ಆದರೆ ಅವರು ಕೊಡಲಿಲ್ಲ ಎಂದರೆ ಸರ್ಟಿಫಿಕೆಟ್ ಇಲ್ಲದೆಯೇ ಚಿತ್ರ ಬಿಡುಗಡೆ ಮಾಡುವ ಚಾಲೆಂಜ್ ನೀಡಿದ್ದರು.”
ಸೆನ್ಸಾರ್ ಬೋರ್ಡ್ ಸರ್ಟಿಫಿಕೆಟ್ ಇಲ್ಲದೇ ಚಿತ್ರ ಬಿಡುಗಡೆ ಮಾಡಿದರೆ ಅದು ಇಂಡಿಯನ್ ಸಿನಿಮಾಟೋಗ್ರಾಫರ್ ಆಕ್ಟ್ ಪ್ರಕಾರ ಅಪರಾಧವಾಗಿ 3 ವರ್ಷ ಜೈಲಿಗೆ ಹಾಕುತ್ತಾರೆ. ಆದರೆ ಒಬ್ಬನೇ ಚಿತ್ರ ಮಾಡಿದರೇ ಜೈಲಿಗೆ ಹಾಕಬಹುದು. 50 ಜನ ಸೇರಿ ಚಿತ್ರ ಮಾಡಿದರೆ ಅದು ಪ್ರತಿಭಟನೆ ಎಂದು ತಿಳಿಸಿದ್ದರು.
ಇದನ್ನೂ ಓದಿ: ಹಿಂದಿ ಹೇರಿಕೆ ಬಗ್ಗೆ ನಿರ್ದೇಶಕ ಪವನ್ ಕುಮಾರ್ ’ಯೂ ಟರ್ನ್’!
ಪವನ್ ಕುಮಾರ್ ಚಾಲೆಂಜ್ಗೆ ಹಲವಾರು ನಿರ್ದೇಶಕರು ಸಾಥ್ ನೀಡಿದ್ದರು. ತಾವು ನಿಮ್ಮ ಜೊತೆಗೆ ನಿಲ್ಲುವುದಾಗಿ ಭರವಸೆ ನೀಡಿದ್ದರು. ಸದ್ಯ ಪವನ್ ಕುಮಾರ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ “ಏನ್ ಮಾಡೋದು..?” ಎಂಬ ಕಿರುಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.
“ಸೆನ್ಸಾರ್ ಮಂಡಳಿಗೆ ತಮ್ಮ ಚಿತ್ರವನ್ನು ಕಳುಹಿಸಿ, ಚಿತ್ರಕ್ಕೆ ಕನ್ನಡದಲ್ಲೇ ಸಟೀಫಿಕೆಟ್ ಕೇಳುವ ಒಂದು ಚಿತ್ರ ತಂಡ, ಅವರಿಗೆ ಕನ್ನಡದಲ್ಲಿ ಪ್ರಮಾಣಪತ್ರ ನೀಡಲು ಇಂಡಿಯನ್ ಸಿನಿಮಾಟೋಗ್ರಾಫರ್ ಆಕ್ಟ್ ಅಡ್ಡ ಬರುವ ಕುರಿತು, ಮಂಡಳಿಯ ಸದಸ್ಯರು ಯಾವ ಯಾವ ರೀತಿ ಮಾತಾಡಬಹುದು” ಎಂಬಂತಹ ವಿಚಾರವನ್ನೇ ತಮ್ಮ ಕಿರುಚಿತ್ರದ ಕಥೆಯಾಗಿಟ್ಟುಕೊಂಡು “ಏನ್ ಮಾಡೋದು..?” ಎಂಬ ಚಿತ್ರ ಬಿಡುಗಡೆ ಮಾಡಿದ್ದಾರೆ.
ಇದೊಂದು ಚಳವಳಿ ಎಂಬ ರೀತಿಯಲ್ಲಿ ಈ ಕಿರುಚಿತ್ರವನ್ನು ಬಣ್ಣಿಸಲಾಗಿದೆ. ಹಿಂದೆ ಕೂಡ ನಾನುಗೌರಿ.ಕಾಂ ಜೊತೆ ಮಾತನಾಡಿದ್ದ ನಿರ್ದೇಶಕ ಪವನ್ ಕುಮಾರ್, ಈ ರೀತಿಯ ಪ್ರತಿಭಟನೆಯಿಂದ ನಾವು ದೊಡ್ಡಮಟ್ಟದಲ್ಲಿ ಹಿಂದಿ ಹೇರಿಕೆಗೆ ಪ್ರತಿರೋಧ ನೀಡಲು ಸಾಧ್ಯ ಎಂದಿದ್ದರು.
ತಮ್ಮ ಕಿರುಚಿತ್ರದಲ್ಲೂ ಏನ್ ಮಾಡೋದು..? ಎಂಬ ಪ್ರಶ್ನೆಯನ್ನು ಹಾಗೆ ಇಟ್ಟಿದ್ದಾರೆ. ಆದರೆ ಕೊನೆಯಲ್ಲಿ ಕನ್ನಡದಲ್ಲಿ ಪ್ರಮಾಣಪತ್ರ ಕೊಟ್ಟರೆ ಹೇಗಿರುತ್ತದೆ ಎಂಬುದನ್ನು ಪಾತ್ರಗಳಿಂದಲೇ ಪ್ರಮಾಣಪತ್ರ ಓದಿಸಿದ್ದಾರೆ. ಕಿರುಚಿತ್ರಕ್ಕೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡ ಪರ ಹೋರಾಟಕ್ಕೆ ಧನ್ಯವಾದ ಎಂಬ ಕಾಮೆಂಟ್ಗಳು ಬರುತ್ತಿದ್ದು, ಜನರು ನಿರ್ದೇಶಕರ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿ, ತಾವೂ ಜೊತೆ ನಿಲ್ಲುವ ಭರವಸೆ ನೀಡಿದ್ದಾರೆ.