ಸಿಎಎ ವಿರುದ್ಧ ಪ್ರತಿಭಟನೆ ಆಯೋಜಿಸಿದ್ದ ಕಾರಣಕ್ಕಾಗಿ ಬಂಧಿಸಿದ್ದ ಪಿಂಜ್ರಾತೋಡ್ ಸಂಘಟನೆಯ ಇಬ್ಬರು ಕಾರ್ಯಕರ್ತೆಯರಿಗೆ ದೆಹಲಿ ನ್ಯಾಯಾಲಯವು ಜಾಮೀನು ನೀಡಿದೆ. ಇವರು ಕೇವಲ ಎನ್ಆರ್ಸಿ ಮತ್ತು ಸಿಎಎ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಇವರ ವಿರುದ್ಧ ಐಪಿಸಿ ಸೆಕ್ಷನ್ 353 (ಸಾರ್ವಜನಿಕ ಕೆಲಸಕ್ಕೆ ಅಡ್ಡಿ, ಹಲ್ಲೆಯತ್ನ) ಹಾಕುವುದು ಸಮರ್ಥನೀಯವಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಇದಾದ ಸ್ವಲ್ಪ ಸಮಯದಲ್ಲಿಯೇ ಆಶ್ಚರ್ಯಕರ ರೀತಿಯಲ್ಲಿ ಅಪರಾಧ ಶಾಖೆಯ ವಿಶೇಷ ತನಿಖಾ ತಂಡವು ಕೊಲೆ, ಕೊಲೆ ಯತ್ನ, ಗಲಭೆ ಮತ್ತು ಕ್ರಿಮಿನಲ್ ಪಿತೂರಿ ಆರೋಪದಡಿ ಅವರನ್ನು ಮತ್ತೆ ಬಂಧಿಸಿ 14 ದಿನಗಳ ಕಾಲ ಅವರ ಪೊಲೀಸ್ ಕಸ್ಟಡಿಗೆ ಕೋರಿದೆ. ಕೊನೆಗೆ ನ್ಯಾಯಾಲಯವು ಅವರನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಘಟನೆ ಜರುಗಿದೆ.
ಫೆಬ್ರವರಿ 22-23ರಂದು ಜಾಫ್ರಾಬಾದ್ ಮೆಟ್ರೋ ನಿಲ್ದಾಣದ ಬಳಿ ಸಿಎಎ ವಿರೋಧಿ ಪ್ರತಿಭಟನೆ ಮತ್ತು ರಸ್ತೆ ತಡೆ ಹೋರಾಟ ಆಯೋಜಿಸಿದವರಲ್ಲಿ ದೇವಾಂಗನಾ ಕಾಳಿತಾ (30) ಮತ್ತು ನತಾಶಾ ನರ್ವಾಲ್ (32) ಇಬ್ಬರು ಪ್ರಮುಖರು ಎಂದು ಪೊಲೀಸರು ಹೇಳಿದ್ದಾರೆ. ಈ ಪ್ರತಿಭಟನೆಯು ಫೆಬ್ರವರಿ 23 ರಂದು ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಮತ್ತು ಅವರ ಬೆಂಬಲಿಗರನ್ನು ಕೆರಳಿಸಿ ಗಲಭೆಗಳು ಭುಗಿಲೆದ್ದವು.
ಬಂಧಿತರಾಗಿರುವ ಹೋರಾಟಗಾರ್ತಿಯರು ಸ್ಪೆಷಲ್ ಸೆಲ್, ಜಾಫ್ರಾಬಾದ್ ಪೊಲೀಸ್ ಠಾಣೆ ಮತ್ತು ಅಪರಾಧ ಶಾಖೆಯ ವಿಶೇಷ ತನಿಖಾ ತಂಡ ಈ ಮೂರು ವಿಭಾಗಗಳಿಂದಲೂ ತನಿಖೆಗೊಳಗಾಗಬೇಕಿದೆ.
ಜಾಫ್ರಾಬಾದ್ ಪೊಲೀಸ್ ಠಾಣೆಯ ತಂಡವು ಅವರನ್ನು ಐಪಿಸಿ ಸೆಕ್ಷನ್ 186 (ಸಾರ್ವಜನಿಕ ಸೇವೆಗೆ ತಡೆ) ಮತ್ತು 353 (ಸಾರ್ವಜನಿಕ ಸೇವಕನ ಮೇಲೆ ಕ್ರಿಮಿನಲ್ ಹಲ್ಲೆ) ಅಡಿಯಲ್ಲಿ ಬಂಧಿಸಿದೆ.
ಈ ಕುರಿತು ಜಾಮೀನು ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯವು ಅವರಿಗೆ ಜಾಮೀನು ನೀಡುತ್ತಾ, “ಎಫ್ಐಆರ್ ಮತ್ತು ಕೇಸ್ ಫೈಲ್ ಪರಿಶೀಲನೆಯಿಂದ, ಸೆಕ್ಷನ್ 353 ರ ಅಡಿಯಲ್ಲಿ ಈ ಅಪರಾಧವನ್ನು ನಿರ್ವಹಿಸಲಾಗುವುದಿಲ್ಲ” ಎಂದು ಡ್ಯೂಟಿ ಮ್ಯಾಜಿಸ್ಟ್ರೇಟ್ ಅಜೀತ್ ನಾರಾಯಣ್ ಹೇಳಿದ್ದಾರೆ.
“ಆರೋಪಿಗಳು ಕೇವಲ ಎನ್ಆರ್ಸಿ ಮತ್ತು ಸಿಎಎ ವಿರುದ್ಧ ಪ್ರತಿಭಟಿಸುತ್ತಿದ್ದರು. ಅಲ್ಲದೇ ಆರೋಪಿಗಳಿಂದ ಯಾವುದೇ ಹಿಂಸಾಚಾರ ಉಂಟಾಗಿಲ್ಲ ಎಂದು ಪ್ರಕರಣದ ಸಂಗತಿಗಳು ಬಹಿರಂಗಪಡಿಸುತ್ತವೆ. ಅಲ್ಲದೆ, ಆರೋಪಿಗಳು ಸುಶಿಕ್ಷಿತರಾಗಿದ್ದು, ತಮ್ಮನ್ನು ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದಾರೆ. ತನಿಖೆಗೆ ಸಂಬಂಧಿಸಿದಂತೆ ಆರೋಪಿಗಳು ಪೊಲೀಸರೊಂದಿಗೆ ಸಹಕರಿಸಲು ಸಿದ್ಧರಾಗಿದ್ದಾರೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.
“ಅಲ್ಲದೆ, ಪ್ರಸ್ತುತ ಕೋವಿಡ್ -19 ರ ಸಾಂಕ್ರಾಮಿಕ ರೋಗಕ್ಕೆ ಆರೋಪಿಗಳು ಗುರಿಯಾಗುತ್ತಾರೆ ಎಂಬ ಪರಿಸ್ಥಿತಿಯನ್ನು ಪರಿಗಣಿಸಿ, ಈ ನ್ಯಾಯಾಲಯವು ಆರೋಪಿಗಳಿಗೆ ಪಿಸಿ ರಿಮಾಂಡ್ ನೀಡಲು ಒಲವು ತೋರುತ್ತಿಲ್ಲ ಮತ್ತು ಪೊಲೀಸ್ ರಿಮಾಂಡ್ ಅರ್ಜಿಯನ್ನು ನಿರಾಕರಿಸಲಾಗಿದೆ” ಎಂದು ಅದು ಹೇಳಿದೆ.
ಈ ಮಧ್ಯೆ, ಅಪರಾಧ ವಿಭಾಗದ ತನಿಖಾ ಅಧಿಕಾರಿ (ಐಒ) ಕುಲದೀಪ್ ಸಿಂಗ್ ಅವರು ಇಬ್ಬರು ಮಹಿಳೆಯರನ್ನು ವಿಚಾರಣೆ ನಡೆಸಲು ಕೋರಿ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
15 ನಿಮಿಷಗಳ ನಂತರ ತನಿಖಾ ಅಧಿಕಾರಿ ಕುಲದೀಪ್ ಸಿಂಗ್ ಅವರನ್ನು ಮತ್ತೆ ಬಂಧಿಸಿ ಇಬ್ಬರೂ ಆರೋಪಿಗಳನ್ನು ಹಾಜರುಪಡಿಸಿದರು. ಅಲ್ಲದೆ “14 ದಿನಗಳ ಕಾಲ ಪಿಸಿ ರಿಮಾಂಡ್ಗಾಗಿ ಅರ್ಜಿ ಸಲ್ಲಿಸಿದರು. ಘಟನೆಗಳ ಹಿಂದಿನ ಪಿತೂರಿ ತಿಳಿಯಲು ಆರೋಪಿಗಳನ್ನು ಕೂಲಂಕಷವಾಗಿ ವಿಚಾರಣೆ ನಡೆಸಬೇಕು ಮತ್ತು ಸಹ-ಆರೋಪಿಗಳ ಗುರುತನ್ನು ಸ್ಥಾಪಿಸಬೇಕಾಗಿದೆ ಮತ್ತು ಸಹ-ಆರೋಪಿಗಳನ್ನು ಬಂಧಿಸಲು ಪಿಸಿ ರಿಮಾಂಡ್ ಅಗತ್ಯ” ಎಂದು ಅರ್ಜಿಯಲ್ಲಿ ಉಲ್ಲೇಖಿಸಿದೆ.
ಪೊಲೀಸ್ ಅರ್ಜಿಯನ್ನು ವಿರೋಧಿಸಿದ ಆರೋಪಿಗಳ ಪರ ವಕೀಲರಾದ ಆದಿತ್ ಎಸ್ ಪೂಜಾರಿ, ತುಶಾರಿಕಾ ಮಟ್ಟೂ ಮತ್ತು ಕುನಾಲ್ ನೇಗಿ, ಕಲಿತಾ ಮತ್ತು ನರ್ವಾಲ್ ಅವರನ್ನು ಈ ಪ್ರಕರಣದಲ್ಲಿ ತಪ್ಪಾಗಿ ಗುರುತಿಸಲಾಗಿದೆ ಎಂದು ವಾದಿಸಿದರು.
“ಪ್ರಕರಣದ ಸಂಗತಿಗಳು ಮತ್ತು ಸನ್ನಿವೇಶಗಳನ್ನು ಮತ್ತು ತನಿಖೆಯ ಆರಂಭಿಕ ಹಂತವನ್ನು ಪರಿಗಣಿಸಿ, ಆರೋಪಿಗಳನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ವಿಧಿಸಲಾಗಿದೆ” ಎಂದು ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.
ಕಲಿತಾ ಜೆಎನ್ಯುನ ಮಹಿಳಾ ಅಧ್ಯಯನ ಕೇಂದ್ರದಲ್ಲಿ ಎಂಫಿಲ್ ವಿದ್ಯಾರ್ಥಿಯಾಗಿದ್ದರೆ, ನರ್ವಾಲ್ ಐತಿಹಾಸಿಕ ಅಧ್ಯಯನ ಕೇಂದ್ರದಲ್ಲಿ ಪಿಎಚ್ಡಿ ವಿದ್ಯಾರ್ಥಿಯಾಗಿದ್ದಾಳೆ. ಅವರಿಬ್ಬರೂ 2015 ರಲ್ಲಿ ರೂಪುಗೊಂಡ ಪಿಂಜ್ರಾ ತೋಡ್ ಸಂಘಟನೆಯ ಸ್ಥಾಪಕ ಸದಸ್ಯರಾಗಿದ್ದಾರೆ. ಇದು ಮುಖ್ಯವಾಗಿ ದೆಹಲಿಯ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿನ ಹಾಸ್ಟೆಲ್ ಕರ್ಫ್ಯೂಗಳನ್ನು ವಿರೋಧಿಸುತ್ತದೆ.
ಪೊಲೀಸರ ಈ ಮರುಬಂಧನದ ಕ್ರಮವನ್ನು ಜೆಎನ್ಯು ಶಿಕ್ಷಕರ ಸಂಘ ಮತ್ತು ವಿದ್ಯಾರ್ಥಿ ಸಂಘ ತೀವ್ರವಾಗಿ ಖಂಡಿಸಿವೆ. “ದೆಹಲಿ ಪೊಲೀಸರು ಬಂಧಿಸಿದ ಮಾದರಿ ನಮಗೆ ಆಘಾತ ತಂದಿದೆ. ದೆಹಲಿ ಗಲಭೆಯ ಕುರಿತು ಹಲವಾರು ಸ್ವತಂತ್ರ ಸತ್ಯಶೋಧನಾ ತಂಡಗಳು ದಾಖಲಿಸಿರುವ ಹಿಂಸಾಚಾರದ ವರದಿಗಳನ್ನು ಪೊಲೀಸರು ಸತತವಾಗಿ ನಿರಾಕರಿಸಿದ್ದಾರೆ. ಗಲಭೆ ನಡೆಯುವ ಮೊದಲು ದ್ವೇಷವನ್ನು ಹುಟ್ಟುಹಾಕುವ ಮತ್ತು ಹಿಂಸಾಚಾರವನ್ನು ಒತ್ತಾಯಿಸುವ ಹೇಳಿಕೆಗಳನ್ನು ನೀಡಿದವರ ಕುರಿತು ಹಲವಾರು ಟಿವಿ ಕ್ಯಾಮೆರಾಗಳು ಪದೇ ಪದೇ ತೋರಿಸಿತ್ತಿದ್ದರೂ ಅವರನ್ನು ಪೊಲೀಸರು ಬಂಧಿಸಿಲ್ಲ. ಬದಲಿಗೆ ಪ್ರಜಾಪ್ರಭುತ್ವ ರೀತಿಯಲ್ಲಿ ಸರ್ಕಾರದ ನಡೆಗಳನ್ನು ವಿರೋಧಿಸಿದ ನಾಗರೀಕರನ್ನು ದೆಹಲಿ ಪೊಲೀಸರು ಭೇಟೆಯಾಡುತ್ತಿದ್ದಾರೆ. ಸ್ಪಷ್ಟವಾಗಿ ಸಂವಿಧಾನ ವಿರೋಧಿ ಕೃತ್ಯದಲ್ಲಿ ದೆಹಲಿ ಪೊಲೀಸರು ತೊಡಿಗಿದ್ದಾರೆ ಎಂದು ಜೆಎನ್ಯು ಶಿಕ್ಷಕರ ಸಂಘವು ಹೇಳಿಕೆಯಲ್ಲಿ ತಿಳಿಸಿದೆ.
ಜೆಎನ್ಯು ವಿದ್ಯಾರ್ಥಿ ಸಂಘವು ತನ್ನ ಹೇಳಿಕೆಯಲ್ಲಿ “ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಪಿಲ್ ಮಿಶ್ರಾನನ್ನು ದೆಹಲಿ ಪೊಲೀಸರು ಬಂಧಿಸುವುದಿರಲಿ, ಎಂದಿಗೂ ಆತನ ಒಂದೇ ರೀತಿಯ ಅಚಾತುರ್ಯವನ್ನು ಪ್ರಶ್ನಿಸಿಲ್ಲ… ಇಬ್ಬರು ಮಹಿಳಾ ಕಾರ್ಯಕರ್ತರನ್ನು ಈಗ ಬಂಧಿಸುವ ಮೂಲಕ ನ್ಯಾಯ ಮತ್ತು ಕಾನೂನಿನ ನಿಯಮಗಳು ದುಷ್ಟರ ಕೈಯಲ್ಲಿವೆ ಎಂದು ಸಾಬೀತುಪಡಿಸಿದ್ದಾರೆ” ಎಂದು ಟೀಕಿಸಿದೆ.
ಇದನ್ನೂ ಓದಿ: ಸಿಎಎ ವಿರೋಧಿಗಳ ಬೇಟೆ ಮುಂದುವರಿಕೆ; ಇಬ್ಬರು JNU ವಿದ್ಯಾರ್ಥಿನಿಯರ ಬಂಧನ