||ನಾನುಗೌರಿ ಡೆಸ್ಕ್||
ಇಂದು ಹೊರಬೀಳಲಿರುವ ಮತಗಟ್ಟೆ ಸಮೀಕ್ಷೆಗಳು ಏನು ಹೇಳುತ್ತವೆ ಎಂಬುದನ್ನು ನೋಡುವುದಕ್ಕೆ ಮುಂಚೆಯೇ ನಿಗದಿಯಾಗಿರುವ ಮಾಯಾವತಿಯವರ ಭೇಟಿಯು ಸ್ಪಷ್ಟ ಸಂದೇಶವನ್ನು ನೀಡಿದೆ ಎಂದು ಹೇಳಬಹುದಾಗಿದೆ.
ಇಂದಿನವರೆಗೆ ಒಮ್ಮೆಯೂ ಕಾಂಗ್ರೆಸ್ ಬಗ್ಗೆ ಮೃದು ಧೋರಣೆ ತೋರದ ಬಿಎಸ್ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿಯವರು ಕಡೆಯ ಹಂತದ ಚುನಾವಣೆ ಮುಗಿದ ತಕ್ಷಣ, ಚುನಾವಣೋತ್ತರ ಮೈತ್ರಿಯ ಕುರಿತ ತಮ್ಮ ಒಲವನ್ನು ಮೊದಲ ಬಾರಿ ವ್ಯಕ್ತಪಡಿಸಿದ್ದಾರೆ. ನಾಳೆ, ಮೇ 20ರಂದು ದೆಹಲಿಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಮಾಯಾವತಿಯವರು ಭೇಟಿಯಾಗಲಿದ್ದಾರೆ.
ಉತ್ತರ ಪ್ರದೇಶದಲ್ಲಿ ಎಸ್ಪಿ, ಬಿಎಸ್ಪಿ ಮತ್ತು ಕಾಂಗ್ರೆಸ್ ನಡುವೆ ಮೈತ್ರಿ ಆಗದಿದ್ದರೂ, ಪರಸ್ಪರ ಸಹಕಾರಿಯಾಗಿರುವ ಒಪ್ಪಂದ ಇತ್ತು ಎಂಬುದಕ್ಕೆ ಪುಷ್ಟಿ ಕೊಡುವ ಮಾತುಗಳನ್ನು ರಾಹುಲ್ ಗಾಂಧಿ ಆಡಿದ್ದರು. ಒಂದು ವೇಳೆ ಫಲಿತಾಂಶ ಬಂದ ನಂತರ ಮಾಯಾವತಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಭೇಟಿ ನಡೆದಿದ್ದರೆ, ಆಗ ಬೇರೆ ಅರ್ಥ ಬರುತ್ತಿತ್ತು. ಜನರ ಒಲವಿನ ಆಧಾರದ ಮೇಲೆ ಸರ್ಕಾರ ರಚನೆಗೆ ಮುಂದಾಗಿದ್ದಾರೆ ಎಂದು ಹೇಳಬಹುದಿತ್ತು.
ಆದರೆ, ಇದೀಗ ತಮ್ಮ ಒಲವು ಬಿಜೆಪಿಯೇತರ ಮೈತ್ರಿಕೂಟಕ್ಕೆ ಎಂಬ ಸಂದೇಶವನ್ನು ಮಾಯಾವತಿಯವರು ನೀಡಿದಂತಾಗಿದೆ. ಅಮೇಥಿ ಮತ್ತು ರಾಯ್ ಬರೇಲಿಗಳಲ್ಲಿ ಮಾತ್ರ ತಮ್ಮ ಅಭ್ಯರ್ಥಿಗಳನ್ನು ಹಾಕದ ಎಸ್ಪಿ – ಬಿಎಸ್ಪಿಗಳು, ಅಲ್ಲಿ ಸೋನಿಯಾ ಮತ್ತು ರಾಹುಲ್ ರನ್ನು ಬೆಂಬಲಿಸುವ ತೀರ್ಮಾನ ಘೋಷಿಸಿದ್ದರು.
ಇಂದು ಹೊರಬೀಳಲಿರುವ ಮತಗಟ್ಟೆ ಸಮೀಕ್ಷೆಗಳು ಏನು ಹೇಳುತ್ತವೆ ಎಂಬುದನ್ನು ನೋಡುವುದಕ್ಕೆ ಮುಂಚೆಯೇ ನಿಗದಿಯಾಗಿರುವ ಭೇಟಿಯು ಸ್ಪಷ್ಟ ಸಂದೇಶವನ್ನು ನೀಡಿದೆ ಎಂದು ಹೇಳಬಹುದಾಗಿದೆ.