Homeಮುಖಪುಟರಾಘು ಜಾತ್ರೆಯ ಪಾಯಸಕ್ಕೆ ಸ್ವರ್ಣವಲ್ಲಿ ಕಲ್ಲು!!

ರಾಘು ಜಾತ್ರೆಯ ಪಾಯಸಕ್ಕೆ ಸ್ವರ್ಣವಲ್ಲಿ ಕಲ್ಲು!!

- Advertisement -
- Advertisement -

ಶುದ್ಧೋದನ |
ಹವ್ಯಕ ಬ್ರಾಹ್ಮಣರು ಬುದ್ಧಿವಂತರಾ? ಇಂಥದೊಂದು ಅನುಮಾನ-ಜಿಜ್ಞಾಸೆ ಶುರುವಾಗಿ ನಾಲ್ಕೈದು ವರ್ಷವೇ ಕಳೆದು ಹೋಗಿದೆ. ಈ “ಪ್ರತಿಭಾನ್ವಿತ” ಹೈಗರಿಗೆ ಹೊಸನಗರದ ರಾಮಚಂದ್ರಾಪುರ ಮಠವಿದೆಯಲ್ಲ, ಅದು ಗುರು ಮಠ. ಸದ್ರಿ ಮಠದ ಪೀಠಕ್ಕೆ ಫೆವಿಕಲ್ ಹಾಕಿ ಕೂತಿರುವ ರಾಘು ಸ್ವಾಮಿ ಮೇಲೆ ಒಂದಲ್ಲ, ಎರಡೆರಡು ಅತ್ಯಾಚಾರದ ಕೇಸುಗಳಿವೆ; ಪಾಪದ ಹೈಗರ ಕೂಸೊಬ್ಬಳ ಅಪಹರಣ, ಸ್ವಜಾತಿ ಸಧ್ಗøಸ್ಥನ ಆತ್ಮಹತ್ಯೆಗೆ ಕಾರಣನಾದ ಅನಾಚಾರ ಪ್ರಕರಣಗಳಿವೆ! ಒಂದು ನ್ಯಾಯಾಲಯವಂತೂ ರಾಘು ಸ್ತ್ರೀ ಸಖ್ಯಾಸುಖ ಸಂತೃಪ್ತ ಸನ್ಯಾಸಿ ಎಂತಲೇ ವ್ಯಾಖ್ಯಾನಿಸಿದೆ!! ರಾಘುನ ಅಪ್ರಕಟಿತ ಅಸಹ್ಯ ಪುರಾಣ ಅಸಂಖ್ಯಾ. ಇಡೀ ಜಗತ್ತೇ ಈ ಕಾವಿ ಜೀವಿಯ ರಾಸಲೀಲಾ ವಿನೋದದ ಕತೆಗಳ ಕೇಳಿ ಕ್ಯಾಕರಿಸುತ್ತಿದೆ. ಆದರೆ ಅದ್ಯಾಕೋ ವಿಚಾರವಂತರೆಂಬ ಹೆಗ್ಗಳಿಕೆಯ ಹವ್ಯಕರಿಗೆ ಗುರುವಿನ ಗಂಡಾಗುಂಡಿ ಅರ್ಥವೇ ಆಗುತ್ತಿಲ್ಲ!!
ಎಂಥವರನ್ನಾದರೂ ಯಾಮಾರಿಸಿ ಕಾರ್ಯಸಾಧಿಸಬಲ್ಲ ರಾಘು ಹಿಂಜರಿಕೆ ಸ್ವಭಾವದ ಹೈಗರನ್ನು ಬಿಟ್ಟಾನಾ? ಶಿಷ್ಯ ಕೋಟಿಗೆ ಮುಷ್ಠಿ-ಮುಷ್ಠಿ ಮಂಕುಬೂದಿ ಎರಚುತ್ತ “ಅಧ್ಯಾತ್ಮಿಕ” ದರ್ಬಾರು ನಡೆಸಿಕೊಂಡಿದ್ದಾನೆ. ಯಾವ ಅಪಮಾನ, ಅಪರಾಧ, ಅಪಜಯಕ್ಕೂ ನಾಚಿಕೆ ಪಡದೆ ಸುಬಗನ ಪೋಸು ಕೊಡುವ ರಾಘು, ಹವ್ಯಕರ ಯೋಚನಾ ಶಕ್ತಿಯನ್ನೇ ಕುಂದಿಸಿಬಿಟ್ಟಿದ್ದಾನೆ. ಗುರುಶಾಪ, ಬಹಿಷ್ಕಾರದಂಥ ಬೆದರಿಕೆಗೆ ಕಂಗಾಲಾಗಿರುವ ಹೈಗರು ಗುರುವಿನ ಕಪಟ ನಾಟಕ ಕಂಡೂಕಾಣದಂತೆ ಬೋಪರಾಕ್ ಹಾಕುತ್ತಿದ್ದಾರೆ, ಪಾಪ!
ರಾಘುಗೆ ಅಂಟಿಕೊಂಡಂಥ ಕಳಂಕ ಬೇರೆ ಯಾವುದೇ ಜಾತಿಯ ಮಠಾಧಿಪತಿಗೆ ತಟ್ಟಿದ್ದರೆ ಆ ಕ್ಷಣವೇ ಶಿಷ್ಯರೆಲ್ಲ ಸೇರಿ ಪೀಠದಿಂದ ಇಳಿಸದೇ ಬಿಡುತ್ತಿರಲಿಲ್ಲ. ಕೊಂಕಣಿಗರ ಪರ್ತಗಾಳಿ ಮಠದ ಕಿರಿಯ ಸನ್ಯಾಸಿಯೊಬ್ಬ ಹೆಂಗಸರಿಗೆ ಮೊಬೈಲ್ ಮೆಸೇಜ್ ರವಾನಿಸುತ್ತಿದ್ದನೆಂಬ ಒಂದೇ ಕಾರಣಕ್ಕೆ ಸದ್ದುಗದ್ದಲ ಮಾಡದೆ ಆತನಿಗೊಂದಿಷ್ಟು ಪರಿಹಾರ ಕೊಟ್ಟು ಮನೆಗೆ ಕಳಿಸಿ ಸಮಾಜದ ಮಾನ ಉಳಿಸಿಕೊಂಡ ನಿದರ್ಶನವೂ ಇದೆ.
ಆದರೆ ಹವ್ಯಕರ ಬುದ್ದಿಗೇಕೆ ಮಂಕು ಕವಿದಿದೆ? ಹವ್ಯಕ ಸಮಾಜವನ್ನು ನಗೆಪಾಟಲಿಗೀಡು ಮಾಡಿರುವ ಪತಿತನನ್ನು ಇವತ್ತಿಗೂ ಗುರುವೆಂದು ಮೆರೆಸುತ್ತಿರುವುದರ ಹಕೀಕತ್ತೇನು? ಇದು ಈ ಶತಮಾನದ ಅಚ್ಚರಿ!!
ಹತ್ತು ತಿಂಗಳ ಹಿಂದೆ ಶೃಂಗೇರಿ ಮಠದ ಭಾರತೀತೀರ್ಥ ಸ್ವಾಮಿ ಹಿರಿತನದಲ್ಲಿ ಸಭೆ ಸೇರಿದ್ದ ಶಂಕರಾಚಾರ್ಯ ಪರಂಪರೆ ಸಂತರ ಸನಾತನ ಧರ್ಮ ಸಂವರ್ಧಿನಿ ಸಭಾ ಯತಿಧರ್ಮಕ್ಕೆ ವ್ಯತಿರಿಕ್ತವಾಗಿ ತಾರ್ಕಿಕ ಜೀವವಾನಂದ ಅನುಭವಿಸುತ್ತಿರುವ ರಾಘುಗೆ ಬಹಿಷ್ಕಾರ ಹಾಕಿತ್ತು. ಅತ್ಯಾಚಾರ, ಅನೈತಿಕ ಸಂಬಂಧ, ಬುರ್ನಾಸ್ ಅಪವಾದಗಳ ರಾಘುನ ಪೀಠದಿಂದ ಉಚ್ಛಾಟಿಸುವಂತೆ ಹವ್ಯಕರಿಗೆ ಸಲಹೆಕೊಟ್ಟಿತ್ತು. ರಾಮಚಂದ್ರಾಪುರ ಮಠದ ಅನುಯಾಯಿಗಳು ನಿಷ್ಕಳಂಕಿತ ವ್ಯಕ್ತಿಯೊಬ್ಬನಿಗೆ ಪೀಠಾಧಿಪತಿ ದೀಕ್ಷೆ ಕೊಡುವುದು ಉಚಿತವೆಂದು ಅಭಿಪ್ರಾಯಪಟ್ಟಿತ್ತು.
ಇಷ್ಟಾದರೂ ಹೆಚ್ಚಿನ ಹವ್ಯಕರು ಎಚ್ಚೆತ್ತುಕೊಳ್ಳಲೇ ಇಲ್ಲ. ಆದರೆ ರಾಘುನ ರಾಡಿಯಿಂದ ಹೇಸಿಹೋಗಿರುವ ಹವ್ಯಕರ ಒಂದು ವರ್ಗ ಮಾತ್ರ ಮಠದ ಶುದ್ಧೀಕರಣ ಆಗಲೇಬೇಕೆಂದು ಬೊಬ್ಬೆ ಹೊಡೆಯಿತು. ಮೂರೂ ಬಿಟ್ಟ ರಾಘು ಇದನ್ನು ಕೇರ್ ಮಾಡಲಿಲ್ಲ; ಯಥಾಪ್ರಕಾರ ತಾನು ನಿರಪರಾಧಿಯೆಂದು ವರಾತ ತೆಗೆದ; ತನ್ನ ಜಾತಕ ಜಾಲಾಡಿದವರ ಸಾಮ-ಭೇದ-ದಂಡದಿಂದ ಪಳಗಿಸಲು ನೋಡಿದ; ಸಂವರ್ಧನಿ ಸಭಾದ ಸಂತರ ನಿರ್ಣಯ ಧಿಕ್ಕರಿಸಿ ಸೊಕ್ಕು ತೋರಿಸಿದ. ತನ್ನ ಗುಲಾಮರೇ ತುಂಬಿಕೊಂಡಿರುವ ಅಖಿಲ ಹವ್ಯಕ ಮಹಾಸಭಾದ ಸ್ವಾಭಿಮಾನ ಶೂನ್ಯರನ್ನು ಶೃಂಗೇರಿ ಸ್ವಾಮಿ, ಸ್ವರ್ಣವಲ್ಲಿ ಸ್ವಾಮಿ ಬಳಗದ ವಿರುದ್ಧ ಛೂಬಿಟ್ಟ! ಈ ಮಠಾವಲಂಬಿಗಳು ಹಿಂದೆ-ಮುಂದೆ ನೋಡದೆ ರಾಘುನ ಪರ ವಕಾಲತ್ತಿಗೆ ನಿಂತರು. ಶೃಂಗೇರಿ ಸ್ವಾಮಿ-ಸ್ವರ್ಣವಲ್ಲಿ ಸ್ವಾಮಿಗಳ ಸಂತರ ತಂಡದ ನಿರ್ಣಯವನ್ನು ರಾಘು ನಿರ್ದೇಶನದ ಅಖಿಲ ಹವ್ಯಕ ಮಹಾಸಭಾ ಖಂಡಿಸಿ ಕೇಕೆ ಹಾಕಿತು. ಈ ಮಹಾಸಭಾದ ಅಧ್ಯಕ್ಷ ಡಾ. ಗಿರಿಧರ ಕಜೆ ಎಂಬಾತ ದಾರಿ ತಪ್ಪಿದ ಗುರುಗಳ ಕೊಂಡಾಡಿ ಕುಣಿದು ಧನ್ಯನಾದದ್ದು ತಮಾಷೆಯಾಗಿದೆ.
ಕಳೆದ ವಾರ ಇದೇ ಗಿರಿಧರ ಕಜೆ, ಕಂಗಾಲಾಗಿರುವ ರಾಘುನ ಕಳಾವೃದ್ಧಿಗೆ ವಿಶ್ವ ಹವ್ಯಕ ಸಮ್ಮೇಳನವೆಂಬ ಮೂರು ದಿನದ ತರಹೇವಾರಿ ಜಾತ್ರೆ ಮಾಡಿ ಮುಗಿಸಿದ್ದಾರೆ. ಇನ್ನೇನು ರಾಘುನ ವಿವಿಧ ವಿನೋದಾವಳಿ ಕಾರ್ಯಕ್ರಮಕ್ಕೆ ಮೂರ್ನಾಲ್ಕು ದಿನವಷ್ಟೇ ಇದೆಯೆನ್ನುವಾಗ ಶಿರಸಿ ಸೀಮೆಯ ಹವ್ಯಕರ ಸ್ವರ್ಣವಲ್ಲಿ ಮಠದ ಪೀಠಾಧಿಪತಿಯೂ, ರಾಘುನ ಪ್ರತಿಸ್ಪರ್ಧಿ ಕವಿ ಪಟವೂ ಆಗಿರುವ ಗಂಗಾಧರೇಂದ್ರ ಸರಸ್ವತಿ ಸ್ವಾಮಿ ಮತ್ತೀತನ ಶಿಷ್ಯ ಸಂಕುಲ ಮುರಕೊಂಡು ಬಿತ್ತು. ರಾಘುನ ಏಜೆಂಟ್ ಗಿರಿಧರ ಕಜೆಯ ಜಾತ್ರಾ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲಿ ಸ್ವಾಮಿ ಇರುತ್ತಾರೆಂದು ಪ್ರಕಟಿಸಲಾಗಿತ್ತು. ಇದನ್ನು ಕೇಳಿದ್ದೇ ತಡ, ಸ್ವರ್ಣವಲ್ಲಿ ಸ್ವಾಮಿಗೆ ಪಿತ್ಥ ನೆತ್ತಿಗೇರಿ ಬಿಟ್ಟಿತು!
ಮೊದಲು ತನ್ನ ಶಿಷ್ಯರನ್ನು ಆಖಾಡಕ್ಕೆ ಬಿಟ್ಟ ಸ್ವರ್ಣವಲ್ಲಿ ಸಂತ ಎರಡನೇ ಸೀನ್‍ನಲ್ಲಿ ಖುದ್ದು ತಾನೇ ರಂಗಕ್ಕೆ ಬಂದು ರಾಘುನ ಮೇಲಿರುವ ಕೋಪ-ತಾಪ ಪ್ರದರ್ಶಿಸಿದರು. ರಾಘುನ ಸಮ್ಮೇಳನದಿಂದ ದೂರವಿಡಬೇಕು; ಸಂತರ ಸಂವರ್ಧಿನಿ ನಿರ್ಣಯ ಖಂಡಿಸಿದ್ದ ಹವ್ಯಕ ಮಹಾಸಭಾ ಕ್ಷಮೆ ಕೇಳಬೇಕು; ಆಗಷ್ಟೇ ನಮ್ಮ ಗುರುಗಳು ಜಾತ್ರೆಗೆ ಬರ್ತಾರೆಂದು ಸ್ವರ್ಣವಲ್ಲಿ ಶಿಷ್ಯರು ಹೇಳಿಕೆ ಒಗಾಯಿಸಿದರು. ಇದು ಶಿಷ್ಯರ ಬಾಯಿಂದ ಬಂದ ಗುರುವಿನ ಮನದಿಂಗಿತವಾಗಿತ್ತು. ಮರುದಿನ ಸ್ವರ್ಣವಲ್ಲಿ ಸ್ವಾಮಿ ಪತ್ರಕರ್ತರೆದುರು ಪ್ರತ್ಯಕ್ಷರಾಗಿ ಶಿಷ್ಯರನ್ನು ಸಮರ್ಥಿಸಿಕೊಂಡರು. ಜತೆಗೆ ರಾಘು ಹಿಡಿತದ ಹವ್ಯಕ ಮಹಾಸಭಾದ ಕಾರ್ಯವೈಖರಿ ತರಾಟೆಗೆ ತೆಗೆದುಕೊಂಡರು.
ಹವ್ಯಕ ಮಹಾಸಭಾವು ಸ್ವರ್ಣವಲ್ಲಿ ಮಠವನ್ನು ಲಾಗಾಯ್ತಿನಿಂದಲೂ ಅಗೌರವದಿಂದ ಕಾಣುತ್ತಿದೆ, ತಾರತಮ್ಯ ಮಾಡುತ್ತಿದೆ, ಇದರಿಂದ ನನ್ನ ಶಿಷ್ಯ ಗಣಕ್ಕೆ ಬೇಸರವಾಗಿದೆ. ಹಾಗಾಗಿ ಶಿಷ್ಯರು ಮಹಾಸಭಾದ ಕಾರ್ಯಕ್ರಮಕ್ಕೆ ಹೋಗದಂತೆ ಹೇಳಿದ್ದಾರೆ. ಶಿಷ್ಯರಿಗೆ ನೋವು ಮಾಡಲು ನಾನು ತಯಾರಿಲ್ಲ. ಬೆಂಗಳೂರಿನ ವಿಶ್ವ ಹವ್ಯಕ ಸಮ್ಮೇಳನಕ್ಕೆ ನಾನು ಹೋಗೋದಿಲ್ಲ ಎಂದ ಸ್ವರ್ಣವಲ್ಲಿ ಸ್ವಾಮಿ ರಾಘುನ ಪರೋಕ್ಷವಾಗಿ ಮಂಗಳಾರತಿ ಎತ್ತಿದ್ದರು.
ಇದೊಂಥರಾ ಹವ್ಯಕ ಕಾವಿಗಳ ದಾಯಾದಿ ಕಲಹ. ರಾಘು ರಾಮಚಂದ್ರಾಪುರ ಮಠಾಧಿಕಾರಿ ಆಗುತ್ತಿದ್ದಂತೆಯೇ ಸಾಮ್ರಾಜ್ಯ ವಿಸ್ತರಣೆ ದಾಹದಿಂದ ಆಕ್ರಮಣಶೀಲ ಕಾರ್ಯಾಚರಣೆ ಆರಂಭಿಸಿದ್ದ. ಕೇರಳದ ಎಡೆನೀರು ಮಠ, ಶೃಂಗೇರಿ ಮಠ ಮತ್ತು ಸ್ವರ್ಣವಲ್ಲಿ ಮಠದ ಅನುಯಾಯಿಗಳಾಗಿದ್ದ ಹವ್ಯಕರನ್ನು ತನ್ನ ಮಠದ ತೆಕ್ಕೆಗೆ ತರಲು ತರಾತರದ ತಂತ್ರ ಹೆಣೆಯತೊಡಗಿದ್ದ.
ಯಾವಾಗ ರಾಘುನ ರಾಮಕಥಾ, ಗೋಕಥಾದ ಲೌಕಿಕ ಐಭೋಗದ ಕಥನ ಕಲೆಯ ಭರಾಟೆ ಜೋರಾಯಿತೋ ಆಗ ಹವ್ಯಕರು ಗೊಂದಲಕ್ಕೆ ಬಿದ್ದರು. ರಾಘುನ ಮನರಂಜನಾ ಧರ್ಮದಂಧೆಯ ಅಸಲಿಯತ್ತು ತಿಳಿಯದೆ ಅತ್ತ ಆಕರ್ಷಿತರಾದರು. ರಾಘುನ ಧರ್ಮೋದ್ಯಮ ಶೃಂಗೇರಿ ಸ್ವಾಮಿ, ಸ್ವರ್ಣವಲ್ಲಿ ಸ್ವಾಮಿಗಳ ನಿದ್ದೆಗೆಡಿಸಿತು. ತಮ್ಮ ಮಠ ಮಸುಕಾಗುವ ಆತಂಕಕ್ಕೆ ಬಿದ್ದರು. ವೈರಿಗಳಾಗಿ ಕಾಣೋಕೆ ನಿಂತರು! ಹವ್ಯಕ ಸಮುದಾಯದಲ್ಲಿ ಶೀತಲ ಗ್ಯಾಂಗ್‍ವಾರ್ ಆರಂಭವಾಯಿತು.
ಯಡ್ಡಿ ಸಿಎಂ ಆಗಿದ್ದಾಗ ರಾಘು ಕಳ್ಳದಾರಿಯಲ್ಲಿ ಆಗರ್ಭ ಶ್ರೀಮಂತ ಗೋಕರ್ಣ ದೇವಸ್ಥಾನವನ್ನು ಜೋಳಿಗೆಗೆ ಇಳಿಸಿಕೊಂಡಾಗಂತೂ ಸ್ವರ್ಣವಲ್ಲಿ ಸ್ವಾಮಿ ಗೋಕರ್ಣಕ್ಕೆ ಕಲಿ ಪ್ರವೇಶವಾಗಿದೆಯೆಂದು ಬಹಿರಂಗವಾಗೇ ಪ್ರತಿಭಟನೆಗೆ ಇಳಿದರು. ರಾಘುಗೆ ಗೋಕರ್ಣ ದೇವಸ್ಥಾನ ವಹಿಸಬಾರದೆಂದು ಬೀದಿಯಲ್ಲಿ ನಿಂತು ಕೂಗಾಡಿದ್ದರು. “ಪಾಯಸದಲ್ಲಿ ಕಲ್ಲು ಬಂದಂತಾಗಿದೆ” ಎಂದು ದೇವಸ್ಥಾನ ಹಸ್ತಾಂತರ ಪ್ರಕ್ರಿಯೆಯನ್ನು ಲೇವಡಿ ಮಾಡಿದ್ದರು. ಉತ್ತರಕನ್ನಡದ ಹವ್ಯಕರ ಮೇಲೆ ಹಿಡಿತ ಸಾಧಿಸಲು ಹಿಕಮತ್ತು ಮಾಡುತ್ತಿರುವ ರಾಘುಗೆ ಬಾಲ ಬಿಚ್ಚಲು ಬಿಡಬಾರದೆಂಬ ರಕ್ಷಣಾತ್ಮಕ ಆಟ ಸ್ವರ್ಣವಲ್ಲಿಯದಾಗಿತ್ತು. ಸ್ವರ್ಣವಲ್ಲಿ ಸ್ವಾಮಿ ಹಿಂದೆ ಶೃಂಗೇರಿ ಸ್ವಾಮಿ ಬಲವಾದ ಬೆಂಬಲವಾಗಿ ನಿಂತಿದ್ದರು.
ಆದರೆ ಅಧಿಕಾರಸ್ಥರನ್ನು ವಶಮಾಡಿಕೊಂಡಿದ್ದ ರಾಘುನ ಹಾರಾಟ ಇನ್ನಷ್ಟು ಜಾಸ್ತಿಯೇ ಆಯ್ತು. ಅಂದಿನ ಕುಮ್ಮಿ ಸರ್ಕಾರದಿಂದ ಇಂದಿನ ಕುಮ್ಮಿ ಸರ್ಕಾರದ ತನಕ ಅನಾಹುತಕಾರಿ ರಾಘುಗೆ ಸರ್ಕಾರಿ ಸಹಕಾರ ನಿರಂತರವಾಗಿ ಸಿಗುತ್ತಲೇ ಬಂದಿದೆ. ಕನ್ಯಾ ಸಂಸ್ಕಾರ, ಸ್ತ್ರೀಕಾಯ ಪ್ರವೇಶ, ಹೆಂಗಸರಿಗೆ ಏಕಾಂತ ದರ್ಶನದಂಥ “ಕ್ರಾಂತಿಕಾರಿ ಆವಿಷ್ಕಾರ”ಗಳನ್ನು ನಡೆಸಿ ಸಿಕ್ಕಿಬಿದ್ದ ರಾಘು ಪೊಲೀಸ್ ಕೇಸು, ಕೋರ್ಟು, ಪುರುಷತ್ವ ಪರೀಕ್ಷೆ ಗದ್ದಲ, ರೇಪ್ ರಾದ್ಧಾಂತಗಳಿಂದ ಕುಖ್ಯಾತನಾದಾಗ ಸಹಜವಾಗೇ ಶತ್ರು ಸಂತರಿಗೆ ಸಂತಸವಾಯ್ತು. ಆದರೆ ರಾಘು ಜೈಲು ಪಾಲಾಗಲಿಲ್ಲ; ಪೀಠದಿಂದ ಉಚ್ಛಾಟಿತನಾಗಲಿಲ್ಲ. ಕಾನೂನು-ನ್ಯಾಯ ವ್ಯವಸ್ಥೆಯನ್ನೇ ದಿಕ್ಕು ತಪ್ಪಿಸಿ ರಾಘು ಬಚಾವಾಗುತ್ತಲೇ ಹೋದ! ಆತನ ನಿರ್ಲಜ್ಜ ಅಟ್ಟಹಾಸ, ಅನಾಚಾರ ನಿರಂತರವಾಯ್ತು. ಆಗ ಕೊನೆ ಅಸ್ತ್ರವಾಗಿ ವಿರೋಧಿ ಯತಿಗಳು ಬ್ರಹ್ಮಚರ್ಯೆ ಪಾಲಿಸದ ರಾಘುಗೆ ಬಹಿಷ್ಕಾರ ಹಾಕೇಬಿಟ್ಟರು! ಸ್ವಾಮಿ ಗ್ಯಾಂಗಿನ ಗುದುಮುರಿಗೆ ಬಿರುಸಾಯ್ತು. ಹೊಗೆಯಾಡುತಿದ್ದ ಈ ಸನ್ಯಾಸಿಗಳ ಹುಸಿ ಪ್ರತಿಷ್ಠೆಯಜ್ಞ ಕುಂಡಕ್ಕೆ ವಿಶ್ವ ಹವ್ಯಕ ಸಮ್ಮೇಳನದಿಂದ ಹವಿಸ್ಸು ಬಿದ್ದಂತಾಗಿದೆ.
ಈ ಬೆಂಕಿ ಬುದ್ಧಿಗೇಡಿ ಬ್ರಾಹ್ಮಣ ಸಮುದಾಯ ಸುಡುವುದು ಖಂಡಿತ. ಸ್ವರ್ಣವಲ್ಲಿ ಸಾಧು ಹವ್ಯಕ ಸಮ್ಮೇಳನಕ್ಕೆ ಧಿಕ್ಕಾರ ಹಾಕಿ ಬುಸುಗುಡುತ್ತಿದ್ದಾರೆ. ರಾಘು ತಾನು ನಿಷ್ಕಳಂಕಿತ, ತನ್ನ ಮಠ ನಿರಪರಾಧಿ ಎಂದು ಪ್ರವಚನ ಬಿಗಿದು ಅದನ್ನ ಮಠದ ಫೇಸ್‍ಬುಕ್‍ಗೆ ಹಾಕಿ ಹವ್ಯಕರ ಪ್ರಚೋದಿಸಲು ಪ್ರಯತ್ನಿಸಿದ್ದಾನೆ. ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹೈಗರು ಸಾಗರೋಪಾದಿಯಲ್ಲಿ ಸೇರಬೇಕು; ಆ ಪ್ರಕ್ಷುಬ್ಧ ಕಡಲಲ್ಲಿ ತನ್ನ ಟೀಕಾಕಾರರು ¯ಯವಾಗಿ ಹೋಗಬೇಕೆಂಬುದು ರಾಘುನ ಹಠವಾಗಿತ್ತು. ವಿರೋಧಿ ಸನ್ಯಾಸಿಗಳಿಗೋ ರಾಘು ಸ್ವಾಮಿಯಾಗಿರುವ ಅರ್ಹತೆ ಕಳಕೊಂಡ ಲಂಪಟನೆಂದು ಜಗಜ್ಜಾಹೀರು ಮಾಡುವ ದರ್ದು. ಈ ಕಾವಿ ಕಾಳಗದಲ್ಲಿ ಹವ್ಯಕರ ಮಾನ ಮಾತ್ರ ಹರಾಜು!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...