Homeಮುಖಪುಟಅನಂತ್ಮಾಣಿ v/s ಸೂಲಿಬೆಲೆ, ಇದು ಟಿಕೆಟ್ ಕೈತಪ್ಪಿದ ಕದನ

ಅನಂತ್ಮಾಣಿ v/s ಸೂಲಿಬೆಲೆ, ಇದು ಟಿಕೆಟ್ ಕೈತಪ್ಪಿದ ಕದನ

- Advertisement -
- Advertisement -

| ಶುದ್ಧೋದನ |

ಉತ್ತರಕನ್ನಡದ ಸೋಶಿಯಲ್ ಮೀಡಿಯಾದಲ್ಲೀಗ ಕೇಸರಿ ಕುಮಾರರಿಬ್ಬರ ಗುದಮುರಗಿ ಜೋರು ಸದ್ದು ಮಾಡುತ್ತಿದೆ. ಬಿಜೆಪಿ ಸಂಸದ ಅನಂತ್‍ಕುಮಾರ್ ಹೆಗ್ಡೆ ಮತ್ತು ಕೇಸರಿ ಭಾಷಣ`ಕೋರ’ ಚಕ್ರವರ್ತಿ ಸೂಲಿಬೆಲೆ ಒಬ್ಬರಿಗೊಬ್ಬರು ಕೆಸರು ಎರಚಿಕೊಳ್ಳುತ್ತಿರೋದು ರೋಚಕವಿದೆ. ಹಾಗೆ ನೋಡಿದರೆ ಮೊನ್ನೆ ಮುಗಿದ ಇಲೆಕ್ಷನ್ ಸಂದರ್ಭದಲ್ಲೇ ಮಾಣಿಗೆ ಟಿಕೆಟ್ ಕೊಡಬಾರದೆಂದು ದೊಡ್ಡ ಕೂಗೆದ್ದಿತ್ತು. ಆತನ ಬದಲಿಗೆ ನಮೋ ಬ್ರಿಗೇಡ್‍ನ ಪ್ರೊಪ್ರೇಟರ್ ಚಕ್ರವರ್ತಿ ಸೂಲಿಬೆಲೆ ಹೆಸರು ತೇಲಿ ಬಂದಿತ್ತು. ಸ್ಥಳೀಯ ಆರೆಸ್ಸೆಸ್-ಹಿಂಜಾವೇ ಪಡೆಯೇ ಮಾಣಿ ವಿರುದ್ಧ ಮುರಕೊಂಡು ಬಿದ್ದಿತ್ತು. ಮತದಾರರು ಮತ್ತು ಬಿಜೆಪಿ ಕಾರ್ಯಕರ್ತರ ತಿರಸ್ಕಾರ, ತಾತ್ಸಾರಕ್ಕೆ ತುತ್ತಾಗಿರುವ ಮಾಣಿಗೆ ಟಿಕೆಟ್ ಕೊಡಬಾರದೆಂದು ಉತ್ತರ ಕನ್ನಡದ ಆರೆಸ್ಸೆಸ್‍ನ ಒಂದು ತಂಡ ಪ್ರಬಲ ಹೋರಾಟ ಮಾಡಿತ್ತು. ಉತ್ತರ ಕನ್ನಡ ಸಂಘಪರಿವಾರದ ಕಲ್ಲಡ್ಕ, ಹನ್ಮಂತ ಶಾನಭಾಗ್ ಎರಡೂ ಕಡೆ “ಆಟ” ಆಡಿದ್ದರು.

ಅಂತಿಮವಾಗಿ ಮಾಣಿಗೇ ಟಿಕೆಟ್ ಸಿಕ್ಕಿತು. ಆತ ಗೆದ್ದೂ ಬಿಟ್ಟ. ಆದರೆ ಬಿಜೆಪಿ ಒಳಮನೆಯ ಬೇಗುದಿ ಕಮ್ಮಿ ಆಗಲಿಲ್ಲ. ಸೂಲಿಬೆಲೆ ಟೀಮಂತೂ ಮೋದಿ ಮತ ಭಿಕ್ಷೆಯಿಂದ ಗೆದ್ದಿರುವ ಮಾಣಿ ಧೀಮಾಕಿಂದ ಬೀಗುವುದು ಬೇಕಾಗಿಲ್ಲ ಎಂಬ ರಹಸ್ಯ ಅಭಿಯಾನವನ್ನೇ ಹುಟ್ಟುಹಾಕಿತು! ಮಾಣಿ ಮಾಡಿದ ಜನದ್ರೋಹದ ಪಾಪಕ್ಕೇ ಮಂತ್ರಿಯಾಗದೆ ಮೂಲೆ ಪಾಲಾಗಿದ್ದಾನೆಂದು ಆತನ ವಿರೋಧಿ ಬಳಗ ತಿವಿಯತೊಡಗಿತ್ತು. ಇದೆಲ್ಲದರಿಂದ ಮಾಣಿ ಕೊತಕೊತ ಕುದಿಯುತ್ತಲೇ ಇದ್ದ. ತನಗೆ ಅಡ್ಡಗಾಲು ಹಾಕಿದವರನ್ನೆಲ್ಲಾ ಒಬ್ಬೊಬ್ಬರಾಗಿ ಸಂಹರಿಸಲು ಆತ ಸ್ಕೆಚ್ ರೆಡಿಮಾಡಿಕೊಂಡಿದ್ದ. ಸಂಘಪರಿವಾರದಲ್ಲಿ ತನಗಿರುವ ಸಂಪರ್ಕ ಬಳಸಿಕೊಂಡು ಮಾಣಿ ಈಗ ಜಿಲ್ಲಾ ಚೆಡ್ಡಿ ಪಡೆಯಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸುತ್ತಿದ್ದಾನೆ. ತನಗೆ ವಿರೋಧ ಮಾಡಿದ ಜಿಲ್ಲಾ ಆರೆಸ್ಸೆಸ್, ಹಿಂಜಾವೇ ಮುಖಂಡರನ್ನು ಸಂಘಟನೆಯ ಹುದ್ದೆಗಳಿಂದ ಕಿತ್ತುಹಾಕಿಸುತ್ತಿದ್ದಾನೆ. ಈಗಾಗಲೇ ಜಿಲ್ಲಾಮಟ್ಟದ ಒಬ್ಬ ಕಾರ್ಯವಾಹಕ ಮತ್ತು ಭಟ್ಕಳದ ಆರೆಸ್ಸೆಸ್ ಲೀಡರ್‍ಗೆ ಸ್ಥಾನ ಚ್ಯುತಿ ಮಾಡಲಾಗಿದೆ. ಎಲ್ಲಾ ತಾಲ್ಲೂಕಿನ ಬಿಜೆಪಿ-ಆರೆಸ್ಸೆಸ್‍ನಲ್ಲಿ ಮಾಣಿ ಮಾರಿಹಬ್ಬ ನಡೆಯಲಿದೆ!

ಇನ್ನೊಂದೆಡೆ ಮಾಣಿ ಬಂಡವಾಳ ಬಯಲು ಮಾಡುವ ಆನ್‍ಲೈನ್ ಕಸರತ್ತು ನಡೆಯಲಾರಂಭಿಸಿದೆ. ಚಕ್ರವರ್ತಿ ಸೂಲಿಬೆಲೆ, ಮಾಣಿ ಅಯೋಗ್ಯತೆಯನ್ನು ವ್ಯವಸ್ಥಿತವಾಗಿ ಜಗಜ್ಜಾಹೀರು ಮಾಡುತ್ತಿದ್ದಾನೆ. ಉತ್ತರ ಕನ್ನಡದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆಯ ಸೋಷಿಯಲ್ ಮೀಡಿಯಾ ಅಭಿಯಾನ ತನ್ನ ತೇಜೋವಧೆ ಮಾಡುವ ಹಿಕಮತ್ತೆಂಬ ಭಾವನೆ ಮಾಣಿಯದು. ಆಸ್ಪತ್ರೆ ಆಗದಿರುವುದು ಸಂಸದನ ಅಸಾಮಥ್ರ್ಯ ಬಿಂಬಿಸುತ್ತಿದೆ ಎಂಬಂತೆ ಪ್ರಚಾರ ಮಾಡಲಾಗಿತ್ತು. ಇದರ ಹಿಂದೆ ತನ್ನ ಹಿತಶತೃ ಸೂಲಿಬೆಲೆ ಇದ್ದಾನೆಂಬ ಖಚಿತ ನಂಬಿಕೆ ಮಾಣಿಯದು. ಹಾಗಾಗಿ ಆತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ಇಡುವವರನ್ನೇ ತನ್ನ ಟ್ವಿಟರ್ ಖಾತೆಗೆ ಪ್ರವೇಶಿಸದಂತೆ ನಿಷೇಧ ಹೇರಿದ್ದರು. ಅಷ್ಟೇ ಅಲ್ಲ, ಆಸ್ಪತ್ರೆಗಾಗಿ ಮನವಿ ಹಿಡಿದುಕೊಂಡು ಬಂದ ಹುಡುಗರಿಗೆ ರೇಗಿ ಸೋಷಿಯಲ್ ಮೀಡಿಯಾದವರಿಂದಲೇ ಆಸ್ಪತ್ರೆ ಮಾಡಿಸಿಕೊಳ್ಳಿ ಎಂದಬ್ಬರಿಸಿದ್ದ.

ಈ ಜಗಳ ಸೂಲಿಬೆಲೆ ಮತ್ತು ಅನಂತ್ಮಾಣಿ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ವಾಚಾಮಗೋಚರವಾಗಿ ಬೈದಾಡಿಕೊಳ್ಳುವ ಮಟ್ಟಕ್ಕೆ ಹೋಗಿದೆ. ಇವರ ಕಾಲೆಳೆದಾಟ ಫೇಸ್ಬುಕ್, ವಾಟ್ಸಾಪ್‍ನಲ್ಲಿ ಕದನ ಕುತೂಹಲ ಕೆರಳಿಸಿದೆ. ಗೆದ್ದವರ ಈ ಗದ್ದಲ ವಿರೋಧ ಪಕ್ಷಗಳಿಗೆ ಮಜಾ ನೀಡುತ್ತಿದ್ದರೆ, ಬಿಜೆಪಿಯಲ್ಲಿ ಮುಜುಗರ ಮೂಡಿಸಿದೆ.

ಇದೆಲ್ಲದರಿಂದ ಒಂದು ಹಂತದಲ್ಲಿ ತಬ್ಬಿಬ್ಬಾದ ಸೂಲಿಬೆಲೆ ಜಗಳ ಸಾಕು, ಕೆಲಸ ಮಾಡೋಣ ಎಂಬ ಟ್ವೀಟ್ ಮಾಡಿದರೂ ಆರೋಪ-ಪ್ರತ್ಯಾರೋಪದ ಬಯಲಾಟ ಮಾತ್ರ ನಿಂತಿಲ್ಲ. ಮೋದಿ ಮತ ಭಿಕ್ಷೆಯಿಂದ ಗೆದ್ದ ಸಂಸದರು ಧಿಮಾಕು ತೋರಿಸದೆ ಕೆಲಸ ಮಾಡಬೇಕು ಎಂದು ಸೂಲಿಬೆಲೆ ಟ್ವಿಟಿಸಿದ್ದೇ ಬಿಜೆಪಿಯಲ್ಲಿ ಕಂಪನ ಸೃಷ್ಠಿಯಾಗಲು ಮೂಲಕಾರಣ. ಸದಾನಂದ ಗೌಡ, ಶೋಭಾ ಕರಂದ್ಲಾಜೆಯಂಥ ದೊಡ್ಡವರೆ ಸೂಲಿಬೆಲೆ ಮಾತಿಂದ ಕೆರಳಿ ಕೆಂಡವಾದರು. ನಮಗೆ ಬುದ್ಧಿ ಹೇಳಲು ಚಕ್ರವರ್ತಿ ಯಾರು? ಎಂದು ಎಗರಾಡಿದರು.

ತನಗೆ ಟಿಕೆಟ್ ತಪ್ಪಲು ಕಾರಣವಾದ ನಾಯಕರನ್ನು ನಿರ್ದಿಷ್ಟವಾಗಿ ಗುರಿಮಾಡಿಕೊಂಡೇ ಸೂಲಿಬೆಲೆ ಸಂಸದರ ಬಣ್ಣ ಬಯಲಾಗಿಸುತ್ತಿದ್ದಾನೆ. ಇದು ಬಿಜೆಪಿಯ ಅಧಿಕಾರಸ್ಥರ ಚೇಲಾಗಳನ್ನು ಕೆರಳಿಸಿದೆ. ಜನಪ್ರತಿನಿಧಿಗಳು ಕೆಲಸ ಮಾಡಲಿ ಎಂದು ಹೇಳೋದು ತಪ್ಪೇನಲ್ಲ. ಆದರೆ ಹಾಗೆ ಹೇಳಿದ್ದು ಸೂಲಿಬೆಲೆಯಾದ್ದರಿಂದ ಬಿಜೆಪಿಯಲ್ಲಿ ಬೆಂಕಿಹೊತ್ತಿಕೊಂಡಿತು. ತನ್ನಿಂದಾಗಿಯೇ ಕರ್ನಾಟಕದಲ್ಲಿ ಬಿಜೆಪಿಯ 25 ಸಂಸದರು ಗೆದ್ದಿದ್ದಾರೆಂದು ಸೂಲಿಬೆಲೆ ಹೇಳಿದ್ದಾನೆಂದು ಕಿಡಿ ಹೊತ್ತಿಸಲಾಯಿತು. ಸೂಲಿಬೆಲೆ ಹಾಗೆ ಹೇಳಿಯೇ ಇಲ್ಲವೆಂದು ಆತನ ಬೆಂಬಲಿಗ ನೆಟ್ಟಿಗರ ವಾದ. ಅಸಲಿಗೆ ಆತ ಹಾಗೆ ಹೇಳಿಯೂ ಇರಲಿಲ್ಲ, ಅಂಥ ಸಂದೇಶವೂ ಲಭ್ಯವಿಲ್ಲ. ಆರು ಸಲ ಸಂಸದರಾದವರಿಗೆ, ಎಂಟು ಸಲ ಮಂತ್ರಿಯಾದವರಿಗೆ ಜನಸಾಮಾನ್ಯರ ಅಳಲಿಗೆ ಸ್ಪಂದಿಸಲಾಗದಾ? ಎಂದಾತ ಟ್ವಿಟಿಸಿದ್ದನಷ್ಟೇ. ಇದು ಮಾಣಿಗೆ ಚೆಡ್ಡಿಯೊಳಗೆ ಇರುವೆ ಕಡಿದಂತೆ ಚಡಪಡಿಕೆ ತಂದಿದೆ.

ಇದರ ಬೆನ್ನಿಗೇ ಕೊಡಗಿನಲ್ಲೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿತ್ತು. ಅದಕ್ಕೆ ಅಲ್ಲಿಯ ಸಂಸದ ತಕ್ಷಣ ಸ್ಪಂದಿಸಿದ್ದಾರೆ. ಉ.ಕನ್ನಡದ ಎಂಪಿ ಒಣ ರುಬಾಬು ಮಾಡುತ್ತ ತಲೆ ತಪ್ಪಿಸಿಕೊಳ್ಳುತ್ತಿದ್ದ. ಈ ಹೊತ್ತಲ್ಲಿ ಸೂಲಿಬೆಲೆ ಮಾಡಿದ ಟ್ವೀಟ್ ಮಾಣಿ ಬೆಂಬಲಿಗರಲ್ಲಿ ಆಕ್ರೋಶ ಮೂಡಿಸಿದೆ. ಈಗ ಟ್ರೋಲ್‍ಗಳು ಬರಪೂರ ನಡೆಯುತ್ತಿದೆ. ಬಿಜೆಪಿಯೊಳಗಿನ ಬಡಿದಾಟ ದಿನಕ್ಕೊಂದು ಆಯಾಮ ಪಡೆಯುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...