- Advertisement -
- Advertisement -
ಬಾಬ್ರಿ ಮಸೀದಿ ಪ್ರಕರಣದ ತೀರ್ಪು ಹೊರಬಿದ್ದಿರುವ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಜನರ ಓಡಾಟ ವಿರಳವಾಗಿ ಕಂಡು ಬಂತು. ನಗರದ ಯಾವುದೇ ಮೂಲೆಯಲ್ಲಿ ಹೋದರೂ ಜನರು ಹೆಚ್ಚಾಗಿ ಓಡಾಡುವುದು ಕಂಡು ಬರಲಿಲ್ಲ.
ತುಮಕೂರಿನ ಜನನಿಬಿಡ ರಸ್ತೆಗಳೆಂದೇ ಹೆಸರಾಗಿರುವ ಅಶೋಕರಸ್ತೆ, ಎಂ.ಜಿ.ರಸ್ತೆ, ಜನರಲ್ ಕಾರಿಯಪ್ಪ ರಸ್ತೆ, ಸೋಮೇಶ್ವರ ರಸ್ತೆಗಳ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗಿದ್ದ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳು ಮುಚ್ಚಿದ್ದವು.
ಬೆಂಗಳೂರು-ತುಮಕೂರು, ಶಿವಮೊಗ್ಗ-ಬೆಂಗಳೂರು ಹೀಗೆ ಕೆಎಸ್ ಆರ್ ಟಿಸಿ ಬಸ್ ಗಳು ಎಂದಿನಂತೆ ಸಂಚರಿಸಿದವು. ದ್ವಿಚಕ್ರವಾಹನಗಳು ವಿರಳವಾಗಿ ಸಂಚರಿಸುತ್ತಿದ್ದುದು ಕಂಡು ಬಂತು. ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಲಾಗಿತ್ತು.
ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಟೌನ್ ಹಾಲ್ ವೃತ್ತ, ಕಾಲ್ ಟ್ಯಾಕ್ಸ್ ಸರ್ಕಲ್, ಗುಬ್ಬಿ ಗೇಟ್ ಹೀಗೆ ನಗರದ ಪ್ರಮುಖ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು. ಬೆಳಗಿನಿಂದಲೇ ಪೊಲೀಸ್ ಅಧಿಕಾರಿಗಳು ವಾಹನಗಳಲ್ಲಿ ಸಂಚರಿಸಿ ನಗರದ ವೀಕ್ಷಣೆ ಮಾಡಿ ಭದ್ರತೆಯನ್ನು ಪರಿಶೀಲಿಸಿದರು.
ಸಿಆರ್ ಪಿಸಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಬಹುತೇಕ ಜನರು ಮನೆಯಿಂದ ಹೊರ ಬಂದಿರಲಿಲ್ಲ. ಸಿನಿಮಾ ಮಂದಿರಗಳಲ್ಲೂ ಜನಸಂದಣಿ ಕಂಡು ಬರಲಿಲ್ಲ. ತುಮಕೂರು ನಗರದಲ್ಲಿ ಶಾಂತಿ ಕಾಪಾಡಲು ಪೊಲೀಸರ್ ಕಟ್ಟೆಚ್ಚರ ವಹಿಸಿದ್ದಾರೆ.