Homeಮುಖಪುಟಆಪರೇಷನ್ 136: ಕ್ರೋನಿ ಕ್ಯಾಪಿಟಲಿಸಂ, ಕ್ರೋನಿ ಜರ್ನಲಿಸಂ ಮತ್ತು ಕ್ರೋನಿ ಪಾಲಿಟಿಕ್ಸ್

ಆಪರೇಷನ್ 136: ಕ್ರೋನಿ ಕ್ಯಾಪಿಟಲಿಸಂ, ಕ್ರೋನಿ ಜರ್ನಲಿಸಂ ಮತ್ತು ಕ್ರೋನಿ ಪಾಲಿಟಿಕ್ಸ್

- Advertisement -
- Advertisement -
  • ಡಾ.ಎಚ್.ವಿ.ವಾಸು |

ಹಾಗೆ ನೋಡಿದರೆ ಈ 10 ವರ್ಷಗಳಲ್ಲಿ ಇದರಷ್ಟು ದೊಡ್ಡ ಬ್ರೇಕಿಂಗ್ ನ್ಯೂಸ್ ಇನ್ನೊಂದು ಬಂದಿರಲಿಕ್ಕಿಲ್ಲ. ಏಕೆಂದರೆ 24ಕ್ಕೂ ಹೆಚ್ಚು ಟಿವಿ/ನ್ಯೂಸ್ ಪೇಪರ್‍ಗಳು ಕಪ್ಪು ಹಣ ಪಡೆದು, ಬಿಜೆಪಿ ಪಕ್ಷದ ಪರವಾಗಿ ಹಾಗೂ ಹಿಂದೂತ್ವ ಸಿದ್ಧಾಂತವನ್ನು ಹರಡಲು ಒಪ್ಪಿಕೊಂಡ ‘ಕುಟುಕು ಕಾರ್ಯಾಚರಣೆ’ಯ ವಿಡಿಯೋ ಪ್ರಕಟವಾಗಿದೆ. ಜಾಹೀರಾತು ವಿಭಾಗದ ಮುಖ್ಯಸ್ಥರುಗಳಿಂದ ಹಿಡಿದು, ಹಿರಿಯ ಸಂಪಾದಕರು ಮತ್ತು ಮಾಧ್ಯಮ ಸಂಸ್ಥೆಯ ಮಾಲೀಕರವರೆಗೆ ಹಲವರು ಇದರಲ್ಲಿ ಮಾತನಾಡಿದ್ದಾರೆ. ಕೆಲವು ಕೋಟಿಗಳಿಂದ 500 ಕೋಟಿ ರೂ.ಗಳವರೆಗೆ ‘ಡೀಲ್’ನ ಮಾತುಕತೆ ಆಗಿದೆ. ಇದನ್ನು ಬ್ರೇಕಿಂಗ್ ನ್ಯೂಸ್ ಮಾಡಬಹುದೆಂದು ಹೇಗೂ ಆಯಾ ಸುದ್ದಿ ಸಂಸ್ಥೆಗಳಿಗೆ ಅನ್ನಿಸುವುದು ಸಾಧ್ಯವಿಲ್ಲ; ಆದರೆ, ಇತರ ಸುದ್ದಿ ಸಂಸ್ಥೆಗಳೂ ಇದನ್ನು ಬ್ರೇಕಿಂಗ್ ನ್ಯೂಸ್ ಇರಲಿ, ಸಾಧಾರಣ ಸುದ್ದಿಯನ್ನಾಗಿಯೂ ಪ್ರಕಟಿಸಲಿಲ್ಲ. ಸಾಮಾನ್ಯ ಜನರ ಒಂದು ವಿಭಾಗವೂ ‘ಇದರಲ್ಲೇನು ವಿಶೇಷ?, ಮಾಧ್ಯಮದವರೂ ಭ್ರಷ್ಟರೇ. ಅವರೆಲ್ಲಾ ಹಣ ತೆಗೆದುಕೊಂಡೇ ಇಂತಹ ಸುದ್ದಿ ಮಾಡುತ್ತಾರೆ’ ಎಂದು ಹೇಳಿ ಉಪೇಕ್ಷೆ ಮಾಡುತ್ತಿದ್ದಾರೆ.

ಆದರೆ, ಇದು ಉಪೇಕ್ಷೆ ಮಾಡುವ ಸುದ್ದಿ ಅಲ್ಲ. ಸುದ್ದಿಯೇ ಬಿಕರಿಗಿರುವ ದುರಂತದ ಸಂಗತಿ. ಅದರಲ್ಲೂ ವಿಷವನ್ನೂ ಪ್ರಸಾರ ಮಾಡುತ್ತೇವೆ ಎಂದು ಅಪರಿಚಿತ ವ್ಯಕ್ತಿಯೊಬ್ಬನ ಮುಂದೆ ಸಲೀಸಾಗಿ ಮಾಧ್ಯಮ ಮುಖ್ಯಸ್ಥರು ಹೇಳುತ್ತಿದ್ದಾರೆಂದರೆ ನಮ್ಮ ಮಾಧ್ಯಮ ಸಂಸ್ಥೆಗಳು ಚಿಲ್ಲರೆಯಾಗಿ ಮತ್ತು ಸಗಟಾಗಿ ಮಾರಿಕೊಂಡಿರುವ ಅಪಾಯಕಾರಿ ವಿದ್ಯಮಾನ.

ಇನ್ನೂ ಸಹಾ ತಮ್ಮ ಮೊಬೈಲ್ ಮೂಲಕ ವಿವರಗಳನ್ನು ಪಡೆದುಕೊಂಡಿರದವರಿಗಾಗಿ ಈ ವಿವರಗಳು. ಕೋಬ್ರಾ ಪೋಸ್ಟ್ ಡಾಟ್ ಕಾಂ ಎಂಬ ವೆಬ್‍ಪೋರ್ಟಲ್ ಹಿಂದೆಯೂ ಹಲವು ಸ್ಟಿಂಗ್‍ಗಳನ್ನು ನಡೆಸಿದೆ. ಈ ಸಂಸ್ಥೆಯ ಪತ್ರಕರ್ತ ಪುಷ್ಪ್ ಶರ್ಮಾ ಎಂಬಾತ ಮಾಧ್ಯಮ ಸಂಸ್ಥೆಗಳನ್ನು ಗುರಿಯಾಗಿಟ್ಟುಕೊಂಡು ತಿಂಗಳುಗಟ್ಟಲೆ ಶ್ರಮ ಹಾಕಿ ನಡೆಸಿದ ಕಾರ್ಯಾಚರಣೆ ಇದು. ಈ ಕಾರ್ಯಾಚರಣೆಗೆ ‘ಆಪರೇಷನ್ 136’ ಎಂದು ಹೆಸರಿಸಲು ಕಾರಣವಿತ್ತು. ಕೋಬ್ರಾಪೋಸ್ಟ್ ಟೀಂ ಈ ಕಾರ್ಯಾಚರಣೆಗೆ ಇಳಿದ ಸಂದರ್ಭದಲ್ಲಿ ಜಗತ್ತಿನಲ್ಲಿ ಮಾಧ್ಯಮ ಸ್ವಾತಂತ್ರ್ಯದ ವಿಚಾರದಲ್ಲಿ ಭಾರತದ ಸ್ಥಾನ 136 ಆಗಿತ್ತು. ದುರಂತವೆಂದರೆ, ವಿಡಿಯೋಗಳು ಬಿಡುಗಡೆಯಾಗುವ ಹೊತ್ತಿಗೆ ಭಾರತದ ಸ್ಥಾನ 138 ಆಗಿದೆ.

ಪುಷ್ಪ್ ಶರ್ಮಾ, ಆಚಾರ್ಯ ಅಟಲ್ ಎಂಬ ಹೆಸರಿನಲ್ಲಿ ಮಾಧ್ಯಮ ಸಂಸ್ಥೆಗಳ ಕಮರ್ಷಿಯಲ್ ವಿಭಾಗದ ಮಧ್ಯಮ ಹಂತದ ಸಿಬ್ಬಂದಿಯನ್ನು ಭೇಟಿಯಾಗಲಾರಂಭಿಸಿದ್ದಾರೆ. ಅಲ್ಲಿಂದ ಸಾಧ್ಯವಾದಷ್ಟೂ ಮೇಲೆ ಹೋಗಿ ಡೀಲ್ ಕುದುರಿಸುವ ನಾಟಕವನ್ನು ಆಡಿದ್ದಾರೆ. ಕನ್ನಡಪ್ರಭ ಮತ್ತು ಸುವರ್ಣ ಚಾನೆಲ್‍ನಲ್ಲಿ ಸಂಪಾದಕ ರವಿ ಹೆಗಡೆಯವರ ತನಕ ಹೋಗಿದ್ದರೆ, ಟೈಮ್ಸ್ ಗುಂಪಿನಲ್ಲಿ ಅದರ ಮಾಲೀಕ ವಿನೀತ್ ಜೈನ್‍ವರೆಗೂ ಹೋಗಿದ್ದಾರೆ. (ಇವೆರಡೂ ಸಂಸ್ಥೆಗಳು ಈಗ ‘ಆ ಥರದ ವ್ಯಕ್ತಿ ಬಂದು ಡೀಲ್ ಕುದುರಿಸಲು ಯತ್ನಿಸಿದ್ದು ನಿಜ. ಆದರೆ, ನಮ್ಮವರು ಆತನನ್ನೇ ಕೌಂಟರ್ ಸ್ಟಿಂಗ್ ಮಾಡಲು ಮಾತಾಡಿಸುತ್ತಾ ಹೋದರು ಎಂಬ ಸ್ಪಷ್ಟನೆ ನೀಡಿದ್ದಾರೆ).

ಪಶ್ಚಿಮ ಬಂಗಾಳದ ದೈನಿಕ್ ವರ್ತಮಾನ್ ಮತ್ತು ದೈನಿಕ್ ಸಂಬದ್ ಎರಡು ಮಾಧ್ಯಮ ಸಂಸ್ಥೆಗಳು ಮಾತ್ರ ಈ ಡೀಲ್‍ಅನ್ನು ನೇರವಾಗಿ ಮತ್ತು ಸ್ಪಷ್ಟವಾಗಿ ನಿರಾಕರಿಸಿವೆ. ಇಂಡಿಯಾ ಟುಡೇ ಗುಂಪಿನ ಮುಖ್ಯಸ್ಥರಲ್ಲಿ ಒಬ್ಬರಾದ ಕಲ್ಲಿ ಪುರಿ ಅವರ ಜಾಹೀರಾತುಗಳನ್ನು ಹಾಕುವುದಾಗಿಯೂ, ಅವರ ಪರವಾಗಿ ಸುದ್ದಿ ಮಾಡುವುದಾಗಿಯೂ ಒಪ್ಪಿಕೊಂಡಿದ್ದರೂ ಅವರೇನಾದರೂ ತಪ್ಪು ಮಾಡಿದರೆ ವಿಮರ್ಶೆ ಮಾಡಬೇಕಾಗುತ್ತದೆಂದೂ ಹೇಳಿದ್ದಾರೆ.

ಉಳಿದಂತೆ ಕೆಲವು ಮಾಧ್ಯಮ ಸಂಸ್ಥೆಗಳು, ತಾವು ಈಗಾಗಲೇ ಬಿಜೆಪಿ ಮತ್ತು ಸಂಘಪರಿವಾರದ ಪರವಾಗಿಯೇ ಇದ್ದೇವೆಂಬುದನ್ನು ಲಜ್ಜೆಯಿಲ್ಲದೇ ಹೇಳಿದ್ದಾರೆ. ಟಿವಿ 18, ಹಿಂದೂಸ್ತಾನ್ ಟೈಮ್ಸ್, ಟೈಮ್ಸ್ ಆಫ್ ಇಂಡಿಯಾ, ರೇಡಿಯೋ ಒನ್, ಇಂಡಿಯಾ ಟುಡೇ, ಎಬಿಪಿ ನ್ಯೂಸ್, ಭಾರತ್ ಸಮಾಚಾರ್, ಬಿಗ್ ಎಫ್‍ಎಂ, ದೈನಿಕ್ ಜಾಗರಣ್, ದಿನಮಲರ್, ಇಂಡಿಯಾ ವಾಯ್ಸ್, ಕೆ ನ್ಯೂಸ್, ಓಪೆನ್, ಲೋಕಮತ್, ಎಂ.ವಿ.ಟಿವಿ, ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್, ಸ್ಟಾರ್ ಇಂಡಿಯಾ, ಸ್ವರಾಜ್ ಎಕ್ಸ್‍ಪ್ರೆಸ್, ಟಿವಿ 5, ಸನ್‍ಗ್ರೂಪ್, ಸಾಧನಾಪ್ರೈಮ್ ನ್ಯೂಸ್, ಆಜ್, ಸುವರ್ಣನ್ಯೂಸ್-ಕನ್ನಡಪ್ರಭ, ಪ್ರಭಾತ್ ಖಬರ್ ಮತ್ತು ದೈನಿಕ್ ಭಾಸ್ಕರ್ ಸಂಸ್ಥೆಗಳನ್ನು ಅವರು ಮಾತಾಡಿಸಿದ್ದಾರೆ. ದೈನಿಕ್ ಭಾಸ್ಕರ್ ಬಹಳ ಮುಂಚೆಯೇ ಕೋರ್ಟ್‍ನಲ್ಲಿ ಇದರ ಪ್ರಸಾರಕ್ಕೆ ತಡೆ ಕೋರಿ ಆದೇಶ ತಂದಿದ್ದರೆ, ಸುವರ್ಣ ನ್ಯೂಸ್ ನಂತರ ತಡೆ ಆದೇಶ ತಂದಿತು.

ಈ ಎಲ್ಲಾ ಮಾಧ್ಯಮ ಸಂಸ್ಥೆಗಳು ಮಾತ್ರವಲ್ಲದೇ, ಹಣಕಾಸು ವಹಿವಾಟು ಆಪ್ ನಡೆಸುವ ಪೇಟಿಎಂ ಸಂಸ್ಥೆಯ ಮುಖ್ಯಸ್ಥರಲ್ಲೊಬ್ಬರನ್ನೂ ಕೋಬ್ರಾಪೋಸ್ಟ್ ಮಾತಾಡಿಸಿತು. ಪ್ರಧಾನಿ ಕಚೇರಿ ಮತ್ತು ಆರೆಸ್ಸೆಸ್‍ಗೆ ತಾನು ಯಾವ್ಯಾವ ರೀತಿಯ ಸಹಾಯ/ಮಾಹಿತಿ ಕೊಟ್ಟಿದ್ದೇನೆಂದರೆ, ಅದನ್ನೆಲ್ಲಾ ಹೇಳಲಾಗದು ಎಂದು ಆತನೂ ಸೀಕ್ರೆಟ್ ಕ್ಯಾಮೆರಾ ಇರುವುದು ಗೊತ್ತಿಲ್ಲದೇ ಮಾತಾಡಿದ್ದಾರೆ. ಕೋಟಿಗಟ್ಟಲೆ ಜನರು ಗೌಪ್ಯತೆ ಕಾಪಾಡಿಕೊಳ್ಳುವ ಭರವಸೆ ಆಧಾರದಲ್ಲಿ ನೀಡಿರುವ ತಮ್ಮ ವೈಯಕ್ತಿಕ ಮಾಹಿತಿಯು ಈ ರೀತಿ ಸೋರಿಕೆ ಮಾಡುವ ಕಂಪೆನಿಗೆ ಕೊಟ್ಟಿದ್ದಾರೆ ಮತ್ತು ಈ ಕಂಪೆನಿಯು ನೋಟು ರದ್ದತಿಯ ನಂತರ ಪ್ರಧಾನಿಯ ಫೋಟೋ ಬಳಸಿಕೊಂಡು ಜಾಹೀರಾತನ್ನು ನೀಡಿತ್ತೆಂಬುದನ್ನು ಮರೆಯಲಾಗದು.

ವಿನೀತ್ ಜೈನ್ ಎಂಬಾತ ದೇಶದುದ್ದಕ್ಕೂ ವೃತ್ತಪತ್ರಿಕೆಗಳು ಮತ್ತು ಚಾನೆಲ್‍ಗಳನ್ನು ಹೊಂದಿರುವ ಟೈಮ್ಸ್ ಗ್ರೂಪ್‍ನ ಮುಖ್ಯಸ್ಥ. ಭಗವದ್ಗೀತೆ ಮತ್ತು ಕೃಷ್ಣ ಹೆಸರಿನಲ್ಲಿ ಪರೋಕ್ಷವಾಗಿ ಬಿಜೆಪಿಯ ಪರವಾಗಿ ಕಾರ್ಯಕ್ರಮಗಳನ್ನು ಮಾಡುವುದಲ್ಲದೇ, ಇತರ ಅನೈತಿಕ ಪ್ರಚಾರಕ್ಕೆ 500 ಕೋಟಿ ರೂ.ಗಳಷ್ಟು ದೊಡ್ಡ ಡೀಲ್‍ನ ಮಾತುಕತೆ ಈತನ ಜೊತೆಗೇ ನಡೆದದ್ದು. ಈ 500 ಕೋಟಿ ಕಪ್ಪು ಹಣವನ್ನು ನಗದಾಗಿ ಕೊಡಬೇಕೆಂದರೆ ಯಾವ ರೀತಿಯಲ್ಲಿ ತನಗೆ ತಲುಪಿಸಬಹುದೆಂಬ ಸಲಹೆಗಳನ್ನೂ ಈತನೇ ನೀಡುತ್ತಾನೆ. ನೋಟು ರದ್ದತಿಯಿಂದ ಕಪ್ಪು ಹಣ ಮಾಯವಾಗುತ್ತದೆಂದು ಅಭಿಯಾನ ನಡೆಸಿದ್ದ ಚಾನೆಲ್ ಟೈಮ್ಸ್ ನೌ ಈತನದ್ದೇ.

ಇನ್ನೊಬ್ಬಾತ ಅವ್‍ನೀಶ್ ಬನ್ಸಲ್ ಹಿಂದೂಸ್ತಾನ್ ಟೈಮ್ಸ್‍ನ ಸಹ-ಉಪಾಧ್ಯಕ್ಷ. ಈತ ನಿರಂತರವಾಗಿ ಮಾಧ್ಯಮ ಸಂಸ್ಥೆಗಳಿಗೆ ಹಣ ಹರಿಸುತ್ತಿರಿ ಎಂದು ‘ಸಂಘಪರಿವಾರಕ್ಕೆ’ ಸಲಹೆ ನೀಡುವುದಲ್ಲದೇ, ಒಂದು ಒಳ್ಳೆಯ ಪಿಆರ್ ಕಂಪೆನಿಯನ್ನು ಹಿಡಿದು ನೇರವಾಗಿ ವರದಿಗಾರರ ಜೊತೆಗೂ ಡೀಲ್ ಕುದುರಿಸಿಕೊಳ್ಳಿ ಎನ್ನುತ್ತಾನೆ. ವರದಿಗಾರರಲ್ಲಿ ಎರಡು ವಿಧ. ಒಂದು, ಒಳಗಡೆ ಬೆಂಕಿ ಇರುವವರು ಮತ್ತು ಇನ್ನೊಂದು ಬಗೆಯ ಜನ ವೃತ್ತಿಯ ಕುರಿತ ಬದ್ಧತೆಗಿಂತ ಹಣದ ಆಸೆ ಇರುವವರು. ನೀವು ಇಂಥವರ ಮೂಲಕ ಕೆಲಸ ಸಾಧಿಸಿಕೊಳ್ಳಬಹುದು ಎಂದು ಉಪದೇಶಿಸುತ್ತಾರೆ.

ಮೇಲೆ ಹೇಳಲಾದ ಮಾಧ್ಯಮ ಸಂಸ್ಥೆಗಳ ವಿಡಿಯೋಗಳು ಹೊರಬಂದಿದ್ದು ಎರಡನೆಯ ಕಂತಿನಲ್ಲಿ. ಮೊದಲ ಕಂತಿನಲ್ಲಿ ಬಂದ ಸಂಸ್ಥೆಗಳು ಇನ್ನಷ್ಟು ಇವೆ. ಮೋದಿಯವರ ಅತ್ಯಾಪ್ತ ರಜತ್ ಶರ್ಮಾರ ಇಂಡಿಯಾ ಟಿವಿ, ದೈನಿಕ್ ಜಾಗರಣ್ – ಇದು ಭಾರತದ ಅತೀ ದೊಡ್ಡ ಹಿಂದೀ ದೈನಿಕ, ಉತ್ತರ ಪ್ರದೇಶದ ಹಿಂದಿ ಖಬರ್ ಚಾನೆಲ್, ಎಸ್‍ಎಬಿ ಗುಂಪು, ಡಿಎನ್‍ಯ ಇಂಗ್ಲಿಷ್ ದೈನಿಕ (ಜೀ ಸಂಸ್ಥೆಗೆ ಸೇರಿದೆ), ಅಮರ್ ಉಜಾಲಾ, ಯುಎನ್‍ಐ ನ್ಯೂಸ್ ಏಜೆನ್ಸಿ, 9ಎಕ್ಸ್ ತಷನ್ ಎಂಬ ಮನರಂಜನೆಯ ಚಾನೆಲ್, ಸಮಾಚಾರ್ ಪ್ಲಸ್ ಎಂಬ ಉ.ಪ್ರದೇಶದ ನ್ಯೂಸ್ ಚಾನೆಲ್, ಉತ್ತರಾಖಂಡದ ಚಾನೆಲ್ ಎಚ್‍ಎನ್‍ಎನ್ 24*7, ಪಂಜಾಬ್ ಕೇಸರಿ ಮತ್ತು ಸ್ವತಂತ್ರ ಭಾರತ್ ಎಂಬ ಹಿಂದಿ ವೃತ್ತ ಪತ್ರಿಕೆಗಳು, ಸ್ಕೂಪ್‍ವ್ಹೂಪ್ ಮತ್ತು ರೀಡಿಫ್.ಕಾಂ ಎಂಬ ವೆಬ್‍ಪೋರ್ಟಲ್‍ಗಳು ಮತ್ತು ಸಾಧನಾ ಪ್ರೈಂ ನ್ಯೂಸ್ ಎಂಬ ಉ.ಪ್ರದೇಶದ ಇನ್ನೊಂದು ಚಾನೆಲ್ ಇವರ ಜೊತೆಗಿನ ಸಂಭಾಷಣೆಗಳ ಮೊದಲ ಕಂತು ಮಾರ್ಚ್‍ನಲ್ಲೇ ಬಿತ್ತರಗೊಂಡಿತ್ತು.

ಅನಿರುದ್ಧ್

ಆದರೆ, ಎರಡನೆಯ ಕಂತಿನಲ್ಲಿ ದೇಶದ ಹಲವು ಪ್ರಮುಖ ಸಂಸ್ಥೆಗಳ ಮುಖ್ಯಸ್ಥರನ್ನು ಮಾತಾಡಿಸಿರುವುದನ್ನು ನೋಡಿದ್ದೀರಿ. ಕೋಬ್ರಾಪೋಸ್ಟ್‍ನ ಸಂಪಾದಕ ಅನಿರುದ್ಧ ಬಹಲ್ ಹೇಳಿದ ಇನ್ನೊಂದು ಅಂಶವೆಂದರೆ, ‘ತಾನು ಮುಂದಿಟ್ಟ ಆಫರ್‍ಗೆ ಏನೇನು ಮಾಡಬೇಕೆಂದು ಕೇಳಿದೆನೋ ಅದೆಲ್ಲಕ್ಕೂ ಒಪ್ಪಿದ್ದು ಮಾತ್ರವಲ್ಲದೇ, ತಮಗೆ ಲಾಭ ತರಬಹುದಾದ ಈ ಗಿರಾಕಿಯ ಪರವಾಗಿ ಕೋಮುವಾದೀ ಪ್ರಚಾರ ಅಭಿಯಾನ ನಡೆಸುವ ಹಲವು ವಿಧಾನಗಳನ್ನು ಅವರೇ ಹೇಳಿಕೊಟ್ಟಿದ್ದು ನಮ್ಮ ವರದಿಗಾರನನ್ನು ದಿಗ್ಭ್ರಾಂತಿಗೊಳಿಸಿದೆ.’

ಇದನ್ನು ಕ್ರೋನಿ ಜರ್ನಲಿಸಂ ಎಂದಲ್ಲದೇ ಇನ್ನೇನು ಕರೆಯಬಹುದು? ವಿಕೃತ ಬಂಡವಾಳಶಾಹಿಯನ್ನು ಕ್ರೋನಿ ಕ್ಯಾಪಿಟಲಿಸಂ ಎಂದು ಕರೆಯಲಾಗುತ್ತದೆ. ಭ್ರಷ್ಟಾಚಾರ ವಿರೋಧಿ ಹೋರಾಟಗಾರರು ಇದನ್ನು ತೊಲಗಿಸಬೇಕೆಂದೇ ಹೋರಾಟ ಮಾಡುತ್ತಿದ್ದರು. ಎಲ್ಲಿಯವರೆಗೆ ಈ ಹೋರಾಟ ಕಾಂಗ್ರೆಸ್‍ನ ವಿರುದ್ಧ ಇತ್ತೋ, ಅಲ್ಲಿಯವರೆಗೆ ಅದಕ್ಕೆ ಸಾಕಷ್ಟು ಪ್ರಚಾರ ಕೊಟ್ಟ ಇವೇ ಮಾಧ್ಯಮಗಳು, ಬಿಜೆಪಿಯು ಕ್ರೋನಿ ಕ್ಯಾಪಿಟಲಿಸಂನ ಪರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದಾಕ್ಷಣ ಹೋರಾಟಗಾರರ ವಿರುದ್ಧವೇ ತಿರುಗಿ ಬಿದ್ದರು. ಅಂದರೆ, ಕ್ರೋನಿ ಕ್ಯಾಪಿಟಲಿಸಂ, ಕ್ರೋನಿ ರಾಜಕೀಯ ಮತ್ತು ಕ್ರೋನಿ ಜರ್ನಲಿಸಂ ಇಂದು ಒಂದರೊಡನೊಂದು ಕೈ ಜೋಡಿಸಿದೆಯೆಂಬುದು ಬಹಳ ಸ್ಪಷ್ಟ.

ಭಾರತದಲ್ಲಿ ಕ್ರೋನಿ ಕ್ಯಾಪಿಟಲಿಸ್ಟರು ದೇಶದ ಬೊಕ್ಕಸವನ್ನು, ಪ್ರಾಕೃತಿಕ ಸಂಪನ್ಮೂಲಗಳನ್ನು ಹೆಚ್ಚೆಚ್ಚು ಕೊಳ್ಳೆ ಹೊಡೆಯುತ್ತಾ ಸಾಗಿದಂತೆ, ಅವರಿಗೆ ಕಾಂಗ್ರೆಸ್ ಸಪ್ಪೆ ಎನಿಸಿತು. ಇವರನ್ನು ಬೆಳೆಸಿದ್ದು ಕಾಂಗ್ರೆಸ್ಸೇ ಆಗಿತ್ತು; ಆದರೆ, ಒಂದು ಹಂತ ದಾಟಿದ ಮೇಲೆ ಕಾಂಗ್ರೆಸ್ ಪಕ್ಷದೊಳಗಿನ ಒಂದು ವಿಭಾಗ ಅಂಬಾನಿ ಥರದವರ ನಿರ್ಲಜ್ಜ ಲೂಟಿಯ ಪರವಾಗಿ ನಿಲ್ಲಲು ನಿರಾಕರಿಸಿತು. ಅವರಂಥವರ ಲೂಟಿಕೋರ ಯೋಜನೆಗಳು ನಿಧಾನವಾಗತೊಡಗಿದವು. ಆಗ ಅವರ ನಿಷ್ಠಾವಂತ ಸೇವಕರಾಗಿ, ಬಹಳ ಆಕರ್ಷಕ ರೀತಿಯಲ್ಲಿ ಕೆಲಸ ಮಾಡಲು ಮುಂದೆ ಬಂದದ್ದೇ ಮೋದಿ-ಅಮಿತ್ ಶಾ-ಆರೆಸ್ಸೆಸ್‍ನ ಡೆಡ್ಲಿ ಕಾಂಬಿನೇಷನ್. ಅಡ್ವಾಣಿ ಥರದವರೂ ಇವರ ಮುಂದೆ ಸಪ್ಪಗೆ ಕಾಣಿಸಿದರು.

ಈ ಹೊತ್ತಿಗೆ ಮಾಧ್ಯಮ ಸಂಸ್ಥೆಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಕ್ರೋನಿಗಳು ನಿರ್ಧರಿಸಿದ್ದರು. ಅಂಬಾನಿಯೊಬ್ಬನೇ ದೇಶದುದ್ದಗಲಕ್ಕೂ ಹರಡಿಕೊಂಡಿರುವ ಅದೆಷ್ಟೋ ಟಿವಿ 18 ಚಾನೆಲ್‍ಗಳ ಮಾಲೀಕ. ಬಿಗ್ ಎಫ್‍ಎಂ ಎಂಬ ಅವರದೊಂದು ರೇಡಿಯೋ ಚಾನೆಲ್‍ನ ವ್ಯಕ್ತಿ, ‘ನಮ್ಮ ರಿಲೆಯನ್ಸ್ ಕಂಪೆನಿ ಬಿಜೆಪಿಯ ಪರವಾಗಿಯೇ ಇದೆ’ ಎಂದು ಕೋಬ್ರಾಪೋಸ್ಟ್‍ನ ಕ್ಯಾಮೆರಾಕ್ಕೆ ಹೇಳುತ್ತಾನೆ.

ಅಪಾಯ ಇಷ್ಟಕ್ಕೇ ಮುಗಿಯುವುದಿಲ್ಲ. ರಿಪಬ್ಲಿಕ್ ಎಂಬ ಬಿಜೆಪಿ ಚಾನೆಲ್‍ನ ಸಂಪಾದಕ ಅರ್ನಬ್ ಗೋಸ್ವಾಮಿ ‘ಹೌದು ನಾನು ರಾಷ್ಟ್ರೀಯವಾದಿಯೇ. ಅದರಲ್ಲೇನೂ ತಪ್ಪಿಲ್ಲ. ಪತ್ರಕರ್ತರು ರಾಷ್ಟ್ರೀಯವಾದಿಗಳಾಗಿರಬೇಕು’ ಎಂದು ಕಿರುಚುವಾಗ, ಆತ ಭಾರತ ರಾಷ್ಟ್ರದ ಪರವಾಗಿ ಮಾತಾಡುತ್ತಿಲ್ಲ; ಬಿಜೆಪಿಯ, ಆರೆಸ್ಸೆಸ್ಸಿನ ರಾಷ್ಟ್ರೀಯವಾದದ ಪರವಾಗಿ ಮಾತಾಡುತ್ತಿದ್ದಾನೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗೆಯೇ ಇಂದು ಸುವರ್ಣ ಚಾನೆಲ್ ಅಥವಾ ಇನ್ನಾವುದೋ ಚಾನೆಲ್, ಹೌದು ನಾವು ಬಿಜೆಪಿಯೇ, ಆರೆಸ್ಸೆಸ್ಸೇ ಏನಿವಾಗ? ಎಂದು ಕೇಳಿದರೆ ಯಾರಿಗೂ ಆಶ್ಚರ್ಯವಾಗುವುದಿಲ್ಲ. ಹಾಗೇ ಮುಂದುವರೆದು ತೂತ್ತುಕುಡಿಯಲ್ಲಿ ಷಾರ್ಪ್ ಷೂಟರ್‍ಗಳನ್ನು ಕರೆಸಿ ಹೋರಾಟಗಾರರನ್ನು ಕೊಲ್ಲಿಸಿದ್ದನ್ನೂ, ದಲಿತರ ಮಾರಣ ಹೋಮವನ್ನೋ, ಹೆಣ್ಣುಮಕ್ಕಳ ಮೇಲಿನ ಹಲ್ಲೆಯನ್ನೋ ರಾಷ್ಟ್ರದ ಹಿತಾಸಕ್ತಿ ಮತ್ತು ಸಂಸ್ಕøತಿಯ ಹೆಸರಿನಲ್ಲಿ ಸಮರ್ಥನೆ ಮಾಡಿದರೂ ಆಶ್ಚರ್ಯವಾಗುವುದಿಲ್ಲ. ಏಕೆಂದರೆ, ಅವೆಲ್ಲವೂ ಈಗಾಗಲೇ ನಡೆಯುತ್ತಿದೆ.

ಇವರ ಬಣ್ಣ ಬಯಲಾಯಿತು ಎಂದು ಸಂತಸ ಪಡುವ ಸಂದರ್ಭದಲ್ಲಿ ನಾವ್ಯಾರೂ ಇಲ್ಲ. ಪರ್ಯಾಯ ರಾಜಕಾರಣ ಮತ್ತು ಪರ್ಯಾಯ ಮಾಧ್ಯಮಗಳನ್ನು ಕಟ್ಟಿಕೊಳ್ಳುವುದಲ್ಲದೇ ಬೇರಿನ್ಯಾವ ದಾರಿಯೂ ಇಲ್ಲ.

(ಈ ಲೇಖನಕ್ಕೆ ಬೇಕಾದ ಮಾಹಿತಿಯನ್ನು ಕೋಬ್ರಾಪೋಸ್ಟ್ ಮತ್ತು ದಿ ವೈರ್‍ನ ಲೇಖನಗಳಿಂದ ತೆಗೆದುಕೊಂಡಿದೆ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...