Homeಅಂಕಣಗಳುಗೌರಿ ಆಶಯಗಳ ಜೊತೆಗೆ.....

ಗೌರಿ ಆಶಯಗಳ ಜೊತೆಗೆ…..

- Advertisement -
- Advertisement -

ಬಂಧುಗಳೇ,

ಗೌರಿ ಲಂಕೇಶ್‌ರ ಹತ್ಯೆ ಮಾಡುವ ಮೂಲಕ ತಮ್ಮ ವಿರುದ್ಧದ ಗಟ್ಟಿದನಿಯನ್ನು ಇಲ್ಲವಾಗಿಸುವುದು ಆ ಸಂಚುಕೂಟದ ಲೆಕ್ಕಾಚಾರವಾಗಿತ್ತು. ಆದರೆ ಈ ನಾಡಿನ ಜನತೆ ‘ನಾನೂ ಗೌರಿ! ನಾವೆಲ್ಲಾ ಗೌರಿ!!’ ಎಂದು ಒಕ್ಕೊರಲಿನಿಂದ ಕೂಗಿ ಹೇಳಿ ಈ ಸಂಚುಕೂಟಕ್ಕೆ ಬೇರೆಯದೇ ಸಂದೇಶವನ್ನು ರವಾನಿಸಿದ್ದಾರೆ. ”ವ್ಯಕ್ತಿಗಳಿಗೆ ಗುಂಡಿಕ್ಕಬಹುದೇ ಹೊರತು ವಿಚಾರಗಳಿಗೆ ಗುಂಡಿಕ್ಕಲು ನಿಮ್ಮಿಂದ ಎಂದಿಗೂ ಸಾಧ್ಯವಿಲ್ಲ” ಎಂದು ಸಾರಿ ಹೇಳಿದ್ದಾರೆ. ‘ಒಬ್ಬ ಗೌರಿಯ ವಿಚಾರವನ್ನು ಸಾವಿರಾರು ಗೌರಿಯರಾಗಿ ನಾವು ಮುಂದುವರೆಸುತ್ತೇವೆ’ ಎಂಬ ಪಣ ತೊಟ್ಟಿದ್ದಾರೆ.

ಇಂಥ ಒಂದು ಸಾಮೂಹಿಕ ದೃಢ ಸಂಕಲ್ಪದ ಫಲವಾಗಿ ‘ನಾನು ಗೌರಿ’ ಪತ್ರಿಕೆ ಆರಂಭವಾಗಿದೆ. ಪತ್ರಿಕೆಯ ಆರಂಭದೊಂದಿಗೆ ನಮ್ಮ ಗೌರಿ ಲಂಕೇಶ್ ಮರುಹುಟ್ಟು ಪಡೆದಿದ್ದಾರೆ. ಗೌರಿ ಇಲ್ಲದ ಈ ಸಂಕಟಮಯ ಸನ್ನಿವೇಶದಲ್ಲಿ ಗೌರಿ ಪತ್ರಿಕೆಯನ್ನು ಹೊರತರಲು ಕೈಜೋಡಿಸಿದ ಎಲ್ಲರಿಗೂ ‘ಗೌರಿ ಮೀಡಿಯಾ’ ತಂಡದ ಹೃದಯಪೂರ್ವಕ ಕೃತಜ್ಞತೆಗಳು.

ಲಂಕೇಶ್‌ರು ಹುಟ್ಟುಹಾಕಿದ ಜನಪರ, ನಿರ್ಭೀತ ಪತ್ರಿಕೋದ್ಯಮದ ಮಾದರಿಯನ್ನು ಮುಂದುವರೆಸಿದ ಗೌರಿ ಲಂಕೇಶ್ ಆಕ್ಟಿವಿಸ್ಟ್ ಆಗಿ, ಪತ್ರಕರ್ತೆಯಾಗಿ ಹಾಕಿಕೊಟ್ಟ ಮಾದರಿ ನಮಗೆ ಸದಾ ಸ್ಫೂರ್ತಿ. ಈ ಎರಡೂ ಲೆಗಸಿಗಳನ್ನು ಮುಂದುವರೆಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ. ಜೊತೆಗೆ ಈ ಕಾಲಘಟ್ಟದ ಹೊಸ ಸಂಕೀರ್ಣತೆಗಳಿಗೆ ಮುಖಾಮುಖಿಯಾಗಬೇಕಿರುವ ಸವಾಲು ನಮ್ಮ ಮುಂದಿದೆಯೆಂಬುದನ್ನೂ ಅರಿತು ಮುಂದಡಿ ಇಡುತ್ತಿದ್ದೇವೆ.

ಕಲ್ಬುರ್ಗಿ ಹತ್ಯೆ ಖಂಡಿಸಿ ಗೌರಿ ಹಾಗೂ ಇನ್ನಿತರೆ ಪ್ರಗತಿಪರರ ಪ್ರತಿಭಟನೆ

ಇಂದು ನಮ್ಮ ಪ್ರಜಾತಂತ್ರ ಬಿಕ್ಕಟ್ಟಿನಲ್ಲಿದೆ. ನಮ್ಮ ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಸಹೋದರತೆಯ ಬುನಾದಿಯನ್ನೇ ಅಲುಗಾಡಿಸುವ ಮಟ್ಟಕ್ಕೆ ಇಂದು ಫ್ಯಾಸಿಸ್ಟ್ ಶಕ್ತಿಗಳು ಬೆಳೆದು ನಿಂತಿವೆ. ಸ್ವತಂತ್ರ, ನಿರ್ಭೀತ ಪತ್ರಿಕೆಗಳ ಹಾಗೂ ಪತ್ರಕರ್ತರ ದನಿ ಅಡಗಿಸಲು ಈ ಹಿಟ್ಲರ್‌ಶಾಹಿಗಳು ದೇಶಾದ್ಯಂತ ಸೃಷ್ಟಿಸುತ್ತಿರುವ ಭೀಭತ್ಸಕ್ಕೆ ಗೌರಿಯವರ ಹತ್ಯೆಯೇ ಸಾಕ್ಷಿ. ದೀನ ದಲಿತರ, ದುರ್ಬಲರ ದನಿಯಾಗಬೇಕಿದ್ದ ಮಾಧ್ಯಮ ಕ್ಷೇತ್ರವನ್ನು ಇಡಿಯಾಗಿ ಕಾರ್ಪೊರೇಟ್ ಶಕ್ತಿಗಳು ಆವರಿಸಿಕೊಳ್ಳುತ್ತಿವೆ. ಸಾಮಾಜಿಕ ಮಾಧ್ಯಮದಲ್ಲೂ ಫ್ಯಾಸಿಸ್ಟ್‌ಗಳದೇ ಕಾರುಬಾರು.

ಹಿಟ್ಲರ್‌ಶಾಹಿಗಳು ಸೃಷ್ಟಿಸಿರುವ ಇಂಥ ವಿಷಮ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸದೆ ಹೋದರೆ ಈ ದೇಶದ ಪ್ರಜಾತಂತ್ರದ ಅಸ್ತಿತ್ವಕ್ಕೇ ಸಂಚಕಾರ ಒದಗುವ ಅಪಾಯವಿದೆ. ಈ ಕಾಲದ ಕರೆಗೆ ಓಗೊಡಬೇಕಾದ್ದು ಜನಪರ ಪತ್ರಿಕೆಯೊಂದರ ಆದ್ಯ ಕರ್ತವ್ಯ. ‘ನಾನು ಗೌರಿ’ ಪತ್ರಿಕೆ ಈ ಕರ್ತವ್ಯವನ್ನು ನಿರ್ವಹಿಸಲು ಬದ್ಧವಾಗಿದೆ. ಹಾಗೆಯೇ ಗದ್ದುಗೆಯಲ್ಲಿರುವವರ ಜನವಿರೋಧಿತನವನ್ನು ಎದುರಿಸಿ ನಿರಂತರ ವಿರೋಧ ಪಕ್ಷವಾಗಿ ನಿಲ್ಲುವ ಆಶಯ ನಮ್ಮದು. ಯಾವುದೇ ರಾಜಕೀಯ ಪಕ್ಷದ, ರಾಜಕಾರಣಿಗಳ ಮರ್ಜಿಗೆ ಒಳಗಾಗದೆ ಅಥವ ಜಾಹಿರಾತುಗಳ ಹಂಗಿಗೆ ಸಿಲುಕದೆ ಪತ್ರಿಕಾ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ‘ನಾನು ಗೌರಿ’ ಬದ್ಧವಾಗಿರುತ್ತದೆ.

ಪತ್ರಿಕೆಯ ಸ್ವಭಾವ ಮತ್ತು ಗುಣಮಟ್ಟಗಳನ್ನು ಉತ್ತಮಪಡಿಸುವ ನಿರಂತರ ಪ್ರಕ್ರಿಯೆಯ ಭಾಗವಾಗಿ ಹೊಸದಾರಿಯಲ್ಲಿ ಸಾಗುತ್ತೇವೆ. ಇದರ ಭಾಗವಾಗಿ ಹೊಸ ತಲೆಮಾರಿನ ಬರಹಗಾರರನ್ನು ಒಳಗೊಳ್ಳುವುದು ಮಾತ್ರವಲ್ಲದೆ, ವಿವಿಧ ಜನಪರ ಚಳವಳಿಗಳ ನಮ್ಮ ನಡುವಿನ ಭಿನ್ನ ವಿಚಾರ ಧಾರೆಗಳ ನಡುವೆ ರಚನಾತ್ಮಕ ಸಂವಾದಕ್ಕೆ ‘ಪತ್ರಿಕೆ’ ವೇದಿಕೆಯಾಗಲಿದೆ. ವರ್ತಮಾನಕ್ಕೆ ಸಂವಾದಿಯಾಗಿ ಬರಹದಲ್ಲಿ ತೊಡಗಿಸಿಕೊಂಡಿರುವ ಹಲವು ಗಣ್ಯರ ಅಂಕಣಗಳೂ ಇರುತ್ತವೆ. ದಿಕ್ಕೆಟ್ಟ ರಾಜಕಾರಣ, ಆರ್ಥಿಕ ಕ್ಷೇತ್ರದ ಕಾರ್ಪೊರೇಟ್ ಹಿಡಿತ, ಸಾಮಾಜಿಕ-ಸಾಂಸ್ಕೃತಿಕ ಸಮಸ್ಯೆಗಳು, ಸಾಹಿತ್ಯ, ಸಿನಿಮಾ, ವಿಮರ್ಶೆ ಇತ್ಯಾದಿ ಹತ್ತು ಹಲವು ಬಗೆಯ ಬರಹಗಳನ್ನು ಪತ್ರಿಕೆ ಒಳಗೊಳ್ಳಲಿದೆ. ಕನ್ನಡದ ಜಾಣ, ಜಾಣೆಯರು ಇಷ್ಟಪಡುವ ರಂಜನೆ, ಬೋಧನೆ, ಪ್ರಚೋದನೆಗೆ ಪೂರಕವಾದ ಬರಹಗಳೂ ಇರುತ್ತವೆ.

ಗೌರಿ ಹತ್ಯೆಯನ್ನು ಖಂಡಿಸಿ, ಈ ಹಿಂದೆ ಗೌರಿ ಪ್ರತಿಭಟಿಸಿದ್ದ ಜಾಗದಲ್ಲೇ ಪ್ರಗತಿಪರರ ಪ್ರತಿಭಟನೆ!

ಗೌರಿ ಲಂಕೇಶ್‌ರ ಸಹೋದ್ಯೋಗಿಗಳಾಗಿದ್ದ ಬಹುತೇಕ ಲೇಖಕ, ಲೇಖಕಿಯರು ಹಾಗೂ ಇಡೀ ಕಚೇರಿ ಸಿಬ್ಬಂದಿ ಈ ಹೊಸ ಪ್ರಯತ್ನದಲ್ಲಿ ಹೃತ್ಪೂರ್ವಕವಾಗಿ ತೊಡಗಿಸಿಕೊಂಡಿರುವುದು ನಮ್ಮ ಶಕ್ತಿಯನ್ನು ಇಮ್ಮಡಿಸಿದೆ. ಎಲ್ಲಕ್ಕಿಂತ ಮುಖ್ಯವಾದ ಸಂಗತಿಯೆಂದರೆ ‘ನಾನು ಗೌರಿ’ ಪತ್ರಿಕೆ ಯಾರೊಬ್ಬರ ಖಾಸಗಿ ಸ್ವತ್ತಲ್ಲ. ಗೌರಿಯವರ ಆಶಯದೊಂದಿಗೆ ಏಕೀಭವಿಸುವ ಲಕ್ಷಾಂತರ ಜನರು ಪತ್ರಿಕೆ ಪ್ರಾರಂಭಿಸುವ ಪ್ರಕ್ರಿಯೆಯಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಹಾಗೆ ಹೇಳಬೇಕೆಂದರೆ ಈ ಪತ್ರಿಕೆ ಗೌರಿ ಆಶಯವನ್ನು ಪ್ರತಿನಿಧಿಸುವ ಎಲ್ಲರಿಗೂ ಸೇರಿದ್ದು.

ಈ ಡಿಜಿಟಲ್ ಮಾಧ್ಯಮದ ಯುಗದಲ್ಲಿ ಟ್ಯಾಬ್ಲಾಯ್ಡ್ ಪತ್ರಿಕೆಗಳು ಎದುರಿಸುತ್ತಿರುವ ಬಿಕ್ಕಟ್ಟಿನ ಬಗ್ಗೆ ಅದೆಷ್ಟೋ ಹಿರಿಯರು, ಹಿತೈಷಿಗಳು ಕಿವಿ ಮಾತು ಹೇಳಿದ್ದಾರೆ. ಇದು ಸುಗಮವಾದ ಹಾದಿಯಲ್ಲ ಎಂಬುದು ನಿಜ. ಆದರೆ ನಾಡಿನಾದ್ಯಂತ ‘ಪತ್ರಿಕೆ’ಗಾಗಿ ಆಗ್ರಹಿಸುತ್ತಿರುವವರ ಸಂಖ್ಯೆಯೂ ದೊಡ್ಡದಿದೆ ಎಂಬುದೂ ನಿಜ. ಆದರೆ ಗೌರಿ ಪತ್ರಿಕೆಯನ್ನು ಮುಂದುವರೆಸುವುದು ಭಾವನಾತ್ಮಕ ವಿಷಯ ಎಂಬುದಕ್ಕಿಂತಲೂ ಹೆಚ್ಚಾಗಿ ನಮ್ಮ ಬದ್ಧತೆಗೆ ಸಂಬಂಧಿಸಿದ್ದು. ನಿಮ್ಮಲ್ಲರ ಬೆಂಬಲ, ಪ್ರೋತ್ಸಾಹಗಳ ಬಲದಿಂದ ಪತ್ರಿಕೆ ನಡೆಸುವ ಸಂಕಷ್ಟವನ್ನು ದಾಟಬಹುದೆಂಬ ವಿಶ್ವಾಸ ನಮ್ಮದು.

ಪ್ರತಿರೋಧ ಸಮಾವೇಶದಲ್ಲಿ ಗೌರಿ ಹತ್ಯಗೆ ಮಿಡಿದ ಜನಸಾಗರ

ನಮ್ಮೆಲ್ಲರ ಹೃದಯದಾಳದಲ್ಲಿ ಮಡುಗಟ್ಟಿದ ನೋವು, ಆಕ್ರೋಶಗಳು ನಮ್ಮ ಈ ಬದ್ಧತೆಯನ್ನು ಗಟ್ಟಿಗೊಳಿಸಿ, ಪತ್ರಿಕೆಯ ಮರುಹುಟ್ಟಿಗೆ ಭದ್ರ ಬುನಾದಿ ಹಾಕಿಕೊಟ್ಟಿವೆ. ಈ ಸವಾಲಿನ ಹೋರಾಟದಲ್ಲಿ ಗೆದ್ದೇ ಗೆಲ್ಲುತ್ತೇವೆಂಬ ವಿಶ್ವಾಸದಿಂದ ನಮ್ಮ ತಂಡ ಕಾರ್ಯೋನ್ಮುಖವಾಗಿದೆ. ಹಾಗೆಂದು ಸಮಸ್ಯೆಗಳೇ ಇರುವುದಿಲ್ಲ, ತಪ್ಪುಗಳೇ ಆಗುವುದಿಲ್ಲ ಎಂದರ್ಥವಲ್ಲ. ನಾವು ಎಡವಿದಾಗ ನೀವು ನಮ್ಮ ಕೈಹಿಡಿಯುತ್ತೀರಿ, ತಪ್ಪು ಮಾಡಿದಾಗ ಕಿವಿ ಹಿಂಡುತ್ತೀರಿ, ಪತ್ರಿಕೆಯ ನೋವು-ನಲಿವುಗಳಲ್ಲಿ ನಮ್ಮೊಂದಿಗಿರುತ್ತೀರಿ ಎಂಬ ತುಂಬು ವಿಶ್ವಾಸ ನಮ್ಮದು.

ಕೊನೆಯದಾಗಿ, ಈಜಿಪ್ಟ್ ಬಂಡಾಯದ ಸಂದರ್ಭದಲ್ಲಿ ಹುಟ್ಟಿಕೊಂಡ ಒಂದು ಮಾತು ನೆನಪಿಸುತ್ತೇನೆ. “The power of the people is stronger than the people in power”. ಅಂದರೆ ಅಧಿಕಾರದಲ್ಲಿರುವವರ ಬಲಕ್ಕಿಂತ ಜನಶಕ್ತಿಯ ಬಲ ಹೆಚ್ಚು ಬಲಿಷ್ಠವಾದುದು. ಅಂಥಾ ಜನಶಕ್ತಿಯ ಬಲವನ್ನು ನಿರೂಪಿಸಲು ನಾವೆಲ್ಲರೂ ಒಗ್ಗೂಡೋಣ. ಗೆಲುವಿನ ಹಾದಿ ನಮ್ಮದು.
ನಾನು ಗೌರಿ! ನಾವೆಲ್ಲಾ ಗೌರಿ!!

ಗೌರಿ ಮೀಡಿಯಾ ಟ್ರಸ್ಟ್ ಪರವಾಗಿ
ದೊಡ್ಡಿಪಾಳ್ಯ ನರಸಿಂಹಮೂರ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...