Homeಅಂಕಣಗಳುನೀರನಡೆ | ಭವಿಷ್ಯದ ನೆರಳಿನಂತಿರುವ ವರ್ತಮಾನದ ಸಣ್ಣ ಸಂಗತಿಗಳು

ನೀರನಡೆ | ಭವಿಷ್ಯದ ನೆರಳಿನಂತಿರುವ ವರ್ತಮಾನದ ಸಣ್ಣ ಸಂಗತಿಗಳು

- Advertisement -
- Advertisement -
  • ಡಾ. ವಿನಯಾ ಒಕ್ಕುಂದ |

ನಮ್ಮ ಸುತ್ತ ನಡೆಯುತ್ತಿರುವ ಸಣ್ಣ ಸಂಗತಿಗಳನ್ನು ಉಪೇಕ್ಷಿಸಲು ಸಾಧ್ಯವಿಲ್ಲ. ಅವು ಬೃಹತ್ ವಿದ್ಯಮಾನದ ನೆರಳಿನಂತಿರುತ್ತವೆ. ಮೊನ್ನೆ ಧಾರವಾಡದ ಮೇ ಸಾಹಿತ್ಯದ ಕಾರ್ಯಕ್ರಮದಲ್ಲಿದ್ದೆ. ನನ್ನ ಪಕ್ಕ ಹಿರಿಯರೊಬ್ಬರು ಕೂತಿದ್ದರು. ನಿಧಾನ ಮಾತು ಆರಂಭಿಸಿದರು. ‘ನಿಮ್ಮ ಮಗಳಾ?’ ‘ಹೀಗೆ ಫೋಟೋ ತೆಗೆದು ಓಡಾಡಿ ಮುಂದೇನು ಮಾಡುತ್ತಾಳೆ?’ .. ಆ ಮಾತುಗಳಲ್ಲಿ ಮಮತೆ ಇರಲಿಲ್ಲ. ವ್ಯಂಗ್ಯವಿತ್ತು. ಪೇಚಿಗೆ ಸಿಲುಕಿಸುವ ಇರಾದೆಯಿತ್ತು. ನಾನು ‘ಗೊತ್ತಿಲ್ಲ’ ಎಂದೆ. ‘ಚಿತ್ರ ಗಿತ್ರ ತಗೀತಾಳಂತಲ್ಲ?’ ‘ಹೂಂ’. ‘ಓದೋದು ಬರೆಯೋದು?’ ‘ಅಂಥದೇನಿಲ್ಲ’… ನಾನು ಕುರ್ಚಿಯನ್ನು ಅತ್ತಿತ್ತ ಜರುಗಿಸಿಕೊಂಡು ಕೂತೆ. ಅವಳು ಬಂದಾಗ ‘ನೋಡು ಚಿತ್ರವೆಂದರೆ ಹೀಗೆ ತಗೀಬೇಕು’ ಎಂದು ಮೊಬೈಲ್‍ನಿಂದ ತೋರಿಸಿದರು. ಬಿಜೆಪಿ ಶಾಸಕರೊಬ್ಬರ ಚಿತ್ರ ಬಿಡಿಸಿದ ಕಲಾವಿದರೊಬ್ಬರ ಚಿತ್ರಗಳವು. ಇವಳು ತಲೆಯಾಡಿಸಿ ಎದ್ದುಹೋದಳು. ಧರ್ಮದ ಕುರಿತ ಗೋಷ್ಠಿಯಲ್ಲಿ ವೀರಶೈವ- ಲಿಂಗಾಯತ ಚರ್ಚೆ ಬಂತು. ಎಚ್.ಎಸ್.ಶಿವಪ್ರಕಾಶ್, ಎಸ್ ಜಿ. ಸಿದ್ದರಾಮಯ್ಯ, ರಂಜಾನ್ ದರ್ಗಾ ಚರ್ಚಿಸುತ್ತಿದ್ದರು. ‘ಇದೇನಿದು, ಸಾಹಿತ್ಯದ ಬಗ್ಗೆ ಮಾತಾ? ತಥ್.. ನೀವು ಇಂಗ್ಲಿಷ್ ಲಿಟರೇಚರ್ ಓದಿದ್ದೀರಾ ಮೇಡಂ? ಅಲ್ಲಿ ಹೀಗೆ ಮಾತಾಡುವುದನ್ನು ಮಾತಿನ ವಾಂತಿ ಅಂತಾರೆ’. ನನಗೆ ಕೋಪ ಬರುತ್ತಿತ್ತು. ‘ನಿಮಗೆ ಬೇಡವಾದರೆ ಎದ್ದು ಹೋಗಿ’ ಎಂದೆ. ‘ಇಲ್ಲ ಇಲ್ಲ ನಾನು ಕೇಳಲಿಕ್ಕೇ ಬಂದಿದ್ದು’ ಎಂದು ಉತ್ತರ ಬಂತು. ದಿನೇಶ್ ಅಮೀನ್‍ಮಟ್ಟು, ‘ಇಷ್ಟೆಲ್ಲ ಮಾಡುವ ಬದಲು ಇವಿಎಂ ಮಶಿನ್‍ಗಳನ್ನು ಹ್ಯಾಕ್ ಮಾಡುವವರನ್ನು ತಯಾರು ಮಾಡಿಕೊಂಡಿದ್ದರೆ ಸಾಕಾಗಿತ್ತು’ ಎಂದು ಪ್ರಜಾಪ್ರಭುತ್ವದ ಅಭದ್ರತೆಯ ಬಗ್ಗೆ ವ್ಯಂಗ್ಯದಿಂದ ಮಾತು ಆರಂಭಿಸಿದರು. ನನ್ನ ಪಕ್ಕದ ವ್ಯಕ್ತಿಗೆ ಸಿಟ್ಟು ನೆತ್ತಿಗೇರಿತ್ತು. ‘ಏನಿದು ಬಾಯಿಬಡುಕರ ಹಾಗೆ ಒದರಿದರೆ..? ವಿವಿಪ್ಯಾಟ್ ಲಗತ್ತಿಸಿಲ್ವಾ?’ ಈ ಬಾರಿ ಆಸಾಮಿ ನನ್ನ ಕಡೆ ಹೊರಳಿರಲಿಲ್ಲ. ಆ ಕಡೆಯ ವ್ಯಕ್ತಿಯ ಜತೆಗೆ ಮಾತಾಡುತ್ತಿತ್ತು. ಆ ಕ್ಷಣ ವಿವಿಪ್ಯಾಟ್ ಹಿಂದೆ ಹೀಗೆ ಬಾಯ್ಮುಚ್ಚಿಸುವ ತಂತ್ರಗಾರಿಕೆ ಇದೆ ಅನ್ನಿಸಿತು.

ಸಂಜೆಯ ಸಮಾರೋಪದಲ್ಲಿ ಮಾತನಾಡುತ್ತ ಸುನಂದಾ ಕಡಮೆ, ಪ್ರಕಾಶ್ ರೈ ಮನೆಗೆ ಬಂದಿದ್ದ ಫೋಟೋ ಫೇಸ್ ಬುಕ್ಕಿಗೆ ಹಾಕಿದಾಗ ಕೆಲ ದಿನ ನಿರಂತರವಾಗಿ ಕೆಟ್ಟ ಮೆಸೇಜ್‍ಗಳು ಬಂದಿದ್ದನ್ನು ಪ್ರಸ್ತಾಪಿಸಿದರು. ನನಗೆ ಗಾಬರಿಯಾಯಿತು. ಪ್ರಕಾಶ್ ರೈ ಮನೆಗೆ ಬಂದಿದ್ದ ಫೋಟೋಗಳನ್ನು ನನ್ನ ಗಂಡನೂ ಮಗಳೂ ಫೇಸ್ ಬುಕ್ಕಿಗೆ ಹಾಕಿದ್ದರು. ಮಗಳಿಗೆ ಪ್ರಕಾಶ್ ರೈ ಕುರಿತು ಕೆಲವು ಕೆಟ್ಟ ಕಮೆಂಟ್‍ಗಳು ಬಂದಿದ್ದವಂತೆ. ‘ನನಗೆ ಹೇಳಲಿಲ್ಲವಲ್ಲ’ಎಂದರೆ ‘ನಾನೇ ಓದ್ಲಿಲ್ಲ, ಹೀಗೆ ಅಂತ ಕಂಡ ತಕ್ಷಣ ಬ್ಲಾಕ್ ಮಾಡಿ ಒಗೆದೆ’ ಎಂದಳು ನಿಸೂರಾಗಿ. ಇವೆಲ್ಲ ಇಷ್ಟು ಉಪೇಕ್ಷಿಸುವ ಸಂಗತಿಗಳಲ್ಲ ಎಂದು ಅವಳಿಗೆ ತಿಳಿದಿರಲಿಲ್ಲ. ಪ್ರಕಾಶ್ ರೈ, ನಮ್ಮ ಮನೆಯಲ್ಲಿ ಕೆಲಗಂಟೆ ಕಳೆದು ಹೋದ ಮೇಲೆ ನಡೆದ ಸಂಗತಿಗಳನ್ನು ನೆನಪಿಸಿಕೊಂಡೆ. ಅಕ್ಕಪಕ್ಕದವರ ಕಣ್ಣು ಬೇರೆ ನಮೂನಿ ತೂಗತೊಡಗಿವೆ ಅನ್ನಿಸಿತ್ತು. ಎಲ್ಲರ ಹಾಗೆ ಬಾಗಿಲಿಗೆ ರಂಗೋಲಿ ಇಕ್ಕಿ, ಎಲ್ಲರ ಹಾಗೆ ಆಕಾಶಬುಟ್ಟಿ ತೂಗುಬಿಟ್ಟು, ಎಲ್ಲರ ಹಾಗೆ ಕಬ್ಬು ನಿಲ್ಲಿಸಿ ತುಳಸಿ ಪೂಜೆ ಮಾಡಿ… ಏನೆಲ್ಲಾ ಮಾಡಿದರೂ ಇವರು ನಮ್ಮಂತಿಲ್ಲ ಅಂತ ಸುತ್ತಲ ಜನ ಇರುಸು-ಮುರಸು ಅನುಭವಿಸುತ್ತಿದ್ದ ಹಾಗಿತ್ತು. ಅವರ ಬಗ್ಗೆ ಪಾಪ ಅನ್ನಿಸಿತು. ನಮ್ಮ ಕೆಲಸದವಳು, ಆವತ್ತು ಪ್ರಕಾಶ್ ರೈ ಅಡಿಗೆ ಮನೆ ಬಾಗಿಲವರೆಗೂ ಬಂದು ಅವಳೊಡನೊಂದು ಫೋಟೋ ಕೂಡ ತಗೊಂಡಿದ್ದರು. ಅವಳು ಆವತ್ತು ಪ್ರಕಾಶ್ ರೈ ಬಗ್ಗೆ ಫಿದಾ ಆಗಿದ್ದು ನಿಜ. ಆದರೆ ದಿನವೂ ಒಂದೊಂದು ಪ್ರಶ್ನೆಗಳನ್ನು ತರುತ್ತಿದ್ದಳು. ‘ಅವರಿಗೆ ಕಾಂಗ್ರೆಸ್ ಏಜೆಂಟ್ ಅಂತಾರಂತಲ್ಲ?’ ‘ಅವರಿಗೆ ಎರಡು ಮದುವೆಯಾಗಿದಾವಂತಲ್ಲ?’ ಹೀಗೆ. ತಿಳಿದಷ್ಟನ್ನು ಸಮಾಧಾನದಿಂದ ವಿವರಿಸಿದ್ದೆ. ಪ್ರಕಾಶ ರೈ ಭಾಷಣದ ತುಣುಕುಗಳನ್ನು ಕೇಳಿಸಿದೆ. ‘ ಹೌದ್ ಬಿಡ್ರೀ, ಸರಿ ಬಿಡ್ರೀ,’ ಅಂತ ಸುಮ್ಮನಾಗಿದ್ದಳು. ನಿಜಕ್ಕೂ ಅವಳ ಅಂತರಂಗದಲ್ಲಿ ಹೌದೆನ್ನಿಸಿತೇ ತಿಳಿಯಲಿಲ್ಲ. ದುಡಿದು ಬದುಕುವ ಇಂತಹ ಜನರ ಅನಕ್ಷರತೆ, ಮುಗ್ಧತೆಗಳನ್ನು ಕೋಮುವಾದ ಬಳಸಿಕೊಳ್ಳುವ ಪರಿ ದಂಗುಬಡಿಯುವಂಥದ್ದು. ಕಲ್ಬುರ್ಗಿಯವರ ಹತ್ಯೆಯ ನಂತರದ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡು ಮನೆಗೆ ಬರುವಾಗ ಆಟೋ ಚಾಲಕ ಕೇಳಿದ್ದ-‘ ಅವ್ರು ನಮ್ದೇವ್ರ ಮೇಲೆ ಉಚ್ಚಿ ಹೊಯ್ಬಹುದು ಅಂದಿದ್ರಂತಲ್ಲ. ಅಂಥವರ ಸಂಬಂಧ ರ್ಯಾಲಿ ಮಾಡೀರಿ? ಹುಷಾರ್ರೀ ನಿಮ್ಮ ಮನಿಗೋಳ ಮ್ಯಾಲೂ ಕಲ್ ಬಿದ್ದಾವು’. ಹಿಂದುತ್ವದ ಅಜೆಂಡಾ ತುಂಬಾ ಪ್ರಬಲವಾಗಿ ಈ ಕೆಲಸ ಮಾಡುತ್ತಿದೆ. ಸಾಮಾಜಿಕ ವ್ಯವಸ್ಥೆಯ ತಳಹದಿಯಲ್ಲಿರುವ ಜೀವಿಗಳಲ್ಲಿ ತನ್ನ ನಂಬಿಕೆಯನ್ನು ಉತ್ಪಾದಿಸುತ್ತಿದೆ. ನಿಧಾನ ವಿಷದಂತೆ ದಿನವೂ ಸುಳ್ಳುಗಳು ತಪ್ಪುಗಳು ಅರೆ ಬರೆ ವ್ಯಾಖ್ಯಾನಗಳು ಅವರನ್ನು ತಲುಪುತ್ತವೆ. ಮರು ವಿಶ್ಲೇಷಿಸಬಹುದಾದ ಸುದ್ದಿಯಾಗಿಯಲ್ಲ, ನಂಬಿಕೆಯಾಗಿ. ಈ ನಂಬಿಕೆಯ ಲೇಹ್ಯದ ಕಟುತ್ವವನ್ನು ಯಾವ ವೈಚಾರಿಕತೆಯೂ ಮಾಗಿಸಲಾರದು ಎನ್ನುವಷ್ಟು ತೀವ್ರವಾಗಿ.

ಪ್ರಕಾಶ್ ರೈ ಬಂದುಹೋದ ಕೆಲ ದಿನಗಳಲ್ಲಿ, ಮಗಳು ತನ್ನ ಗೆಳತಿಯೊಂದಿಗೆ ಸಮೀಪದ ಪರಿಚಯದ ಪಾರ್ಲರಿಗೆ ಹೋಗಿದ್ದಳು ಕೂದಲು ಶೇಪ್‍ಲೆಸ್ ಆಗಿದೆ ಎಂದು ಗೊಣಗಿಕೊಳ್ಳುತ್ತ. ಬೇಡವೆಂದರೂ ಏನೋ ಮಹತ್ವದ್ದನ್ನು ಪಡೆಯುವ ಉಮೇದಿಯಲ್ಲಿ. ಬಂದಾಗ ಕೋಪದಿಂದ ಧುಮುಗುಡುತ್ತಿದ್ದಳು. ಆ ಪಾರ್ಲರಿನಲ್ಲಿ ಗಂಡಹೆಂಡತಿ ಇಬ್ಬರೂ ಇರುತ್ತಾರೆ. ಮಕ್ಕಳ ಕೂದಲನ್ನು ಶೇಪ್ ಮಾಡೋದು ಸಾಮಾನ್ಯವಾಗಿ ಗಂಡನೇ ಅಂತೆ. ಅವರ ಮಗಳು ಇವರ ಗೆಳತಿ ಕೂಡ. ಅವರು ತೆಲುಗು ಮಾತಾಡುವ ದಲಿತರು. ಬಹಳ ಕಾಲದಿಂದ ಇಲ್ಲೇ ಇರುವವರು. ಇವಳು ಕೂದಲು ಕೊಟ್ಟು ಕೂತಾಗ ಆತ ಕೇಳಿದನಂತೆ. ‘ನಿಮ್ಮನೆಗೆ ಹುಚ್ಚ ಬಂದಿದ್ದನಂತಲ್ಲ?’ ‘ಆಂ’? ‘ಆ ಪ್ರಕಾಶ ರೈ ಅನ್ನೋ ಹುಚ್ಚ ಬಂದಿದ್ದನಂತಲ್ಲ?’ ‘ಯಾಕ್ರಿ ಅಂಕಲ್, ಅನಂತಕುಮಾರ ಹೆಗಡೆ ಬಂದಿದ್ದರೆ ಹಾಗನ್ನಬಹುದಿತ್ತು. ಹೋಗಿ ಹೋಗಿ ಅಷ್ಟು ದೊಡ್ಡ ವ್ಯಕ್ತಿಗೆ ಹೀಗನ್ನುತ್ತೀರಲ್ರೀ.. ಏನ್ರೀ ನೀವು…?’ ಆತ ದಂಗಾದನಂತೆ. ಇಷ್ಟು ಸಣ್ಣ ಹುಡುಗಿ ಹೀಗೆ ಉತ್ತರಿಸಬಹುದೆಂದುಕೊಂಡಿರಲಿಲ್ಲವೇನೋ. ನಂತರದ್ದು ಇನ್ನೊಂದು ಬಗೆಯ ವಿಕಾರ. ಚೆಂದದ ಕೂದಲನ್ನು ಅಸಡ್ಡಾಳ ಕತ್ತರಿಸಿದ್ದ. ಕಣ್ಣೊರೆಸಿಕೊಳ್ಳುತ್ತ ಬಂದವಳು ಕೂದಲ ದುಃಸ್ಥಿತಿ ನೋಡಿ ಕೊರಗುತ್ತಲೇ ಇದ್ದಳು. ಆದರೆ, ಪ್ರಕಾಶ್ ರೈ ಜತೆ ಇದ್ದ ಬಿದ್ದ ಫೋಟೋಗಳನ್ನೆಲ್ಲ ಅಪ್ ಲೋಡ್ ಮಾಡಿದಳು. ನನಗೆ ಅರ್ಧ ಹೇರ್ ಕಟಿಂಗ್ ಮಾಡಿ ಹೊರದಬ್ಬಿಸಿಕೊಂಡಿದ್ದ ಹಿರೇಕೆರೂರಿನ ದಲಿತ ಯುವಕ ನೆನಪಾಗುತ್ತಿದ್ದ. ಅವನನ್ನು ಹೊರದಬ್ಬಲಾಗಿತ್ತು. ಇವಳು ಇನ್ನೊಂದು ರೀತಿಯಲ್ಲಿ ಹೊರಬಂದಿದ್ದಳು, ಇನ್ನೆಂದೂ ಅಲ್ಲಿ ಕಾಲಿಡಲಾರದಂತೆ. ಜಾತಿ, ಧರ್ಮ, ಲಿಂಗಗಳ ಜತೆಗೆ ವೈಚಾರಿಕತೆಯೂ ತೀವ್ರ ಒತ್ತುವರಿಗೆ ಒಳಗಾಗುತ್ತಿರುವ ಕಾಲವಿದು.

ರಾಜೇಂದ್ರ ಚೆನ್ನಿಯವರು ನಮ್ಮ ಈ ವರ್ತಮಾನವನ್ನು ಜಾರ್ಜ್ ಆರ್ವೆಲ್ 1984ರಲ್ಲಿ ಬರೆದ Thought police ವಿಧಾನದೊಂದಿಗೆ ಇಡುತ್ತಾರೆ. ಬಿಗ್ ಬ್ರದರ್ ತನ್ನ ಪ್ರಜೆಗಳ ಮೇಲೆ ನಿಗಾ ಇಡುತ್ತಾನೆ. ಸಾರ್ವಜನಿಕ ಸ್ಥಳಗಳಲ್ಲಿ ಪರದೆಯ ಮೇಲೆ ದೊಡ್ಡ ಭಾವಚಿತ್ರ ಮೂಡುತ್ತದೆ. ಯಾರು ನಮಸ್ಕರಿಸುವುದಿಲ್ಲವೋ ಅದು ದಾಖಲಾಗುತ್ತದೆ. ಅಂಥವರನ್ನು ಅರೆಸ್ಟ್ ಮಾಡಲಾಗುತ್ತದೆ. ಇದು ಸಲೀಸಾಗಿ ನಡೆಯುತ್ತದೆ. ಯಾಕೆಂದರೆ ಪ್ರಭುತ್ವಕ್ಕೆ ಅಪಥ್ಯವೆನ್ನಿಸುವ ಚರಿತ್ರೆಯ ನೆನಪುಗಳನ್ನು ಜನರ ಮನಸ್ಸಿನಿಂದ ಶಾಶ್ವತವಾಗಿ ಅಳಿಸಲಾಗಿದೆ. ನಮ್ಮ ಸುತ್ತ ನಡೆಯುತ್ತಿರುವ ಸಣ್ಣಸಣ್ಣ ಸಂಗತಿಗಳು ಅದೇ ಕರೆಗಂಟೆಗಳೇ ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...