Homeಸಾಮಾಜಿಕಪ್ರತ್ಯೇಕ ಲಿಂಗಾಯತ ಧರ್ಮದ ಕನಸಿಗೆ ಸಮಾಧಿ ಕಟ್ಟಿದ ಲಿಂಗಾಯತರು

ಪ್ರತ್ಯೇಕ ಲಿಂಗಾಯತ ಧರ್ಮದ ಕನಸಿಗೆ ಸಮಾಧಿ ಕಟ್ಟಿದ ಲಿಂಗಾಯತರು

- Advertisement -
- Advertisement -
  • ಎ.ಕೆ.ಸುಬ್ಬಯ್ಯ |

ಪ್ರತ್ಯೇಕ ಲಿಂಗಾಯತ ಧರ್ಮ ರಾಜಕೀಯ ಲಾಭ ಬಯಸುವುದು ಸರಿಯಲ್ಲ ಎಂಬ ಚಿತ್ರನಟ ಹಾಗೂ ಲಿಂಗಾಯತ ಧರ್ಮ ಹೋರಾಟದ ಮುಖಂಡರೂ ಆಗಿರುವ ಚೇತನ್ ಅವರ ಹೇಳಿಕೆಯನ್ನು ವಿಮರ್ಶಿಸುತ್ತಲೇ ಈ ಲೇಖನ ಪ್ರಾರಂಭಿಸುತ್ತೇನೆ.

ರಾಜಕೀಯ ಲಾಭ ಗಳಿಸುವುದು ಬಿಡುವುದು ರಾಜಕಾರಣಿಗಳಿಗೆ ಆಯಾ ರಾಜಕೀಯ ಪಕ್ಷಗಳ ವಿವೇಚನೆಗೆ ಬಿಟ್ಟ ವಿಷಯ. ಅದರ ಬಗ್ಗೆ ಉಳಿದ ನಮ್ಮಂತವರು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲವೆಂಬುದು ನನ್ನ ಅನಿಸಿಕೆ. ಆದರೆ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ರಾಜ್ಯವ್ಯಾಪಿ ಆಂದೋಲನ ನಡೆಸಿದವರು ತಮ್ಮ ಗುರಿ ಮುಟ್ಟುವುದಕ್ಕಾಗಿ ಈ ಚುನಾವಣೆಯಲ್ಲಿ ಯಾವ ನಿಲುವು ತಳೆಯಬೇಕಾಗಿತ್ತು..? ಎಂಬ ಪ್ರಶ್ನೆಗೆ ಚೇತನ್‍ರವರು ಹೇಗೆ ಪ್ರತಿಕ್ರಿಯಿಸುತ್ತಾರೆಂದು ತಿಳಿಯುವ ಕುತೂಹಲ ನನ್ನನ್ನು ಕಾಡುತ್ತಿದೆ. ಲಿಂಗಾಯತರೆಲ್ಲ ವೀರಶೈವ ಕಪಿಮುಷ್ಠಿಯನ್ನು ಧಿಕ್ಕರಿಸಿ ಲಿಂಗಾಯತರು ಹಿಂದುಗಳಲ್ಲ, ಅದೊಂದು ಪ್ರತ್ಯೇಕ ಧರ್ಮ ಎಂದು ಘೋಷಿಸಿಕೊಂಡು, ಅದಕ್ಕೆ ಮಾನ್ಯತೆ ನೀಡಬೇಕೆಂದು ರಾಜ್ಯವ್ಯಾಪಿ ಆಂದೋಲನವನ್ನು ಬಸವಕಲ್ಯಾಣದಿಂದ ಆರಂಭಿಸಿದಾಗ ಹರ್ಷ ಪುಳಕಿತರಾಗಿ, ಆಂದೋಲನವನ್ನು ಸ್ವಾಗತಿಸಿ ಸಂತೋಷಪಟ್ಟವರಲ್ಲಿ ನಾನೂ ಒಬ್ಬ. ಈ ಸಂದರ್ಭದಲ್ಲಿ, ನನ್ನ ಪ್ರಿಯರೂ ಆಗಿರುವ ಚಿತ್ರನಟ ಚೇತನ್ ಅವರು ತಳೆದ ಸಕಾರಾತ್ಮಕ ನಿಲುವಿಗಾಗಿ ನಾನು ಅವರನ್ನು ಅಭಿನಂದಿಸಿದ್ದೂ ಉಂಟು. ದಿಡ್ಡಳ್ಳಿ ಆದಿವಾಸಿಗಳ ಬದುಕಿನ ಹೋರಾಟದಲ್ಲಿ ನನ್ನ ಒಡನಾಡಿಯಾಗಿದ್ದ ಚೇತನ್ ಅವರ ಜನಪರ ಕಾಳಜಿಯನ್ನು ಕಂಡು, ನಾನೊಬ್ಬ ಅವರ ಅಭಿಮಾನಿಯೇ ಆಗಿಬಿಟ್ಟಿದ್ದೇನೆ. ಪ್ರತ್ಯೇಕ ಧರ್ಮಕ್ಕಾಗಿ ಲಿಂಗಾಯತರು ನಡೆಸಿದ ಹೋರಾಟದ ಅಂಗವಾಗಿ ರಾಜ್ಯವ್ಯಾಪಿಯಾಗಿ ನಡೆದ ಆಂದೋಲನದಲ್ಲಿ ಅಕ್ಷರಶಃ ಲಕ್ಷೋಪಲಕ್ಷ ಜನ ಭಾಗವಹಿಸಿದ್ದರು. ಈ ಆಂದೋಲನ ಕರ್ನಾಟಕ ಮಾತ್ರವಲ್ಲ, ಇಡೀ ದೇಶದ ಗಮನವನ್ನು ಸೆಳೆದಿತ್ತು ಎಂದರೆ ಅತಿಶಯೋಕ್ತಿಯಲ್ಲ. ಈ ಆಂದೋಲನಕ್ಕೆ ನಾಡಿನ ಪ್ರಗತಿಪರ ಚಿಂತಕರ ಬೆಂಬಲ ಸಹ ಮುಕ್ತವಾಗಿ ದೊರೆಯಿತು. ಏಕೆಂದರೆ ಲಿಂಗಾಯತ ಧರ್ಮ ಬಸವಣ್ಣ ಸ್ಥಾಪಿಸಿದ ಪ್ರತ್ಯೇಕ ಧರ್ಮವೇ ಹೊರತು, ಅದು ಹಿಂದು ಧರ್ಮದೊಳಗಿನ ಒಂದು ಜಾತಿಯಲ್ಲ ಎಂಬುದು ಸತ್ಯಸಂಗತಿ. ಈ ಧರ್ಮದ ಸ್ಥಾಪಕ ಬಸವಣ್ಣ. ವಚನ ಸಾಹಿತ್ಯವೇ ಅದರ ಧರ್ಮ ಗ್ರಂಥ. ಇಲ್ಲಿ ವೈದಿಕಶಾಹಿಯ ವೇದ, ಪುರಾಣ, ಚಾತುರ್ವರ್ಣದ ಗೊಡ್ಡುಪುರಾವೆಗಳೆಲ್ಲವನ್ನೂ ಧಿಕ್ಕರಿಸಲಾಗಿದೆ. ವೈದಿಕ ದೇವರುಗಳನ್ನೂ ಧಿಕ್ಕರಿಸಿ ದೇಹವೇ ದೇಗುಲವೆಂದು ದೃಢಪಡಿಸಲಾಗಿದೆ. ಆದ್ದರಿಂದ ಇದು ಖಂಡಿತವಾಗಿಯೂ ಒಂದು ಪ್ರತ್ಯೇಕ ಧರ್ಮವಲ್ಲದೆ, ವೈಧಿಕ ಧರ್ಮ ಅಥವ ಹಿಂದೂ ಧರ್ಮದೊಳಗಿನ ಒಂದು ಜಾತಿ ಖಂಡಿತ ಅಲ್ಲ.

ಇದು ಮಾನವ ಧರ್ಮ. ಜಗಜ್ಯೋತಿ ಬಸವಣ್ಣ ಸ್ಥಾಪಿಸಿದ ಈ ಧರ್ಮ ಎಲ್ಲರಿಗೂ ಸ್ವೀಕಾರ ಯೋಗ್ಯವಾದ ಧರ್ಮವಾಗಿದೆ. ಇದಕ್ಕೆ ಪ್ರತ್ಯೇಕ ಧರ್ಮವೆಂದು ಮಾನ್ಯತೆ ನೀಡುವುದೆಂದರೆ ಮಾನವ ಕೋಟಿಯ ಏಳಿಗೆ ಎಂದೇ ಅರ್ಥ. ಇಂಥ ಒಂದು ಮಾನವ ಧರ್ಮವನ್ನು ವೈದಿಕಶಾಹಿ ತನ್ನ ಎಂದಿನ ಕುತಂತ್ರವನ್ನು ಬಳಸುತ್ತ, ವೀರಶೈವ ಪಂಚ ಪೀಠಗಳ ಮೂಲಕ ಬಸವ ಧರ್ಮವನ್ನೇ ನುಂಗಿಹಾಕಿ ಅದನ್ನೊಂದು ಜಾತಿಯನ್ನಾಗಿ ಪರಿವರ್ತಿಸಿ, ವೈದಿಕ ಯಾನೆ ಹಿಂದೂ ಧರ್ಮದ ಭಾಗವನ್ನಾಗಿಸಿ, ಲಿಂಗಾಯತ ಧರ್ಮವನ್ನೇ ಕೊಂದು ಬಿಟ್ಟಿದ್ದರು. ಪಂಚಪೀಠಗಳೇ ಈ ಕೊಲೆ ಘಾತುಕರುಗಳು. ಲಿಂಗಾಯತ ಧರ್ಮವನ್ನು ನುಂಗಲು ವೈದಿಕರು ಪಂಚಪೀಠಗಳೆಂಬ ಮೊಸಳೆಗಳನ್ನು ಸೃಷ್ಟಿಸಿ, ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದರು. ಈ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಆಂದೋಲನ ಕಂಡು ಹರ್ಷಪುಳಕಿತನಾದ ನಾನು, ಬಸವಣ್ಣ ವೀರಶೈವರೆಂಬ ಮೊಸಳೆಯ ಹೊಟ್ಟೆಯನ್ನು ಸೀಳಿಕೊಂಡು ಹೊರಬರುತ್ತಾನೆಂದು, ಆ ದೃಶ್ಯವನ್ನು ಕಾಣಲು ಕಾತುರತೆಯಿಂದ ಕಾಯುತ್ತಿದ್ದೆ.

ಲಿಂಗಾಯತ ಪ್ರತ್ಯೇಕ ಧರ್ಮದ ಆಂದೋಲನಕಾರರು, ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂಬ ಒತ್ತಾಯವನ್ನು ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕ ಸರ್ಕಾರದ ಮೇಲೆ ಹೇರುತ್ತಾ ಬಂದಾಗ, ಅವರ ಬೇಡಿಕೆಯನ್ನು ಅರ್ಹತೆಯ ಆಧಾರದ ಮೇಲೆ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡುತ್ತಾ ಬಂದದ್ದು ಸರಿಯಷ್ಟೆ. ಈ ಹೋರಾಟವನ್ನು ವಿರೋಧಿಸುತ್ತಾ ಬಂದ ವೀರಶೈವರು, ಇದಕ್ಕೆಲ್ಲ ಸಿದ್ದರಾಮಯ್ಯನವರೇ ಕಾರಣ, ಅವರು ಧರ್ಮ ಒಡೆಯುತ್ತಿದ್ದಾರೆ ಎಂದೆಲ್ಲಾ ತಲೆಬುಡವಿಲ್ಲದೆ ಆರೋಪ ಮಾಡತೊಡಗಿದಾಗ, ಪ್ರತ್ಯೇಕ ಧರ್ಮದ ಹೋರಾಟಗಾರರು ಗಟ್ಟಿಧ್ವನಿಯಲ್ಲಿ ಅಂಥ ಆರೋಪವನ್ನು ತಳ್ಳಿ ಹಾಕಿ, ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಲ್ಲಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಆರೆಸ್ಸೆಸ್ ನೇತಾರರು ಹಾಗೂ ಪೇಜಾವರ ಮಠಾಧೀಶರಿಗೆ ಮಾತ್ರ ಲಿಂಗಾಯತ ಹೋರಾಟಗಾರರು ಖಡಕ್ ಉತ್ತರ ನೀಡಿದ್ದು ಸರಿಯಾಗಿದ್ದು, ಸ್ವಾಗತಾರ್ಹ ಕ್ರಮವಾಗಿತ್ತು. ಆರೆಸ್ಸೆಸ್ ಸರಸಂಘ ಚಾಲಕ ಭಾಗವತ್ ಹಾಗೂ ಪೇಜಾವರ ಶ್ರೀಗಳಿಗೆ ನಮ್ಮ ಧರ್ಮದ ವಿಷಯದಲ್ಲಿ ಮೂಗು ತೂರಿಸದಿರಿ ಎಂದೇನೋ ನಿರ್ದಾಕ್ಷಿಣ್ಯವಾಗಿ ಹೇಳಿದರು. ಈ ಹಿನ್ನೆಲೆ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಮಾಡುತ್ತಿರುವವರ ನಿಷ್ಠೆ ಪ್ರಶ್ನಾತೀತವಾಗಿ ಗೋಚರಿಸಿತು. ಅದೊಂದು ಢೋಂಗಿ ಹೋರಾಟವೆಂದು ಯಾರಿಗೂ ಅನ್ನಿಸಲೇ ಇಲ್ಲ. ವೀರಶೈವ ಮಠಾಧೀಶರುಗಳು, ವೀರಶೈವ ಹಾಗೂ ಲಿಂಗಾಯತ ಎರಡೂ ಒಂದೇ ಎಂದು ಅಬ್ಬರಿಸಿದಾಗ ಲಿಂಗಾಯತರು ಅದನ್ನು ನಿರಾಕರಿಸಿ, ಪ್ರತ್ಯೇಕ ಲಿಂಗಾಯತರ ಸಮಾವೇಶಗಳನ್ನು ಸಂಘಟಿಸಲಾಗಿತ್ತು. ಜಾಗತಿಕ ಲಿಂಗಾಯತ ಸಂಘಟನೆಗಳೂ ಸಹ ಅಸ್ತಿತ್ವಕ್ಕೆ ಬಂದವು. ಬಸವ ಟಿವಿ ಎಂಬ ಟಿವಿ ಚಾನಲ್ ಕೂಡ ಅಸ್ತಿತ್ವಕ್ಕೆ ಬಂತು. ಈ ಹಿನ್ನೆಲೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ತಾರ್ಕಿಕ ಅಂತ್ಯ ಕಾಣುತ್ತದೆಂದೇ ಎಲ್ಲರೂ ಭಾವಿಸುವಂತಾಯಿತು. ಇದು ಸಿದ್ದರಾಮಯ್ಯನವರನ್ನು ಹಳಿಯಲು ನಡೆಸಿದ ಲಿಂಗಾಯತ ಪಿತೂರಿಯೆಂದು, ಪರಿಗಣಿಸುವುದಕ್ಕೆ ಯಾವ ಕಾರಣವೂ ಸಾರ್ವಜನಿಕವಾಗಿ ಗೋಚರಿಸಲಿಲ್ಲ. ಈ ನಡುವೆ ಕರ್ನಾಟಕ ವಿಧಾನಸಭಾ ಚುನಾವಣೆ ಬಂತು. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಮುಂಚೂಣಿಯಲ್ಲಿದ್ದ ಮಾತೆ ಮಹಾದೇವಿಯವರು, ಲಿಂಗಾಯತ ಮಠಾಧೀಶರ ಸಭೆ ಕರೆದು, ಈ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನೇ ಬೆಂಬಲಿಸಬೇಕೆಂದು, ಇದರಲ್ಲಿ ಮುಚ್ಚುಮರೆಯಿಲ್ಲವೆಂದು ಹೇಳುತ್ತಾ ಒಬ್ಬ ಮಹಾ ಮುತ್ಸದ್ದಿಯಾಗಿಯೇ ವಿಜೃಂಭಿಸಿದರು. ಸಭೆಯಲ್ಲಿದ್ದ ಇತರೆ ಮಠಾಧೀಶರುಗಳು ಸಹ ತಮ್ಮ ಸಮ್ಮತಿ ನೀಡಿದಂತೆ ಕಂಡುಬಂತು. ಅದಕ್ಕೂ ಮೊದಲು ಹಲವು ಪ್ರಮುಖ ಮಠಾಧೀಶರುಗಳು ತುಂಬಾ ಪ್ರಗತಿಪರ ಧ್ವನಿಯಲ್ಲಿ ಸಂಘಪರಿವಾರವನ್ನು, ವೈದಿಕಶಾಹಿಯನ್ನು ಪ್ರತಿರೋಧಿಸುತ್ತಿದ್ದು ಬಸವತತ್ವವನ್ನು ಸಮರ್ಥಿಸಿ ಮಾತನಾಡಿದ್ದು ರೋಮಾಂಚನಕಾರಿಯಾಗಿತ್ತು. ಇಂಥವರಿಗೆಲ್ಲಾ ಲಿಂಗಾಯತ ಪ್ರತ್ಯೇಕ ಧರ್ಮದ ಆಂದೋಲನವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡುಹೋಗಲು ಭದ್ರಬುನಾದಿ ಅವಕಾಶ ಆಂದೋಲನಕಾರರಿಗೆ ಈ ಚುನಾವಣೆ ಸುವರ್ಣ ಅವಕಾಶವಾಗಿತ್ತು ಎಂಬುವುದರಲ್ಲಿ ಯಾವ ಅನುಮಾನವೂ ಇಲ್ಲ.

ಕೇಂದ್ರದಲ್ಲಾಗಲೀ, ರಾಜ್ಯದಲ್ಲಾಗಲೀ ವೈದಿಕಶಾಹಿ ನಿಯಂತ್ರಣದ ಬಿಜೆಪಿ ಸರ್ಕಾರ ಇರುವತನಕ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಅಸಂಭವವೆಂದು ತಿಳಿಯಲು ಹೆಚ್ಚಿನ ಬುದ್ಧಿ ಏನು ಬೇಕಾಗಿಲ್ಲ. ಸಾಮಾನ್ಯ ಜ್ಞಾನ ಉಳ್ಳವರಿಗೆ ಇದು ಸರಳವಾಗಿ ಅರ್ಥವಾಗುತ್ತೆ. ಆದ್ದರಿಂದ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಸಾಕಾರಗೊಳ್ಳಬೇಕಾದರೆ ಕೇಂದ್ರದಲ್ಲಿ ಕೋಮುವಾದಿ ಸರ್ಕಾರ ಹೋಗಿ, ಜಾತ್ಯತೀತ ಸರ್ಕಾರ ಬರಲೇಬೇಕು. ಇಲ್ಲವಾದರೆ ಲಿಂಗಾಯತ ಪ್ರತ್ಯೇಕ ಧರ್ಮದ ಕಾರ್ಯ ನನಸಾಗಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಇದ್ದದ್ದರಿಂದಾಗಿ ಲಿಂಗಾಯತ ಪ್ರತ್ಯೇಕ ಧರ್ಮದ ಪ್ರಸ್ತಾವನೆಗೆ ಮಾನ್ಯತೆ ದೊರೆಯಿತು. ಬಿಜೆಪಿ ಸರ್ಕಾರ ಇದ್ದಿದ್ದರೆ ಅದು ದೊರಕುತ್ತಿರಲಿಲ್ಲ. ಆದ್ದರಿಂದ ಕರ್ನಾಟಕದಲ್ಲಿ ಈ ಚುನಾವಣೆಯಲ್ಲಿ ಬಿಜೆಪಿಯನ್ನು ಮಣ್ಣು ಮುಕ್ಕಿಸಬೇಕಾದ ಅನಿವಾರ್ಯತೆ ಲಿಂಗಾಯತ ಪ್ರತ್ಯೇಕ ಧರ್ಮ ಬೇಕೆನ್ನುವವರಿಗೆ ಇತ್ತು. ಲಿಂಗಾಯತ ಪ್ರತ್ಯೇಕ ಧರ್ಮದ ಪ್ರಸ್ತಾವನೆಯನ್ನು ಕಟುವಾಗಿ ವಿರೋಧಿಸುತ್ತಾ ವೀರಶೈವ-ಲಿಂಗಾಯತ ಎರಡೂ ಒಂದೇ, ಲಿಂಗಾಯತ ಪ್ರತ್ಯೇಕ ಧರ್ಮ ಬೇಡವೆಂದು ಪ್ರತಿಪಾದಿಸುತ್ತಾ, ಲಿಂಗಾಯತರು ವೀರಶೈವ ಅಧೀನವೇ ಇರಬೇಕೆಂದು ಪರೋಕ್ಷವಾಗಿ ಹೇಳುತ್ತಾ ಬಂದ ವೀರಶೈವ ಮಠಾಧೀಶರುಗಳು ಬಹಿರಂಗವಾಗಿಯೇ ಬಿಜೆಪಿ ಪರವಾಗಿ ನಿಂತು ಕಾಂಗ್ರೆಸ್ ಸೋಲಿಸಬೇಕೆಂದು ಕರೆ ಕೊಟ್ಟರು. ಅದರಲ್ಲಿ ಮುಚ್ಚುಮರೆ ಇರಲಿಲ್ಲ. ಆದರೇ ವೀರಶೈವರೇ ಬೇರೆ ಲಿಂಗಾಯತರೇ ಬೇರೆ ಎಂದು ಪ್ರತಿಪಾದಿಸುತ್ತಾ ಬಂದ ಮಠಾಧೀಶರುಗಳು ಮಾತ್ರ ಬರುಬರುತ್ತಾ ಮೌನಿಗಳಾಗಿ ಒಳಗೊಳಗೆ ವೀರಶೈವ ಮಠಾಧೀಶರ ಅಪೇಕ್ಷೆಯನ್ನೇ ಹಿಂಬಾಲಿಸಿ, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಬಹಿರಂಗ ವಿರೋಧ ಮಾಡಿದ ಬಿಜೆಪಿಯನ್ನೇ ಚುನಾವಣೆಯಲ್ಲಿ ಬೆಂಬಲಿಸಿದ್ದು ಒಂದು ಕ್ರೂರ ವ್ಯಂಗ್ಯವಾಗಿ ತೋರುತ್ತದೆ. ಏಕೆ ಹೀಗಾಯಿತೆಂದು ವಿಮರ್ಶಿಸಿದಾಗ ಇದರ ಹಿಂದೆ ಕೇವಲ ಜಾತೀಯತೆ ಎದ್ದು ಕಾಣುತ್ತದಲ್ಲದೇ ಮತ್ತೇನೂ ಇಲ್ಲ.

ಈ ಚುನಾವಣೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಆಂದೋಲನ ಮಾಡಿದವರ ಮುಂದೆ ಇದ್ದ ಆಯ್ಕೆ ಏನೆಂದರೆ ಆಂದೋಲನವನ್ನು ತಾರ್ಕಿಕ ಅಂತ್ಯದವರೆಗೆ ಕೊಂಡು ಹೋಗಲು ಬಿಜೆಪಿಯನ್ನು ಮಣ್ಣು ಮುಕ್ಕಿಸುವ ಮೂಲಕ ಭದ್ರಬುನಾದಿ ಹಾಕುವುದು, ಇಲ್ಲ ಆಂದೋಲನಕ್ಕೆ ಎಳ್ಳು ನೀರು ಬಿಟ್ಟು ತಮ್ಮ ಜಾತಿಯವನಾದ ಯಡಿಯೂರಪ್ಪನನ್ನು ಮುಖ್ಯಮಂತ್ರಿ ಮಾಡುವುದಕ್ಕೆ ಬಿಜೆಪಿಗೆ ಓಟು ಕೊಡುವುದರ ಮೂಲಕ ಬೆಂಬಲಿಸುವುದು. ಅಂತಿಮವಾಗಿ ಲಿಂಗಾಯತರು ಧರ್ಮದ ಮಾತು ಬಿಟ್ಟು ಜಾತಿಯನ್ನೇ ಆಯ್ಕೆ ಮಾಡಿಕೊಂಡರು. ಧರ್ಮ ಬಿಟ್ಟು ಜಾತಿಗೆ ಪಕ್ಷಾಂತರಗೊಂಡು, ಅಷ್ಟೊಂದು ಕಷ್ಟಪಟ್ಟು ಕಟ್ಟಿದ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಗೋರಿ ನಿರ್ಮಿಸಿಬಿಟ್ಟರು. ಅಲ್ಲಿಗೆ ಬಸವಣ್ಣ ಹಾಗೂ ವಚನ ಸಾಹಿತಿಗಳು ವೀರಶೈವರೆಂಬ ವೈದಿಕಶಾಹಿಗಳ ಹೊಟ್ಟೆಗೆ ಮತ್ತೆ ಸೇರಿಕೊಂಡಂತಾಯ್ತು. ಒಂದು ಧರ್ಮವಾಗಿ ಲಿಂಗಾಯತ ಇಡೀ ಮಾನವ ಕೋಟಿಗೆ ಸ್ವೀಕಾರ ಯೋಗ್ಯವಾಗಿದೆ. ಅದೊಂದು ಜಾತಿಯಾಗಿ ಯಾರಿಗೂ ಬೇಕಾಗಿಲ್ಲ. ಇಂದಿನ ಈ ಬೆಳವಣಿಗೆಯನ್ನು ಐತಿಹಾಸಿಕ ದುರಂತವೆಂದೇ ಬಣ್ಣಿಸಬೇಕಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...