Homeಸಾಮಾಜಿಕಪ್ರತ್ಯೇಕ ಲಿಂಗಾಯತ ಧರ್ಮದ ಕನಸಿಗೆ ಸಮಾಧಿ ಕಟ್ಟಿದ ಲಿಂಗಾಯತರು

ಪ್ರತ್ಯೇಕ ಲಿಂಗಾಯತ ಧರ್ಮದ ಕನಸಿಗೆ ಸಮಾಧಿ ಕಟ್ಟಿದ ಲಿಂಗಾಯತರು

- Advertisement -
- Advertisement -
  • ಎ.ಕೆ.ಸುಬ್ಬಯ್ಯ |

ಪ್ರತ್ಯೇಕ ಲಿಂಗಾಯತ ಧರ್ಮ ರಾಜಕೀಯ ಲಾಭ ಬಯಸುವುದು ಸರಿಯಲ್ಲ ಎಂಬ ಚಿತ್ರನಟ ಹಾಗೂ ಲಿಂಗಾಯತ ಧರ್ಮ ಹೋರಾಟದ ಮುಖಂಡರೂ ಆಗಿರುವ ಚೇತನ್ ಅವರ ಹೇಳಿಕೆಯನ್ನು ವಿಮರ್ಶಿಸುತ್ತಲೇ ಈ ಲೇಖನ ಪ್ರಾರಂಭಿಸುತ್ತೇನೆ.

ರಾಜಕೀಯ ಲಾಭ ಗಳಿಸುವುದು ಬಿಡುವುದು ರಾಜಕಾರಣಿಗಳಿಗೆ ಆಯಾ ರಾಜಕೀಯ ಪಕ್ಷಗಳ ವಿವೇಚನೆಗೆ ಬಿಟ್ಟ ವಿಷಯ. ಅದರ ಬಗ್ಗೆ ಉಳಿದ ನಮ್ಮಂತವರು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲವೆಂಬುದು ನನ್ನ ಅನಿಸಿಕೆ. ಆದರೆ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ರಾಜ್ಯವ್ಯಾಪಿ ಆಂದೋಲನ ನಡೆಸಿದವರು ತಮ್ಮ ಗುರಿ ಮುಟ್ಟುವುದಕ್ಕಾಗಿ ಈ ಚುನಾವಣೆಯಲ್ಲಿ ಯಾವ ನಿಲುವು ತಳೆಯಬೇಕಾಗಿತ್ತು..? ಎಂಬ ಪ್ರಶ್ನೆಗೆ ಚೇತನ್‍ರವರು ಹೇಗೆ ಪ್ರತಿಕ್ರಿಯಿಸುತ್ತಾರೆಂದು ತಿಳಿಯುವ ಕುತೂಹಲ ನನ್ನನ್ನು ಕಾಡುತ್ತಿದೆ. ಲಿಂಗಾಯತರೆಲ್ಲ ವೀರಶೈವ ಕಪಿಮುಷ್ಠಿಯನ್ನು ಧಿಕ್ಕರಿಸಿ ಲಿಂಗಾಯತರು ಹಿಂದುಗಳಲ್ಲ, ಅದೊಂದು ಪ್ರತ್ಯೇಕ ಧರ್ಮ ಎಂದು ಘೋಷಿಸಿಕೊಂಡು, ಅದಕ್ಕೆ ಮಾನ್ಯತೆ ನೀಡಬೇಕೆಂದು ರಾಜ್ಯವ್ಯಾಪಿ ಆಂದೋಲನವನ್ನು ಬಸವಕಲ್ಯಾಣದಿಂದ ಆರಂಭಿಸಿದಾಗ ಹರ್ಷ ಪುಳಕಿತರಾಗಿ, ಆಂದೋಲನವನ್ನು ಸ್ವಾಗತಿಸಿ ಸಂತೋಷಪಟ್ಟವರಲ್ಲಿ ನಾನೂ ಒಬ್ಬ. ಈ ಸಂದರ್ಭದಲ್ಲಿ, ನನ್ನ ಪ್ರಿಯರೂ ಆಗಿರುವ ಚಿತ್ರನಟ ಚೇತನ್ ಅವರು ತಳೆದ ಸಕಾರಾತ್ಮಕ ನಿಲುವಿಗಾಗಿ ನಾನು ಅವರನ್ನು ಅಭಿನಂದಿಸಿದ್ದೂ ಉಂಟು. ದಿಡ್ಡಳ್ಳಿ ಆದಿವಾಸಿಗಳ ಬದುಕಿನ ಹೋರಾಟದಲ್ಲಿ ನನ್ನ ಒಡನಾಡಿಯಾಗಿದ್ದ ಚೇತನ್ ಅವರ ಜನಪರ ಕಾಳಜಿಯನ್ನು ಕಂಡು, ನಾನೊಬ್ಬ ಅವರ ಅಭಿಮಾನಿಯೇ ಆಗಿಬಿಟ್ಟಿದ್ದೇನೆ. ಪ್ರತ್ಯೇಕ ಧರ್ಮಕ್ಕಾಗಿ ಲಿಂಗಾಯತರು ನಡೆಸಿದ ಹೋರಾಟದ ಅಂಗವಾಗಿ ರಾಜ್ಯವ್ಯಾಪಿಯಾಗಿ ನಡೆದ ಆಂದೋಲನದಲ್ಲಿ ಅಕ್ಷರಶಃ ಲಕ್ಷೋಪಲಕ್ಷ ಜನ ಭಾಗವಹಿಸಿದ್ದರು. ಈ ಆಂದೋಲನ ಕರ್ನಾಟಕ ಮಾತ್ರವಲ್ಲ, ಇಡೀ ದೇಶದ ಗಮನವನ್ನು ಸೆಳೆದಿತ್ತು ಎಂದರೆ ಅತಿಶಯೋಕ್ತಿಯಲ್ಲ. ಈ ಆಂದೋಲನಕ್ಕೆ ನಾಡಿನ ಪ್ರಗತಿಪರ ಚಿಂತಕರ ಬೆಂಬಲ ಸಹ ಮುಕ್ತವಾಗಿ ದೊರೆಯಿತು. ಏಕೆಂದರೆ ಲಿಂಗಾಯತ ಧರ್ಮ ಬಸವಣ್ಣ ಸ್ಥಾಪಿಸಿದ ಪ್ರತ್ಯೇಕ ಧರ್ಮವೇ ಹೊರತು, ಅದು ಹಿಂದು ಧರ್ಮದೊಳಗಿನ ಒಂದು ಜಾತಿಯಲ್ಲ ಎಂಬುದು ಸತ್ಯಸಂಗತಿ. ಈ ಧರ್ಮದ ಸ್ಥಾಪಕ ಬಸವಣ್ಣ. ವಚನ ಸಾಹಿತ್ಯವೇ ಅದರ ಧರ್ಮ ಗ್ರಂಥ. ಇಲ್ಲಿ ವೈದಿಕಶಾಹಿಯ ವೇದ, ಪುರಾಣ, ಚಾತುರ್ವರ್ಣದ ಗೊಡ್ಡುಪುರಾವೆಗಳೆಲ್ಲವನ್ನೂ ಧಿಕ್ಕರಿಸಲಾಗಿದೆ. ವೈದಿಕ ದೇವರುಗಳನ್ನೂ ಧಿಕ್ಕರಿಸಿ ದೇಹವೇ ದೇಗುಲವೆಂದು ದೃಢಪಡಿಸಲಾಗಿದೆ. ಆದ್ದರಿಂದ ಇದು ಖಂಡಿತವಾಗಿಯೂ ಒಂದು ಪ್ರತ್ಯೇಕ ಧರ್ಮವಲ್ಲದೆ, ವೈಧಿಕ ಧರ್ಮ ಅಥವ ಹಿಂದೂ ಧರ್ಮದೊಳಗಿನ ಒಂದು ಜಾತಿ ಖಂಡಿತ ಅಲ್ಲ.

ಇದು ಮಾನವ ಧರ್ಮ. ಜಗಜ್ಯೋತಿ ಬಸವಣ್ಣ ಸ್ಥಾಪಿಸಿದ ಈ ಧರ್ಮ ಎಲ್ಲರಿಗೂ ಸ್ವೀಕಾರ ಯೋಗ್ಯವಾದ ಧರ್ಮವಾಗಿದೆ. ಇದಕ್ಕೆ ಪ್ರತ್ಯೇಕ ಧರ್ಮವೆಂದು ಮಾನ್ಯತೆ ನೀಡುವುದೆಂದರೆ ಮಾನವ ಕೋಟಿಯ ಏಳಿಗೆ ಎಂದೇ ಅರ್ಥ. ಇಂಥ ಒಂದು ಮಾನವ ಧರ್ಮವನ್ನು ವೈದಿಕಶಾಹಿ ತನ್ನ ಎಂದಿನ ಕುತಂತ್ರವನ್ನು ಬಳಸುತ್ತ, ವೀರಶೈವ ಪಂಚ ಪೀಠಗಳ ಮೂಲಕ ಬಸವ ಧರ್ಮವನ್ನೇ ನುಂಗಿಹಾಕಿ ಅದನ್ನೊಂದು ಜಾತಿಯನ್ನಾಗಿ ಪರಿವರ್ತಿಸಿ, ವೈದಿಕ ಯಾನೆ ಹಿಂದೂ ಧರ್ಮದ ಭಾಗವನ್ನಾಗಿಸಿ, ಲಿಂಗಾಯತ ಧರ್ಮವನ್ನೇ ಕೊಂದು ಬಿಟ್ಟಿದ್ದರು. ಪಂಚಪೀಠಗಳೇ ಈ ಕೊಲೆ ಘಾತುಕರುಗಳು. ಲಿಂಗಾಯತ ಧರ್ಮವನ್ನು ನುಂಗಲು ವೈದಿಕರು ಪಂಚಪೀಠಗಳೆಂಬ ಮೊಸಳೆಗಳನ್ನು ಸೃಷ್ಟಿಸಿ, ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದರು. ಈ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಆಂದೋಲನ ಕಂಡು ಹರ್ಷಪುಳಕಿತನಾದ ನಾನು, ಬಸವಣ್ಣ ವೀರಶೈವರೆಂಬ ಮೊಸಳೆಯ ಹೊಟ್ಟೆಯನ್ನು ಸೀಳಿಕೊಂಡು ಹೊರಬರುತ್ತಾನೆಂದು, ಆ ದೃಶ್ಯವನ್ನು ಕಾಣಲು ಕಾತುರತೆಯಿಂದ ಕಾಯುತ್ತಿದ್ದೆ.

ಲಿಂಗಾಯತ ಪ್ರತ್ಯೇಕ ಧರ್ಮದ ಆಂದೋಲನಕಾರರು, ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂಬ ಒತ್ತಾಯವನ್ನು ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕ ಸರ್ಕಾರದ ಮೇಲೆ ಹೇರುತ್ತಾ ಬಂದಾಗ, ಅವರ ಬೇಡಿಕೆಯನ್ನು ಅರ್ಹತೆಯ ಆಧಾರದ ಮೇಲೆ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡುತ್ತಾ ಬಂದದ್ದು ಸರಿಯಷ್ಟೆ. ಈ ಹೋರಾಟವನ್ನು ವಿರೋಧಿಸುತ್ತಾ ಬಂದ ವೀರಶೈವರು, ಇದಕ್ಕೆಲ್ಲ ಸಿದ್ದರಾಮಯ್ಯನವರೇ ಕಾರಣ, ಅವರು ಧರ್ಮ ಒಡೆಯುತ್ತಿದ್ದಾರೆ ಎಂದೆಲ್ಲಾ ತಲೆಬುಡವಿಲ್ಲದೆ ಆರೋಪ ಮಾಡತೊಡಗಿದಾಗ, ಪ್ರತ್ಯೇಕ ಧರ್ಮದ ಹೋರಾಟಗಾರರು ಗಟ್ಟಿಧ್ವನಿಯಲ್ಲಿ ಅಂಥ ಆರೋಪವನ್ನು ತಳ್ಳಿ ಹಾಕಿ, ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಲ್ಲಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಆರೆಸ್ಸೆಸ್ ನೇತಾರರು ಹಾಗೂ ಪೇಜಾವರ ಮಠಾಧೀಶರಿಗೆ ಮಾತ್ರ ಲಿಂಗಾಯತ ಹೋರಾಟಗಾರರು ಖಡಕ್ ಉತ್ತರ ನೀಡಿದ್ದು ಸರಿಯಾಗಿದ್ದು, ಸ್ವಾಗತಾರ್ಹ ಕ್ರಮವಾಗಿತ್ತು. ಆರೆಸ್ಸೆಸ್ ಸರಸಂಘ ಚಾಲಕ ಭಾಗವತ್ ಹಾಗೂ ಪೇಜಾವರ ಶ್ರೀಗಳಿಗೆ ನಮ್ಮ ಧರ್ಮದ ವಿಷಯದಲ್ಲಿ ಮೂಗು ತೂರಿಸದಿರಿ ಎಂದೇನೋ ನಿರ್ದಾಕ್ಷಿಣ್ಯವಾಗಿ ಹೇಳಿದರು. ಈ ಹಿನ್ನೆಲೆ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಮಾಡುತ್ತಿರುವವರ ನಿಷ್ಠೆ ಪ್ರಶ್ನಾತೀತವಾಗಿ ಗೋಚರಿಸಿತು. ಅದೊಂದು ಢೋಂಗಿ ಹೋರಾಟವೆಂದು ಯಾರಿಗೂ ಅನ್ನಿಸಲೇ ಇಲ್ಲ. ವೀರಶೈವ ಮಠಾಧೀಶರುಗಳು, ವೀರಶೈವ ಹಾಗೂ ಲಿಂಗಾಯತ ಎರಡೂ ಒಂದೇ ಎಂದು ಅಬ್ಬರಿಸಿದಾಗ ಲಿಂಗಾಯತರು ಅದನ್ನು ನಿರಾಕರಿಸಿ, ಪ್ರತ್ಯೇಕ ಲಿಂಗಾಯತರ ಸಮಾವೇಶಗಳನ್ನು ಸಂಘಟಿಸಲಾಗಿತ್ತು. ಜಾಗತಿಕ ಲಿಂಗಾಯತ ಸಂಘಟನೆಗಳೂ ಸಹ ಅಸ್ತಿತ್ವಕ್ಕೆ ಬಂದವು. ಬಸವ ಟಿವಿ ಎಂಬ ಟಿವಿ ಚಾನಲ್ ಕೂಡ ಅಸ್ತಿತ್ವಕ್ಕೆ ಬಂತು. ಈ ಹಿನ್ನೆಲೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ತಾರ್ಕಿಕ ಅಂತ್ಯ ಕಾಣುತ್ತದೆಂದೇ ಎಲ್ಲರೂ ಭಾವಿಸುವಂತಾಯಿತು. ಇದು ಸಿದ್ದರಾಮಯ್ಯನವರನ್ನು ಹಳಿಯಲು ನಡೆಸಿದ ಲಿಂಗಾಯತ ಪಿತೂರಿಯೆಂದು, ಪರಿಗಣಿಸುವುದಕ್ಕೆ ಯಾವ ಕಾರಣವೂ ಸಾರ್ವಜನಿಕವಾಗಿ ಗೋಚರಿಸಲಿಲ್ಲ. ಈ ನಡುವೆ ಕರ್ನಾಟಕ ವಿಧಾನಸಭಾ ಚುನಾವಣೆ ಬಂತು. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಮುಂಚೂಣಿಯಲ್ಲಿದ್ದ ಮಾತೆ ಮಹಾದೇವಿಯವರು, ಲಿಂಗಾಯತ ಮಠಾಧೀಶರ ಸಭೆ ಕರೆದು, ಈ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನೇ ಬೆಂಬಲಿಸಬೇಕೆಂದು, ಇದರಲ್ಲಿ ಮುಚ್ಚುಮರೆಯಿಲ್ಲವೆಂದು ಹೇಳುತ್ತಾ ಒಬ್ಬ ಮಹಾ ಮುತ್ಸದ್ದಿಯಾಗಿಯೇ ವಿಜೃಂಭಿಸಿದರು. ಸಭೆಯಲ್ಲಿದ್ದ ಇತರೆ ಮಠಾಧೀಶರುಗಳು ಸಹ ತಮ್ಮ ಸಮ್ಮತಿ ನೀಡಿದಂತೆ ಕಂಡುಬಂತು. ಅದಕ್ಕೂ ಮೊದಲು ಹಲವು ಪ್ರಮುಖ ಮಠಾಧೀಶರುಗಳು ತುಂಬಾ ಪ್ರಗತಿಪರ ಧ್ವನಿಯಲ್ಲಿ ಸಂಘಪರಿವಾರವನ್ನು, ವೈದಿಕಶಾಹಿಯನ್ನು ಪ್ರತಿರೋಧಿಸುತ್ತಿದ್ದು ಬಸವತತ್ವವನ್ನು ಸಮರ್ಥಿಸಿ ಮಾತನಾಡಿದ್ದು ರೋಮಾಂಚನಕಾರಿಯಾಗಿತ್ತು. ಇಂಥವರಿಗೆಲ್ಲಾ ಲಿಂಗಾಯತ ಪ್ರತ್ಯೇಕ ಧರ್ಮದ ಆಂದೋಲನವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡುಹೋಗಲು ಭದ್ರಬುನಾದಿ ಅವಕಾಶ ಆಂದೋಲನಕಾರರಿಗೆ ಈ ಚುನಾವಣೆ ಸುವರ್ಣ ಅವಕಾಶವಾಗಿತ್ತು ಎಂಬುವುದರಲ್ಲಿ ಯಾವ ಅನುಮಾನವೂ ಇಲ್ಲ.

ಕೇಂದ್ರದಲ್ಲಾಗಲೀ, ರಾಜ್ಯದಲ್ಲಾಗಲೀ ವೈದಿಕಶಾಹಿ ನಿಯಂತ್ರಣದ ಬಿಜೆಪಿ ಸರ್ಕಾರ ಇರುವತನಕ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಅಸಂಭವವೆಂದು ತಿಳಿಯಲು ಹೆಚ್ಚಿನ ಬುದ್ಧಿ ಏನು ಬೇಕಾಗಿಲ್ಲ. ಸಾಮಾನ್ಯ ಜ್ಞಾನ ಉಳ್ಳವರಿಗೆ ಇದು ಸರಳವಾಗಿ ಅರ್ಥವಾಗುತ್ತೆ. ಆದ್ದರಿಂದ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಸಾಕಾರಗೊಳ್ಳಬೇಕಾದರೆ ಕೇಂದ್ರದಲ್ಲಿ ಕೋಮುವಾದಿ ಸರ್ಕಾರ ಹೋಗಿ, ಜಾತ್ಯತೀತ ಸರ್ಕಾರ ಬರಲೇಬೇಕು. ಇಲ್ಲವಾದರೆ ಲಿಂಗಾಯತ ಪ್ರತ್ಯೇಕ ಧರ್ಮದ ಕಾರ್ಯ ನನಸಾಗಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಇದ್ದದ್ದರಿಂದಾಗಿ ಲಿಂಗಾಯತ ಪ್ರತ್ಯೇಕ ಧರ್ಮದ ಪ್ರಸ್ತಾವನೆಗೆ ಮಾನ್ಯತೆ ದೊರೆಯಿತು. ಬಿಜೆಪಿ ಸರ್ಕಾರ ಇದ್ದಿದ್ದರೆ ಅದು ದೊರಕುತ್ತಿರಲಿಲ್ಲ. ಆದ್ದರಿಂದ ಕರ್ನಾಟಕದಲ್ಲಿ ಈ ಚುನಾವಣೆಯಲ್ಲಿ ಬಿಜೆಪಿಯನ್ನು ಮಣ್ಣು ಮುಕ್ಕಿಸಬೇಕಾದ ಅನಿವಾರ್ಯತೆ ಲಿಂಗಾಯತ ಪ್ರತ್ಯೇಕ ಧರ್ಮ ಬೇಕೆನ್ನುವವರಿಗೆ ಇತ್ತು. ಲಿಂಗಾಯತ ಪ್ರತ್ಯೇಕ ಧರ್ಮದ ಪ್ರಸ್ತಾವನೆಯನ್ನು ಕಟುವಾಗಿ ವಿರೋಧಿಸುತ್ತಾ ವೀರಶೈವ-ಲಿಂಗಾಯತ ಎರಡೂ ಒಂದೇ, ಲಿಂಗಾಯತ ಪ್ರತ್ಯೇಕ ಧರ್ಮ ಬೇಡವೆಂದು ಪ್ರತಿಪಾದಿಸುತ್ತಾ, ಲಿಂಗಾಯತರು ವೀರಶೈವ ಅಧೀನವೇ ಇರಬೇಕೆಂದು ಪರೋಕ್ಷವಾಗಿ ಹೇಳುತ್ತಾ ಬಂದ ವೀರಶೈವ ಮಠಾಧೀಶರುಗಳು ಬಹಿರಂಗವಾಗಿಯೇ ಬಿಜೆಪಿ ಪರವಾಗಿ ನಿಂತು ಕಾಂಗ್ರೆಸ್ ಸೋಲಿಸಬೇಕೆಂದು ಕರೆ ಕೊಟ್ಟರು. ಅದರಲ್ಲಿ ಮುಚ್ಚುಮರೆ ಇರಲಿಲ್ಲ. ಆದರೇ ವೀರಶೈವರೇ ಬೇರೆ ಲಿಂಗಾಯತರೇ ಬೇರೆ ಎಂದು ಪ್ರತಿಪಾದಿಸುತ್ತಾ ಬಂದ ಮಠಾಧೀಶರುಗಳು ಮಾತ್ರ ಬರುಬರುತ್ತಾ ಮೌನಿಗಳಾಗಿ ಒಳಗೊಳಗೆ ವೀರಶೈವ ಮಠಾಧೀಶರ ಅಪೇಕ್ಷೆಯನ್ನೇ ಹಿಂಬಾಲಿಸಿ, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಬಹಿರಂಗ ವಿರೋಧ ಮಾಡಿದ ಬಿಜೆಪಿಯನ್ನೇ ಚುನಾವಣೆಯಲ್ಲಿ ಬೆಂಬಲಿಸಿದ್ದು ಒಂದು ಕ್ರೂರ ವ್ಯಂಗ್ಯವಾಗಿ ತೋರುತ್ತದೆ. ಏಕೆ ಹೀಗಾಯಿತೆಂದು ವಿಮರ್ಶಿಸಿದಾಗ ಇದರ ಹಿಂದೆ ಕೇವಲ ಜಾತೀಯತೆ ಎದ್ದು ಕಾಣುತ್ತದಲ್ಲದೇ ಮತ್ತೇನೂ ಇಲ್ಲ.

ಈ ಚುನಾವಣೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಆಂದೋಲನ ಮಾಡಿದವರ ಮುಂದೆ ಇದ್ದ ಆಯ್ಕೆ ಏನೆಂದರೆ ಆಂದೋಲನವನ್ನು ತಾರ್ಕಿಕ ಅಂತ್ಯದವರೆಗೆ ಕೊಂಡು ಹೋಗಲು ಬಿಜೆಪಿಯನ್ನು ಮಣ್ಣು ಮುಕ್ಕಿಸುವ ಮೂಲಕ ಭದ್ರಬುನಾದಿ ಹಾಕುವುದು, ಇಲ್ಲ ಆಂದೋಲನಕ್ಕೆ ಎಳ್ಳು ನೀರು ಬಿಟ್ಟು ತಮ್ಮ ಜಾತಿಯವನಾದ ಯಡಿಯೂರಪ್ಪನನ್ನು ಮುಖ್ಯಮಂತ್ರಿ ಮಾಡುವುದಕ್ಕೆ ಬಿಜೆಪಿಗೆ ಓಟು ಕೊಡುವುದರ ಮೂಲಕ ಬೆಂಬಲಿಸುವುದು. ಅಂತಿಮವಾಗಿ ಲಿಂಗಾಯತರು ಧರ್ಮದ ಮಾತು ಬಿಟ್ಟು ಜಾತಿಯನ್ನೇ ಆಯ್ಕೆ ಮಾಡಿಕೊಂಡರು. ಧರ್ಮ ಬಿಟ್ಟು ಜಾತಿಗೆ ಪಕ್ಷಾಂತರಗೊಂಡು, ಅಷ್ಟೊಂದು ಕಷ್ಟಪಟ್ಟು ಕಟ್ಟಿದ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಗೋರಿ ನಿರ್ಮಿಸಿಬಿಟ್ಟರು. ಅಲ್ಲಿಗೆ ಬಸವಣ್ಣ ಹಾಗೂ ವಚನ ಸಾಹಿತಿಗಳು ವೀರಶೈವರೆಂಬ ವೈದಿಕಶಾಹಿಗಳ ಹೊಟ್ಟೆಗೆ ಮತ್ತೆ ಸೇರಿಕೊಂಡಂತಾಯ್ತು. ಒಂದು ಧರ್ಮವಾಗಿ ಲಿಂಗಾಯತ ಇಡೀ ಮಾನವ ಕೋಟಿಗೆ ಸ್ವೀಕಾರ ಯೋಗ್ಯವಾಗಿದೆ. ಅದೊಂದು ಜಾತಿಯಾಗಿ ಯಾರಿಗೂ ಬೇಕಾಗಿಲ್ಲ. ಇಂದಿನ ಈ ಬೆಳವಣಿಗೆಯನ್ನು ಐತಿಹಾಸಿಕ ದುರಂತವೆಂದೇ ಬಣ್ಣಿಸಬೇಕಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...